117 ವರ್ಷಗಳ ಇತಿಹಾಸ ಇರುವ ಕಾಂತಾರ ಸಿನೆಮಾದ ಜೈಲು ಕಣ್ಮರೆಯಾಗಲು ಕ್ಷಣಗಣನೆ!

By Suvarna NewsFirst Published Jul 3, 2023, 6:04 PM IST
Highlights

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಉಡುಪಿಯ ಪಾರಂಪರಿಕ ಕಟ್ಟಡವೊಂದು ಸದ್ಯದಲ್ಲೇ ನೆಲಸಮವಾಗಲಿದೆ. ಕಾಂತಾರ ಸಹಿತ ಅನೇಕ ಚಿತ್ರಗಳ ಶೂಟಿಂಗ್ ನಲ್ಲಿ ಈ ಕಟ್ಟಡವನ್ನು ಬಳಸಿಕೊಳ್ಳಲಾಗಿತ್ತು.

ಉಡುಪಿ (ಜು.3): ಉಡುಪಿಯ ಪಾರಂಪರಿಕ ಕಟ್ಟಡ ವೊಂದು ಸದ್ಯದಲ್ಲೇ ಮರೆಯಾಗಲಿದೆ. ಅಭಿವೃದ್ಧಿಯ ಹೆಸರಲ್ಲಿ ಸುಮಾರು 12 ದಶಕಗಳಷ್ಟು ಹಳೆಯ ಐತಿಹಾಸಿಕ ಕಟ್ಟಡ ನೆಲ ಸಮವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸಲು ಕಲಾವಿದರು ಅರಣ್ಯರೋಧನ ನಡೆಸುತ್ತಿದ್ದಾರೆ.

ಚಾರಿತ್ರಿಕ ಮಹತ್ವ ಹೊಂದಿರುವ ಉಡುಪಿಯ ಹಳೆ ತಾಲೂಕು ಕಚೇರಿ ಕಟ್ಟಡವನ್ನು ಸುಮಾರು 12 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಅದಕ್ಕೂ ಮೊದಲು ಅಂದರೆ 1890 ರವರೆಗೆ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಕೋರ್ಟ್ ಕಲಾಪಗಳು ಮತ್ತು ಜೈಲು ಕಾರ್ಯಾಚರಿಸುತ್ತಿದ್ದರೆ, ಆನಂತರದಲ್ಲಿ ಇಲ್ಲಿಗೆ ಸ್ಥಳಾಂತರಗೊಂಡಿತು.

Latest Videos

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಮುಖ ಹೋರಾಟಗಾರರನ್ನು ಉಡುಪಿಯ ಹೊರಗಿನ ಜೈಲುಗಳಿಗೆ ಸ್ಥಳಾಂತರಿಸಿದರೆ, ಸಣ್ಣಪುಟ್ಟ ಕೈದಿಗಳನ್ನು ಇದೇ ಜೈಲಿನಲ್ಲಿ ಇರಿಸಲಾಗುತ್ತಿತ್ತು. ಉಡುಪಿಯಲ್ಲಿ 10 ವರ್ಷಗಳ ಹಿಂದೆ ಹೊಸ ಜೈಲು ನಿರ್ಮಾಣವಾಗುವವರೆಗೂ ಈ ಸಬ್ ಜೈಲಿನಲ್ಲಿ ವಿಚಾರಣಾ ಕೈದಿಗಳನ್ನು ಇರಿಸಲಾಗುತ್ತಿತ್ತು.

ಖಾಸಗಿ ಪ್ಲೇ ಹೋಂ ಮೀರಿಸುತ್ತೆ ವಿಜಯಪುರದ ಸರ್ಕಾರಿ ಅಂಗನವಾಡಿ!

ಇಂತಹ ಅಪರೂಪದ ಕಟ್ಟಡವನ್ನು ನೂತನ ನಗರ ಸಭಾ ಕಚೇರಿ ನಿರ್ಮಾಣದ ನೆಪದಲ್ಲಿ ಕೆಡವಲು ಮುಂದಾಗಿದೆ. ಅಂದಾಜು 10,000 ಚದುರ ಅಡಿ ವಿಸ್ತೀರ್ಣ ಇರಬಹುದಾದ ಈ ಕಟ್ಟಡವನ್ನು ಕೆಡವಲು 12 ಲಕ್ಷ ರೂಪಾಯಿಗೆ ಟೆಂಡರ್ ಆಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಈ ಅಪರೂಪದ ಕಟ್ಟಡ ಮಣ್ಣು ಪಾಲಾಗಲಿದೆ.

ಇದೊಂದು ಅಪರೂಪದ ರಚನೆ, ಕೊಲೋನಿಯಲ್ ಅಥವಾ ವಸಾಹತುಶಾಯಿ ವಾಸ್ತು ರಚನೆಯಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಮೇಲಂತಸ್ತಿನಲ್ಲಿ 12 ಕೆಳ ಅಂತಸ್ತಿನಲ್ಲಿ 12 ಜೈಲು ಸೆಲ್ ಗಳಿವೆ.ಸಣ್ಣ ಕೆಂಪು ಇಟ್ಟಿಗೆಗಳನ್ನು ಬಳಸಿ ಮದ್ರಾಸ್ ರೂಫಿಂಗ್ ಮಾದರಿಯಲ್ಲಿ ನಿರ್ಮಿಸಿರುವ ಸದ್ಯ ಉಡುಪಿಯಲ್ಲಿ ಕಾಣಸಿಗುವ ಏಕೈಕ ಕಟ್ಟಡ ಇದಾಗಿದೆ. 

