Bengaluru: ಕೆ.ಸಿ.ಜನರಲ್‌ನಲ್ಲೂ ತಾಯಿ-ಶಿಶು ಆಸ್ಪತ್ರೆ: ಸಚಿವ ಸುಧಾಕರ್‌

Published : Apr 21, 2022, 03:03 AM IST
Bengaluru: ಕೆ.ಸಿ.ಜನರಲ್‌ನಲ್ಲೂ ತಾಯಿ-ಶಿಶು ಆಸ್ಪತ್ರೆ: ಸಚಿವ ಸುಧಾಕರ್‌

ಸಾರಾಂಶ

ಕೆ.ಸಿ.ಜನರಲ್‌ ಆಸ್ಪತ್ರೆ (ಕೆಂಪು ಚೆಲುವರಾಜ ಅಮ್ಮಣಿ ಸಾರ್ವಜನಿಕ ಆಸ್ಪತ್ರೆ)ಯಲ್ಲೂ ವಾಣಿ ವಿಲಾಸ ಆಸ್ಪತ್ರೆಯ ಮಾದರಿಯಲ್ಲಿ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ

ಬೆಂಗಳೂರು (ಏ.21): ಕೆ.ಸಿ.ಜನರಲ್‌ ಆಸ್ಪತ್ರೆ (KC General Hospital) (ಕೆಂಪು ಚೆಲುವರಾಜ ಅಮ್ಮಣಿ ಸಾರ್ವಜನಿಕ ಆಸ್ಪತ್ರೆ)ಯಲ್ಲೂ ವಾಣಿ ವಿಲಾಸ ಆಸ್ಪತ್ರೆಯ ಮಾದರಿಯಲ್ಲಿ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ತಿಳಿಸಿದ್ದಾರೆ. ನಿರ್ಮಾಣ್‌ ಹಾಗೂ ಓಪನ್‌ ಟೆಕ್ಸ್ಟ್‌ನೆರವಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಐಸಿಯು ಉನ್ನತೀಕರಣ ಹಾಗೂ ಹೊಸ ವೈದ್ಯಕೀಯ ಉಪಕರಣಗಳ ಅಳವಡಿಕೆ, ವೈದ್ಯಕೀಯ ಕಾರಣಗಳಿಂದ ಗರ್ಭಪಾತಕ್ಕೆ ಅವಕಾಶ ನೀಡುವ ಖಾಸಗಿ ಆಸ್ಪತ್ರೆಗಳ ಮಾಹಿತಿ ನೀಡುವ ಇ-ಕಲ್ಯಾಣಿ ವೆಬ್‌ಸೈಟ್‌ ಉದ್ಘಾಟನೆ, ನ್ಯೂಮೋನಿಯಾ ನಿಯಂತ್ರಣಕ್ಕೆ ಸಾಮಾಜಿಕ ಜಾಗೃತಿ ಮತ್ತು ಕ್ರಮಗಳನ್ನು ಕೈಗೊಳ್ಳುವ ‘ಸಾನ್ಸ್‌’ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ಆಯವ್ಯಯದಲ್ಲಿ ಘೋಷಿಸಿದಂತೆ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕನಿಷ್ಠ 500 ಹಾಸಿಗೆ ಸಾಮರ್ಥ್ಯ ಇರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಈ ವರ್ಷದಲ್ಲೇ ಎಲ್ಲಾ ಪ್ರಸ್ತಾವಗಳು ಬರಲಿದ್ದು, ಜಾಗಗಳನ್ನು ಗುರುತಿಸಲಾಗುವುದು. ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದೆ ಎಂದರು. ಖಾಸಗಿ ಸಂಸ್ಥೆಗಳು ಕೆ.ಸಿ.ಜನರಲ್‌ನಲ್ಲಿ 10 ಹಾಸಿಗೆಗಳ ಐಸಿಯು ವ್ಯವಸ್ಥೆಯನ್ನು ಮಾಡಿಕೊಟ್ಟಿವೆ. ಜೊತೆಗೆ ಅದಕ್ಕೆ ಬೇಕಿರುವ ಉಪರಣಗಳನ್ನೂ ನೀಡಿದ್ದು ಸಂಸ್ಥೆಗಳನ್ನು ಅಭಿನಂದಿಸುವುದಾಗಿ ಹೇಳಿದರು.

