
19 ತಿಂಗಳ ಹಿಂದೆ ಬೀದರ್ನಲ್ಲಿ 63 ಸೆಕೆಂಡುಗಳಲ್ಲಿ ₹83 ಲಕ್ಷ ದೋಚಿ, 5 ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಬಿಹಾರಿ ಗ್ಯಾಂಗ್ ಅನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಕುಗ್ರಾಮದಲ್ಲಿ 'ಆಪರೇಷನ್ ಬ್ರದರ್ಸ್' ಎಂಬ ರೋಚಕ ಕಾರ್ಯಾಚರಣೆ ನಡೆಸಿ, ಸೆರೆಹಿಡಿದಿದ್ದಾರೆ.
ಬೀದರ್/ಬೆಂಗಳೂರು (ಆ.15): ಅದು ಸಿನಿಮಾ ದೃಶ್ಯವನ್ನೂ ಮೀರಿಸುವಂತಹ ರಕ್ತಸಿಕ್ತ ದರೋಡೆ. ಸಮಯ ಕೇವಲ 63 ಸೆಕೆಂಡುಗಳು... ಕೈಯಲ್ಲಿದ್ದ ಗನ್ನಿಂದ ಸಿಬ್ಬಂದಿ ಮೇಲೆ ರಗ್ಗಡ್ ಆಗಿ ಗುಂಡು ಹಾರಿಸಿ, ಕಣ್ಣು ಮುಚ್ಚಿ ತೆರೆಯುವುದರೊಳಗೆ ₹83 ಲಕ್ಷ ಹಣದೊಂದಿಗೆ ಖದೀಮರು ಪರಾರಿಯಾಗಿದ್ದರು! ಕಳೆದ 19 ತಿಂಗಳುಗಳಿಂದ 5 ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡುತ್ತಿದ್ದ ಆ ಮೋಸ್ಟ್ ವಾಂಟೆಡ್ 'ಅಣ್ಣ-ತಮ್ಮಂದಿರ' ಗ್ಯಾಂಗ್ಗೆ ಕೊನೆಗೂ ಕರ್ನಾಟಕ ಪೊಲೀಸರು ಸಿಂಹಸ್ವಪ್ನವಾಗಿದ್ದಾರೆ. ಖಾಕಿ ಪಡೆಯ ಅಪ್ರತಿಮ ಸಾಹಸದ ‘ಆಪರೇಷನ್ ಬ್ರದರ್ಸ್’ (Operation Brothers) ಕಾರ್ಯಾಚರಣೆಯ ಸಂಪೂರ್ಣ ರೋಚಕ ಕಥೆ ಇಲ್ಲಿದೆ!
ಸರಿಯಾಗಿ ಒಂದೂವರೆ ವರ್ಷದ (19 ತಿಂಗಳ) ಹಿಂದೆ ಬೀದರ್ನಲ್ಲಿ ಈ ಭೀಕರ ಘಟನೆ ನಡೆದಿತ್ತು. ಎಟಿಎಂಗಳಿಗೆ ಹಣ ತುಂಬಿಸಲು CMS (ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವಿಸಸ್) ವಾಹನ ಹಣವನ್ನು ಹೊತ್ತು ಸಾಗುತ್ತಿತ್ತು. ಮಾರ್ಗಮಧ್ಯೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು, ಏಕಾಏಕಿ ಸಿಬ್ಬಂದಿಯ ಮೇಲೆ ಸಿನಿಮಾ ಸ್ಟೈಲ್ನಲ್ಲಿ ಗುಂಡಿನ ಮಳೆಗರೆದಿದ್ದರು. ಸಿಬ್ಬಂದಿಯನ್ನು ಭೀಕರವಾಗಿ ಹತ್ಯೆಗೈದ ಕಿರಾತಕರು, ಕೇವಲ 63 ಸೆಕೆಂಡ್ಗಳಲ್ಲಿ ₹83 ಲಕ್ಷ ನಗದಿದ್ದ ಬ್ಯಾಗ್ ಎಗರಿಸಿ ಕ್ಷಣಾರ್ಧದಲ್ಲಿ ಮಾಯವಾಗಿದ್ದರು. ಇಡೀ ರಾಜ್ಯವನ್ನೇ ಈ ಕೃತ್ಯ ಬೆಚ್ಚಿಬೀಳಿಸಿತ್ತು.
