ಬುಡಕಟ್ಟು ಜನಾಂಗದವರಿಗೆ ಮನೆ, ಜಮೀನು ಪಹಣಿ ವ್ಯವಸ್ಥೆ: ಶ್ರೀರಾಮುಲು

By Kannadaprabha NewsFirst Published Dec 10, 2022, 12:29 PM IST
Highlights

ಬುಡಕಟ್ಟು ಜನಾಂಗದವರು ಈ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ನೆಲೆಸಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಅವಕಾಶ ನೀಡುವುದಿಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಟವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ಯಲ್ಲಾಪುರ (ಡಿ.10) : ಬುಡಕಟ್ಟು ಜನಾಂಗದವರು ಈ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ನೆಲೆಸಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಅವಕಾಶ ನೀಡುವುದಿಲ್ಲ ಎಂದು ಸಾರಿಗೆ ಮತ್ತು ಪರಿಶಿಷ್ಟವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ಮಾಗೋಡ ಕಾಲನಿಯ ಲಕ್ಷ್ಮೇ ಗಣಪತಿ ಸಿದ್ದಿ ವೇದಿಕೆಯಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ, ಪರಿಶಿಷ್ಟವರ್ಗಗಳ ಕಲ್ಯಾಣ, ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಾಸ್ತವ್ಯ ಮತ್ತು ಸಮುದಾಯದವರೊಂದಿಗೆ ಸಂವಾದ; ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಾರ್ದನ ರೆಡ್ಡಿ ಸ್ನೇಹ ರಾಜಕೀಯಕ್ಕೆ ಹೊರತಾದುದು: ಶ್ರೀರಾಮುಲು

ಪ್ರತಿ ಕುಟುಂಬದವರ ಮನೆ ಮತ್ತು ಜಮೀನುಗಳ ಪಹಣಿ ಪತ್ರಿಕೆ ದೊರಕುವ ವ್ಯವಸ್ಥೆ ಮಾಡುತ್ತೇನೆ. ಸಿದ್ದಿ ಸಮುದಾಯದವರು ಅನೇಕ ಬೇಡಿಕೆಗಳನ್ನು ನೀಡಿದ್ದಾರೆ. ಅವರ ಬೇಡಿಕೆಯಂತೆ ಅತಿಕ್ರಮಣದಾರರಿಗೆ ಮಂಜೂರಿ ನೀಡುವುದು; ಕ್ರೀಡಾಪಟುಗಳಿಗೆ ದೇಶಮಟ್ಟದಲ್ಲಿ ಬೆಳೆಯಲು ತರಬೇತಿ ನೀಡುವುದು; ಇಲ್ಲಿನ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಸತಿ ಶಾಲೆ; ಸಿದ್ದಿಗಳ ವೈಯಕ್ತಿಕ ರಕ್ಷಣೆಗಾಗಿ ರೈಫಲ್‌ ನೀಡುವುದು ಸೇರಿದಂತೆ ಸಾಧ್ಯವಾದ ಎಲ್ಲ ರೀತಿಯ ನೆರವನ್ನು ನೀಡುವ ಪ್ರಯತ್ನ ಮಾಡುವ ಭರವಸೆ ನೀಡಿದರು. ಅಲ್ಲದೇ ಅವರು ಬೆಳೆದ ವಸ್ತು ಮತ್ತು ತಯಾರಿಸಿದ ಗುಡಿ ಕೈಕಾರಿಕೆಗಳ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಕಲ್ಪಿಸಿಕೊಡುವ ಭರವಸೆಯನ್ನೂ ನೀಡಿದರು.

