Kannada Book| ತಾಂಬೂಲದೊಂದಿಗೆ ಪುಸ್ತಕ ನೀಡುವ ಪರಂಪರೆ ಸೃಷ್ಟಿಯಾಗಲಿ: ಸೋಮೇಶ್ವರ

By Kannadaprabha NewsFirst Published Nov 22, 2021, 2:07 PM IST
Highlights

*   ಓದು ಸಂಸ್ಕೃತಿ ರೂಪುಗೊಳ್ಳಬೇಕು: ಲೇಖಕ
*  ಸಾವಣ್ಣ ಪ್ರಕಾಶನದ 12ನೇ ವಾರ್ಷಿಕೋತ್ಸವ 10 ಕೃತಿ ಬಿಡುಗಡೆ
*  ಜೋಗಿ ವಿರಚಿತ ‘ಐ ಹೇಟ್‌ ಮೈ ವೈಫ್‌’, ಮಹಾಬಲ ಅವರ ‘ಮ್ಯಾನೇಜ್‌ಮೆಂಟ್‌ ಭಗವದ್ಗೀತೆ’ ಲೋಕಾರ್ಪಣೆ
 

ಬೆಂಗಳೂರು(ನ.22):  ಗ್ರಂಥದಾನ ಶ್ರೇಷ್ಠ ದಾನವಾಗಿದ್ದು ತಾಂಬೂಲ ಕೊಡುವಾಗ ವೀಳ್ಯದೆಲೆ, ಅಡಕೆಯ ಜೊತೆಗೆ ಪುಸ್ತಕವನ್ನು ಕೊಡುವ ಹೊಸ ಪರಂಪರೆ ಸೃಷ್ಟಿಯಾಗಬೇಕು ಎಂದು ಖ್ಯಾತ ಬರಹಗಾರ ಡಾ. ನಾ.ಸೋಮೇಶ್ವರ(Dr.Na Someshwara) ಹೇಳಿದ್ದಾರೆ. 

ಅವರು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದ 12ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪುಸ್ತಕೋತ್ಸವದಲ್ಲಿ ‘ಕನ್ನಡಪ್ರಭ’(Kannada Prabha) ಪುರವಣಿ ಪ್ರಧಾನ ಸಂಪಾದಕ ಎಚ್‌.ಗಿರೀಶ್‌ರಾವ್‌ (ಜೋಗಿ)(Girish Rao Hatwar) ಅವರ ‘ಐ ಹೇಟ್‌ ಮೈ ವೈಫ್‌’(I Hate My Wife) ಹಾಗೂ ಉಪ ಸುದ್ದಿಸಂಪಾದಕ ಮಹಾಬಲ ಸೀತಾಳಭಾವಿ ಅವರ ‘ಮ್ಯಾನೇಜ್‌ಮೆಂಟ್‌ ಭಗವದ್ಗೀತೆ’(Management Bhagavad Gita) ಸೇರಿದಂತೆ ಒಟ್ಟು ಹತ್ತು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಸರಿ ಇರುವುದನ್ನು ರಿಪೇರಿ ಮಾಡಲು ಹೊರಡುವ ಲೇಖಕನಿಗೆ ಎಚ್ಚರವಿರಲಿ: ಜೋಗಿ

ಪುಸ್ತಕ(Book) ಬರೆಯುವ, ಪ್ರಕಟಿಸುವ ಪ್ರಯತ್ನಗಳಿಗೆ ಸಾರ್ಥಕತೆ ಬರಬೇಕಾದರೆ ಜನರು ಅದನ್ನು ಕೊಂಡು ಓದುವ ಸಂಸ್ಕೃತಿ ರೂಪುಗೊಳ್ಳಬೇಕು. ಸಾವಣ್ಣ ಪ್ರಕಾಶನದ ಜಮೀಲ್‌ ಅವರು ಪುಸ್ತಕದ ಹೂರಣ ಚೆನ್ನಾಗಿದೆ, ಪುಸ್ತಕಗಳು ಮಾರಾಟವಾಗುತ್ತವೆ ಎಂಬ ಪೂರ್ಣ ವಿಶ್ವಾಸದಿಂದ ಏಕಕಾಲದಲ್ಲಿ ಪ್ರಕಟಿಸಿರುವ ಹತ್ತು ಪುಸ್ತಕಗಳನ್ನು ಕೊಳ್ಳುವ ಮೂಲಕ ಅವರ ಸಾಹಸಕ್ಕೆ ನಾವು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಅವರು ನೀಡಿದರು.

ಸಪ್ನ ಬುಕ್‌ ಹೌಸ್‌ನ(Sapna Book House) ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಶಾ ಮಾತನಾಡಿ, ನನ್ನ ಮಾತೃಭಾಷೆ ಗುಜರಾತಿ(Gujarati). ಜಮೀಲ್‌ ಅವರದ್ದು ತಮಿಳು. ಆದರೂ ಕನ್ನಡದ(Kannada) ಮೇಲೆ ಅಪರಿಮಿತ ಪ್ರೀತಿಯನ್ನು ಹೊಂದಿ ಕನ್ನಡ ಸೇವೆಯನ್ನು ಮಾಡುತ್ತಿದ್ದೇವೆ. ಕನ್ನಡದ ಜನರೂ ಕೂಡ ನಮ್ಮ ಪ್ರೀತಿಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು.

