ಹುಬ್ಬಳ್ಳಿ: 3 ವರ್ಷದ ಬದಲು ಪ್ರತಿವರ್ಷ ಆಸ್ತಿ ಕರ ಹೆಚ್ಚಳ, ಇಂದು ಚರ್ಚೆ ಸಾಧ್ಯತೆ

By Kannadaprabha NewsFirst Published May 26, 2023, 6:01 AM IST
Highlights

 ಮೂರು ವರ್ಷಕ್ಕೊಮ್ಮೆ ಏರಿಕೆಯಾಗುತ್ತಿದ್ದ ಆಸ್ತಿ ಕರ ಇನ್ಮುಂದೆ ಪ್ರತಿವರ್ಷವೂ ಏರಿಕೆಯಾಗಲಿದೆ! ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ಮೇ 26ರಂದು ನಡೆಯಲಿರುವ ಈಗಿನ ಮೇಯರ್‌ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಒಂದು ವೇಳೆ ನಿರ್ಧಾರವಾಗಿ ಠರಾವು ಪಾಸಾದರೆ ಪ್ರತಿವರ್ಷ ಆಸ್ತಿ ಕರ ಏರಿಕೆಯಾಗಲಿದೆ.

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಮೇ.26) : ಮೂರು ವರ್ಷಕ್ಕೊಮ್ಮೆ ಏರಿಕೆಯಾಗುತ್ತಿದ್ದ ಆಸ್ತಿ ಕರ ಇನ್ಮುಂದೆ ಪ್ರತಿವರ್ಷವೂ ಏರಿಕೆಯಾಗಲಿದೆ! ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ಮೇ 26ರಂದು ನಡೆಯಲಿರುವ ಈಗಿನ ಮೇಯರ್‌ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಒಂದು ವೇಳೆ ನಿರ್ಧಾರವಾಗಿ ಠರಾವು ಪಾಸಾದರೆ ಪ್ರತಿವರ್ಷ ಆಸ್ತಿ ಕರ ಏರಿಕೆಯಾಗಲಿದೆ.

ಏನಿದು ಸರ್ಕಾರಿ ಸುತ್ತೋಲೆ?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಸತಿ, ನಿವೇಶನ, ವಾಣಿಜ್ಯ ಕಟ್ಟಡಗಳಿಗೆಲ್ಲ ಈ ಮೊದಲು 3 ವರ್ಷಕ್ಕೊಮ್ಮೆ ಶೇ.15ರಷ್ಟುಆಸ್ತಿ ಕರ ಹೆಚ್ಚಳವಾಗುತ್ತಿತ್ತು. ಈ ಕುರಿತು ಸರ್ಕಾರದ ಆದೇಶವೇ ಇದೆ. ಆದರೆ ಹೀಗೆ 3 ವರ್ಷಕ್ಕೊಮ್ಮೆ ಶೇ.15ರಷ್ಟುಆಸ್ತಿ ಕರ ಹೆಚ್ಚಳವಾದರೆ ಸಾರ್ವಜನಿಕರಿಗೆ ಇದು ಭಾರೀ ಪ್ರಮಾಣದಲ್ಲಿ ಕರ ಹೆಚ್ಚಿಸಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಬರುತ್ತಿತ್ತು. 3 ವರ್ಷಕ್ಕೊಮ್ಮೆ ಶೇ.15ರಷ್ಟುಕರ ಹೆಚ್ಚಿಸುವ ಬದಲು, ಪ್ರತಿವರ್ಷಕ್ಕೊಮ್ಮೆ ಶೇ.5ರಷ್ಟುತೆರಿಗೆ ಹೆಚ್ಚಿಸಿದರೆ ಸಾರ್ವಜನಿಕರಲ್ಲಿ ಅಷ್ಟೊಂದು ಹೆಚ್ಚಾಗಿದೆ ಅನಿಸುವುದಿಲ್ಲ. ಜತೆಗೆ ಸರ್ಕಾರದ ಸುತ್ತೋಲೆಯಂತೆ 3 ವರ್ಷಕ್ಕೊಮ್ಮೆ ಶೇ.15ರಷ್ಟುತೆರಿಗೆ ಹೆಚ್ಚಿಸಿದಂತೆಯೂ ಆಗುತ್ತದೆ.

ಹುಬ್ಬಳ್ಳಿ - ಧಾರವಾಡ ಪಾಲಿಕೆಗೆ ಸರ್ಕಾರದಿಂದ ಬರಬೇಕಿದೆ 250 ಕೋಟಿಗೂ ಅಧಿಕ!

ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಧಾರವಾಡದಲ್ಲಿ ಮೇ 26ರಂದು ನಡೆಯಲಿರುವ ಪಾಲಿಕೆ ಸಾಮಾನ್ಯಸಭೆಯಲ್ಲಿ ಚರ್ಚೆಗೆ ಬರಲಿದೆ. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರೆ, ಠರಾವು ಕೂಡ ಪಾಸಾಗಲಿದೆ. ಒಂದು ವೇಳೆ ಹಾಗಾದರೆ ಪ್ರತಿವರ್ಷ ಶೇ.5ರಷ್ಟುಆಸ್ತಿ ಕರ ಹೆಚ್ಚಿಸಿದಂತಾಗುತ್ತದೆ.