ಪಾಳು ಬಿದ್ದಂತೆ ಕಂಡರು ಈ ಕಟ್ಟಡದ ದುರಸ್ತಿ ಮಾಡುವ ಮೂಲಕ ಉಳಿಸಿಕೊಳ್ಳಬಹುದಾಗಿದೆ. ಇಲ್ಲಿ ಕಾರ್ಯಾಚರಿಸುತ್ತಿದ್ದ ತಾಲೂಕು ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸದ್ಯ ಕಾರ್ಯಾಚರಿಸುತ್ತಿರುವ ನಗರಸಭಾ ಕಟ್ಟಡದಲ್ಲಿ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಅಂದಾಜು 45 ಕೋಟಿ ವೆಚ್ಚದಲ್ಲಿ ನೂತನ ನಗರಸಭಾ ಕಚೇರಿಯನ್ನು ಈ ಸ್ಥಳದಲ್ಲಿ ನಿರ್ಮಾಣ ಮಾಡಲಾಗುವುದು.

ಹಳೆಯ ಅತ್ಯಂತ ಸುಂದರವಾದ ಈ ಕಟ್ಟಡವನ್ನು ಉಳಿಸಿಕೊಳ್ಳಲು ಆರ್ಕಿಟೆಕ್ಟ್ಗಳು ಹಾಗೂ ಕಲಾವಿದರು ಮುಂದಾಗಿದ್ದಾರೆ. ಅದಕ್ಕಾಗಿ ವಿಶೇಷ ಅಭಿಯಾನವನ್ನು ಆರಂಭಿಸಿದ್ದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಕಳೆದ ಒಂದು ವಾರಗಳಿಂದ ಈ ಕಟ್ಟಡದ ರಚನೆಯ ಬಗ್ಗೆ ದಾಖಲೀಕರಣ ನಡೆಯುತ್ತಿಸಲಾಗುತ್ತಿದೆ. ಜೊತೆಗೆ ಉಡುಪಿಯ 12 ಮಂದಿ ಕಲಾವಿದರು ಸೇರಿಕೊಂಡು ಈ ಕಟ್ಟಡದ ಕಲಾಕೃತಿಗಳನ್ನು ತಮ್ಮ ಕುಂಚದಲ್ಲಿ ರಚಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

NITK Surathkal ಕ್ಯಾಂಪಸ್ ಸೆಲೆಕ್ಷನ್‌, ಅಮೆರಿಕಾ ಕಂಪೆನಿಯಲ್ಲಿ ವಿದ್ಯಾರ್ಥಿಗೆ 2.3 ಕೋಟಿ ರೂ

ನಗರಸಭೆ ನಿರ್ಮಿಸುವುದಕ್ಕೆ ಯಾರ ವಿರೋಧವಿಲ್ಲ. ಆದರೆ ಈ ಪಾರಂಪರಿಕ ಕಟ್ಟಡದ ಒಂದು ಭಾಗವನ್ನಾದರೂ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಸ್ವಾತಂತ್ರ್ಯ ಪೂರ್ವ ಕಾಲದ ನೆನಪುಗಳನ್ನು ಪರಿಚಯಿಸಬೇಕು ಅನ್ನೋದು ಕಲಾವಿದರ ಬೇಡಿಕೆಯಾಗಿದೆ. ಕಟ್ಟಡವನ್ನು ನೆರಸಮಗೊಳಿಸುವ ಪ್ರಕ್ರಿಯೆಯನ್ನು ಸ್ವಲ್ಪ ಮುಂದುವರಿದರೆ ಮತ್ತಷ್ಟು ದಾಖಲೀಕರಣ ಮಾಡಿ ಈ ಕಟ್ಟಡವನ್ನು ಡಿಜಿಟಲಿಕರಣ ಮಾಡಬಹುದು ಅನ್ನೋದು ಯುವ ಕಲಾವಿದರ ಅಭಿಪ್ರಾಯ.

ಕಟ್ಟಡ ಉಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು , ಶಾಸಕರು, ಹಾಗೂ ಸಚಿವರಿಗೆ ಮನವಿ ನೀಡಲಾಗಿದೆ ಎಂದು ಅಭಿಯಾನ ನಡೆಸುತ್ತಿರುವ ಕಲಾವಿದ ಜನಾರ್ಧನ ಹಾವಂಜೆ ತಿಳಿಸಿದ್ದಾರೆ. ಜಿಲ್ಲೆಯ ಬಹುತೇಕ ಎಲ್ಲಾ ಪಾರಂಪರಿಕ ಕಟ್ಟಡಗಳು ಕಣ್ಮರೆಯಾಗಿದ್ದು ಈ ಕಟ್ಟಡದ ಒಂದು ಭಾಗವನ್ನು ಆದರೂ ಉಳಿಸಿಕೊಂಡರೆ ಅಭಿಯಾನ ನಡೆಸಿದ್ದು ಸಾರ್ಥಕ ಎನ್ನುತ್ತಾರೆ.

ಕಾಂತಾರ ಸಹಿತ ಅನೇಕ ಚಿತ್ರಗಳ ಶೂಟಿಂಗ್
ವಿಶ್ವದಲ್ಲೇ ಸದ್ದು ಮಾಡಿದ ಕಾಂತಾರ ಚಲನಚಿತ್ರದಲ್ಲಿ ಬರುವ ಜೈಲಿನ ಸೀಕ್ವೆನ್ಸುಗಳು ಇಲ್ಲೇ ಶೂಟಿಂಗ್ ಆಗಿವೆ. ಜೊತೆಗೆ ಬೆಲ್ ಬಾಟಮ್ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಟೋಬಿ ಚಿತ್ರದ ಅನೇಕ ದೃಶ್ಯಾವಳಿಗಳು ಈ ಪಾರಂಪರಿಕ ಕಟ್ಟಡದಲ್ಲಿ ಶೂಟ್ ಮಾಡಲಾಗಿದೆ.

click me!