ಹಣ ದೋಚಿದ ಕಿರಾತಕ ಸಹೋದರರು ಮೊದಲಿಗೆ ಹೈದರಾಬಾದ್ಗೆ ಎಸ್ಕೇಪ್ ಆಗಿದ್ದರು. ಅಲ್ಲಿ ಪೊಲೀಸರ ಬಲೆಗೆ ಬೀಳುವಷ್ಟರಲ್ಲಿ ಜಸ್ಟ್ ಮಿಸ್ ಆಗಿ ತಪ್ಪಿಸಿಕೊಂಡಿದ್ದರು. ನಂತರ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮಾರ್ಗವಾಗಿ ಸೀದಾ ತಮ್ಮ ಮೂಲ ರಾಜ್ಯವಾದ ಬಿಹಾರಕ್ಕೆ ತೆರಳಿ ಅಡಗಿಕೊಂಡಿದ್ದರು. 5 ರಾಜ್ಯಗಳ ಪೊಲೀಸರು ಇವರಿಗಾಗಿ ಬಲೆ ಬೀಸಿದರೂ ಈ ಚಾಲಾಕಿ ದರೋಡೆಕೋರರ ಸುಳಿವು ಸಿಕ್ಕಿರಲಿಲ್ಲ.
ಕರ್ನಾಟಕ ಪೊಲೀಸರು ಸತತ 19 ತಿಂಗಳುಗಳ ಕಾಲ ನೂರಾರು ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ಟವರ್ ಲೊಕೇಶನ್ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಬೆನ್ನತ್ತಿ ಕೊನೆಗೂ ಆರೋಪಿಗಳು ಬಿಹಾರದ ಕುಗ್ರಾಮವೊಂದರಲ್ಲಿ ಇರುವುದನ್ನು ಪತ್ತೆಹಚ್ಚಿದರು. ಆದರೆ, ಅಲ್ಲಿ ಪೊಲೀಸರಿಗೆ ಎದುರಾಗಿದ್ದು ಅಗ್ನಿಪರೀಕ್ಷೆ! ಏಕೆಂದರೆ, ಆ ಊರಿನ ಸ್ಥಳೀಯರೆಲ್ಲರೂ ಈ ಕಳ್ಳರ ಬೆಂಬಲಕ್ಕೆ ನಿಂತಿದ್ದರು. ಹೊರಗಿನ ಪೊಲೀಸರು ಗ್ರಾಮಕ್ಕೆ ಕಾಲಿಟ್ಟರೆ ಸಾಕು, ಹಲ್ಲೆ ಮಾಡುವ ಪರಿಸ್ಥಿತಿಯಿತ್ತು. ಯಾವುದಕ್ಕೂ ಎದೆಗುಂದದ ಕರ್ನಾಟಕದ ಸ್ಪೆಷಲ್ ಕ್ರೈಂ ಟೀಮ್, ವೇಷ ಮರೆಸಿಕೊಂಡು ಪಕ್ಕಾ ಮಾಹಿತಿ ಕಲೆಹಾಕಿ, ಸೂಕ್ತ ಸಮಯಕ್ಕಾಗಿ ಕಾದು ಕುಳಿತಿತು.
ಸರಿಯಾದ ಸಮಯ ನೋಡಿದ ಕರ್ನಾಟಕ ಪೊಲೀಸರು ಮಿಂಚಿನ ದಾಳಿ ನಡೆಸಿ, ಇಡೀ ಗ್ರಾಮ ಬೆಚ್ಚಿಬೀಳುವಂತೆ ಮೋಸ್ಟ್ ವಾಂಟೆಡ್ ಅಣ್ಣ-ತಮ್ಮಂದಿರನ್ನು ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾದರು. ಯಾವುದೇ ಪ್ರತಿರೋಧಕ್ಕೂ ಅವಕಾಶ ಕೊಡದೆ ಅವರನ್ನು ವಶಕ್ಕೆ ಪಡೆದು ರಾಜ್ಯಕ್ಕೆ ಕರೆತಂದಿದ್ದಾರೆ. 19 ತಿಂಗಳುಗಳ ಕಾಲ ಬೆನ್ನುಬಿಡದೆ ಛಲದಿಂದ ತನಿಖೆ ನಡೆಸಿ, ಸಾವಿರಾರು ಕಿಲೋಮೀಟರ್ ದೂರದ ಬಿಹಾರಕ್ಕೆ ಹೋಗಿ ಇಂತಹ ಅಪಾಯಕಾರಿ ಹಂತಕರನ್ನು ಬೇಟೆಯಾಡಿರುವ ಕರ್ನಾಟಕ ಪೊಲೀಸ್ ಪಡೆಯ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.