Chamarajanagar: ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಕ್ಕೆ ಕಾಂಗ್ರೆಸ್ ಸದಸ್ಯರ ರಾಜೀನಾಮೆ!

By Govindaraj SFirst Published May 22, 2022, 12:26 AM IST
Highlights

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಹಾಗು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ರಾಜಕೀಯ  ಗುದ್ದಾಟ ತಾರಕಕ್ಕೇರಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ 8 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ವರದಿ: ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮೇ.22): ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಹಾಗು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ರಾಜಕೀಯ  ಗುದ್ದಾಟ ತಾರಕಕ್ಕೇರಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ 8 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಕ್ಕೆ ಕಾಂಗ್ರೆಸ್ ಬೆಂಬಲಿತ ಒಂಬತ್ತು ಸದಸ್ಯರು  ಚುನಾವಣಾಧಿಕಾರಿ ಮಿಸ್ ಗೈಡ್ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಅದು ಯಾಕೆ,ಕಾರಣವೇನು ಅಂತೀರಾ ಈ ಸ್ಟೋರಿ ನೋಡಿ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಕ್ಕಡಹಳ್ಳಿ ಗ್ರಾಮ ಪಂಚಾಯಿತಿ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದೆ. 15 ಸದಸ್ಯ ಬಲದ ಗ್ರಾ.ಪಂ. ಇದಾಗಿದ್ದು ಒಂಬತ್ತು ಕಾಂಗ್ರೆಸ್ ಬೆಂಬಲಿತ, 6 ಸದಸ್ಯರು ಬಿಜೆಪಿ ಬೆಂಬಲಿತರಿದ್ದಾರೆ. ಆದರೆ ಮೇ 19ರಂದು ನಡೆದ ಅಧ್ಯಕ್ಷ ಚುನಾವಣೆಯ ಗೌಪ್ಯ ಮತದಾನದಲ್ಲಿ ಬಿಜೆಪಿ ಬೆಂಬಲಿತ ಭಾಸ್ಕರ್ ಗೆ ಎಂಟು ಮತ ದೊರೆತಿದ್ದು ಬಹುಮತ ಸಾಧಿಸಿದ್ದರೂ ಕಾಂಗ್ರೆಸ್ ನೆಲಕಚ್ಚಬೇಕಾಗಿದೆ. ಚುನಾವಣಾಧಿಕಾರಿ ಕುಮ್ಮಕ್ಕಿನಿಂದಲೇ ಈ ರೀತಿಯ ಅವ್ಯವಹಾರ ನಡೆದಿದೆ. 

Chamarajanagar: ವಾವ್! ನೋಡುಗರನ್ನು ವಿಸ್ಮಯಗೊಳಿಸ್ತಿದೆ ಬಿಳಿಗಿರಿರಂಗನ ಬೆಟ್ಟ!

ಕಾಂಗ್ರೆಸ್ ಬೆಂಬಲಿತ ಒಂಬತ್ತು ಸದಸ್ಯರಲ್ಲಿ ಒಬ್ಬರೂ ಅಡ್ಡ ಮತದಾನ ಮಾಡಿಲ್ಲ. ಶಾಸಕ ನಿರಂಜನಕುಮಾರ್ ಅವರ ಕುಮ್ಮಕ್ಕಿನಿಂದ ಚುನಾವಣಾಧಿಕಾರಿ ಬ್ಯಾಲೆಟ್ ಪೇಪರ್ ತಿರುಚಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಶಾಸಕರನ್ನು ಖರೀದಿಸಿದಂತೆ ಬಿಜೆಪಿಯವರು ಗ್ರಾಪಂ ಆಡಳಿತವು ತಮಗೆ ಬೇಕೆಂದು ಈ ರೀತಿ ಅಡ್ಡದಾರಿ‌ ಹಿಡಿದಿದ್ದಾರೆ. ಜಿಲ್ಲಾಡಳಿತ ಸಮಸ್ಯೆಯನ್ನು  ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮರುಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡಬೇಕು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಗ್ರಹಿಸಿದ್ದಾರೆ. ಶಾಸಕರ ಕುಮ್ಮಕ್ಕಿನಿಂದ ಚುನಾವಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರೇ ನಮಗೆ ಓಟು ನೀಡಿದ್ದಾರೆ. 

ಸತ್ತು ಮತ್ತೆ ಜೀವ ಬಂದಿದ್ದ ವ್ಯಕ್ತಿಗೆ ತಿಥಿ ಮಾಡಿದ ಗ್ರಾಮಸ್ಥರು: ಚಾಮರಾಜನಗರ ಜಿಲ್ಲೆಯಲ್ಲೊಂದು ವಿಚಿತ್ರ ಆಚರಣೆ!

ಆಪರೇಷನ್ ಕಮಲ ಮಾಡುವ ಯಾವ ಅವಶ್ಯಕತೆಯೂ ಇಲ್ಲ. ಅಧ್ಯಕ್ಷ ಸ್ಥಾನ ತಪ್ಪಿತಲ್ಲ ಎಂಬ ಹತಾಷೆಯಿಂದ ಕಾಂಗ್ರೆಸ್ ನವರು ಹೀಗೆಲ್ಲ ಮಾತಾಡ್ತಿದಾರೆ. ಚುನಾವಣೆ ಪಾರದರ್ಶಕತೆಯಿಂದ ನಡೆದಿದ್ದು ತನಿಖೆ ನಡೆಸಲಿ. ಸುಖಾ ಸುಮ್ಮನೆ ಕ್ಷೇತ್ರ ಶಾಸಕರ ಮೇಲೆ ಗುರುತರ ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಗ್ರಾ.ಪಂ.ನ 9  ಸದಸ್ಯರ ಸಾಮೂಹಿಕ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಅಡ್ಡ ದಾರಿ ಹಿಡಿದಿದೆಯೋ ಅಥವಾ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸ್ವಇಚ್ಛೆಯಿಂದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಮತದಾನ ಮಾಡಿದ್ದಾರೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

click me!