ನಾನೂ ಕೂಡ ಸ್ವತಃ ಮೀನುಗಾರ, ಮೀನುಗಾರ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ ನೀಡಿದ ವೈದ್ಯ

By Suvarna NewsFirst Published Jul 3, 2023, 5:15 PM IST
Highlights

ಸಾಸ್ತಾನ ಕೋಡಿ ಕನ್ಯಾನ ಮೀನುಗಾರಿಕಾ ಜೆಟ್ಟಿಯಲ್ಲಿ ಮೀನುಗಾರ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯ ಹೇಳಿದ್ದಾರೆ.

ಉಡುಪಿ (ಜು.3): ಸಾಸ್ತಾನ ಕೋಡಿ ಕನ್ಯಾನ ಮೀನುಗಾರಿಕಾ ಜೆಟ್ಟಿಯಲ್ಲಿ ಮೀನುಗಾರ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಮಂಕಾಳ ವೈದ್ಯ ಹೇಳಿದರು. ಅವರು ಸಾಸ್ತಾನ ಕೋಡಿ ಕನ್ಯಾನ ಮೀನುಗಾರಿಕಾ ಜೆಟ್ಟಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಮೀನುಗಾರರಿಂದ ಆಲಿಸಿ ಬಳಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾಸ್ತಾನ ಕೋಡಿ ಕನ್ಯಾನ ಮೀನುಗಾರಿಕಾ ಜೆಟ್ಟಿಯಲ್ಲಿ ಮೀನುಗಾರರು ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ನಾನು ಇಂದು ಸ್ವತಃ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ. ಸ್ಥಳಾವಕಾಶದ ಕೊರತೆಯಿಂದಾಗಿ ಇಲ್ಲಿ ಬೋಟುಗಳನ್ನು ನಿಲ್ಲಿಸಿದ್ದರೂ ಅದನ್ನು ಕಾಯುವ ಪರಿಸ್ಥಿತಿ ಇದೆ. ಸಮುದ್ರದ ಏರಿಳಿತದಿಂದಾಗಿ ಅವರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಹೂಳೆತ್ತಲೂ ಕೂಡ ಸಾಧ್ಯವಾಗದೆ ಇದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಮ್ಮ ಸರಕಾರ ಬಡವರ ಹಾಗೂ ಮೀನುಗಾರರ ಪರವಾಗಿದ್ದು, ನಾನೂ ಕೂಡ ಸ್ವತಃ ಮೀನುಗಾರನಾಗಿದ್ದು ಮೀನುಗಾರರ ಪರವಾಗಿರುತ್ತೇನೆ. ಕೋಡಿ ಮೀನುಗಾರಿಕಾ ಬಂದರನ್ನು ಪ್ರಥಮ ಆದ್ಯತೆಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌​-2ಗೆ ಬಿಎಂಟಿಸಿ ಬಸ್‌ ಸೇವೆ ಆರಂಭ, ದರ ಮಾಹಿತಿ

ಕಡಲ್ಕೊರೆತಕ್ಕೆ ಹಂತ ಹಂತವಾಗಿ ಶಾಶ್ವತ ಪರಿಹಾರ
ಗೋವಾದಿಂದ ಮಂಗಳೂರಿನ ತನಕ ಕಡಲ್ಕೊರೆತ ಸಮಸ್ಯೆ ಇದ್ದು ಒಂದು ಕಡೆ ಪರಿಹಾರ ಕಂಡುಕೊಂಡಾಗ ಇನ್ನೊಂದು ಕಡೆಯಲ್ಲಿ ಆರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಯಾವ ರೀತಿಯಲ್ಲಿ ಕಂಡುಕೊಳ್ಳಬಹುದು ಎಂಬ ಬಗ್ಗೆ ತಜ್ಞರ ತಂಡವನ್ನು ಕಳಿಸಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಕಡಲ್ಕೊರೆತಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗಲಿದ್ದು ಇದಕ್ಕೆ ಕೇಂದ್ರ ಸರಕಾರ ಕೂಡ ಸಹಕಾರ ನೀಡಬೇಕಾಗಿದೆ.  ಎಲ್ಲಾ ಕೆಲಸವನ್ನು ರಾಜ್ಯ ಸರಕಾರದಿಂದಲೇ ಮಾಡುವುದು ಅಸಾಧ್ಯವಾಗಿದ್ದು, ಹೆಚ್ಚಿನ ಸಹಕಾರವನ್ನು ಕೇಂದ್ರದಿಂದ ಪಡೆದು ಪರಿಹಾರ ಕಂಡುಕೊಳ್ಳುತ್ತೇವೆ.  320 ಕಿಮೀ ಉದ್ದದ ಕಡಲ್ಕೋರೆತಕ್ಕೆ ಶಾಶ್ವತ ಪರಿಹಾರವನ್ನು ಹಂತ ಹಂತವಾಗಿ ಕಂಡುಕೊಳ್ಳಲಾಗುವುದು ಎಂದರು. 

