Mandya: ಸರ್ಕಾರಿ ಕಚೇರಿಯಲ್ಲಿಯೇ ಉಪ ವಿಭಾಗಾಧಿಕಾರಿಗೆ ಸೀಮಂತ ಶಾಸ್ತ್ರ: ಜನರ ಪ್ರೀತಿಗೆ ಮನಸೋತ ಅಧಿಕಾರಿ

By Sathish Kumar KHFirst Published Jan 24, 2023, 6:27 PM IST
Highlights

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸ್ನೇಹ ಅಷ್ಟಕ್ಕಷ್ಟೇ ಇರುತ್ತದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಇದಕ್ಕೆ ಅಪವಾದ ಎಂಬಂತೆ ಸಾರ್ವಜನಿಕರೇ ಸೇರಿಕೊಂಡು ಜಿಲ್ಲೆಯ ಉಪ ವಿಭಾಗಾಧಿಕಾರಿ (ಎಸಿ) ಅವರಿಗೆ ಕಚೇರಿಯಲ್ಲಿಯೇ ಸೀಮಂತ ಶಾಸ್ತ್ರವನ್ನು ನೆರವೇರಿದಿದ್ದಾರೆ. 

ಮಂಡ್ಯ (ಜ.24): ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಂಬಂಧ ಅಷ್ಟಕ್ಕಷ್ಟೇ ಇರುತ್ತದೆ. ಕೆಲವೊಂದು ಜನರು ಹತ್ತಾರು ಬಾರಿ ಅಲೆದಾಡಿದರೂ ಕೆಲಸ ಮಾಡಿಕೊಡದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಇದಕ್ಕೆ ಅಪವಾದವೆಂಬಂತೆ ಜಿಲ್ಲೆಯ ಉಪ ವಿಭಾಗಾಧಿಕಾರಿಗೆ ಸಾರ್ವಜನಿಕರು ತಮ್ಮ ಮನೆ ಮಗಳಂತೆ ಸೀಮಂತ ಶಾಸ್ತವನ್ನು ಮಾಡಿ ಶುಭ ಹಾರೈಸಿದ್ದಾರೆ. 

ಹೌದು, ಮಂಡ್ಯದ ಉಪ ವಿಭಾಗಾಧಿಕಾರಿ (ಎಸಿ) ಕಚೇರಿಯಲ್ಲಿ ಅವರು ಕುಳಿತು ಕೆಲಸ ಮಾಡುವ ಸ್ಥಳದಲ್ಲಿಯೇ ಉಪ ವಿಭಾಗಾಧಿಕಾರಿ ಕೀರ್ತನಾ ಅವರಿಗೆ ಬೂದನೂರು ಗ್ರಾಮಸ್ಥರು ಇಂದು ಶೀಮಂತ ಶಾಸ್ತ್ರವನ್ನು ನೆರವೇರಿಸಿದ್ದಾರೆ. ಹೀಗೆ ಸೀಮಂತ ಶಾಸ್ತ್ರ ನೆರವೇರಿಸಿದವರು ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ನಿವೇಶನರಹಿತ ಮಹಿಳೆಯರಾಗಿದ್ದಾರೆ. ಹಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಗೆ ಮನೆಯನ್ನು ಕಳೆದುಕೊಂಡು ನಿವೇಶನಕ್ಕಾಗಿ ಹೋರಾಟ ಮಾಡಿದ್ದಾರೆ. ಹಲವು ಬಾರಿ ಪ್ರತಿಭಟನೆ ಮತ್ತು ಹೋರಾಟಕ್ಕೆ ಆಗಮಿಸಿದ ವೇಳೆ ಸಮಸ್ಯೆ ಆಲಿಸುತ್ತಿದ್ದ ಎಸಿ ಕೀರ್ತನಾ ಪರಿಚಿತರಾಗಿದ್ದಾರೆ. ತಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೂ ಪರವಾಗಿಲ್ಲ, ಕಷ್ಟಕ್ಕೆ ಸ್ಪಂದಿಸುತ್ತಿದ್ದ ಅವರ ಗುಣಕ್ಕೆ ಮನಸೋತು ಅಧಿಕಾರಿ ಕೀರ್ತನಾಗೆ ಮನೆ ಮಗಳಂತೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.

ಮಂಡ್ಯ: ಮನೆಯಲ್ಲಿದ್ದ ಒಂದು ಕೆಜಿ ಚಿನ್ನ ಕದ್ದು ಖದೀಮರು ಪರಾರಿ..!

