Chamarajanagar: ನವೀಕರಣಗೊಂಡು ಸ್ಮಾರಕವಾಯಿತು ವೀರಪ್ಪನ್‌ನನ್ನು ಬಂಧಿಸಿದ್ದ ಹುತಾತ್ಮ ಅರಣ್ಯಾಧಿಕಾರಿಯ ಜೀಪ್!

By Govindaraj SFirst Published May 4, 2022, 11:54 PM IST
Highlights

ಅವರು ಎರಡು ರಾಜ್ಯಗಳಿಗೆ ಸಿಂಹ ಸ್ವಪ್ನವಾಗಿದ್ದ ಕಾಡುಗಳ್ಳನನ್ನು ಮೊದಲ ಬಾರಿಗೆ ಬಂಧಿಸಿದ್ದ ಒಬ್ಬ ಪ್ರಾಮಾಣಿಕ ಹಾಗು ನಿಷ್ಢಾವಂತ ಅರಣ್ಯಾಧಿಕಾರಿ. ಕರ್ತವ್ಯದ ಜೊತೆಗೆ ಎಲ್ಲರ ವಿಶ್ವಾಸ ಗಳಿಸಿ ಜನಸೇವೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದವರು. 

ವರದಿ: ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ‌ ಚಾಮರಾಜನಗರ

ಚಾಮರಾಜನಗರ (ಮೇ.04): ಅವರು ಎರಡು ರಾಜ್ಯಗಳಿಗೆ ಸಿಂಹ ಸ್ವಪ್ನವಾಗಿದ್ದ ಕಾಡುಗಳ್ಳನನ್ನು ಮೊದಲ ಬಾರಿಗೆ ಬಂಧಿಸಿದ್ದ ಒಬ್ಬ ಪ್ರಾಮಾಣಿಕ ಹಾಗು ನಿಷ್ಢಾವಂತ ಅರಣ್ಯಾಧಿಕಾರಿ. ಕರ್ತವ್ಯದ ಜೊತೆಗೆ ಎಲ್ಲರ ವಿಶ್ವಾಸ ಗಳಿಸಿ ಜನಸೇವೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದವರು. ಅಹಿಂಸಾತ್ಮಕವಾಗಿ ನರಹಂತಕನನ್ನು ಶರಣಾಗಾತಿ ಮಾಡಿಸಲು ಯತ್ನಿಸಿದ್ದ ಈ ಅರಣ್ಯಾಧಿಕಾರಿಯನ್ನು ನರಹಂತಕ ಶಿರಚ್ಛೇದ ಮಾಡಿ ಹತ್ಯೆಗೈದ. ಈ ಹುತಾತ್ಮ ಅರಣ್ಯಾಧಿಕಾರಿಯ ತ್ಯಾಗ ಬಲಿದಾನ, ಕರ್ತವ್ಯ ನಿಷ್ಠೆಯನ್ನು ಅಜರಾಮರವಾಗಿಸಲು ಅರಣ್ಯ ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟ ಗೌರವ ಸಲ್ಲಿಸಿದೆ.

ಇವರು ಪಿ. ಶ್ರೀನಿವಾಸ್ (P Srinivas) ಅರಣ್ಯ ಇಲಾಖೆಯ (Forest Department) ಹಿರಿಯ ಅಧಿಕಾರಿಯಾಗಿದ್ದ (Senior Officer) ಇವರು 1986ರಲ್ಲಿ  ಬೆಂಗಳೂರಿನಲ್ಲಿ ಸಾರ್ಕ್‌ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದ ಕಾಡುಗಳ್ಳ ವೀರಪ್ಪನ್‌ನನ್ನು (Veerappan) ಮೊದಲ ಬಾರಿಗೆ ಬಂಧಿಸಿದ್ದವರು. ಆದರೆ ಕೆಲವೇ ದಿನಗಳಲ್ಲಿ ಆತ ಚಾಮರಾಜನಗರ ತಾಲ್ಲೂಕು ಬೂದಿಪಡಗ ಅರಣ್ಯ ಅತಿಥಿ ಗೃಹದಿಂದ ತಪ್ಪಿಸಿಕೊಂಡು ಹೋಗಿದ್ದ. ಕಾಡುಗಳ್ಳನಾಗಿ ದಂತಚೋರನಾಗಿ, ನರಹಂತಕನಾಗಿ ಹತ್ತಾರು ಕುಕೃತ್ಯಗಳ ಎಸಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಎರಡು ದಶಕಗಳ ಕಾಲ ದೊಡ್ಡ ತಲೆನೋವಾಗಿದ್ದ. ವೀರಪ್ಪನ್ ವಿರುದ್ದದ ಕಾರ್ಯಾಚರಣೆಗೆ ಆತನ ಹುಟ್ಟೂರು ಗೋಪಿನಾಥಂಗೆ ಆಗಮಿಸಿದ ಶ್ರೀನಿವಾಸ್ ಮೊದಲಿಗೆ ಹಲವು ಸಮಾಜ ಸೇವಾ ಕಾರ್ಯಗಳ ಮೂಲಕ ಗ್ರಾಮಸ್ಥರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.

