ಚಿಂಚೋಳಿ: ಐನಾಪುರ ಏತ ನೀರಾವರಿಗೆ ಸರ್ಕಾರ ಸಮ್ಮತಿ

By Kannadaprabha NewsFirst Published Dec 24, 2022, 10:00 PM IST
Highlights

ಈ ಯೋಜನೆಯಿಂದ ರೈತರ ಆರ್ಥಿಕ ಜೀವನಮಟ್ಟ ಸುಧಾರಣೆ: ಸಂಸದ ಡಾ. ಉಮೇಶ ಜಾಧವ

ಚಿಂಚೋಳಿ(ಡಿ.24): ತಾಲೂಕಿನ ಐನಾಪುರ ಗ್ರಾಮದ ಏತನೀರಾವರಿ ಯೋಜನೆ ಬಹುದಿನಗಳ ರೈತರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಐನಾಪುರ ಮತ್ತು ಸುತ್ತಲಿನ 17 ಗ್ರಾಮಗಳ ಸುಮಾರು 3,740 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಐನಾಪುರ ಏತನೀರಾವರಿ ಯೋಜನೆಗೆ .204.10 ಕೋಟಿ (2018-19ರ ದರಪಟ್ಟಿಅನ್ವಯ) ಮೊತ್ತದ ಯೋಜನಾ ವರದಿಗೆ ಸರಕಾರ ಆಡಳಿತಾತ್ಮಕ ಅನುಮೋದನೆಗೆ ನೀಡಿರುವುದರಿಂದ ಹಿಂದುಳಿದ ಪ್ರದೇಶ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಚಿಂಚೋಳಿ ತಾಲೂಕಿನ ಐನಾಪುರ ಸುತ್ತಲಿನ 17 ಗ್ರಾಮಗಳ ವ್ಯಾಪ್ತಿಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗುತ್ತಿದ್ದು ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸ್ಥಳೀಯ ಶಾಸಕ ಡಾ. ಅವಿನಾಶ ಜಾಧವ್‌ ಮತ್ತು ಗ್ರಾಮಸ್ಥರ ಕೋರಿಕೆ ಮೇರೆಗೆ ಸರ್ಕಾರ .225.70 ಕೋಟಿ ಮೊತ್ತದ (2021-22ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಐನಾಪುರ ಏತನೀರಾವರಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದರು.

ಹೊಸಗುತ್ತಿ- ಹೊಸಳ್ಳಿ ಏತ ನೀರಾವರಿ ಯೋಜನೆಗೆ ಅಪ್ಪಚ್ಚು ರಂಜನ್‌ ಚಾಲನೆ

ಕೃಷ್ಣ ನ್ಯಾಯಾ​ಧೀಕರಣ ರನ್ವಯ ಕೆಳದಂಡೆ ಮುಲ್ಲಾಮಾರಿ ಯೋಜನೆಗೆ ಹಂಚಿಕೆಯಾದ 2.61 ಟಿಎಂಸಿ ನೀರಿನಲ್ಲಿ 2.034 ಟಿಎಂಸಿ ನೀರು ಬಳಕೆಯಾಗಿದ್ದು ಉಳಿತಾಯವಾಗುವ 0.576 ಟಿಎಂಸಿ ನೀರಿನಲ್ಲಿ 0.34ಟಿಎಂಸಿ ನೀರನ್ನು ಬಳಸಿಕೊಂಡು ಸದರಿ ಯೋಜನೆಯನ್ನು ಯೋಜಿಸಲಾಗಿತ್ತು. ಐನಾಪುರ ಏತನೀರಾವರಿ ಯೋಜನೆ ಒಟ್ಟು 3.740 ಹೆಕ್ಟೇರ್‌ ಪ್ರದೇಶಕ್ಕೆ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಸರಕಾರ ಅನುಮೊದನೆ ನೀಡಿದೆ.