ಕಚೇರಿಯಲ್ಲಿಯೇ ಸರಳ ಸೀಮಂತ ಶಾಸ್ತ್ರ: ಮಂಡ್ಯದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿಯೇ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನು ಸರಳವಾಗಿ ಮಾಡಲಾಗಿದೆ. ಅರಿಶಿಣ- ಕುಂಕುಮವಿಟ್ಟು, ಬಳೆ ತೊಡಿಸಿ ಹೂ ಮುಡಿಸಿ ಅಕ್ಷತೆ ಹಾಕಿದ್ದಾರೆ. ಬಳಿಕ ಮಹಿಳೆಯರು ಅಕ್ಕಿ, ಬೆಲ್ಲ, ಕಾಯಿ, ಕೊಬ್ಬರಿ, ಎಲೆ-ಅಡಿಕೆ, ಬಾಳೆಹಣ್ಣು ಹಾಗೂ ಸೀರೆ ನೀಡುವ ಮೂಲಕ ಮಡಿಲು ತುಂಬಿದ್ದಾರೆ. ಹೀಗೆ ಸೀಮಂತ ಶಾಸ್ತ್ರ ಮಾಡುವ ಮೂಲಕ ಮಂಡ್ಯ ಉಪ ವಿಭಾಗಾಧಿಕಾರಿ ಕೀರ್ತನಾ ಅವರನ್ನು ಅಭಿನಂದಿಸಿದ್ದಾರೆ. ಬೂದನೂರು ಗ್ರಾಮದ ಮಹಿಳೆಯರ ಪ್ರೀತಿಗೆ ಎಸಿ ಕೀರ್ತನಾ ಅವರೂ ಮನಸೋತಿದ್ದಾರೆ.

ನಿವೇಶನಕ್ಕಾಗಿ ಹಲವು ದಿನಗಳ ಧರಣಿ:  ಮಂಡ್ಯ ತಾಲೂಕಿನ ಬೂದನೂರು ಗ್ರಾಮಸ್ಥರು ಹಲವು ದಿನಗಳಿಂದ ಸ್ವಂತ ನಿವೇಶನಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯರ ಸಮೇತರಾಗಿ ಧರಣಿ ನಡೆಸುತ್ತಿದ್ದರು. ಮಹಿಳೆಯರ ಹೋರಾಟಕ್ಕೆ ಉಪ ವಿಭಾಗಾಧಿಕಾರಿಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜೊತೆಗೆ, ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಎಸಿ ಕೀರ್ತನಾ ಕ್ರಮ ಕೈಗೊಂಡಿದ್ದಾರ. ಹೀಗೆ, ಉಪ ವಿಭಾಗಾಧಿಕಾರಿ ಕೀರ್ತನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲು ಕಚೇರಿಗೆ ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ತಮ್ಮ ನೆಚ್ಚಿನ ಅಧಿಕಾರಿ ಗರ್ಭಿಣಿ ಎಂದು ತಿಳಿದು ಗ್ರಾಮಸ್ಥರೆಲ್ಲರೂ ಸೇರಿ ಹಣವನ್ನು ಹೊಂದಿಸಿಕೊಂಡು ಸೀಮಂತ ಕಾರ್ಯಕ್ಕೆ ಬೇಕಿದ್ದ ಎಲ್ಲ ವಸ್ತುಗಳನ್ನು ತಂದಿದ್ದಾರೆ. ನಂತರ ಕಚೇರಿಯಲ್ಲಿಯೇ ಸೀಮಂ ನಡೆಸಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. 

Mandya Crime: ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಜನತೆ

ಗ್ರಾಮಸ್ಥರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ ಅಧಿಕಾರಿಗಳು: ಇನ್ನು ಮಂಡ್ಯದ ಸರ್ಕಾರಿ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಕೀರ್ತನಾ ಅವರಿಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಿದ ಬೂದನೂರು ಗ್ರಾಮಸ್ಥರ ಕಾರ್ಯಕ್ಕೆ ಇತರೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಗರ್ಭಾವಸ್ಥೆಯ ತುಂಬಾ ಮುಖ್ಯವಾದ ದಿನಗಳಾಗಿದ್ದು, ಖುಷಿಯಿಂದ ಇರಬೇಕು. ಗರ್ಭಿಣಿ ಆಗಿದ್ದರೂ ಪ್ರತಿನಿತ್ಯ ಒತ್ತಡದ ನಡುವೆಯೇ ಕೀರ್ತನಾ ಅವರು ಕೆಲಸ ಮಾಡುತ್ತಿದ್ದರು. ಜನರು ಉತ್ತಮವಾಗಿ ಅಧಿಕಾರಿಗಳೊಂದಿಗೆ ನಡೆದುಕೊಂಡಲ್ಲಿ ಕೆಲಸದಲ್ಲಿಯೂ ಒತ್ತಡ ಇರದೇ ಸಂತೋಷದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈಗ ಸೀಮಂತ ಶಾಸ್ತ್ರವನ್ನು ಮಾಡಿದ್ದು, ಅವರ ಮನಸ್ಸಿಗೆ ಖುಷಿ ತಂದುಕೊಟ್ಟಿದೆ ಎಂದು ಎಸಿ ಕಚೇರಿಯ ಸಹ ಅಧಿಕಾರಿಯೊಬ್ಬರು ತಮ್ಮ ಸಂತಸವನ್ನು ತಿಳಿಸಿದರು. 

click me!