ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದು ಹೇಗೆ?

By Kannadaprabha NewsFirst Published Dec 8, 2019, 1:27 PM IST
Highlights

1977 ರಲ್ಲಿ ರಾಜನಾಥ್‌ ಸಿಂಗ್‌ ಮಿರ್ಜಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಪಡೆದಿದ್ದರು. ಆದರೆ ಚುನಾವಣೆಗೂ ಮುನ್ನ ಜನಸಂಘ ಮತ್ತು ಲೋಕ ದಳದ ನಡುವೆ ಒಪ್ಪಂದವಾಯಿತು. ನಾಮಪತ್ರ ವಾಪಸ್‌ ಪಡೆಯಲೂ ಸಾಧ್ಯವಾಗಲಿಲ್ಲ. ಆಗ ಸಿಂಗ್‌ ಪಕ್ಷದ ಪರ ನಿಂತು, ‘ನನಗೆ ಒಂದೇ ಒಂದು ಮತ ಬಿದ್ದರೂ ಅದು ನನಗೆ ಮಾಡುವ ಅವಮಾನ’ ಎಂದು ಬೆಂಬಲಿಗರಲ್ಲಿ ಕೋರಿಕೊಂಡಿದ್ದರು!

ವಿಭಿನ್ನ ದೃಷ್ಟಿಕೋನದ ವ್ಯಕ್ತಿಯೊಂದಿಗೂ ಸ್ನೇಹ ಗಳಿಸುವುದು ರಾಜ್‌ನಾಥ್‌ ಸಿಂಗ್‌ ಅವರ ವ್ಯಕ್ತಿತ್ವ. ಹಾಗೆಯೇ ಇರುವ ಭಿನ್ನಾಭಿಪ್ರಾಯಗಳನ್ನು ಕೊಳೆತು ನಾರುವವರೆಗೂ ಬಿಡದೆ ಕೂಡಲೇ ಪರಿಹರಿಸಿಕೊಳ್ಳುವುದು ಅವರ ಸ್ವಭಾವ.

ಎಲ್‌.ಕೆ ಅಡ್ವಾಣಿ ಸೇರಿದಂತೆ ಕೆಲ ಹಿರಿಯರು 2013ರ ಗೋವಾ ಪಣಜಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಭೆಯನ್ನೇ ಕೈಬಿಡಲು ನಿರ್ಧರಿಸಿದ್ದರು. ಆ ಸಭೆಯಲ್ಲಿ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಿತ್ತು.

ಗೋವಾದ ಆ ಕಾರ‍್ಯಕ್ರಮಕ್ಕೆ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯ್ತು. ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೊದಲೇ ಕೆಲ ಬಿಜೆಪಿಗರು ಮಾಧ್ಯಮಗಳಿಗೆ ಕೆಲ ಹೆಸರನ್ನು ನೀಡಿ ಸುಳಿವು ನೀಡಿದ್ದರು. ಆದರೆ ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮೋದಿ ವಿರುದ್ಧದ ಪಿಸುಮಾತುಗಳು ಸ್ಪಷ್ಟವಾಗಿ ಕೇಳಿ ಬಂದವು. 5 ದಶಕಗಳಿಂದೀಚೆಗೆ ಮೊಟ್ಟಮೊದಲ ಬಾರಿಗೆ ಅಡ್ವಾಣಿ ಈ ಕಾರ‍್ಯಕ್ರಮಕ್ಕೆ ಗೈರಾಗಿದ್ದರು. ಸಾರ್ವತ್ರಿಕ ಚುನಾವಣೆಗಳ ಅಭಿಯಾನದ ಮುಖ್ಯಸ್ಥರಾಗಿ ಮೋದಿಯವರ ಹೆಸರನ್ನು ಘೋಷಿಸಲು ಪಕ್ಷದ ‘ಗ್ರ್ಯಾಂಡ್‌ ಓಲ್ಡ್‌ ಮ್ಯಾನ್‌’ಗೆ ಹೆಚ್ಚು ಆಸಕ್ತಿ ಇಲ್ಲ ಎಂಬ ವರದಿಗಳು ಹೊರಬಂದವು. ಈ ಕಾರ‍್ಯಕ್ರಮದಲ್ಲಿ ಯಾವುದೇ ನಿರ್ಣಯ ಹೊರಬರಲಿಲ್ಲ. ಅಪಸ್ವರಗಳು ಕೇಳಿ ಬಂದಾಗ ನರೇಂದ್ರ ಮೋದಿ ಅವರೂ ಹಿಂದೆ ಸರಿಯುವ ಯೋಚನೆ ಮಾಡಿದ್ದರು.