Karnataka Politics: ಕಾಂಗ್ರೆಸ್‌ ನಾಯಕರ ವಿರುದ್ಧ ಸುಧಾಕರ್‌ ಮತ್ತೆ ವಾಗ್ದಾಳಿ

ಗರ್ಭಪಾತದ ಬಗ್ಗೆ ಜಾಗೃತಿ ಅಗತ್ಯ: ಪ್ರಧಾನಿ ನರೇಂದ್ರ ಮೋದಿಯವರು ‘ಬೇಟಿ ಬಚಾವೊ, ಬೇಟಿ ಪಡಾವೊ’ ಎಂದು ಘೋಷಿಸಿ ಹೆಣ್ಣುಮಕ್ಕಳ ರಕ್ಷಣೆಗೆ ಒತ್ತು ನೀಡಿದ್ದಾರೆ. ಇದೇ ರೀತಿ ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುವುದನ್ನು ತಡೆಯಲು ಕಠಿಣ ಕಾನೂನು ಜಾರಿಯಲ್ಲಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆ(ಎನ್‌ಟಿಪಿ)ಯಡಿ ಆಪತ್ತು ಇರುವ ತಾಯಂದಿರು ಹಾಗೂ ಆರೋಗ್ಯಕರವಾಗಿ ಬೆಳೆಯದ ಭ್ರೂಣಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಗರ್ಭಪಾತ ಮಾಡಲು ಅವಕಾಶವಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ನ್ಯುಮೋನಿಯಾ ಸಾವು ಇಳಿಸಬೇಕಿದೆ: ದೇಶದಲ್ಲಿ 5 ವರ್ಷದೊಳಗಿನ ಒಂದೂವರೆ ಲಕ್ಷ ಮಕ್ಕಳು ನ್ಯುಮೋನಿಯಾಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ 1,000 ಶಿಶು ಜನನದಲ್ಲಿ 28 ಸಾವುಗಳು ನ್ಯುಮೋನಿಯಾದಿಂದ ಸಂಭವಿಸುತ್ತಿವೆ. ಇದನ್ನು ನಾಲ್ಕು, ಐದಕ್ಕೆ ಇಳಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಗುರಿ ನೀಡಿದೆ. ಇದಕ್ಕಾಗಿ ಹೆಚ್ಚು ಅರಿವು ತರುವ ಕಾರ್ಯಕ್ರಮ ನಡೆಯಬೇಕಿದೆ. ಮುನ್ನೆಚ್ಚರಿಕೆಯಿಂದಲೇ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ. ಮಕ್ಕಳ ಆರೋಗ್ಯ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದರು.

ಕೆ.ಸಿ.ಜನರಲ್‌ ಬದಲಾಗಬೇಕಿದೆ: ಕೆ.ಸಿ.ಜನರಲ್‌ ಆಸ್ಪತ್ರೆ ನಗರದ ಹೃದಯಭಾಗದಲ್ಲಿದೆ. ಇಲ್ಲಿಗೆ ಬರುವ ರೋಗಿಗಳನ್ನು ಮನೆಯವರಂತೆ ಆರೈಕೆ ಮಾಡುವ ಅಗತ್ಯವಿದೆ. ಜಯದೇವ, ವಾಣಿ ವಿಲಾಸ ಮೊದಲಾದ ಆಸ್ಪತ್ರೆಗಳಲ್ಲಿ ಖಾಸಗಿಗಿಂತ ಹೆಚ್ಚು ಗುಣಮಟ್ಟದ ಸೇವೆ ದೊರೆಯುತ್ತಿದೆ. ಆದರೆ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಇಂತಹ ಸೇವೆ ದೊರೆಯುತ್ತಿಲ್ಲ. ಆಸ್ಪತ್ರೆಯ ಸಂಪೂರ್ಣ ವ್ಯವಸ್ಥೆಯನ್ನು ನಿರ್ವಹಣೆ ಮಾಡುವವರು ಉತ್ತಮವಾಗಿ ಕೆಲಸ ಮಾಡಬೇಕು. ಒಳ್ಳೆಯ ಸೇವೆ ನೀಡಿದರೆ ಜನರಿಗೆ ಒಳ್ಳೆಯದಾಗುತ್ತದೆ. ಇದರಿಂದ ಸರ್ಕಾರಕ್ಕೂ ಹೆಸರು ಬರುತ್ತದೆ ಎಂದು ಡಾ.ಸುಧಾಕರ್‌ ಕಿವಿಮಾತು ಹೇಳಿದರು.

ಸಂತೋಷ್‌ ಆತ್ಮಹತ್ಯೆ ಹಿಂದೆ ರಾಜಕೀಯ ಷಡ್ಯಂತ್ರ: ಸಚಿವ ಸುಧಾಕರ್‌

ವೈದ್ಯರು, ನರ್ಸ್‌ಗಳ ಕೊರತೆಯಿದೆ: ಕೆ.ಸಿ.ಜನರಲ್‌ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಚಿವ ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಿ.ಆರ್‌.ವೆಂಕಟೇಶಯ್ಯ, ಕೋವಿಡ್‌ ನಂತರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೋವಿಡ್‌ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ನೇಮಕ ಆಗಿತ್ತು. ಮಾಚ್‌ರ್‍ 31ಕ್ಕೆ ಅವರ ಗುತ್ತಿಗೆ ಅವಧಿ ಮುಗಿದಿದೆ. ಹೀಗಾಗಿ ವೈದ್ಯರು, ಶುಶ್ರೂಷಕಿಯರು ಮತ್ತು ಇತರ ಸಿಬ್ಬಂದಿ ತೀವ್ರ ಕೊರತೆಯಿದೆ ಎಂದು ಹೇಳಿದರು.

PREV
Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!