ಐನಾಪುರ ಏತನೀರಾವರಿ ಯೋಜನೆಗೆ 2ಹಂತದಲ್ಲಿ ಮೊದಲನೆ ಹಂತದಲ್ಲಿ .125.25 ಕೋಟಿ ಹಾಗೂ 2ನೇ ಹಂತದಲ್ಲಿ 78.85 ಕೋಟಿ ಮೊತ್ತದಲ್ಲಿ ಕೈಕೊಳ್ಳಲು ಮತ್ತು ಮೊದಲನೇ ಹಂತದಲ್ಲಿ .125.25 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಾತ್ರ ಟೆಂಡರ್‌ ಪ್ರಕ್ರಿಯೇ ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಐನಾಪುರ ಏತನೀರಾವರಿ ಯೋಜನೆಯಿಂದ ಪರಿಶಿಷ್ಟಜಾತಿ ಪರಿಶಿಷ್ಟಪಂಗಡ ರೈತರ ಒಟ್ಟು 3710 ಹೆಕ್ಟೇರ್‌ ಪ್ರದೇಶ ನೀರಾವರಿ ಪ್ರಯೋಜನೆ ಆಗಲಿದೆ. ಐನಾಪುರ-612 ಹೆಕ್ಟೇರ್‌, ಯಲ್ಮಾಮಡಿ 413ಹೆಕ್ಟೇರ್‌, ಗಡಿಲಿಂಗದಳ್ಳಿ 924 ಹೆಕ್ಟೇರ್‌, ಬೆನಕೆಪಳ್ಳಿ 1897 ಹೆಕ್ಟೇರ್‌, ಚೆನ್ನೂರ 356 ಹೆಕ್ಟೇರ್‌ ನೀರಾವರಿ ಆಗಲಿದೆ. ಹಿಂದುಳಿದ ಪ್ರದೇಶದಲ್ಲಿ ಅನೇಕ ವರ್ಷಗಳ ನಂತರ ರೈತರ ಬೇಡಿಕೆಯನ್ನು ಸರ್ಕಾರ ಅನುಮೋದನೆ ನೀಡಿರುವುದರಿಂದ ಇನ್ನುಮುಂದೆ ತೋಟಗಾರಿಕೆ, ರೇಷ್ಮೆ, ಕಬ್ಬು ಬೆಳೆಯುವುದಕ್ಕಾಗಿ ಅಲ್ಲದೇ ತರಕಾರಿ, ಉಳ್ಳಾಗಡ್ಡಿ, ಅರಶಿಣ, ಶುಂಠಿ, ತೊಗರಿ, ಜೋಳ, ಕಡಲೆ ಬೆಳೆಗಳಿಗೆ ನೀರು ಸಿಗಲಿದೆ ಇದರಿಂದಾಗಿ ರೈತರ ಆರ್ಥಿಕ ಜೀವನಮಟ್ಟಸುಧಾರಣೆ ಆಗಲಿದೆ. ಪಟ್ಟಣದ ಹೊರವಲಯದಲ್ಲಿ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆಯು ಶಾಸಕ ಡಾ.ಅವಿನಾಶ ಜಾಧವ್‌, ಸಂಸದ ಡಾ.ಉಮೇಶ ಜಾಧವ್‌ ಸತತ ಪರಿಶ್ರಮದಿಂದ ಜನೇವರಿ ತಿಂಗಳಲ್ಲಿ ಪ್ರಾರಂಭ ಆಗಲಿದೆ. ಹಿಂದುಳಿದ ಪ್ರದೇಶವು ಇನ್ನು ಮುಂದೆ ನೀರಾವರಿ ಪ್ರದೇಶ ಆಗಲಿದೆ. ಐನಾಪುರ ಏತ ನೀರಾವರಿ ಯೋಜನೆ ರೈತರ ಬಾಳಲ್ಲಿ ಬೆಳಕು ಚೆಲ್ಲಲಿದೆ.

ಐನಾಪುರ ಏತನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಅನೇಕ ಸಲ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಚಿವ ಮುರುಗೇಶ ನಿರಾಣಿ, ಹಿಂದುಳಿದ ರೈತರಿಗೆ ನೀರಾವರಿ ಸೌಕರ್ಯ ಒದಗಿಸಿಕೊಟ್ಟಿರುವುದಕ್ಕಾಗಿ ಇದೊಂದು ನಮ್ಮ ಸರಕಾರದ ಐತಿಹಾಸಿಕ ಸಾಧನೆ ಆಗಿದೆ ಅಂತ ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ ತಿಳಿಸಿದ್ದಾರೆ.  

click me!