ಬನ್ನಿ ಅಣ್ಣ: ಶಾ, ಫಡ್ನವೀಸ್ ಎದುರು ಮೋದಿ ಬರಮಾಡಿಕೊಂಡ ಉದ್ಧವ್!

ಮೋದಿ ಮೇಲೆ ನಂಬಿಕೆ ಇಡಿ

ರಾಜನಾಥ್‌ ಸಿಂಗ್‌ ತಮಗೆ ಸರಿ ಅನಿಸುವ, ನ್ಯಾಯ ನೀತಿ ಧರ್ಮಕ್ಕೆ ಅನುಗುಣವಾದ ನಿಲುವಿಗೆ ಬದ್ಧರಾಗಿರುವವರು. ಜೊತೆಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ನರೇದ್ರ ಮೋದಿ ಅವರ ಕಾರ‍್ಯವೈಖರಿಯನ್ನು ಸಿಂಗ್‌ ಕಣ್ಣಾರೆ ಕಂಡಿದ್ದರು. ಅಲ್ಲದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡಿಸುವ, ವಿಜಯವನ್ನು ತಂದುಕೊಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದ ಹೊಣೆ ಅವರ ಮೇಲಿತ್ತು. ಅತಿ ದೊಡ್ಡ ಚುನಾವಣೆ ಎದುರಿಸಲು ಕೇಂದ್ರ ಪ್ರಚಾರ ಸಮಿತಿ ರಚಿಸಿ, ತಡ ಮಾಡದೆ ಮೋದಿ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದರು.

‘ಈ ಆಯ್ಕೆಯನ್ನು ಜನರು ಪ್ರಶ್ನಿಸಬಹುದು. ಅದೆಲ್ಲದಕ್ಕೂ ಉತ್ತರ ಒಂದೇ; ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ. ಆದರೆ ಮೋದಿ ಗುಜರಾತಿನ 3 ಚುನಾವಣೆಯನ್ನು ಗೆದ್ದಿದ್ದು ಮಾತ್ರವಲ್ಲ, ಅಭಿವೃದ್ಧಿ ಎಂಬ ಪರಿಕಲ್ಪನೆಗೆ ಹೊಸ ಆಯಾಮ ನೀಡಿದ್ದಾರೆ. ಮೋದಿ ಮೇಲೆ ನಂಬಿಕೆ ಇಡಿ’ ಎಂದಿದ್ದರು.

ಮಾರನೇ ದಿನ ಪಕ್ಷದ ಕಾರ‍್ಯಕರ್ತರು, ಅರುಣ್‌ ಜೇಟ್ಲಿ, ಮನೋಹರ್‌ ಪರ್ರಿಕರ್‌ ಅವರೊಂದಿಗೆ ಸಮಾಲೋಚಿಸಿ ಎಲ್ಲಾ ನಿಬಂಧನೆಗಳನ್ನು ಮುರಿದು ಬಹಿರಂಗವಾಗಿ ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸಿದರು. ಇದೆಲ್ಲಾ ನಡೆದಿದ್ದು 2014ರ ಲೋಕಸಭಾ ಚುನಾವಣೆಗೆ 3 ತಿಂಗಳ ಮುಂಚೆ.

24 ವರ್ಷದ ಹುಡುಗ ಸಿಂಗ್‌ ಕೆಲ ವರ್ಷಗಳ ಹಿಂದೆ ಸ್ಥಳೀಯ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇನ್ನೇನು ರಾಜಕೀಯಕ್ಕೆ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದರು. 1975, ಜುಲೈ 12ರ ದಿನ ಬೆಳಿಗ್ಗೆ ಹಠಾತ್‌ ಬಂದ ಮಿರ್ಜಾಪುರ ಪೊಲೀಸರು ಸಿಂಗ ಅವರನ್ನು ಬಂಧಿಸಿದರು. ಸಿಂಗ್‌, ಜೆಪಿ ಚಳುವಳಿಯನ್ನು ಸಜ್ಜುಗೊಳಿಸಿದ ಅಸಾಧಾರಣ ಶಕ್ತಿ. ಅವರನ್ನು ಲಘುವಾಗಿ ತೆಗೆದುಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಯಾರ ಸಂಪರ್ಕಕ್ಕೂ ಅನುಮತಿಸದೆ ನಿರ್ಬಂಧಿಸಲಾಗಿತ್ತು.

Fact check: ಮೋದಿ ಮೇಕಪ್‌ಗೆ ತಿಂಗಳಿಗೆ .15 ಲಕ್ಷ ಬೇಕಂತೆ, ಹೌದಾ!

