ಕೊಡಗಲ್ಲಿ ದುಬೈ ವ್ಯಕ್ತಿಗೆ ಹನಿಟ್ರ್ಯಾಪ್

By Web DeskFirst Published Sep 28, 2019, 8:35 AM IST
Highlights

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಯಿಂದ ಗುಂಡಿನ ದಾಳಿ | ಕಿಂಗ್‌ಪಿನ್ ಪರಾರಿ ಕಾಲೇಜು ವಿದ್ಯಾರ್ಥಿನಿ ಸೇರಿ 6 ಮಂದಿ ಸೆರೆ | ಲಕ್ಷಾಂತರ ರೂ ದೋಚಿದ ಖದೀಮರು 
 

ಕೊಡಗು (ಸೆ. 28): ದುಬೈಯಲ್ಲಿ ಉದ್ಯೋಗಿಯಾಗಿರುವ ಅನಿವಾಸಿ ಭಾರತೀಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರು. ಹಣ ವನ್ನು ದೋಚಿದ ಜಾಲದ ೬ ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬನ್ನೇರುಘಟ್ಟ ಸುತ್ತಮುತ್ತ ಇವೆ 40 ಚಿರತೆ

ಆರೋಪಿತರ ಬಂಧನಕ್ಕೆ ತೆರಳಿದ್ದ ವೇಳೆ ಜಾಲದ ಕಿಂಗ್‌ಪಿನ್ ಕರೀಂ ಸೇರಿದಂತೆ ನಾಲ್ವರು ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ದುಬೈನಲ್ಲಿ ನೆಲೆಸಿದ್ದ ಜಿಲ್ಲೆಯ ನಾಪೋಕ್ಲು ಸಮೀಪದ ಎಮ್ಮೆಮಾಡು ನಿವಾಸಿ ಗಫೂರ್ ಎಂಬಾತನೇ ಈ ಜಾಲದಿಂದ ಮೋಸಕ್ಕೆ ಒಳಗಾದವರು. ಪ್ರಕರಣದಲ್ಲಿ ಶಾಮೀಲಾಗಿದ್ದ ಎಮ್ಮೆಮಾಡುವಿನ ಅಜರುದ್ದೀನ್ (24), ಅಬುಬಕರ್ ಸಿದ್ದಿಕ್ (33), ಹಸೇನಾರ್ (27), ಇರ್ಷಾದ್ ಅಲಿ (27), ಸಮೀರ್ (28) ಹಾಗೂ ಕುಶಾಲನಗರ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಲಾಗಿದೆ.

ಘಟನೆ ವಿವರ: ಜಿಲ್ಲೆಯ ಎಮ್ಮೆಮಾಡುವಿನಲ್ಲಿ ಮನೆ ಕಟ್ಟುವ ಉದ್ದೇಶದಿಂದ ಗಫೂರ್ ದುಬೈನಿಂದ ಆಗಮಿಸಿದ್ದರು. ಮನೆ ನಿರ್ಮಾಣಕ್ಕೆಂದು ಅವರು ತಂದಿದ್ದ ಹಣದ ಮೇಲೆ ಕಣ್ಣಿಟ್ಟಿದ್ದ ಅದೇ ಗ್ರಾಮದ ಕರೀಂ ಮತ್ತು ಗ್ಯಾಂಗ್ ಸಂಚು ರೂಪಿಸಿ ಗಫೂರ್ ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾರೆ.

ಆ.16 ರಂದು ಮೈಸೂರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆಂದು ಗಫೂರ್ ಅವರನ್ನು ಕರೆದೊಯ್ದ ಗ್ಯಾಂಗ್, ಅಲ್ಲಿಂದ ಹೋಂ ಸ್ಟೇ ಒಂದಕ್ಕೆ ಕರೆದೊಯ್ದಿತ್ತು. ಅಲ್ಲಿ ಅವರಿಗೆ ಅಮಲು ಪದಾರ್ಥ ನೀಡಿ ಯುವತಿಯ ಜತೆ ಅಶ್ಲೀಲ ಫೋಟೋಗಳನ್ನು ತೆಗೆದು ನಂತರ ಹಲ್ಲೆ ನಡೆಸಿ ನಾವು ಪತ್ರಕರ್ತರು ಎಂದು ಸುಳ್ಳು ಹೇಳಿ ಬೆದರಿಸಿದ್ದಾರೆ. ನಂತರ ಆತನ ಬಳಿ ಇದ್ದ 60 ಸಾವಿರ ರು. ಭಾರತೀಯ ನಗದು ಹಾಗೂ 50 ಸಾವಿರ ವಿದೇಶಿ ನಗದು ಹಣ ದೋಚಿದ್ದಾರೆ.

ಕೊಡಗು: ಗುಂಡು ಹಾರಿಸಿಕೊಂಡು ಕಾಫಿ ವ್ಯಾಪಾರಿ ಆತ್ಮಹತ್ಯೆ

ಮಾತ್ರವಲ್ಲದೆ 50 ಲಕ್ಷ ರು. ನೀಡದಿದ್ದರೆ ಫೋಟೋ, ವಿಡಿಯೋವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಂತರ ಗಫೂರ್ ಮನೆಯಿಂದ 3.80 ಲಕ್ಷ ರು. ಹಣ ತರಿಸಿಕೊಂಡು ತಂಡಕ್ಕೆ ನೀಡಿದ್ದು, ಬಳಿಕ ಆರೋಪಿಗಳು ಬಿಡುಗಡೆ ಮಾಡಿದ್ದಾರೆ. ವಂಚಕರಿಂದ ಬಿಡುಗಡೆಗೊಂಡು ಊರಿಗೆ ಮರಳಿದ ಗಫೂರ್ ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

click me!