ಅಕ್ಕಿಯೇ ಬೇಕು ಎಂದರೆ ಅದನ್ನು ನೀಡಲು ಬದ್ಧ
ಅಕ್ಕಿಯ ಬದಲು ಜನರಿಗೆ ಹಣ ನೀಡಿದರೆ ಅವರಿಗೆ ಬೇಕಾದ ಅಕ್ಕಿಯನ್ನು ಖರೀದಿಸಬಹುದು ಎಂದು ಹಿಂದೆ ಬಿಜೆಪಿಗರೇ ಹೇಳಿದ್ದರು. ಅದರಂತೆ ನಮ್ಮ ಸರಕಾರ ಕೆಲವೊಂದು ಬದಲಾವಣೆಗಳನ್ನು ತರಲು ಪ್ರಯತ್ನಿಸಿ ಅರ್ಧ ಭಾಗ ಅಕ್ಕಿ ಮತ್ತು ಅರ್ಧ ಭಾಗ ಹಣವನ್ನು ನೀಡಲು ನಿರ್ಧರಿಸಲಾಗಿದೆ. ನಾವು ಸಾಮಾನ್ಯ ಬಡ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಒಂದು ವೇಳೆ ಜನರಿಗೆ ಅಕ್ಕಿಯೇ ಬೇಕು ಎಂದಾದಲ್ಲಿ ಅದನ್ನೂ ನೀಡಲು ನಾವು ಬದ್ಧರಿದ್ದೇವೆ ಎಂದರು.

ನನಗೂ ಬಂಧಿತ ಅಜಿತ್ ರೈಗೂ ಯಾವುದೇ ಸಂಬಂಧವಿಲ್ಲ, ಥೈಲ್ಯಾಂಡ್ ನಿಂದ ಭೂಗತ

ಸಚಿವರ ಭೇಟಿಯ ವೇಳೆ ಮೀನುಗಾರರು ಕೋಡಿಕನ್ಯಾನ ಜೆಟ್ಟಿಯಲ್ಲಿ ಬೋಟ್ ನಿಲುಗಡೆಗೆ ಸ್ಥಳವಕಾಶದ ಕೊರತೆ, ಜೆಟ್ಟಿ ವಿಸ್ತರಣೆ, ಹೂಳೆತ್ತುವಿಕೆಗೆ ಆಗ್ರಹಿಸಿದರು. ಸಚಿವರು ಅಧಿಕಾರಿಗಳಿಂದ ಪ್ರಸ್ತುತ ಬಿಡುಗೆಡೆಯಾಗಿರುವ ಕಾಮಗಾರಿ ಹಾಗೂ ಮುಂದೆ ನಡೆಯಬೇಕಾಗಿರುವ ಕಾಮಗಾರಿಯ ನೀಲನಕ್ಷೆಯ ಕುರಿತು ಮಾಹಿತಿ ಪಡೆದರು. ಬಳಿಕ ಸಚಿವ ಹಂಗಾರಕಟ್ಟೆ ಬಂದರಿಗೆ ಭೇಟಿ ನೀಡಿ ಮೀನುಗಾರರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ, ಮೀನುಗಾರ ಮುಖಂಡ ನಾಡೋಜ ಡಾ ಜಿ ಶಂಕರ್, ಆನಂದ ಕುಂದರ್, ಕೇಶವ್ ಕುಂದರ್ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

click me!