Bengaluru Kambala: ತುಳುವರು ಸಂಸ್ಕೃತಿ ಸಾಹಸದ ಸಂಕೇತ: ಬಿ.ವೈ.ವಿಜಯೇಂದ್ರ

By Kannadaprabha NewsFirst Published Nov 27, 2023, 4:00 AM IST
Highlights

ತುಳುವರು ಸಂಸ್ಕೃತಿ, ಸಾಹಸದ ಸಂಕೇತವಾಗಿದ್ದು, ಕಂಬಳ ಮುಂದಿನ ವರ್ಷಗಳಲ್ಲಿ ರಾಜಧಾನಿಯಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಬೆಂಗಳೂರು (ನ.27): ತುಳುವರು ಸಂಸ್ಕೃತಿ, ಸಾಹಸದ ಸಂಕೇತವಾಗಿದ್ದು, ಕಂಬಳ ಮುಂದಿನ ವರ್ಷಗಳಲ್ಲಿ ರಾಜಧಾನಿಯಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಭಾನುವಾರ ಸಂಜೆ ಬೆಂಗಳೂರು ಕಂಬಳ-ನಮ್ಮ ಕಂಬಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಮೊಟ್ಟಮೊದಲು ಆಯೋಜನೆಯಾಗುವ ಮೂಲಕ ಕಂಬಳಕ್ಕೆ ರಾಜಧಾನಿಯ ರಾಜಗೌರವ ಸಿಕ್ಕಿದೆ. ಕರಾವಳಿ ಗ್ರಾಮೀಣರ ಸ್ವಾಭಿಮಾನದ ಸಂಕೇತವಾದ ಕಂಬಳ ಮುಂದಿನ ವರ್ಷ ಇನ್ನಷ್ಟು ಅದ್ಧೂರಿಯಾಗಿ ಆಚರಣೆಯಾಗಲಿ. 

ತುಳುವರು ಎಂದರೆ ಸಾಂಸ್ಕೃತಿಕ ಸಂಕೇತ, ಸಾಹಸದ ಸಂಕೇತ, ಧಾರ್ಮಿಕ ಶೃದ್ಧೆಯ ಸಂಕೇತ. ವಿಶ್ವಮಟ್ಟದಲ್ಲಿ ಸ್ನೇಹದ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ತುಳುವರಿಗೆ ಸಲ್ಲುತ್ತದೆ ಎಂದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿ ಭಾಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಕರಾವಳಿಯ ಸಂಸ್ಕೃತಿ ಉಳಿಸುವ ಕೆಲಸ ಮಾಡಿದ್ದರು. ನಮಗೆ ಕರಾವಳಿಯ ಬಗೆಗೆ ವಿಶೇಷ ಗೌರವ, ಅಭಿಮಾನವಿದೆ. ಎಂದಿಗೂ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಿದರು. 

ಬಿಜೆಪಿಗೆ ಬಿ.ವೈ.ವಿಜಯೇಂದ್ರ ಹರಕೆಯ ಕುರಿಯಾಗಲಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪೂರ

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ತುಳುನಾಡ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ನಮ್ಮ ಸನಾತನ ಧರ್ಮ ಇಂತಹ ಸಾವಿರಾರು ಉನ್ನತ ಸಂಸ್ಕೃತಿಗೆ ಬೆಳವಣಿಗೆಗೆ ಕಾರಣಿಭೂತವಾಗಿದೆ. ಇದನ್ನು ನಾಶಪಡಿಸಲು ಬಿಡಬಾರದು. ಕಂಬಳ, ಜಲ್ಲಿಕಟ್ಟು, ಜೋಡೆತ್ತಿನ ಬಂಡಿ ನಿಷೇಧಿಸುವಂತೆ ಕೆಲವರು ನ್ಯಾಯಾಲಯದವರೆಗೆ ಹೋಗುತ್ತಾರೆ. ಆದರೆ, ಪ್ರಾಣಿಹತ್ಯೆ ಆಗುವಾಗ ಅವರು ಮೂಖ ಪ್ರೇಕ್ಷಕರಾಗಿ ಇರುತ್ತಾರೆ. ಆದರೆ, ನಮ್ಮ ಜನಪದ ಸಂಸ್ಕೃತಿ ಬಿತ್ತರಿಸುವಾಗ ಸಕ್ರಿಯರಾಗುತ್ತಾರೆ. ಇದರ ಹಿಂದೆ ಪಿತೂರಿ ಅಡಗಿದ್ದು, ನಮ್ಮ ಸಂಸ್ಕೃತಿಯ ಕರುಳುಬಳ್ಳಿಯನ್ನು ಕಡಿಯುವ ಪ್ರಯತ್ನ ನಡೆಯುತ್ತದೆ. 

ಡಿನ್ನರ್ ಕೂಟದಲ್ಲಿ ಮುಳುಗಿದ ರಾಜ್ಯ ಸರ್ಕಾರ: ಆರ್.ಅಶೋಕ್ ಆರೋಪ

ಆದರೆ, ನಮ್ಮ ಸಂಸ್ಕೃತಿ ನಾಶಪಡಿಸಲು ಯತ್ನಿಸಿದರು ನಾಶವಾಗಿದ್ದಾರೆ ವಿನಃ ನಮ್ಮ ಸಂಸ್ಕೃತಿ ಎಂದಿಗೂ ನಾಶವಾಗಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಡಾ। ಮಂಜುನಾಥ ಭಂಡಾರಿ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಇದ್ದರು. ಇದಕ್ಕೂ ಮುನ್ನ ಮಂಡ್ಯ ಶಾಸಕ ರವಿ ಕುಮಾರ್‌ ಪಾಲ್ಗೊಂಡಿದ್ದರು. ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್‌ ಶೆಟ್ಟಿ, ಸಮಿತಿ ಅಧ್ಯಕ್ಷ ಕೆ.ಎಸ್‌.ಅಶೋಕ್‌ ಕುಮಾರ್‌ ರೈ, ಕಾರ್ಯಧ್ಯಕ್ಷ, ಸಂಗೀತ ನಿರ್ದೇಶಕ ಗುರುಕಿರಣ್‌, ಉಮೇಶ್‌ ಶೆಟ್ಟಿ, ಗುರುರಂಜನ್‌ ಶೆಟ್ಟಿ ಹಲವರಿದ್ದರು.

click me!