ಲೇಖಕ ಜೋಗಿ(Jogi) ಅವರು ಮಾತನಾಡಿ, ಕನ್ನಡದ ಪ್ರಕಾಶಕರು ಕನ್ನಡದ ಹೊಸ ಬರಹಗಾರರನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸುತ್ತಿರುವುದರಿಂದ ಕನ್ನಡಕ್ಕೆ ಹೊಸ ಹೊಸ ಬರಹಗಾರರು ದಕ್ಕುತ್ತಿದ್ದಾರೆ. ಇದರಿಂದ ಕನ್ನಡಕ್ಕೆ ಹೊಸ ಅಲೋಚನೆಗಳು ಸಿಗುತ್ತಿವೆ. ಪ್ರಕಾಶಕರ ಪ್ರೋತ್ಸಾಹದಿಂದ ಹೊಸ ಲೇಖಕರ ಜೊತೆ ಜೊತೆಗೆ ಹೊಸ ಓದುಗರು ಕೂಡ ಸೃಷ್ಟಿಆಗುತ್ತಿದ್ದಾರೆ. ಪುಸ್ತಕ ಬರೆಯುವ ಉತ್ಸಾಹದಲ್ಲಿ ಇರುವ ಲೇಖಕರು ಅಂಜಿಕೆಯಿಲ್ಲದೆ ಬರೆಯಬಹುದು ಎಂದು ಹೇಳಿದರು.

ಬಿಡುಗಡೆಗೊಂಡ ಇತರ ಕೃತಿಗಳಿವು

ಕಾರ್ಯಕ್ರಮದಲ್ಲಿ ದಿವಂಗತ ಸುಧೀಂದ್ರ ಹಾಲ್ದೊಡ್ಡೇರಿ ಅವರ ‘ನೆಟ್‌ ನೋಟ’, ರಾಜಮ್ಮ ಡಿ.ಕೆ. ಅವರ ‘50 ಬದುಕು ಬದಲಿಸುವ ಕಥೆಗಳು’, ಜಗದೀಶ ಶರ್ಮಾ ಸಂಪ ಅವರ ‘ಭೀಷ್ಮ ಹೇಳಿದ ಮ್ಯಾನೇಜ್‌ಮೆಂಟ್‌ ಕಥೆಗಳು’, ಮಾಕೋನಹಳ್ಳಿ ವಿನಯ್‌ ಮಾಧವ್‌ ಅವರ ‘ಅರ್ಧ ಸತ್ಯ’, ನಂದಿನಿ ಹೆದ್ದುರ್ಗ ಅವರ ‘ಇಂತೀ ನಿನ್ನವಳೇ ಆದ...’, ಶಿವಕುಮಾರ್‌ ಮಾವಲಿ ಅವರ ‘ನೊ ಮೋರ್‌ ಇಂಗ್ಲಿಷ್‌’, ಮೇಘನಾ ಸುಧೀಂದ್ರ ಅವರ ‘ಬೆಂಗಳೂರ್‌ ಕಲರ್ಸ್‌’, ಕಥಾಕೂಟದ 23 ಸದಸ್ಯರು ಬರೆದ ಕತೆಗಳಿರುವ ‘ಮಳೆಯಲ್ಲಿ ನೆನೆದ ಕತೆಗಳು’ ಕೃತಿ ಬಿಡುಗಡೆಗೊಂಡಿತು. ಇದೇ ಸಂದರ್ಭದಲ್ಲಿ ಕೃತಿಕಾರರಿಗೆ ಗೌರವಧನ ಮತ್ತು ಸ್ಮರಣಿಕೆ ನೀಡಲಾಯಿತು. ಸಾವಣ್ಣ ಪ್ರಕಾಶನದ ಜಮೀಲ್‌ ಸ್ವಾಗತಿಸಿದರು.

ಜೋಗಿ ವಿರಚಿತ ‘ಎಲ್‌’ ಪುಸ್ತಕ ಬಿಡುಗಡೆ

ಸಾವಣ್ಣ ಪ್ರಕಾಶನದ 12ನೇ ವರ್ಷಾಚರಣೆಯ ಅಂಗವಾಗಿ ನಡೆದ ಪುಸ್ತಕೋತ್ಸವದಲ್ಲಿ 10 ಪುಸ್ತಕಗಳನ್ನು ಖ್ಯಾತ ಬರಹಗಾರ ನಾ.ಸೋಮೇಶ್ವರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಪ್ನ ಬುಕ್‌ ಹೌಸ್‌ನ ನಿತಿನ್‌ ಶಾ, ಕತೆಗಾರ ಜೋಗಿ, ಸಾವಣ್ಣ ಪ್ರಕಾಶನದ ಜಮೀಲ್‌ ಸೇರಿದಂತೆ ಕೃತಿಕಾರರು ಉಪಸ್ಥಿತರಿದ್ದರು.

ಕನ್ನಡಪ್ರಭದ ಜೋಗಿ ಸೇರಿ ಮೂವರಿಗೆ ಬರಹಗಾರರ ಸಂಘದ ಪ್ರಶಸ್ತಿ

ಕರ್ನಾಟಕ ಕನ್ನಡ  ಬರಹಗಾರರ (Karnataka Writers Association) ಮತ್ತು ಪ್ರಕಾಶಕರ ಸಂಘ ನೀಡುವ 2020ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ 'ಕನ್ನಡಪ್ರಭ' (Kananda Prabha) ಪುರವಣಿ ಸಂಪಾದಕ ಹಾಗೂ ಸಾಹಿತಿ ಗಿರೀಶ್‌ ರಾವ್‌ ಹತ್ವಾರ(ಜೋಗಿ), ಲೇಖಕಿ ಮಂಜುಳಾ ಹಿರೇಮಠ್‌(Manjula Hiremath) ಮತ್ತು ಪತ್ರಕರ್ತ ಲೇಖಕ ಜಿ.ಎನ್‌. ಮೋಹನ್‌(GN Mohan) ಅವರು ಆಯ್ಕೆಯಾಗಿದ್ದರು.
 

click me!