ಪಿಪಿಪಿ ಮಾಡೆಲ್‌ ಕಟ್ಟಡ:

ಇನ್ನೂ ಹುಬ್ಬಳ್ಳಿಯ ಬ್ರಾಡ್‌ವೇ ರಸ್ತೆಯಲ್ಲಿನ ಪಾಲಿಕೆ ವಾಣಿಜ್ಯ ಸಂಕೀರ್ಣ ಇದೀಗ ಶಿಥಿಲಾವಸ್ಥೆಗೆ ತಲುಪಿದೆ. ಈ ಕಟ್ಟಡದ ಬಗ್ಗೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಿಂದ ವರದಿ ಪಡೆಯಲಾಗಿದೆ. ಶಿಥಿಲಾವಸ್ಥೆಗೆ ತಲುಪಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿತ್ತು.

ಎಲ್ಲ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದೆ. ಆದರೆ ಅಲ್ಲಿ ಪಾಲಿಕೆಯಿಂದಲೇ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪಾಲಿಕೆಯ ಆರ್ಥಿಕ ಸ್ಥಿತಿ ಅಷ್ಟೊಂದು ಸರಿಯಿಲ್ಲ. ಹೀಗಾಗಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಈ ಹಿಂದೆ ಇದ್ದ ಮಳಿಗೆದಾರರಿಗೆ ಮಳಿಗೆ ನೀಡಲು ನಿರ್ಧರಿಸುವುದು ಪಾಲಿಕೆಯ ಯೋಚನೆ. ಪಿಪಿಪಿ ಮಾದರಿ ಎಂದರೆ ಸ್ಥಳವೂ ಪಾಲಿಕೆಯ ಮಾಲೀಕತ್ವದಲ್ಲೇ ಇರುತ್ತದೆ. ನಿರ್ಮಾಣವಾಗುವ ಕಟ್ಟಡದ ಗುತ್ತಿಗೆ ಅವಧಿ ಮುಗಿದ ನಂತರ ಮತ್ತೆ ಪಾಲಿಕೆ ಒಡೆತನಕ್ಕೆ ಒಳಪಡುತ್ತದೆ. ಈ ಕಟ್ಟಡದಿಂದ ಬರುವ ಆದಾಯವನ್ನು ಅನುಪಾತದ ಆಧಾರವಾಗಿ ಗುತ್ತಿಗೆ ಪಡೆದ ಏಜೆನ್ಸಿ ಹಾಗೂ ಪಾಲಿಕೆ ಮಧ್ಯೆ ಹಂಚಿಕೊಳ್ಳುವುದು. ಈ ಬಗ್ಗೆಯೂ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ.

ವಾರ್ಡ್‌ಸಮಿತಿ ನಿರ್ಣಯ:

ಇನ್ನು ವಾರ್ಡ್‌ ಸಮಿತಿ ರಚಿಸುವ ಕುರಿತು ಸರ್ಕಾರದ ಆದೇಶವಿದ್ದರೂ ಈವರೆಗೂ ರಚಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಇದರ ಅಧ್ಯಯನಕ್ಕಾಗಿ ಸದನ ಸಮಿತಿಯನ್ನೇ ರಚಿಸಿತ್ತು. ಸಮಿತಿಯೂ ಇದೀಗ ವರದಿಯನ್ನೂ ನೀಡಿದೆ. ಆ ಬಗ್ಗೆ ಚರ್ಚಿಸಿ ಪಾಲಿಕೆ ಅಂತಿಮ ನಿರ್ಣಯ ಕೈಗೊಳ್ಳಲಿದೆ.

ಈ ಎರಡು ಸೇರಿದಂತೆ ಇನ್ನುಳಿದ ಕೆಲ ವಿಷಯಗಳು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಆಸ್ತಿ ಕರ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಪಾಲಿಕೆ ಸದಸ್ಯರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

 

ಕಾರ್ಪೋರೇಟ್‌ ಸಂಸ್ಥೆಗಳ ಕೈಯಲ್ಲಿ ಮಾಧ್ಯಮ; ಪತ್ರಕರ್ತರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ -ಈರೇಶ್ ಅಂಚಟಗೇರಿ

ಆಸ್ತಿ ಕರವನ್ನು 3 ವರ್ಷಕ್ಕೊಮ್ಮೆ ಶೇ.15ರಷ್ಟುಏರಿಸಲಾಗುತ್ತಿತ್ತು. ಅದನ್ನು ಪ್ರತಿವರ್ಷಕ್ಕೊಮ್ಮೆ ಶೇ.5ರಷ್ಟುಹೆಚ್ಚಳ ಮಾಡುವ ಯೋಚನೆ ಇದೆ. ಈ ಬಗ್ಗೆ ಚರ್ಚೆಯಾಗಲಿದೆ. ಇನ್ನುಳಿದ ವಾರ್ಡ್‌ ಸಮಿತಿ ರಚನೆ ಬಗ್ಗೆಯೂ ಸದನದ ಸಮಿತಿ ಮೇಲೆ ಚರ್ಚೆ ನಡೆಯಲಿದೆ. ಇದು ನನ್ನ ಮೇಯರ್‌ಗಿರಿಯಲ್ಲಿ ಕೊನೆಯ ಸಭೆ ಎನ್ನಲು ಸಾಧ್ಯವಿಲ್ಲ. ಮುಂದಿನ ಮೇಯರ್‌ ಆಯ್ಕೆಯಾಗುವವರೆಗೂ ಸಹಜವಾಗಿ ಮುಂದುವರಿಯಲಿದ್ದೇನೆ.

- ಈರೇಶ ಅಂಚಟಗೇರಿ, ಮೇಯರ್‌

 

click me!