ಮಂಗಳೂರು: ಇಂದಿನಿಂದ 2 ತಿಂಗಳು ಯಾಂತ್ರಿಕ ಮೀನುಗಾರಿಕೆ ಬಂದ್‌

By Kannadaprabha NewsFirst Published Jun 1, 2023, 9:19 AM IST
Highlights

ತಿಂಗಳುಗಟ್ಟಲೆ ಬಂಪರ್‌ ಮೀನು ದೊರೆತು, ಕಡಿಮೆ ದರದಲ್ಲಿ ಮೀನು ಕೈಗೆಟುಕುವ ಮೂಲಕ ಮೀನುಪ್ರಿಯರಿಗೆ ಹಬ್ಬದ ಕಾಲವಾಗಿದ್ದ ಈ ಮೀನುಗಾರಿಕಾ ಋುತು ಬುಧವಾರ ಮುಕ್ತಾಯಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮೀನು ಸಂತಾನೋತ್ಪತ್ತಿಯ ಅವಧಿಯಾಗಿರುವ ಜೂ.1ರಿಂದ ಜು.31ರವರೆಗೆ ಯಾಂತ್ರಿಕ ಮೀನುಗಾರಿಕೆ ಸಂಪೂರ್ಣ ಬಂದ್‌ ಆಗಲಿದೆ.

ಮಂಗಳೂರು (ಜೂ.1) : ತಿಂಗಳುಗಟ್ಟಲೆ ಬಂಪರ್‌ ಮೀನು ದೊರೆತು, ಕಡಿಮೆ ದರದಲ್ಲಿ ಮೀನು ಕೈಗೆಟುಕುವ ಮೂಲಕ ಮೀನುಪ್ರಿಯರಿಗೆ ಹಬ್ಬದ ಕಾಲವಾಗಿದ್ದ ಈ ಮೀನುಗಾರಿಕಾ ಋುತು ಬುಧವಾರ ಮುಕ್ತಾಯಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮೀನು ಸಂತಾನೋತ್ಪತ್ತಿಯ ಅವಧಿಯಾಗಿರುವ ಜೂ.1ರಿಂದ ಜು.31ರವರೆಗೆ ಯಾಂತ್ರಿಕ ಮೀನುಗಾರಿಕೆ ಸಂಪೂರ್ಣ ಬಂದ್‌ ಆಗಲಿದೆ.

ಮೀನುಗಾರಿಕಾ ನಿಷೇಧದ ಹಿನ್ನೆಲೆಯಲ್ಲಿ ಬಹುತೇಕ ಯಾಂತ್ರಿಕ ಬೋಟುಗಳು ಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿವೆ. ಇನ್ನು ಎರಡು ತಿಂಗಳ ಕಾಲ ಮೀನು ಪ್ರಿಯರಿಗೆ ‘ಕಹಿ’ಯೂಟ. ಈ ಅವಧಿಯಲ್ಲಿ ಸಾಂಪ್ರದಾಯಿಕ ಬೋಟುಗಳ ಮೀನುಗಾರಿಕೆಗೆ ಅವಕಾಶವಿದ್ದರೂ, ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಇರುವುದರಿಂದ ಮೀನಿನ ದರ ಗಗನಕ್ಕೇರಲಿದೆ.

 

ನೌಕಾಸೇನೆಯ ಗಸ್ತು ಸಿಬ್ಬಂದಿಯಿಂದ ಮೀನುಗಾರರಿಗೆ ತೊಂದರೆ: ಅಧಿಕಾರಿಗಳೊಂದಿಗೆ ಸಮಾಲೋಚನೆ

ಪುಷ್ಕಳ ಮೀನೂಟದ ಋುತುಮಾನ: 2022-23ರ ಮೀನುಗಾರಿಕೆ ಋುತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಪರ್‌ ಮೀನುಗಾರಿಕೆ ನಡೆದಿತ್ತು. ತತ್ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೀನಿನ ದರ ತೀರ ಅಗ್ಗವಾಗಿತ್ತು. ಬಂಗುಡೆ ಮೀನಂತೂ ಯಥೇಚ್ಛವಾಗಿ ದೊರೆತಿದ್ದು, ನೂರು ರು.ಗೆ 20-30 ಮೀನು ದೊರೆಯುತ್ತಿತ್ತು. ಮೀನು ಗ್ರಾಹಕರಿಗೆ ಇದು ಹಬ್ಬದ ಸಮಯವಾದರೂ, ಮಾರುಕಟ್ಟೆಮೌಲ್ಯ ತೀರ ಕುಸಿದಿದ್ದರಿಂದ ಮೀನುಉದ್ಯಮ ನಷ್ಟಕ್ಕೆ ಒಳಗಾಗಿತ್ತು.

2020-21ನೇ ಸಾಲಿನಲ್ಲಿ 1924.51 ಕೋಟಿ ರು. ಮೊತ್ತದ 1,39,714.04 ಮೆಟ್ರಿಕ್‌ ಟನ್‌ ಮೀನು ಲಭ್ಯವಾಗಿದ್ದರೆ, 2021-22ನೇ ಸಾಲಿನಲ್ಲಿ 3801.60 ಕೋಟಿ ರು. ಮೊತ್ತದ 2,91,812 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿತ್ತು. 2022-23ರಲ್ಲಿ 4154.80 ಕೋಟಿ ರು. ಮೊತ್ತದ 3,33,537.05 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ.

‘ಈ ಮೀನುಗಾರಿಕಾ ಋುತುವಿನಲ್ಲಿ ಮೀನುಗಾರಿಕೆ ಉತ್ತಮ ರೀತಿಯಲ್ಲೇ ಆಗಿದೆ. ಆದರೆ, ಮಾರುಕಟ್ಟೆಯಲ್ಲಿ ಪೂರಕ ದರ ಇರಲಿಲ್ಲ. ಜಿಲ್ಲೆಯಲ್ಲಿ 1800 ಮೀನುಗಾರಿಕೆ ಬೋಟ್‌ಗಳಿದ್ದು, ಅನೇಕರು ಬಹಳಷ್ಟುನಷ್ಟಅನುಭವಿಸಿದ್ದಾರೆ’ ಎಂದು ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್‌ ಬೇಂಗ್ರೆ ಹೇಳುತ್ತಾರೆ.

ಉಡುಪಿ: ಬಲವಾದ ಗಾಳಿ, ಮಲ್ಪೆ ಕಡಲಿಗೆ ಇಳಿಯದ ಮೀನುಗಾರಿಕೆ ಬೋಟುಗಳು!

ಉತ್ತಮ ಮೀನುಗಾರಿಕೆ ಆಗಿದ್ದರೂ ದರ ಶೇ.50ರಷ್ಟುಕುಸಿದಿತ್ತು. ಬಂಗುಡೆ, ಬೂತಾಯಿ, ರಾಣಿ ಮೀನುಗಳಿಗೆ ದರವೇ ಇರಲಿಲ್ಲ. ಫಿಶ್‌ ಮಿಲ್‌ನಲ್ಲೂ ಕೇಳುವವರಿರಲಿಲ್ಲ ಎಂದು ಹಿರಿಯ ಮತ್ಸ್ಯೋದ್ಯಮಿ ಮೋಹನ್‌ ಬೆಂಗ್ರೆ ಹೇಳಿದರು.

click me!