ಸುಲಭವಾಗಿ ಹೀರೆಕಾಯಿ ಹೀಗೆ ಬೆಳೆಯಿರಿ....

By Suvarna NewsFirst Published Mar 24, 2020, 8:19 AM IST
Highlights

ಜನಪ್ರಿಯ ಹಾಗೂ ಪ್ರಮುಖ ತರಕಾರಿಗಳಲ್ಲಿ ಹೀರೆಕಾಯಿ ಕೂಡ ಒಂದು. ಕರ್ನಾಟಕದ ಎಲ್ಲ ಭಾಗದಲ್ಲಿಯೂ ಈ ತರಕಾರಿಗೆ ಗ್ರಾಹಕರಿದ್ದಾರೆ. ಉತ್ತರ ಕರ್ನಾಟಕದ ಹಲವು ಕಡೆ ಈಗಲೂ ಇದನ್ನು ನೆಲದ ಮೇಲೆ ಹಬ್ಬಿಸಿ ಬೆಳೆಯುವವರಿದ್ದಾರೆ.

ಹೀಗಾದಾಗ ಕಾಯಿಯ ಗುಣಮಟ್ಟಕಡಿಮೆಯಾಗುವುದರ ಜೊತೆಗೆ ಇಳುವರಿಯೂ ಕುಸಿಯುತ್ತದೆ. ಇನ್ನು ಕೋಲು ನೆಟ್ಟು ಆಸರೆ ಕೊಟ್ಟು ಬೆಳೆಯುವ ರೈತರಿಗೂ ಕಮ್ಮಿಯಿಲ್ಲ. ಕೋಲಿನ ಆಸರೆ ಹೊರತುಪಡಿಸಿ ಉಳಿದೆಲ್ಲ ಸಾಂಪ್ರದಾಯಿಕ ಪದ್ಧತಿಗಳೇ ಇರುತ್ತವೆ.

ಸ್ವಲ್ಪ ಮುಂದುವರೆದವರು ಮಲ್ಚಿಂಗ್‌ ಶೀಟ್‌ ಎಳೆದು ಹನಿನೀರಾವರಿ ಮೂಲಕ ನೀರು ಗೊಬ್ಬರ ಕೊಟ್ಟು ಬೆಳೆಯುತ್ತಾರೆ. ಹೀಗೆ ಬೆಳೆಯುವ ಪದ್ಧತಿ ಬದಲಾದಂತೆಲ್ಲ ಕಾಯಿಯ ಗುಣಮಟ್ಟಹಾಗೂ ಇಳುವರಿ ಅಧಿಕವಾಗುವುದು. ಇವೆಲ್ಲದರ ಜೊತೆಗೆ ಇನ್ನೂ ಕೆಲವು ಅಂಶಗಳನ್ನು ಪಾಲಿಸಿ ಮತ್ತಷ್ಟುಲಾಭದಾಯಕವಾಗಿ ಬೆಳೆಯಬಹುದು... ಹೀರೇಕಾಯಿಗೆ ಮಾಮೂಲಾಗಿ ಸೊರಗು ರೋಗ, ಹೂವು ಉದುರುವಿಕೆ, ಕಾಯಿ ವಕ್ರವಾಗುವುದು ಇತ್ಯಾದಿ ಸಮಸ್ಯೆ ಇರುತ್ತವೆ. ಇದಕ್ಕೆ ಪ್ರಮುಖ ಕಾರಣ : ಪೋಷಕಾಂಶಗಳ ಕೊರತೆ. ಮಣ್ಣು ಫಲವತ್ತಾಗಿರದೇ ಇದ್ದರೆ ಈ ಸಮಸ್ಯೆ ಸಾಮಾನ್ಯ, ಹೀಗಾಗಬಾರದೆಂದರೆ...

ಜಮುನಾಪುರ ಮೇಕೆ ಮಾಂಸಕ್ಕೂ ಸೈ, ಹಾಲಿಗೂ ಸೈ!

