
ಮೈಸೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಅಡುಗೆ ಅನಿಲದ ಕೊರತೆಯಿಂದ ಪರಿತಪಿಸುತ್ತಿದ್ದರೆ, ಕರ್ನಾಟಕದ ಈ ಗ್ರಾಮಗಳಿಗೆ ಅದರ ಶಾಖ ತಟ್ಟಿಲ್ಲ. ಹಾಗಂತ ಇಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆಯನ್ನೂ ಮಾಡುವುದಿಲ್ಲ.
ಮೈಸೂರು ಭಾಗದಲ್ಲಿ ಹೆಚ್ಚು ಸಮುದಾಯ ಆಧಾರಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ನ ಅಂಗ ಸಂಸ್ಥೆಯಾದ ಕೆಂಚನಹಳ್ಳಿಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರವು ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಜೈವಿಕ ಅನಿಲ (ಬಯೋಗ್ಯಾಸ್) ಅಳವಡಿಕೆಗೆ ನೆರವಾಗಿರುವುದು ಇವತ್ತಿನ ಇಂಧನ ಅಭಾವವನ್ನು ಮರೆಸುತ್ತಿದೆ.
ಟೈಟಾನ್ ಕಂಪನಿಯ ನೆರವಿನೊಂದಿಗೆ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಎಚ್.ಡಿ.ಕೋಟೆ ತಾಲೂಕಿನ ಚಕ್ಕೂರು ಗ್ರಾಮದ ಸುಮಾರು 70 ಕುಟುಂಬಗಳಿಗೆ ಬಯೋಗ್ಯಾಸ್ ಸೌಲಭ್ಯ ಕಲ್ಪಿಸಿದೆ. ಈ ಕುಟುಂಬಗಳು ಅಡುಗೆಗೆ, ಮನೆಗೆ ವಿದ್ಯುತ್ಬಲ್ಪ್ ಬಳಕೆಗೆ ಜೈವಿಕ ಅನಿಲವನ್ನೇ ಅವಲಂಬಿಸಿವೆ.
ಅಂತೆಯೇ ಅದೇ ತಾಲೂಕಿನ ಜೋಂಪನಹಳ್ಳಿಯ 53 ಕುಟುಂಬಗಳಿಗೆ ಜೈವಿಕ ಅನಿಲ ಅಳವಡಿಕೆಗೆ ನೆರವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 300 ಕುಟುಂಬಗಳಿಗೆ ಜೈವಿಕ ಅನಿಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದ ಸಂಸ್ಥೆಯು ಆ ಗುರಿ ಮುಟ್ಟಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಸುಮಾರು 200 ಕುಟುಂಬಗಳಿಗೆ ಜೈವಿಕ ಅನಿಲ ಅಳವಡಿಕೆಗೆ ಅವಕಾಶ ಕಲ್ಪಿಸುತ್ತಿದೆ.
ಅಲ್ಲದೆ ಚಕ್ಕೂರು ಮತ್ತು ಜೋಂಪನಹಳ್ಳಿಯನ್ನು ಸಂಪೂರ್ಣವಾಗಿ ಜೈವಿಕ ಅನಿಲ ಗ್ರಾಮವನ್ನಾಗಿ ಪರಿವರ್ತಿಸುವ ಗುರಿ ಇದೆ. ಆದರೆ ಗ್ರಾಮದ ಅನೇಕ ಮಂದಿ ನಿವಾಸಿಗಳಿಗೆ ಅಗತ್ಯವಿರುವ ಸ್ಥಳಾವಕಾಶ ಮತ್ತು ಹಸುಗಳು ಇಲ್ಲ.
ಜೈವಿಕ ಅನಿಲ ಅಳವಡಿಕೆಗೆ ಸುಮಾರು 10/15 ಅಡಿ ಸ್ಥಳಾವಕಾಶಬೇಕು ಮತ್ತು ಕನಿಷ್ಠ 2 ಹಸುಗಳು ಇರಬೇಕು. ಇವುಗಳ ಸಗಣಿ ಮೂಲಕ ಜೈವಿಕ ಅನಿಲ ತಯಾರಿಸಿ ಅಡುಗೆಗೆ ಬಳಸಿಕೊಳ್ಳಬಹುದು. ಗ್ಯಾಸ್ ತಯಾರಾಗಿ ಉಳಿದ ಸಗಣಿಯನ್ನು ಗೊಬ್ಬರವಾಗಿಯೂ ರೈತರು ಬಳಸಿಕೊಳ್ಳಬಹುದು. ರೈತರಿಗೆ ₹3800 ಮಾತ್ರ ಪಡೆಯಲಾಗುತ್ತದೆ. ಉಳಿದ ಎಲ್ಲಾ ಹಣವನ್ನು ಟೈಟಾನ್ ಮತ್ತು ವಿವೇಕ ಗ್ರಾಮೀಣ ಜೀವನಾಧಾರ ಸಂಸ್ಥೆ ಭರಿಸುತ್ತದೆ. ಈ ಎಲ್ಲಾ ಸೌಲಭ್ಯ ಇರುವುದರಿಂದ ಮತ್ತು ಸಿಮೇಎಣ್ಣೆ, ಗ್ಯಾಸ್, ಎಲೆಕ್ಟ್ರಿಕ್ಸ್ಟೌ ಮುಂತಾದ ಯಾವುದೇ ಮೂಲವನ್ನು ಅವಲಂಬಿಸಬೇಕಾದ ಅಗತ್ಯವಿಲ್ಲ.
ಕೊಲ್ಲಿ ದೇಶದಲ್ಲಿ ನಡೆಯುತ್ತಿರುವ ಈ ಯುದ್ಧದ ಸಂದರ್ಭದಲ್ಲಿ ಅಡುಗೆ ಅನಿಲದ ಕೊರತೆ ಆಗಿದೆ ಎಂಬ ಬಾಧೆಯೂ ಇವರನ್ನು ಕಾಡಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ತೀರ ಅಗತ್ಯ ಇರುವವರನ್ನು ಗುರುತಿಸಿ ಸಂಸ್ಥೆಯು ಈ ಸೌಲಭ್ಯ ಕಲ್ಪಿಸುತ್ತದೆ.
ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಅಡುಗೆ ಅನಿಲ ಬೇಕು ಎಂದರೂ ಒಂದು ಅಡುಗೆ ಅನಿಲ ಸಿಲಿಂಡರ್ಗೆ ₹900 ವೆಚ್ಚ ಮಾಡಬೇಕು. ಅದು ವರ್ಷಕ್ಕೆ ₹10,800 ಆಗುತ್ತದೆ. ಅಂತದ್ದು ಚಕ್ಕೂರು ಗ್ರಾಮದ 71 ಕುಟುಂಬಕ್ಕೆ ₹7.66 ಲಕ್ಷ ಆಗುತ್ತದೆ. ಅಂದರೆ ಪ್ರತಿ ಕುಟುಂಬವು ಅಡುಗೆ ಅನಿಲ ಕೊರತೆಯ ತೊಂದರೆಗೆ ಆಳಗಾಗದೆ, ಉಳಿತಾಯವನ್ನೂ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: ಹೊಗೆನೂ ಇಲ್ಲ, ಖರ್ಚೂ ಇಲ್ಲ ಸಿಕ್ಕಾಪಟ್ಟೆ ಸ್ಪೀಡ್! ಸಿಲಿಂಡರ್ ಕೊರತೆಗೆ ಬ್ರೇಕ್ ಹಾಕಿದ ಬೆಂಗಳೂರಿನ ‘ರಾಕೆಟ್ ಸ್ಟವ್’