ಹೊನ್ನಾವರದ ರಾಮತೀರ್ಥ ರಕ್ಷಣೆ: ತಜ್ಞರ ತಂಡ ಭೇಟಿ

By Kannadaprabha NewsFirst Published Dec 10, 2022, 11:48 AM IST
Highlights

ಹೊನ್ನಾವರ ತಾಲೂಕಿನ ಇತಿಹಾಸ ಪುರಾಣ ಪ್ರಸಿದ್ಧ ರಾಮತೀರ್ಥದ ಸಂರಕ್ಷಣೆ ಗುರುವಾರ ಪುರಾತತ್ವ ಇಲಾಖೆ, ವೃಕ್ಷಲಕ್ಷ ಆಂದೋಲನ, ಸಹ್ಯಾದ್ರಿ ಪರಂಪರಾ ಪ್ರಾಧಿಕಾರ, ಜೀವವೈವಿಧ್ಯ ಮಂಡಳಿ, ಪಪಂ, ತಾಪಂ ಹಾಗೂ ಕರ್ಕಿ ಗ್ರಾಪಂ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ತಜ್ಞರ ತಂಡ ಸ್ಥಳ ಭೇಟಿ ಸಮೀಕ್ಷೆ ನಡೆಸಿತು.

ಕಾರವಾರ (ಡಿ.10) ; ಹೊನ್ನಾವರ ತಾಲೂಕಿನ ಇತಿಹಾಸ ಪುರಾಣ ಪ್ರಸಿದ್ಧ ರಾಮತೀರ್ಥದ ಸಂರಕ್ಷಣೆ ಗುರುವಾರ ಪುರಾತತ್ವ ಇಲಾಖೆ, ವೃಕ್ಷಲಕ್ಷ ಆಂದೋಲನ, ಸಹ್ಯಾದ್ರಿ ಪರಂಪರಾ ಪ್ರಾಧಿಕಾರ, ಜೀವವೈವಿಧ್ಯ ಮಂಡಳಿ, ಪಪಂ, ತಾಪಂ ಹಾಗೂ ಕರ್ಕಿ ಗ್ರಾಪಂ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ತಜ್ಞರ ತಂಡ ಸ್ಥಳ ಭೇಟಿ ಸಮೀಕ್ಷೆ ನಡೆಸಿತು.

ಬಳಿಕ ರಾಮತೀರ್ಥ ಉಳಿಸಿ ಸಮಾಲೋಚನಾ ಸಭೆ ನಡೆಯಿತು. ರಾಮತೀರ್ಥ ಮೇಲ್ಭಾಗದಲ್ಲಿ ಕಾಲನಿ ನಿರ್ಮಾಣವಾಗುತ್ತಿದೆ. ತ್ಯಾಜ್ಯ ನೀರು ಇಂಗಿ ತೀರ್ಥಕ್ಕೆ ಬರುತ್ತಿದೆ. ರಾಮತೀರ್ಥ ನಿರ್ವಹಣೆ, ಸ್ವಚ್ಛತೆ ಇಲ್ಲದೆ ಹಾಳಾಗುತ್ತಿದೆ. ರಾಮಲಕ್ಷ್ಮಣ, ಸೀತಾ ಧಾರೆಗಳು ಪುಟ್ಟಜಲಪಾತದಂತೆ ಇದ್ದವು. ಈಗ ಸೀತೆ ಹೆಸರಿನ ನೀರಿನ ಹರಿವು ಪೂರ್ಣ ನಿಂತಿದೆ.