ಸೂಕ್ಷ್ಮಜೀವಿ ಗೊಬ್ಬರ

100 ಕೆ.ಜಿ ಕೊಟ್ಟಿಗೆ ಗೊಬ್ಬರದಲ್ಲಿ 5 ಕೆ.ಜಿ ಅರ್ಕಾ ಮೈಕ್ರೊಬಿಯಲ್‌ ಕನ್ಸಾರ್ಷಿಯಾ ಎಂಬ ಸೂಕ್ಷ್ಮಜೀವಿಗಳ ಮಿಶ್ರಣವನ್ನು ಬೆರೆಸಿ ಹೊಲದ ತುಂಬ ಹರಡಿ ಮಣ್ಣಲ್ಲಿ ಮಿಕ್ಸ್‌ ಮಾಡಬೇಕು. ಇದು ವಾತಾವರಣದಲ್ಲಿರುವ ಸಾರಜನಕವನ್ನು ಪಡೆದು ಅದನ್ನು ಸ್ಥಿರೀಕರಿಸಿ ಬೆಳೆಗೆ ಒದಗಿಸುವುದಲ್ಲದೇ ರಂಜಕವನ್ನು ಕರಗಿಸಿ ಹೀರೆಬಳ್ಳಿಗೆ ಸಿಗುವಂತೆ ಮಾಡುತ್ತದೆ. ಇದರಿಂದ ಬಳ್ಳಿ ಚೆನ್ನಾಗಿ ಬೆಳೆದು ನಾವು ಒದಗಿಸಿದ ಮೇಲು ಗೊಬ್ಬರ ಸಂಪೂರ್ಣ ಬಳಕೆಯಾಗಿ ಅಧಿಕ ಇಳುವರಿ ಪಡೆಯಬಹುದು.

ಎಲ್ಲ ಪೋಷಕಾಂಶಗಳು ಬೇಕು

ಯಾವುದೇ ಬೆಳೆಯಿರಲಿ ಅದರ ಪೋಷಣೆಗೆ ಸಕಲ ಪೋಷಕಾಂಶಗಳೂ ಬೇಕು. ಆದರೆ ನಮ್ಮ ಜಮೀನುಗಳಲ್ಲಿ ಒಂದಿಲ್ಲೊಂದು ಪೋಷಕಾಂಶಗಳ ಕೊರತೆ ಇದ್ದೇ ಇರುತ್ತದೆ. ನಾವು ಸಾರಜನಕ, ರಂಜಕ, ಪೊಟ್ಯಾಶ್‌ ಗೆ ಹೆಚ್ಚು ಮಹತ್ವ ಕೊಟ್ಟು ಉಳಿದವುಗಳ ಕಡೆ ಗಮನ ಕೊಡುವುದಿಲ್ಲ. ಸಾಮರ್ಥ್ಯಕ್ಕೆ ತಕ್ಕ ಇಳುವರಿ ಬರದೇ ಇರಲು ಇದೇ ಪ್ರಮುಖ ಕಾರಣ.

ಜಮೀನಿಗೆ ಜಿಪ್ಸಂ ಯಾಕೆ ಹಾಕ್ಬೇಕು, ಏನದರ ಉಪಯೋಗ?

ತರಕಾರಿ ಸ್ಪೆಷಲ್‌

ಆದ್ದರಿಂದ ಪ್ರಧಾನ ಪೋಷಕಾಂಶಗಳ ಜೊತೆಗೆ ಲಘು ಪೋಷಕಾಂಶಗಳನ್ನೂ ರೈತರು ಒದಗಿಸಬೇಕು. ಅವರ ಕೆಲಸ ಸುಲಭ ಮಾಡಲು ತುಂಬಾ ಹಿಂದೆಯೇ ತರಕಾರಿ ಸ್ಪೇಷಲ್‌ ಅಂತ ಲಘು ಪೋಷಕಾಂಶಗಳ ಮಿಶ್ರಣವನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಋಋಊಖ) ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದರಲ್ಲಿ ಸತು, ಕಬ್ಬಿಣ, ಬೋರಾನ್‌, ಮ್ಯಾಂಗನೀಸ್‌ ಹಾಗೂ ತಾಮ್ರದ ಸೂಕ್ತ ಮಿಶ್ರಣ ಇರುತ್ತದೆ.

