ಈದ್ ಮಿಲಾದ್ ವೇಳೆ ಪ್ಯಾಲೆಸ್ತೇನ್ ಧ್ವಜ ಹಾರಾಟ; ಸುಮೋಟೋ ಕೇಸ್ ದಾಖಲಿಸಿ ಬೆಕ್ಕು ಅರೆಸ್ಟ್ ಮಾಡಿದ ಪೊಲೀಸರು!

Published : Aug 27, 2026, 01:28 PM IST
Shivamogga Eid Milad palestine flag

ಸಾರಾಂಶ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಯುವಕನೊಬ್ಬ ಪ್ಯಾಲೆಸ್ತೀನ್ ಧ್ವಜ ಹಾರಿಸಿದ 14 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗ (ಆ.27): ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮಾಚರಣೆ ವೇಳೆ ಕಟೌಟ್‌ ಒಂದರ ಮೇಲೆ ನಿಂತು ಪ್ಯಾಲೆಸ್ತೀನ್ ಧ್ವಜ ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯದ 14 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಮೂವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಿಹಾಲ್ ಅಲಿಯಾಸ್ ಬೆಕ್ಕು ಅಲಿಯಾಸ್ ಮೊಹಮ್ಮದ್ ಸಾಧಿಕ್ ಎಂದು ಗುರುತಿಸಲಾಗಿದೆ.

14 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದ್ದೇನು?

ನಗರದ ಸೂಕ್ಷ್ಮ ಪ್ರದೇಶವಾದ ಆರ್.ಎಂ.ಎಲ್. ನಗರದಲ್ಲಿ (RML Nagar) ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಬೃಹತ್ ಕಟೌಟ್‌ ನಿರ್ಮಿಸಲಾಗಿತ್ತು. ಈ ಕಟೌಟ್‌ನ ಮೇಲ್ಭಾಗದಲ್ಲಿ ನಿಂತು ಯುವಕನೊಬ್ಬ ಪ್ಯಾಲೆಸ್ತೀನ್ ದೇಶದ ಧ್ವಜವನ್ನು ರಭಸವಾಗಿ ಹಾರಿಸಿದ್ದಾನೆ. ಇದನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ 14 ಸೆಕೆಂಡ್‌ಗಳ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.

ದೊಡ್ಡಪೇಟೆ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲು

ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆಯನ್ನು ಮನಗಂಡು ದೊಡ್ಡಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸಂದೀಪ್ ಅವರು ಸ್ವಯಂಪ್ರೇರಿತರಾಗಿ (Suo Motu) ದೂರು ದಾಖಲಿಸಿದ್ದಾರೆ. ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಅಥವಾ ದ್ವೇಷದ ಭಾವನೆ ಉಂಟುಮಾಡುವುದು ಮತ್ತು ರಾಷ್ಟ್ರದ ಏಕತೆಗೆ ಧಕ್ಕೆ ತರುವಂತಹ ಕೃತ್ಯವೆಂದು ಪರಿಗಣಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ:

BNS ಕಲಂ 353(2)

BNS ಕಲಂ 196(1)

BNS ಕಲಂ 197

ಮೂವರ ವಿರುದ್ಧ ಎಫ್‌ಐಆರ್: 'ಬೆಕ್ಕು' ಅರೆಸ್ಟ್

ಪ್ರಕರಣ ಸಂಬಂಧ ಪೊಲೀಸರು ನಿಹಾಲ್ ಅಲಿಯಾಸ್ ಬೆಕ್ಕು, ಉಮರ್ ಹಾಗೂ ಅಬ್ರಹಾರ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕಾರ್ಯಾಚರಣೆ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು, ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿ ನಿಹಾಲ್ ಅಲಿಯಾಸ್ ಮೊಹಮ್ಮದ್ ಸಾಧಿಕ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

PREV
Read more Articles on
click me!

Recommended Stories

ಬೆಂಗಳೂರು ಐಟಿ ಕೆಲಸ ಬಿಟ್ಟು ಮಂಗಳೂರಿಗೆ, ಕೃಷಿಯ ಲಾಭ ಕಂಡ ಸುಳ್ಯದ ಚೇತನ್ ಶೆಟ್ಟಿ, ರಂಬುಟಾನ್ ಮಾರಿ ಮನೆ ಕಟ್ಟಿದ ಟೆಕ್ಕಿ!
ಮಂಡ್ಯ ಜೈಲಿನಲ್ಲೂ ರಾಜಾತಿಥ್ಯ: ಕೈದಿಗಳ ಸೆಲ್‌ಗೂ ರೇಟು, ಮಟನ್‌-ಚಿಕನ್‌ 'ರೇಟ್ ಕಾರ್ಡ್' ಪತ್ರ ವೈರಲ್!