Uttara Kannda: ತ್ಯಾಜ್ಯ ವಿಲೇವಾರಿ ಘಟಕದಿಂದ ಅಪಾಯದಲ್ಲಿ ರಾಮತೀರ್ಥ ಗುಡ್ಡ

ತೀರ್ಥದ ಮೇಲ್ಭಾಗದಲ್ಲಿ ಕಟ್ಟಡ, ವಸತಿ ನಿರ್ಮಾಣಕ್ಕೆ ಪಪಂ ಅವಕಾಶ ನೀಡಬಾರದು. ಅರೆಸಾಮಿ ಕೆರೆ, ರಾಮತೀರ್ಥದ ಜಲಮೂಲವಾಗಿದ್ದು, ಇದರ ಸಂರಕ್ಷಣೆ ಆಗಬೇಕು. ಗೇರುಸಿಪ್ಪೆ ಎಣ್ಣೆ ತಯಾರಿ ಘಟಕದ ತ್ಯಾಜ್ಯ ರಾಮತೀರ್ಥಕ್ಕೆ ಬರುತ್ತಿದೆ. ರಾಮತೀರ್ಥದಿಂದ ಸಿಹಿನೀರು ಕರ್ಕಿ ಹಳ್ಳಗಳಿಗೆ ಬರುತ್ತದೆ. ಪಟ್ಟಣದ ತ್ಯಾಜ್ಯ ವಿಲೇವಾರಿ ಘಟಕದ ನೀರು ಕೂಡ ರಾಮತೀರ್ಥ ಕಡೆ ಬರುತ್ತದೆ. ಇವೆಲ್ಲಕ್ಕೆ ತಡೆ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಪುರಾತತ್ವ ಇಲಾಖೆ ಉಪ ನಿರ್ದೇಶಕ ಡಾ. ಶೇಜೇಶ್ವರ ಮಾತನಾಡಿ, ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ರಾಮತೀರ್ಥ, ರಾಮಲಿಂಗ ದೇವಸ್ಥಾನ ಬರುತ್ತದೆ. ಈ ಸ್ಥಳದ ಸುತ್ತ 300 ಮೀ.ವರೆಗೆ ಪುರಾತತ್ವ ರಕ್ಷಿತ ವಲಯವಾಗಿರುತ್ತದೆ. ಕಟ್ಟಡ ನಿರ್ಮಾಣ, ಇತರ ಕಾಮಗಾರಿ ಇಲ್ಲಿ ಮಾಡಬಾರದು. ಕಾಮಗಾರಿ ಕೈಗೊಳ್ಳಲು ಪುರಾತತ್ವ ಇಲಾಖೆ ಅನುಮತಿ ಅತ್ಯವಶ್ಯ ಎಂದು ತಿಳಿಸಿದರು. ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ರಾಮತೀರ್ಥ ನಿರ್ವಹಣಾ ಸಮಿತಿಯನ್ನು ತಹಸೀಲ್ದಾರ ಅಧ್ಯಕ್ಷತೆಯಲ್ಲಿ ರಚಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಕೃತಿ ಪ್ರೀಯರನ್ನು ಕೈಬೀಸಿ ಕರೆಯೋ ಉಗಲವಾಟದ ರಾಮತೀರ್ಥ ತಾಣ

ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಸದಸ್ಯ ಶ್ರೀಪಾದ ಬಿಚ್ಚುಗುತ್ತಿ, ಪಪಂ ಅಧ್ಯಕ್ಷೆ ಭಾಗ್ಯ, ಕರ್ಕಿ ಗ್ರಾಪಂ ಅಧ್ಯಕ್ಷೆ ಕಲ್ಪನಾ, ಸಹಾಯಕ ಅರಣ್ಯ ಅಧಿಕಾರಿ ಸುದರ್ಶನ ಹೆಬ್ಬಾರ್‌, ಹರಿಶ್ಚಂದ್ರ ನಾಯ್ಕ, ಪೋಲೀಸ್‌ ಅಧಿಕಾರಿ ಶ್ರೀಧರ ರಾಮತೀರ್ಥ ರಕ್ಷಣೆಗೆ ಹಲವು ಸಲಹೆ ನೀಡಿದರು. ಜೀವವೈವಿಧ್ಯ ಮಂಡಳಿಯ ಸದಸ್ಯ ಡಾ. ಪ್ರಕಾಶ ಮೇಸ್ತ ವಿವರ ಪ್ರಸ್ತಾವನೆ ಮಂಡಿಸಿದರು. ತಹಶೀಲ್ದಾರ್‌ ನಾಗರಾಜ್‌ ಮೊದಲಾದವರು ಇದ್ದರು. 

click me!