ಸಂಸತ್‌ನಲ್ಲಿ ಕನ್ನಡದಲ್ಲಿಯೇ ಘರ್ಜಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ

By Suvarna NewsFirst Published Feb 12, 2020, 12:35 PM IST
Highlights

ಸಂಸದ ಪ್ರತಾಪ್‌ ಸಿಂಹ ಅವರು ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ತಳವಾರ ಹಾಗೂ ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದ್ದು, ಈ ಸಂಬಂಧ ಕೆಲಸ ಮಾಡಿದ ಹಿಂದಿನ ಸಚಿವರೂ, ಸಿಎಂ ಹಾಗೂ ಇಂದಿನ ಸಚಿವ, ಸಿಎಂಗಳಿಗೆ ಪ್ರತಾಪ್‌ ಸಿಂಹ ಕನ್ನಡದಲ್ಲೇ ಧನ್ಯವಾದ ತಿಳಿಸಿದ್ದಾರೆ.

ಮೈಸೂರು(ಫೆ.12): ಸಂಸದ ಪ್ರತಾಪ್‌ ಸಿಂಹ ಅವರು ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ಗೃಹಸಚಿವ ಅಮಿತ್‌ ಶಾ ಚಾಮರಾಜನಗರಕ್ಕೆ ಬಂದಿದ್ದಾಗ ಪರಿವಾರ ಹಾಗೂ ತಳವಾರ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಬಗ್ಗೆ ಭರವಸೆ ನೀಡಿದ್ದರು. ಈಗ ಈ ಮಸೂದೆ ತಂದಿರುವ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಸಂಸತ್‌ನಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಲ್ಲಿರುವಂತಹ ತಳವಾರ ಹಾಗೂ ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆ ಮೈಸೂರು ಭಾಗದಲ್ಲಿ ಕೆಳಿ ಬಮದಿತ್ತು. ಸುಮಾರು 32 ವರ್ಷ ಹಳೆಯ ಮಸೂದೆಗೆ ಅಂಗೀಕಾರ ದೊರೆತಿದ್ದು, ಈ ಎರಡೂ ಸಮುದಾಯದ ಜನರು ಎಸ್‌ಟಿ ಸೌಲಭ್ಯಗಳ ಸದುಪಯೋಗವನ್ನು ಪಡೆಯಲಿದ್ದಾರೆ.

ಟ್ವಿಟ್ಟರ್‌ನಲ್ಲಿ ಕೆಟ್ಟ ಭಾವನೆಗಳನ್ನ ವ್ಯಕ್ತಪಡಿಸುವನು ನಾನಲ್ಲ: ಸಿಂಹಗೆ ತಿವಿದ HDK

ಈ ಸಂಬಂಧ ಕೆಲಸ ಮಾಡಿದ ಹಿಂದಿನ ಸಚಿವರೂ, ಸಿಎಂ ಹಾಗೂ ಇಂದಿನ ಸಚಿವ, ಸಿಎಂಗಳಿಗೆ ಪ್ರತಾಪ್‌ ಸಿಂಹ ಕನ್ನಡದಲ್ಲೇ ಧನ್ಯವಾದ ತಿಳಿಸಿದ್ದಾರೆ. ಭರವಸೆ ನೀಡಿ ಅದನ್ನು ಈಡೇರಿಸಿದ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ, ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಸೇರಿ ಎಲ್ಲರಿಗೂ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ.

ಕರ್ನಾಟಕದ ತಳವಾರ ಹಾಗೂ ಪರಿವಾರ ಸಮುದಾಯದವರು ತಮ್ಮನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಬೇಕು ಎಂದು ನಡೆಸುತ್ತಿದ್ದ 3 ದಶಕಗಳ ಹೋರಾಟಕ್ಕೆ ಮಂಗಳವಾರ ಪ್ರತಿಫಲ ದೊರಕಿದೆ. ಈ ಸಮುದಾಯಕ್ಕೆ ಪರಿಶಿಷ್ಟಪಂಗಡ (ಎಸ್‌ಟಿ) ಸ್ಥಾನಮಾನ ನೀಡುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ರಾಜ್ಯದ ಸಿದ್ದಿ ಸಮುದಾಯಕ್ಕೂ ಇದೇ ವೇಳೆ ಎಸ್‌ಟಿ ಸ್ಥಾನಮಾನ ದೊರಕಿದೆ.

'ಡಿ. ಕೆ. ಶಿವಕುಮಾರ್ ಏಸು ಕುಮಾರ್ ಆಗೋಕೆ ಹೊರಟಿದ್ದಾರೆ'..!

ಸಾಂವಿಧಾನಿಕ (ಪರಿಶಿಷ್ಟಪಂಗಡ) ಆದೇಶ (ತಿದ್ದುಪಡಿ) ಮಸೂದೆ-2019ಕ್ಕೆ ಡಿಸೆಂಬರ್‌ 12ರಂದೇ ರಾಜ್ಯಸಭೆ ಅಂಗೀಕಾರ ನೀಡಿತ್ತು. ಈಗ ಲೋಕಸಭೆಯೂ ಅಂಗೀಕಾರ ನೀಡುವುದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆಗೆ ಅಂಗೀಕಾರ ದೊರಕಿದಂತಾಗಿದೆ. ಕರ್ನಾಟಕದ ಎಸ್‌ಟಿ ಸಮುದಾಯದ ಪಟ್ಟಿಯಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ರಾಷ್ಟ್ರಪತಿಗಳು ಸಹಿ ಹಾಕಿ, ಅಧಿಸೂಚನೆ ಹೊರಬಿದ್ದರೆ ತಿದ್ದುಪಡಿಯು ಜಾರಿಗೆ ಬರಲಿದೆ.

ಎಸ್‌ಟಿ ಸ್ಥಾನಮಾನ ದೊರಕುವುದರೊಂದಿಗೆ ಪರಿಶಿಷ್ಟಪಂಗಡವು ಪಡೆಯುತ್ತಿರುವ ಎಲ್ಲ ಮೀಸಲು ಸೌಲಭ್ಯಗಳು ಹಾಗೂ ಇತರ ಸೌಲಭ್ಯಗಳು ಸಿದ್ದಿ, ತಳವಾರ ಹಾಗೂ ಪರಿವಾರ ಸಮುದಾಯಗಳಿಗೆ ದೊರಕಲಿವೆ. ತಳವಾರ, ಪರಿವಾರ ಸಮುದಾಯದವರು ಕರ್ನಾಟಕದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಹೆಚ್ಚಿದ್ದಾರೆ. ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿದ್ದಿಗಳಿದ್ದಾರೆ.

ಬುಡಕಟ್ಟು ವ್ಯವಹಾರ ಸಚಿವ ಅರ್ಜುನ್‌ ಮುಂಡಾ ಮಸೂದೆ ಮಂಡಿಸಿದರು. ಬಳಿಕ ಮಾತನಾಡಿದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ, ಈ ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ ದೊರಕಿಸಿಕೊಡಲು ನೆರವಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.

click me!