ಉಜ್ಜಯಿನಿ- ತರಳಬಾಳು ಮಠಗಳ ವೈಷಮ್ಯ ಸ್ಫೋಟ: ಕೆಲ ಗ್ರಾಮಗಳಲ್ಲಿ ಕಲ್ಲು ತೂರಾಟ ಮನೆಗಳು ಜಖಂ

By Sathish Kumar KHFirst Published Jan 28, 2023, 8:29 PM IST
Highlights

ನಾಡಿನ ಪ್ರಮುಖ ಮಠಗಳಾದ ತರಳಬಾಳು ಮತ್ತು ಉಜ್ಜಯಿನಿ ಮಠಗಳ ನಡುವೆ ಇರುವ ವೈರುಧ್ಯಗಳ ಹಿನ್ನೆಲೆಯಲ್ಲಿ ಕೊಟ್ಟೂರು ತಾಲೂಕಿನ ಕಾಳಪುರ, ಉಜ್ಜಯಿನಿ ಸೇರಿ ಹಲವು ಗ್ರಾಮಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

ವಿಜಯನಗರ (ಜ.28): ನಾಡಿನ ಪ್ರಮುಖ ಮಠಗಳಾದ ತರಳಬಾಳು ಮತ್ತು ಉಜ್ಜಯಿನಿ ಮಠಗಳ ನಡುವೆ ಇರುವ ವೈರುಧ್ಯಗಳ ಹಿನ್ನೆಲೆಯಲ್ಲಿ ಕೊಟ್ಟೂರು ತಾಲೂಕಿನ ಕಾಳಪುರ, ಉಜ್ಜಯಿನಿ ಸೇರಿ ಹಲವು ಗ್ರಾಮಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ವೇಳೆ ಪೊಲೀಸರು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ತರಳು ಬಾಳು ಹುಣ್ಣಿಮೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಜಗಳೂರು ಪಟ್ಟಣದಿಂದ ಕೊಟ್ಟೂರಿಗೆ ನೂರಾರು ಜನರು ಬೈಕ್‌ ರ್ಯಾಲಿ ಮೂಲಕ ಆಗಮಿಸುತ್ತಿದ್ದರು. ಆದರೆ, ತರಳುಬಾಳು ಸಿರಿಗೇರಿ ಶ್ರೀಗಳು ಮತ್ತು ಉಜ್ಜಯನಿ ಮಠಕ್ಕೆ ಸಂಬಂಧಿಸಿದಂತೆ ದಶಕಗಳ ಹಿಂದಿನಿಂದಲೂ ಭಿನ್ನಾಭಿಪ್ರಾಯ(ವೈರುಧ್ಯ) ಮುಂದುವರೆಯುತ್ತಿದೆ. ಹೀಗಾಗಿ, ತರಳುಬಾಳು ಸಿರಿಗೇರಿ ಮಠದವರು ಉಜ್ಜಯಿನಿ ಮಠ ಅಥವಾ ಉಜ್ಜಯನಿ ಗ್ರಾಮಕ್ಕೆ ತೆರಳಬಾರದು ಎನ್ನುವ ಅಲಿಖಿತ ನಿಯಮವಿದೆ. 

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಮುನ್ನಲೆಗೆ ಫೆ.26ರಂದು ಸಾಣೇಹಳ್ಳಿ ಮಠದಲ್ಲಿ ಸಮಾವೇಶ