ಸಿಂಪರಣೆ ಮೂಲಕ ಕೊಡಿ

ಲಘು ಪೋಷಕಾಂಶಗಳನ್ನು ಸಿಂಪರಣೆ ಮೂಲಕವೇ ಕೊಡಬಹುದು. ಮಣ್ಣಿನ ಮೂಲಕ ಕೊಡುವುದಕ್ಕಿಂತ ಎಲೆಗಳ ಮೂಲಕ ಕೊಡುವುದೇ ಹೆಚ್ಚು ಪರಿಣಾಮಕಾರಿ. ವಿವಿಧ ತರಕಾರಿ ಬೆಳೆಗಳಿಗೆ ಹಲವು ತರಕಾರಿ ಸ್ಪೇಷಲ್‌ ಸಿಂಪರಣೆ ಮಾಡಬೇಕಾಗುತ್ತದೆ. ಹೀರೆಕಾಯಿಗೆ ಮೊದಲ ಸಲ ಹೂ ಮತ್ತು ಪೀಚು ಕಾಣಿಸಿಕೊಂಡಾಗ ಮತ್ತು ಎರಡನೇ ಸಲ ಹದಿನೈದು ದಿನ ಬಿಟ್ಟು ಕೊಡಬೇಕು.

ಮಿಶ್ರಣ ಮಾಡುವ ವಿಧಾನ

ತರಕಾರಿ ಸ್ಪೇಷಲ್‌ ಅನ್ನು ಹೀರೆಕಾಯಿಗೆ ಬಳಸುವಾಗ ನಿಮ್ಮ ಹದಿನೈದು ಲೀಟರ್‌ ಸಿಂಪರಣಾ ಕ್ಯಾನ್‌ ಗೆ 75 ಗ್ರಾಂ. ತರಕಾರಿ ಸ್ಪೇಷಲ್‌, ಎರಡು ಎಮ್‌.ಎಲ್‌ ಸಾಬೂನಿನ ದ್ರಾವಣ ಅಥವಾ ಶಾಂಪು, ಮತ್ತು ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಬೇಕು. ಇದನ್ನು ಬಳ್ಳಿಯ ಎಲೆ, ಕುಡಿ ಸಂಪೂರ್ಣ ತೊಯ್ಯುವ ಹಾಗೆ ಸಿಂಪರಿಸಬೇಕು.

ಐಐಏ್ಕ ನವರ ತರಕಾರಿ ಸ್ಪೆಷಲ್‌ ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಸಾಕಷ್ಟುಲಘುಪೋಷಕಾಂಶಗಳ ಮಿಶ್ರಣ ಸಿಗುತ್ತವೆ. ಅವನ್ನು ಕೊಂಡು ಬಳಸಿದರೂ ಆದೀತು. ಇವುಗಳನ್ನು ಯಾವುದೇ ಕ್ರಿಮಿನಾಶಕದ ಜೊತೆ ಬೆರೆಸಿ ಸಿಂಪರಿಸಬಾರದಷ್ಟೇ. ಹೀರೆಕಾಯಿ ಗಾತ್ರ ಹೆಚ್ಚುವುದಲ್ಲದೇ ಆಕರ್ಷಕ ಬಣ್ಣ ಮತ್ತು ಆಕರ್ಷಕ ಆಕಾರ ಹೊಂದಿರುತ್ತವೆ. ರುಚಿಯ ಮಟ್ಟಕೂಡ ಹೆಚ್ಚಿರುತ್ತದೆ. ಆದ್ದರಿಂದ ಹೀರೆಕಾಯಿ ಬೆಳೆಯುವಾಗ ಲಘು ಪೋಷಕಾಂಶಗಳ ಕಡೆ ಹೆಚ್ಚು ಗಮನ ಕೊಡಿ, ಕಡಿಮೆ ಖರ್ಚಿನಲ್ಲಿ ಇಳುವರಿ ಹೆಚ್ಚಿಸಲು ಇವು ಸಹಕಾರಿ.

click me!