
ಕೇಶವಮೂರ್ತಿ
ಒಬ್ಬ ನಾಯಕನ ಬೆನ್ನಟ್ಟಿದ್ದಾನೆ. ನಾಯಕ ಮಾತ್ರ ಇನ್ನೊಬ್ಬಳ ಕನಸಿನ ಪ್ರಪಂಚದಲ್ಲಿ ಇದ್ದಾನೆ. ವೀಲ್ಚೇರ್ನಲ್ಲಿ ಇದ್ದ ಮಹಿಳೆ ಸಾವು ಕಾಣುತ್ತಾಳೆ, ನಾಯಕಿಯ ಹಿಂದೆ ಪೊಲೀಸ್ ಇದ್ದಾನೆ. ಈ ಹೊತ್ತಿಗೆ ನಾಯಕನ ಕೌನ್ಸಿಲಿಂಗ್ ಸೆಂಟರ್ಗೆ ಬರುತ್ತಾನೆ. ಕೌನ್ಸಿಲಿಂಗ್ ಮಾಡುವ ವೈದ್ಯರು ತಮ್ಮ ಕೆಲಸ ಶುರು ಮಾಡುತ್ತಾರೆ. ಇದು ತನ್ನದೇ ಕುಟುಂಬದ ಕೇಸು ಎಂದು ತಿಳಿದು ಕುಸಿದು ಬೀಳುತ್ತಾನೆ. ಬೆನ್ನಟ್ಟಿರುವುದು ಯಾರು, ಆ ಕನಸಿನ ಹುಡುಗಿ ಯಾರು, ಆ ಸಾವು ಯಾಕಾಯಿತು ಎಂದು ಪ್ರೇಕ್ಷಕ ಲೆಕ್ಕಾ ಹಾಕುವ ಹೊತ್ತಿಗೆ ಸಿನಿಮಾ ಮತ್ತೆಲ್ಲೋ ಓಡುತ್ತಿರುತ್ತದೆ. ಈ ದೃಶ್ಯ ಬಂದಿದ್ದು ಯಾಕೆಂದು ತಿಳಿಯಲು ಹಿಂದಿನ ದೃಶ್ಯಕ್ಕೆ ಹೋಗಬೇಕು, ಹಿಂದಿನದ್ದು ನೆನಪಿಸಿಕೊಂಡು ಕೂತರೆ ಮುಂದಿನದ್ದು ಮರೆಯಾಗುತ್ತದೆ. ಹೀಗೆ ಗೊಂದಲ, ಪ್ರಶ್ನೆಗಳ ಗೊಡವೆಯ ಸಂತೆಯಲ್ಲಿ ‘ಕಡಲತೀರ ಭಾರ್ಗವ’ ಚಿತ್ರ ಮುಕ್ತಾಯಗೊಳ್ಳುತ್ತದೆ.
ತೆರೆಮೇಲೆ ಕಡಲ ತೀರದ ಭಾರ್ಗವ; ಹೊಸಬರ ವಿಭಿನ್ನ ಪ್ರಯತ್ನ
ತಾರಾಗಣ: ಭರತ್, ಪಟೇಲ್ ವರುಣ್ರಾಜ್, ಶ್ರುತಿ ಪ್ರಕಾಶ್, ಶ್ರೀಧರ್
ನಿರ್ದೇಶನ: ಪನ್ನಗ ಸೋಮಶೇಖರ್
ರೇಟಿಂಗ್: 2
ನಿರ್ದೇಶಕ ಪನ್ನಗ ಸೋಮಶೇಖರ್ ಇದೇ ಕತೆಯನ್ನು ಆದಷ್ಟುಸರಳವಾಗಿ ಹೇಳಿದ್ದರೆ ಪ್ರೇಕ್ಷಕರಿಗೂ ಅರ್ಥವಾಗುವ ಸಾಧ್ಯತೆಗಳಿದ್ದವು. ಅಂಥ ಒಳ್ಳೆಯ ಅವಕಾಶದಿಂದ ನಿರ್ದೇಶಕರು ತಮ್ಮ ಚಿತ್ರವನ್ನು ವಂಚಿತಗೊಳಿಸಿದ್ದಾರೆ. ಯಾಕೆಂದರೆ ನಿರೂಪಣೆ ಹೊಸದಾಗಿರಬೇಕು, ತನಗೆ ತುಂಬಾ ಗೊತ್ತಿದೆ ಎನ್ನುವ ಭಾವನೆ ನಿರ್ದೇಶಕರಿಗೆ ಹುಟ್ಟಿಕೊಂಡು ಇಂಥ ಗೊಂದಲದ ಸಿನಿಮಾ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಬಾಲ್ಯದಲ್ಲಿ ನಡೆದ ಸಾವಿನ ಘಟನೆ, ಅದೇ ಬಾಲ್ಯದಲ್ಲಿ ಜತೆಯಾದವಳ ಪ್ರೀತಿ ನೆರಳು ಸೇರಿಕೊಂಡು ನಾಯಕನನ್ನು ಹೇಗೆ ಸೈಕಿಕ್ ಮಾಡಲಾಗಿದೆ. ಅದರಿಂದ ನಾಯಕ ಹೇಳಲು ಹೊರಟಿರುವುದೇನು ಎಂಬುದು ಚಿತ್ರದ ಒಂದು ಸಾಲಿನ ಅಂಶ. ಕನಸಿನ ಪ್ರಪಂಚ, ವಾಸ್ತವ ಗತ್ತು, ಕಳೆದುಕೊಂಡಿರುವ ಪ್ರೀತಿ, ಮರೆಯಾದ ಬಾಲ್ಯದ ಮಿತ್ರ, ಒಂದು ಕುಟುಂಬದ ಸಾವಿನ ನೋವು... ಇಷ್ಟೆಲ್ಲ ತಿರುವುಗಳ ಮೂಲಕ ನಿರ್ದೇಶಕರು ಚಿತ್ರದ ಕತೆ ಹೇಳುವ ಸಾಹಸ ಮಾಡುತ್ತಾರೆ. ಅವರ ಸಾಹಸಕ್ಕೆ ಸಂಕಲನಕಾರ, ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಣ ವಿಭಾಗ ಸಾಧ್ಯವಾದಷ್ಟು ಶ್ರಮ ಹಾಕಿದೆ. ಉಳಿದಂತೆ ಎಲ್ಲವೂ ನೆಪ ಮಾತ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.