ಇಲ್ಲಿನ ಸಿದ್ದಿ ಸಮಾಜದಲ್ಲಿರುವ ಹಿಂದೂ, ಕ್ರೈಸ್ತ, ಮುಸ್ಲಿಮರೆಲ್ಲರೂ ಒಂದೇ ಕುಟುಂಬದವರಂತೆ ಬಾಳುತ್ತಿರುವುದು ಅವರ ಜೀವನ ಶೈಲಿ, ಕಲೆ, ಸಂಸ್ಕೃತಿಗೆ ಸಾಕ್ಷಿಯಾಗಿದೆ. ನೈಸರ್ಗಿಕ ಸಂಪತ್ತಿಗೆ ಮಾರು ಹೋಗಿದ್ದೇನೆ. 25 ಸಾವಿರ ಸಿದ್ದಿಗಳು ಜಿಲ್ಲೆಯಲ್ಲಿದ್ದಾರೆ. ಈ ಸಮುದಾಯ ಮೇಲೆತ್ತಲೆಂದೇ ಬಿಜೆಪಿ ಶಾಂತಾರಾಮ ಸಿದ್ದಿ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದೆ ಎಂದರು.

ಬುಡಕಟ್ಟು ಮಹಿಳೆಯನ್ನೇ ರಾಷ್ಟ್ರಪತಿಯನ್ನಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ನಮ್ಮ ಪಕ್ಷದ ರಾಜ್ಯ/ಕೇಂದ್ರ ಸರ್ಕಾರ ದೇಶದ ಹಿಂದುಳಿದ ವರ್ಗಗಳ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದೆ. ಸಿದ್ದಿ ಸಮುದಾಯದ ಪ್ರತಿ ಮಕ್ಕಳೂ ಕಡ್ಡಾಯವಾಗಿ ಶಿಕ್ಷಣ ಪಡೆದು, ಉತ್ತಮ ನಾಗರಿಕರಾಗಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ಯಾರಿಗಾದರೂ ಶಿಕ್ಷಣ ದೊರೆಯದಿದ್ದರೆ ಇಲಾಖೆಯ ವಸತಿ ನಿಲಯದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಶಿಕ್ಷಣ ನೀಡಲಾಗುವುದು ಎಂದರು. ಸಿದ್ದಿ ಸಮುದಾಯದವರಿಗೆ ವಿವಿಧ ಸವಲತ್ತುಗಳನ್ನು ಫನಾನುಭವಿಗಳಿಗೆ ವಿತರಿಸಿದರು.

Ballari Politics: ಹೊಸ ಪಕ್ಷ ಕಟ್ಟಲು 'ಗಣಿಧಣಿ' ನಿರ್ಧಾರ?: ಆಪ್ತಮಿತ್ರರ ಮಧ್ಯೆ ಬಿರುಕು

ನಂದೊಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹ ಕೋಣೇಮನೆ, ಉಪಾಧ್ಯಕ್ಷೆ ಮೀನಾಕ್ಷಿ ಭಟ್ಟ, ಯಲ್ಲಾಪುರ ಪಪಂ ಅಧ್ಯಕ್ಷೆ ಸುನಂದಾ ದಾಸ್‌, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್‌, ಗ್ರಾಪಂ ಸಸದ್ಯರಾದ ಭವಾನಿ ಸಿದ್ದಿ, ಕಮಲಾ ಸಿದ್ದಿ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೇ ಸಿದ್ದಿ, ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್‌, ಇಲಾಖೆ ನಿರ್ದೇಶಕ ಪಿ.ಎಸ್‌. ಕಾಂತರಾಜು, ಜನರಲ್‌ ಮ್ಯಾನೇಜರ್‌ ಅರುಣಕುಮಾರ, ಇಲಾಖೆ ಉಪ ನಿರ್ದೇಶಕ ಅಜ್ಜಪ್ಪ ತೊಗಲದ್‌ ಇದ್ದರು. ರಾಜಕುಮಾರ ಸ್ವಾಗತಿಸಿದರು. ಶ್ರೀನಿವಾಸ ನಾಯ್ಕ ವಂದಿಸಿದರು. ವಸಂತಲಕ್ಷ್ಮೇ ಹೆಗಡೆ, ಕೆಂಗೇರಿ ಮಲ್ಲಿಕಾರ್ಜುನ ನಿರ್ವಹಿಸಿದರು.

click me!