Chamarajanagar: ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ ಮಹಿಳೆ

ಗಾಂಧಿವಾದಿಯಾಗಿದ್ದ ಶ್ರೀನಿವಾಸ್ ಒಂದೇ ಒಂದು ಗುಂಡು ಬಳಸದೆ, ರಕ್ತ ಹರಿಸದೆ ಕಾಡುಗಳ್ಳ ವೀರಪ್ಪನ್  ಶರಣಾಗತಿ ಮಾಡಿಸಬೇಕು  ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ನರಹಂತಕ ತಾನು ಶರಣಾಗುವುದಾಗಿ ಕಳುಹಿಸಿದ್ದ ಸಂದೇಶವನ್ನು ನಂಬಿ ಕಾಡಿಗೆ ಹೋದ  ಶ್ರೀನಿವಾಸ್ ವೀರಪ್ಪನ್ ಕ್ರೌರ್ಯಕ್ಕೆ ಬಲಿಯಾಗಿದ್ದರು. ಅವರ ತ್ಯಾಗ ಬಲಿದಾನಕ್ಕೆ ಗೌರವ ನೀಡಲು ಅವರ ನಿಷ್ಠ ಹಾಗು ಪ್ರಾಮಾಣಿಕ ಕರ್ತವ್ಯವನ್ನು ಅಜರಾಮರವಾಗಿಸಲು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಪಿ. ಶ್ರೀನಿವಾಸ್ ಅವರು ಚಲಾಯಿಸುತ್ತಿದ್ದ ಜೀಪನ್ನು (Jeep) ಸ್ಮಾರಕವನ್ನಾಗಿ ಪರಿವರ್ತಿಸಿದ್ದಲ್ಲದೆ, ಅವರಿಗೆ ಸಂಬಂಧಿಸಿದ ದಾಖಲೆಗಳು, ಜೀವನಗಾಥೆ, ಪುಸ್ತಕಗಳು, ಬರಹಗಳು, ಅಪರೂಪದ ಫೋಟೋಗಳನ್ನು ಒಳಗೊಂಡ  ವಸ್ತು ಸಂಗ್ರಹಾಲಯ ಮಾದರಿಯ ಗ್ರಂಥಾಲಯ ನಿರ್ಮಿಸಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.

ಪಿ.ಶ್ರೀನಿವಾಸ್ ಅವರ ಬಳಸುತ್ತಿದ್ದ ಜೀಪ್ ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ಮಲೆಮಹದೇಶ್ವರ ವನ್ಯಧಾಮದ ಪಾಲಾರ್ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ತುಕ್ಕು ಹಿಡಿಯುತ್ತಾ ಬಿದ್ದಿತ್ತು. ಇದನ್ನು  ಒಂದು ಲಕ್ಷ ರೂಪಾಯಿಗು ಹೆಚ್ಚು ಹಣ ಖರ್ಚು ಮಾಡಿ ದುರಸ್ತಿ ಮಾಡಿಸಿ ಇದೀಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಸ್ಮಾರಕವಾಗಿ ಇರಿಸಲಾಗಿದೆ. ಇದೇ ಕಚೇರಿಯ ಆವರಣದಲ್ಲಿರುವ ಅರಣ್ಯ ಇಲಾಖೆಯ ಅತಿಥಿಗೃಹವನ್ನು ನವೀಕರಿಸಿ ಕೀರ್ತಿಚಕ್ರ ಪಿ.ಶ್ರೀನಿವಾಸ್ ಅತಿಥಿಗೃಹ ಎಂದು ನಾಮಕರಣ ಮಾಡಲಾಗಿದೆ.