ಏಕಾಂಗಿ ಸೆರೆವಾಸಕ್ಕೆ ಅಟ್ಟಿದ್ದರು

ಕೆಲ ದಿನಗಳ ನಂತರ ಸಿಂಗ್‌ ಅವರನ್ನು ಅಲಹಾಬಾದ್‌ನ ನೈನಿ ಕೇಂದ್ರೀಯ ಕಾರಾಗೃಹಕ್ಕೆ ವರ್ಗಾಯಿಸಲಾಯಿತು. ಈ ಸುದ್ದಿ ತಿಳಿದ ಪತ್ನಿ ಸಾವಿತ್ರಿ ಮತ್ತು ತಾಯಿ ಗುಜರಾತಿ ದೇವಿ, ಸಿಂಗ್‌ ಅವರನ್ನು ಕರೆದುಕೊಂಡು ಹೋಗುವ ವೇಳೆ ಮಿರ್ಜಾಪುರ ನಿಲ್ದಾಣದಲ್ಲಿ ರೈಲು ಕೆಲ ಹೊತ್ತು ನಿಲ್ಲುತ್ತದೆ. ಅಲ್ಲಿ ಭೇಟಿ ಮಾಡಬೇಕೆಂದು ನಿರ್ಧರಿಸಿದರು. ಆದರೆ ರೈಲು ಬರಲು ಕೆಲವೇ ಕ್ಷಣ ಉಳಿದಿರುವಾಗ ಖಾಕಿ ಸರ್ಪಗಾವಲು ಬಂತು.

ರೈಲು ನಿಲ್ದಾಣದಲ್ಲಿ ಜೆಪಿ ಚಳವಳಿಯ ಬೆಂಬಲಿಗರೂ ಬಂದು ಘೋಷಣೆ ಮೊಳಗಿಸುತ್ತಿದ್ದರಿಂದ ಪತ್ನಿ ಮತ್ತು ತಾಯಿಯ ಕೂಗು ಕೇಳಿಸುವುದೂ ಅಸಾಧ್ಯವಾಗಿತ್ತು. ಕೊನೆಗೂ ಸಿಂಗ್‌ ಅವರಿಗೆ ತಾಯಿಯ ಮುಖ ಅಲ್ಪ ಸ್ವಲ್ಪ ಕಾಣಿಸಿತು. ಆದೇ ಕೊನೆ, ಸಿಂಗ್‌ ಇನ್ನೆಂದೂ ತಮ್ಮ ತಾಯಿಯನ್ನು ನೋಡಲಿಲ್ಲ. ಸಿಂಗ್‌ ಜೈಲಿನಲ್ಲಿದ್ದಾಗಲೇ ಗುಜರಾತಿ ದೇವಿ ಕೊನೆಯುಸಿರೆಳೆದರು. ತಾಯಿ ತೀರಿಹೋದ ಬಳಿಕ ಮಾಡಬೇಕಾದ ಎಲ್ಲಾ ಕಾರ‍್ಯಗಳನ್ನು ಸಿಂಗ್‌ ಜೈಲಿನೊಳಗೇ ಮಾಡಿ ಮುಗಿಸಿದರು. ಕೆಲ ದಿನಗಳ ಕಾಲ ಸಿಂಗ್‌ ಅವರನ್ನು ಏಕಾಂಗಿಯಾಗಿ ಬಂಧಿಸಲಾಗಿತ್ತು.

ಇಂದಿರಾ ಗಾಂಧಿ ವಿರುದ್ಧ ಮೈತ್ರಿ

ಜನವರಿ 18, 1977ರಂದು ಇಂದಿರಾ ಗಾಂಧಿ ಮುಂದಿನ ಮಾಚ್‌ರ್‍ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಿಸಿದರು. ಹಾಗೆಯೇ ಬಂಧನಕ್ಕೊಳಗಾದವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದರು. ಪ್ರತಿಪಕ್ಷಗಳು ಶೀಘ್ರದಲ್ಲೇ ಜನರನ್ನು ಸಜ್ಜುಗೊಳಿಸಿದವು. ಜೈಲಿನಿಂದ ಹೊರಬಂದ ಬಳಿಕ ರಾಜ್‌ನಾಥ್‌ ಸಿಂಗ್‌ ಅವರಿಗೆ ಅವರ ಸಮುದಾಯದ ಅಭೂತಪೂರ್ವ ಬೆಂಬಲ ದೊರಕಿತು. ಸಿಂಗ್‌ ಮಿರ್ಜಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಪಡೆದರು. ಸಿಂಗ್‌ ಭರ್ಜರಿ ಪ್ರಚಾರವನ್ನೂ ನಡೆಸಿದ್ದರು.