ಬೈಕ್‌ ರ್ಯಾಲಿ ವೇಳೆ ಯಡವಟ್ಟು:  ಕೊಟ್ಟೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಜಗಳೂರಿನಿಂದ ಕೊಟ್ಟೂರು ಪಟ್ಟಣದ ವರೆಗೂ ಸೀರಿಗೇರಿ ಸ್ವಾಮಿಗಳ ಬೈಕ್ ರ್ಯಾಲಿ ಆಯೋಜನೆ. ಆದರೆ, ಬೈಕ್‌ ರ್ಯಾಲಿ ಉಜ್ಜಯನಿ ಮಾರ್ಗವಾಗಿಯೇ ಹೋಗಬೇಕು. ಹೀಗಾಗಿ ಬೈಕ್‌ ರ್ಯಾಲಿ ಹೋಗುವವರು  ಉಜ್ಜಯಿನಿ ಗ್ರಾಮಕ್ಕೆ ತೆರಳಬಾರದು ಎನ್ನುವ ನಿಯಮವನ್ನು ಹೇರಲಾಗಿತ್ತು. ಆದರೆ, ಕೆಲವು ಬೈಕ್‌ ಸವಾರರು ಮುಖ್ಯ ರಸ್ತೆಯಲ್ಲಿ ಹೋಗುವುದನ್ನು ಬಿಟ್ಟು ಮಠವಿರುವ ಉಜ್ಜಯಿನಿ ಗ್ರಾಮದೊಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಪರಸ್ಪರ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ನಾಲ್ಕಕ್ಕೂ ಅಧಿಕ ಮನೆಗಳು ಜಖಂ: ಕೊಟ್ಟೂರು- ಜಗಳೂರು ಮುಖ್ಯರಸ್ತೆಯಿಂದ ಕಾಳಪುರ ಕ್ರಾಸ್ ಬಳಿಯಿಂದ ಉಜ್ಜಯಿನಿ ಪೀಠವಿರುವ ಉಜ್ಜಯಿನಿ ಗ್ರಾಮಕ್ಕೆ ಕೆಲವರು ನುಗ್ಗಲು ಯತ್ನಿಸಿದರು. ಈ ವೇಳೆ ಕಾಳಪುರ ಗ್ರಾಮದ ಜನರು ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್‌ ಸವಾರರು ಗ್ರಾಮಸ್ಥರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟ ನಾಲ್ಕಕ್ಕೂ ಹೆಚ್ಚು ಜನರಿಗೆ ಗಾಯ. ಜೊತೆಗೆ ನಾಲ್ಕುಕ್ಕೂ ಹೆಚ್ಚು ಮನೆಗಳು ಜಖಂ ಆಗಿವೆ. ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದೆ. ಗ್ರಾಮದ ಕೆಲ‌ ಮನೆ, ಬೈಕ್, ಬಣವಿಗಳಿಗೆ ಬೆಂಕಿ ಹಚ್ಚಲಾಗಿದೆ. 

9 ಗ್ರಾಮಗಳಲ್ಲಿ ನಿಷೇಧಾಜ್ಞೆ: ಇನ್ನು ಎರಡು ಮಠಗಳ ಮುಖ್ಯಸ್ಥರ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದ ಭಕ್ತರು ಆಗಿಂದಾಗ್ಗೆ ಗಲಾಟೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಈಗ ಗ್ರಾಮದಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಉಜ್ಜಯಿನಿ ಮಠದ ದೇವರ ಪಾದಗಟ್ಟೆಗಳು ಇರುವ ಉಜ್ಜಯನಿ ಹಾಗೂ ಸುತ್ತಮುತ್ತಲಿನ 9 ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಸ್ಥಳಗಳಲ್ಲಿ ಗಲಾಟೆ ಸಂಭವಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸರು ಈ ಗ್ರಾಮಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. 

ಸಿದ್ಧಗಂಗಾ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ: ಫೆಬ್ರವರಿ ತಿಂಗಳಲ್ಲಿ ಸರ್ಕಾರದಿಂದ ದಾಸೋಹ ಕಾರ್ಯಕ್ರಮ-ಸಿಎಂ ಬೊಮ್ಮಾಯಿ

ಕೆಲವು ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ: ತರಳುಬಾಳು ಹುಣ್ಣಿಮೆ ಹಿನ್ನಲೆ ಬೈಕ್‌ ರ್ಯಾಲಿ ಬರುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಕಾಳಪುರ ಗ್ರಾಮಸ್ಥರ ಮಧ್ಯೆ ಸಂಘರ್ಷ ಆಗಿದೆ. ನಾಲ್ಕು ಜನರಿಗೆ ಗಾಯವಾಗಿದೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸಿ, ಎಸ್ಪಿ ಭೇಟಿ ನೀಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣ ತರಲಾಗಿದೆ. ಪೊಲೀಸ್‌ ವರಿಷ್ಠಾಧಿಕಾರಿ ಕೂಟ್ಟೂರು ತಹಶಿಲ್ದಾರ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮನೆಗಳಿಗೆ ನುಗ್ಗಿರೋ, ಬೈಕ್ ಸವಾರರು ಬೆಂಕಿ ಹಾಕಿರೋ ಕುರಿತು ಎಸ್‌ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದು ಎರಡು ಮಠಗಳ ನಡುವೆ ಇರುವ ಹಳೆಯ ವಿವಾದ ಎಂದು ಮಾಹಿತಿ ಲಭ್ಯವಾಗಿದ್ದು, ಎಸ್‌ಪಿಯಿಂದ ಮಾಹಿತಿ ಪಡೆದು ಅಗತ್ಯವಿದ್ದಲ್ಲಿ ಸ್ಥಳಕ್ಕೆ ಹೋಗಲಾಗುತ್ತದೆ. ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಮತ್ತು ಹಂಪಿ ಉತ್ಸವಕ್ಕೆ ಹೆಚ್ಚಿನ ಬಂದೋಬಸ್ತ್‌ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ ತಿಳಿಸಿದ್ದಾರೆ.

click me!