ಭಾರತೀಯರ ವೈಯಕ್ತಿಕ ಮಾಹಿತಿ, ಹಕ್ಕುಗಳಿಗೆ ಧಕ್ಕೆ ತರಲು ಅವಕಾಶವಿಲ್ಲ| ಕೇಂದ್ರದ ಯೋಜನೆ ಪ್ರಕಾರ ಎಲ್ಲ ದೊಡ್ಡ ಕಂಪನಿಗಳು ಭಾರತದಲ್ಲಿ ತಮ್ಮ ಶಾಖೆ ತೆರೆಯಲು ಮುಂದಾಗಿವೆ| ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಮತ್ತು ಅದರ ಉಪಕರಣಗಳನ್ನು ಉತ್ಪಾದನೆ ಮಾಡಲು ಮುಂದೆ ಬಂದ ಕಂಪನಿಗಳು|
ಬೆಂಗಳೂರು(ಜ.22): ಯಾವುದೇ ಡಿಜಿಟಲ್ ಮಾಧ್ಯಮಕ್ಕೆ ಭಾರತದಲ್ಲಿ ವ್ಯವಹರಿಸಲು ಮುಕ್ತ ಅವಕಾಶ ನೀಡಲಾಗಿದೆ. ಆದರೆ, ಭಾರತೀಯರ ವೈಯಕ್ತಿಕ ಮಾಹಿತಿ ಸೇರಿದಂತೆ ಅವರ ಹಕ್ಕುಗಳಿಗೆ ಧಕ್ಕೆ ತರಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಇಂಟರ್ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ 15ನೇ ಇಂಡಿಯಾ ಡಿಜಿಟಲ್ ಸಮಾವೇಶವನ್ನು ವರ್ಚುವಲ್ ಮಾಧ್ಯಮದ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಕೃಷಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ದೇಶಿಯ 5ಜಿ ವ್ಯವಸ್ಥೆ ರೂಪುಗೊಳ್ಳುವ ನಿಟ್ಟಿನಲ್ಲಿ ದೇಶದ ಟೆಲಿಕಾಂ ಉದ್ದಿಮೆ ಕಾರ್ಯಪ್ರವೃತ್ತವಾಗಬೇಕಿದೆ ಎಂದರು.
ಕೇಂದ್ರದ ಪಿಎಲ್ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆ ಪ್ರಕಾರ ಎಲ್ಲ ದೊಡ್ಡ ಕಂಪನಿಗಳು ಭಾರತದಲ್ಲಿ ತಮ್ಮ ಶಾಖೆ ತೆರೆಯಲು ಮುಂದಾಗಿವೆ. ಅವರೆಲ್ಲರೂ ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಮತ್ತು ಅದರ ಉಪಕರಣಗಳನ್ನು ಉತ್ಪಾದನೆ ಮಾಡಲು ಮುಂದೆ ಬಂದಿದ್ದಾರೆ. ಅದರಲ್ಲಿ 7 ಲಕ್ಷ ಕೋಟಿ ಮೌಲ್ಯದ ಉಪಕರಣಗಳನ್ನು ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಡಿಜಿಟಲ್ ಇಂಡಿಯಾ ಸೇಲ್; ಗಣರಾಜ್ಯೋತ್ಸವಕ್ಕೆ ರಿಲಾಯನ್ಸ್ನಿಂದ ಭರ್ಜರಿ ಆಫರ್!
ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಡಿಜಿಟಲ್ ಇಂಡಿಯಾಕ್ಕೆ ಪೂರಕವಾದ ವ್ಯವಸ್ಥೆ ರೂಪಿಸಿದೆ. ಲಸಿಕೆಯಿಂದ ಆರಂಭಗೊಂಡು ಡಿಜಿಟಲ್ ಪಾವತಿಯ ತನಕ ಎಲ್ಲವೂ ಆಧುನಿಕ ವ್ಯವಸ್ಥೆಯಲ್ಲಿಯೇ ನಡೆಯುತ್ತಿದೆ. ಡಿಜಿಟಲ್ ಡೆಲಿವರಿ, ನೇರ ಪಾವತಿ ಸೇರಿದಂತೆ ಹಲವು ಪರಿಣಾಮಕಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಜಾಗತಿಕ ಕಂಪನಿಗಳನ್ನು ಭಾರತಕ್ಕೆ ಕರೆ ತರುವುದು. ನಮ್ಮ ದೇಶದ ಕಂಪನಿಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಸರ್ಕಾರ ಗುರಿಯಾಗಿದೆ. 2014ರಲ್ಲಿ ದೇಶದಲ್ಲಿ ಕೇವಲ ಎರಡು ಮೊಬೈಲ್ ಕಾರ್ಖಾನೆಗಳಿದ್ದವು. ಈಗ 268 ಮೊಬೈಲ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಮೊಬೈಲ್ ಉತ್ಪಾದನೆಯಲ್ಲಿ ಭಾರತ ಜಗತ್ತಿನ ಎರಡನೇ ದೊಡ್ಡ ದೇಶವಾಗಿದೆ. ಅದನ್ನು ನಂಬರ್ ಒಂದು ಮಾಡುವುದು ನಮ್ಮ ಗುರಿ ಎಂದು ಹೇಳಿದರು.