ಈ ಸಮಯದಲ್ಲಿ ಇಂದಿರಾಗಾಂಧಿ ವಿರುದ್ಧ ಜನ ಸಂಘ, ಭಾರತೀಯ ಲೋಕ ದಳ ಮತ್ತು ಸಮಾಜವಾದಿ ಪಕ್ಷಗಳು ಜನತಾ ಮೈತ್ರಿ ಮಾಡಿಕೊಂಡಿದ್ದವು. ಮತದಾನಕ್ಕೂ ಒಂದು ದಿನ ಮುನ್ನ ಜನ ಸಂಘ ಮತ್ತು ಲೋಕ ದಳದ ನಡುವೆ ನಡೆದ ಸೀಟು ಹಂಚಿಕೆಯ ಆಂತರಿಕ ಮಾತುಕತೆಯಲ್ಲಿ ಜನ ಸಂಘವವು ಮಿರ್ಜಾಪುರವನ್ನು ಫರ್ಕಿ ಆಲಿ ಅನ್ಸಾರಿ ಅವರಿಗೆ ಬಿಟ್ಟುಕೊಡಬೇಕೆಂಬ ಒಪ್ಪಂದವಾಯಿತು. ಇದು ಅಚ್ಚರಿಗೆ ಕಾರಣವಾಗಿತ್ತು. ಜನ ಸಂಘದ ಕಾರ‍್ಯಕರ್ತರು ಮಾತ್ರವಲ್ಲದೆ ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಕಾರ‍್ಯಕರ್ತರೂ ಸಿಂಗ್‌ ಅವನ್ನು ಬೆಂಬಲಿಸುವುದಾಗಿ ಕರೆ ನೀಡಿದರು. ಕೆಲವರು ಸ್ವತಂತ್ರವಾಗಿ ಸ್ಪರ್ಧಿಸಲೂ ಸಲಹೆ ನೀಡಿದರು.

ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ವ್ಯಕ್ತಿ ಮೋದಿ

ತಮಗೆ ಮತ ನೀಡಬೇಡಿ ಎಂದರು!

ಆದರೆ ಸಿಂಗ್‌ ತಮ್ಮ ನಾಮಪತ್ರ ಹಿಂಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಆದರೆ ಆಗಲೇ ಸಮಯ ಮೀರಿತ್ತು. ‘ನಾಮಪತ್ರ ವಾಪಸ್‌ ಪಡೆಯಲು ಸಾಧ್ಯವಿಲ್ಲ. ಬ್ಯಾಲೆಟ್‌ ಪೇಪರ್‌ನಲ್ಲಿ ನಿಮ್ಮ ಹೆಸರು ಇರಲಿದೆ’ ಎಂಬ ಉತ್ತರ ಬಂತು. ಸಿಂಗ್‌ ಸ್ವಲ್ಪ ಸಮಯ ಯೋಚಿಸಿ ತಮ್ಮ ಪಕ್ಷದ ಪರವಾಗಿ ನಿಲ್ಲಲು ನಿರ್ಧರಿಸಿದರು. ಡಿಸಿ ಕಚೇರಿಯಿಂದ ಹೊರಬಂದು ಸಭಿಕರನ್ನು ಉದ್ದೇಶಿಸಿ, ‘ಬ್ಯಾಲೆಟ್‌ ಪೇಪರ್‌ನಿಂದ ತಮ್ಮ ಹೆಸರನ್ನು ತೆಗೆದು ಹಾಕಲು ಕಾನೂನು ಅನುಮತಿಸುವುದಿಲ್ಲ. ಒಂದು ವೇಳೆ ನನ್ನ ಗುರುತಿಗೆ ಒಂದೇ ಒಂದು ಮತ ಬಿದ್ದರೂ ಅದು ನನಗೆ ಮಾಡುವ ಅವಮಾನ ’ ಎಂದು ಬೆಂಬಲಿಗರಿಗೆ ಹೇಳಿದರು. ಫಲಿತಾಂಶದ ದಿನ ಮತ ಎಣಿಸಿದಾಗ ರಾಜನಾಥ್‌ ಸಿಂಗ್‌ ಅವರಿಗೆ ಒಂದೇ ಒಂದು ಮತವೂ ಬಿದ್ದಿರಲಿಲ್ಲ! ಇದುವರೆಗೂ ಅವರು ಇದೇ ತಮ್ಮ ದೊಡ್ಡ ಗೆಲುವೆಂದು ಭಾವಿಸಿದ್ದಾರೆ.

*ಗೌತಮ್‌ ಚಿಂತಾಮಣಿ ಅವರು ಬರೆದ ರಾಜನಾಥ್‌ ಸಿಂಗ್‌ ಅವರ ಜೀವನ ಚರಿತ್ರೆ ‘ರಾಜನೀತಿ’ಯಿಂದ ಆಯ್ದ ಭಾಗ.

ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

click me!