ಸೆ.26ರಂದು ರೈತ ಸಂಘಟನೆಗಳ ಒಕ್ಕೂಟದಿಂದ ವಿಧಾನಸೌಧ ಚಲೋ: ಕುರುಬೂರು ಶಾಂತಕುಮಾರ್‌

By Govindaraj SFirst Published Sep 7, 2022, 8:45 AM IST
Highlights

ನ್ಯಾಯಯುತ ಕಬ್ಬಿನ ದರ ನಿಗದಿ, ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಸೆ.26 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಮೈಸೂರು (ಸೆ.07): ನ್ಯಾಯಯುತ ಕಬ್ಬಿನ ದರ ನಿಗದಿ, ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಸೆ.26 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ನಗರದ ಗನ್‌ಹೌಸ್‌ ವೃತ್ತದಲ್ಲಿರುವ ವಿಶ್ವಮಾನವ ಉದ್ಯಾನದಲ್ಲಿ ಮಂಗಳವಾರ ರೈತರ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ . 3050 ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಇದನ್ನು ಪುನರ್‌ ಪರಿಶೀಲಿಸುವಂತೆ ರೈತರ ಬೇಡಿಕೆಗೆ ಸ್ಪಂದಿಸಿಲ್ಲ. ರೈತರ ಬಗೆಗಿನ ನಿರ್ಲಕ್ಷ್ಯವನ್ನು ಖಂಡಿಸಿ ವಿಧಾನಸೌಧ ಚಲೋ, ನಿರಂತರ ಹೋರಾಟ ಮಾಡುವುದಾಗಿ ಹೇಳಿದರು.

ಬಿಜೆಪಿಯವರು ಜೆಡಿಎಸ್‌ಗೆ ಒಳ್ಳೆ ಮಕ್ಮಲ್ ಟೋಪಿ ಹಾಕಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಕಬ್ಬು ಉತ್ಪಾದನೆಗೆ ಬಳಸುವ ರಸಗೊಬ್ಬರ, ಪೊಟ್ಯಾಶ್‌, ಡಿಎಪಿ, ಏರಿಕೆಯಾಗಿದೆ. ಕಟಾವು ಕೂಲಿ ಸಾಗಾಣಿಕೆ ವೆಚ್ಚ, ಬೀಜದ ಬೆಲೆ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಟನ್‌ಗೆ . 3050 ನಿಗದಿ ಮಾಡಿ ದ್ರೋಹ ಬಗೆದಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ. ಇದನ್ನು ಪುನರ್‌ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗಿಕರಣ ಮಾಡಲು ಸಂಸತ್ತಿನಲ್ಲಿ ಮಸೂದೆ ಮಂಡನೆ ಮಾಡಿದೆ. ಇದನ್ನು ರಾಜ್ಯದ 38 ಲಕ್ಷ ಕೃಷಿ ಪಂಪ್‌ಸೆಟ್‌ ರೈತರು ವಿರೋಧಿಸುತ್ತೇವೆ. ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್‌ ನಿಲ್ಲಿಸುವ ಹುನ್ನಾರದಿಂದ ಈ ಬಿಲ್‌ ಮಂಡಿಸಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.

ರಾಜ್ಯಾದ್ಯಂತ ಅತಿವೃಷ್ಟಿಮಳೆಹನಿ ಬೆಳೆ ನಷ್ಟದಿಂದ ರೈತರ ಬೆಳೆಗಳು ಲಕ್ಷಾಂತರ ಹೆಕ್ಟೇರ್‌ ಹಾನಿಯಾಗಿದೆ. ಸರ್ಕಾರ ಸರಿಯಾದ ಬೆಳೆ ನಷ್ಟಸಮೀಕ್ಷೆ ಅಂದಾಜು ಮಾಡದೆ, . 7654 ಕೋಟಿ ನಷ್ಟವಾಗಿದೆ ಎಂದು ಹೇಳುತ್ತಲೇ ಕೇವಲ . 250 ಕೋಟಿ ಬಿಡುಗಡೆ ಮಾಡುತ್ತದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ, ಸರ್ಕಾರ ಇಂಥ ನಾಟಕವಾಡುವ ಕಾರ್ಯ ನಿಲ್ಲಿಸಿ ಸಮರ್ಪಕವಾಗಿ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿಗೆ ಒಲಿದ ಮೈಸೂರು ಮೇಯರ್, ಉಪ ಮೇಯರ್: ಸಾಬ್ರಿಗೆ ಚಾಕೊಲೇಟ್ ಕೊಟ್ಟಾಯ್ತು ಎಂದ ಶಾಸಕ

ಮೊಸರು, ಮಜ್ಜಿಗೆ, ಹಪ್ಪಳ, ಬೆಲ್ಲ , ಕೃಷಿ ಉಪಕರಣಗಳು, ಹನಿ ನೀರಾವರಿ ಉಪಕರಣಗಳು, ರಸಗೊಬ್ಬರ, ಕೀಟನಾಶಕಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ . 9.90 ಲಕ್ಷ ಕೋಟಿ ಉದ್ದಿಮೆಗಳ ಸಾಲ ಮನ್ನಾ ಮಾಡಿದೆ. ರೈತರ ಅತ್ಯಂತ ಸಂಕಷ್ಟದಲ್ಲಿದ್ದರೂ ಸಾಲ ಮನ್ನಾ ಮಾಡಲಿಲ್ಲ. ರೈತರ ಸಾಲ ಮನ್ನಾ ಮಾಡಬೇಕು. ಬಂಡವಾಳ ಶಾಹಿಗಳ ಉದ್ದಿಮೆದಾರರ ಮರ್ಜಿಯಲ್ಲಿ ಸರ್ಕಾರ ಸಾಗುವುದು ನಿಲ್ಲಬೇಕು ಎಂದು ಅವರು ಆಗ್ರಹಿಸಿದರು. ಮುಖಂಡರಾದ ಪಿ. ಸೋಮಶೇಖರ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಬರಡನಪುರ ನಾಗರಾಜ್‌, ಸಿದ್ದೇಶ್‌, ಮಾದಪ್ಪ, ಮಹದೇವಸ್ವಾಮಿ, ದೇವಮಣಿ ಇದ್ದರು.

click me!