ಮದ್ದೂರು(ಡಿ.19): ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election ) ಕಾಂಗ್ರೆಸ್ ಅಭ್ಯರ್ಥಿ ಹಣ (Money) ಬಲದ ಮೇಲೆ ಗೆದ್ದಿದ್ದಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ (DC Thammanna) ಶನಿವಾರ ಆರೋಪಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ಅಪ್ಪಾಜಿಗೌಡ ಸೋಲಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ (Election) ಮತದಾರರು ಹಣದಾಸೆಗೆ ಬಲಿಯಾಗಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡರನ್ನು ಬೆಂಬಲಿಸಿದ್ದಾರೆ ಹೊರತು ಕಾಂಗ್ರೆಸ್ ಮುಖಂಡರ ಒಗ್ಗಟ್ಟಿನ ಹೋರಾಟದಿಂದಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ (Congress) ನಾಯಕರು ಚುನಾವಣೆಯಲ್ಲಿ ಅಭ್ಯರ್ಥಿ ಗೆದ್ದಾಗ ಒಗ್ಗಟ್ಟಿನಿಂದ ಗೆದ್ದೆವು ಎಂದು ಹೇಳುತ್ತಾರೆ. ಸೋತಾಗ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ದೂರುತ್ತಾರೆ ಎಂದು ಮಾಜಿ ಸಚಿವ ಎನ್.ಚಲುವರಾಯ ಸ್ವಾಮಿ, ಮಾಜಿ ಶಾಸಕ ಮಧು ಜಿ.ಮಾದೇಗೌಡ, ಬಿ.ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಸೇರಿದಂತೆ ಹಲವು ಮುಖಂಡರನ್ನು ಪರೋಕ್ಷವಾಗಿ ಟೀಕಿಸಿದರು.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಗೆಲುವಿನಿಂದ ಆ ಪಕ್ಷದ ನಾಯಕರು ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದು ಬಿಗುತ್ತಿದ್ದಾರೆ. ಇಂತಹ ಮಾತುಗಳನ್ನು ನನ್ನ 20 ವರ್ಷ ರಾಜಕೀಯ (Politics) ಜೀವನದಲ್ಲಿ ನೋಡಿಕೊಂಡು ಬರುತ್ತಿದ್ದೇನೆ. ಇದಕ್ಕೆ ಎದುರುವ ಪ್ರಶ್ನೆಯೇ ಇಲ್ಲ. ನಮ್ಮ ರಾಜಕೀಯ ಜೀವನ ಇರುವರೆಗೆ ಹೋರಾಟ ಮಾಡುತ್ತೇನೆ ಎಂದರು.
ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡರನ್ನು ಗೆಲ್ಲಿಸುವಲ್ಲಿ ಪಕ್ಷದ ಕೆಲ ಶಾಸಕರು ಹಾಗೂ ಮುಖಂಡರು ಸೋತ್ತಿದ್ದಾರೆ. ಆದರೆ, ಮದ್ದೂರು ಕ್ಷೇತ್ರದಲ್ಲಿ ನಾನು ಸೇರಿದಂತೆ ಪಕ್ಷದ ಮುಖಂಡರು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪಿಗೆ ತಲೆ ಬಾಗುವುದಾಗಿ ತಿಳಿಸಿದರು.
ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳಲ್ಲಿ 2500 ಚುನಾಯಿತ ಜೆಡಿಎಸ್ (JDS) ಮತದಾರರಿದ್ದಾರೆ. ಇವರಲ್ಲಿ 1900 ಮತದಾರರು ಜೆಡಿಎಸ್ ಬೆಂಬಲಿಸಿದ್ದಾರೆ. ನಮ್ಮ ಅಭ್ಯರ್ಥಿ ಸೋಲಿಗೆ ಶಾಸಕರೇ ಅಥವಾ ಮತದಾರೇ ಕಾರಣವೇ ಎಂದು ಗೊತ್ತಿಲ್ಲ. ಯಾರು ಪಕ್ಷದಲ್ಲಿ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎಂದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಕಾರ್ಯಾಧ್ಯಕ್ಷ ಕೆ.ದಾಸೇಗೌಡ, ಫಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್, ಮುಖಂಡ ಚಾಕನಕೆರೆ ಕುಮಾರ್ ಇದ್ದರು.