ಪಿ. ಶ್ರೀನಿವಾಸ್ ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಿಗಬೇಕು ಎಂಬ ದೃಷ್ಟಿಯಿಂದ ಅತಿಥಿ ಗೃಹದ ಮೊದಲ ಮಹಡಿಯಲ್ಲಿ ಅವರ  ಹೆಸರಿನಲ್ಲಿ ಗ್ರಂಥಾಲಯವನ್ನು ಸಿದ್ದಪಡಿಸಲಾಗಿದ್ದು ಇಲ್ಲಿ ಶ್ರೀನಿವಾಸ್ ಅವರ ವಿವಿಧ ಕಡೆ ಸೇವೆ ಸಲ್ಲಿಸಿದ ಫೋಟೋಗಳ, ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ಬಡವರಿಗಾಗಿ ನಿರ್ಮಿಸಿಕೊಟ್ಟ ಮನೆಗಳು, ದೇವಾಲಯ, ಎಸ್.ಟಿ.ಎಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಹೀಗೆ ಎಲ್ಲಾ ರೀತಿಯ ಭಾವಚಿತ್ರಗಳು, ಅವರಿಗೆ ಸಂಬಂಧಿಸಿದ ಸಾಹಿತ್ಯ, ಬರಹಗಳು ದಾಖಲೆಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಶ್ರೀನಿವಾಸ್ ಅವರು ತಮ್ಮ ಸ್ವಂತ ಹಣದಿಂದ ಗೋಪಿನಾಥಂನಲ್ಲಿ ನಲವತ್ತು ಬಡಕುಟುಂಬಗಳಿಗೆ ಸೂರು ಕಲ್ಪಿಸಿದ್ದರು. 

ಔಷಧಾಲಯ ತೆರೆದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಒದಗಿಸಿದ್ದರು. ಗೋಪಿನಾಥಂನಲ್ಲಿ ಮಾರಿಯಮ್ಮನ್ ದೇವಾಲಯ ನಿರ್ಮಿಸಿ ಗ್ರಾಮಸ್ಥರ ಒಲವು ಸಂಪಾದಿಸಿದ್ದರು ಅರಣ್ಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಯತ್ನಿಸಿದ್ದರು. ಬುಡಕಟ್ಟು ಜನರ ಜೀವನ ಸುಧಾರಿಸಲು ಮುಂದಾಗಿದ್ದರು. ಸಾರ್ವಜನಿಕರಿಗೆ ಹಾಗು ಅರಣ್ಯ ಇಲಾಖೆಯ  ನೌಕರರಿಗೆ ಶ್ರೀನಿವಾಸ್ ಅವರ  ತ್ಯಾಗ ಬಲಿದಾನದ ಮಹತ್ವ ಗೊತ್ತಾಗಬೇಕು.ಅವರ ಅನನ್ಯ ಸೇವೆ ಎಲ್ಲರಿಗು ಪ್ರೇರಣೆಯಾಗಬೇಕು ಎಂಬುದು ಸ್ಮಾರಕ ಹಾಗು ವಸ್ತು ಸಂಗ್ರಹಾಲಯದ ಉದ್ದೇಶವಾಗಿದ್ದು ಅರಣ್ಯ ಇಲಾಖೆ ನಿಜಕ್ಕೂ ಮಾದರಿಯಾಗುವ ರೀತಿಯಲ್ಲಿ ಹುತಾತ್ಮ ಅರಣ್ಯಾಧಿಕಾರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ. 

ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?

ಶ್ರೀನಿವಾಸ್ ಅವರು ದೈಹಿಕವಾಗಿ ಅಗಲಿದ್ದರೂ ಅವರು ಮಾಡಿದ ಸಮಾಜ ಸುಧಾರಣೆಯ ಕೆಲಸಗಳು  ಜನಪರ ಸೇವೆಗಳು ಸ್ಮರಣೀಯವಾಗಿವೆ. ಆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಮರಣೋತ್ತರವಾಗಿ ಕೀರ್ತಿಚಕ್ರ ಶೌರ್ಯ ಪ್ರಶಸ್ತಿ ನೀಡಿತ್ತು. ಇದೀಗ ಅರಣ್ಯ ಇಲಾಖೆ ಅವರ ಓಡಿಸುತ್ತಿದ್ದ ಜೀಪ್‌ನ್ನು ಸ್ಮಾರಕವಾಗಿ ಪರಿವರ್ತಿಸಿ ಅವರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಿ ಹುತಾತ್ಮ ಅರಣ್ಯಾಧಿಕಾರಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದೆ.

click me!