ಜೆಡಿಎಸ್ ಹಿನ್ನಡೆಗೆ ಕಾರಣ :
ಹಾಸನ (Hassan) ಮತ್ತು ಮಂಡ್ಯ (Mandya) ನನ್ನ ಎರಡು ಕಣ್ಣುಗಳು ಎಂದು ದೇವೇಗೌಡರು ಹೇಳುತ್ತಲೇ ಇರುತ್ತಾರೆ. ಆದರೆ, ಜಿಲ್ಲೆಯ ಅಭಿವೃದ್ಧಿ ವಿಷಯಕ್ಕೆ ಬಂದಾಗ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದು ಮಾಮೂಲಾಗಿದೆ ಎನ್ನುವುದು ಜಿಲ್ಲೆಯ ಜನಮಾನಸದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಮಂಡ್ಯ (Mandya) ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿರುವುದೂ ಕೂಡ ಜೆಡಿಎಸ್ ದುರ್ಬಲಗೊಳ್ಳುತ್ತಿರುವುದಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.
ದೇವೇಗೌಡರು (HD Devegowda) ಅಭಿವೃದ್ಧಿ ವಿಷಯದಲ್ಲಿ ಹಾಸನಕ್ಕೆ (Hassan) ನೀಡುವ ಪ್ರಾಧಾನ್ಯತೆಯನ್ನು ಮಂಡ್ಯಕ್ಕೆ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ (PM Narendta Modi) ಅವರನ್ನು ಭೇಟಿಯಾದಾಗಲೆಲ್ಲಾ ಹಾಸನ (Hassan) ಅಭಿವೃದ್ಧಿ ಸಂಬಂಧ ವಿಚಾರಗಳಿರುತ್ತವೆಯೇ ವಿನಃ ಮಂಡ್ಯಕ್ಕೆ ಸಂಬಂಧಿಸಿದ ವಿಚಾರಗಳೇ ಇರುವುದಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಮಂಡ್ಯಕ್ಕೆ ಏನು ಕೇಳಿದ್ದೀರಿ ಎಂದು ಪತ್ರಕರ್ತರು ದೇವೇಗೌಡರನ್ನೊಮ್ಮೆ ಕೇಳಿದರೆ ಮಂಡ್ಯಕ್ಕೆ ಕೇಳುವಂತಹದ್ದು ಏನೂ ಇಲ್ಲ ಎಂಬ ಉತ್ತರ ಜನರನ್ನು ನಿರಾಸೆಗೊಳಿಸಿದೆ ಎನ್ನಲಾಗುತ್ತಿದೆ.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಮೈಷುಗರ್ ವಿಚಾರವಾಗಿ ಪ್ರಶ್ನಿಸಿದರೆ ಅದನ್ನೆಲ್ಲಾ ನಿಮ್ಮ ಸಂಸದರು ನೋಡಿಕೊಳ್ಳುತ್ತಾರೆ ಎಂಬ ಹೇಳಿಕೆಗಳು ಜನರಿಗೆ ದಳಪತಿಗಳ ಮೇಲಿನ ವಿಶ್ವಾಸ ಕುಸಿಯುವಂತೆ ಮಾಡಿದೆ.
ದ್ವೇಷದ ರಾಜಕಾರಣ : ಲೋಕಸಭೆಗೆ (Lok sabha) ಸ್ಪರ್ಧಿಸಿದ್ದ ಪುತ್ರ ನಿಖಿಲ್ನನ್ನು ಸೋಲಿಸಿದರೆಂಬ ಒಂದೇ ಕಾರಣಕ್ಕೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ (Cheluvarayaswamy) ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ನೇರ ಟಾರ್ಗೆಟ್ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆಯೇ ವಿನಃ ಬಿಜೆಪಿ ಜೊತೆ ಉತ್ತಮ ಸಖ್ಯ ಹೊಂದಿದ್ದರೂ ಜಿಲ್ಲೆಗೆ ಅಗತ್ಯವಿರುವಷ್ಟುಅನುದಾನವನ್ನು ಬಿಡುಗಡೆ ಮಾಡಿಸದೆ, ಮೈಷುಗರ್ ಕಾರ್ಖಾನೆಗೆ ಚಾಲನೆಯನ್ನೂ ಕೊಡಿಸದೆ, ಅಭಿವೃದ್ಧಿ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯ ನಡೆಯಿಂದ ಜನರು ಜೆಡಿಎಸ್ಗೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.