ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸತ್ಪ್ರಜೆಗಳಾಗಿಸಿ: ಸಚಿವ ಆರಗ ಜ್ಞಾನೇಂದ್ರ

By Govindaraj SFirst Published Dec 19, 2022, 7:24 PM IST
Highlights

ಮೈ ಮುರಿದು ದುಡಿಮೆ ಮಾಡಿ ಬದುಕುವ ಶ್ರಮಜೀವಿ ಮುಸ್ಲಿಂ ಸಮುದಾಯದ ಬಂಧುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸಬೇಕು. 

ತೀರ್ಥಹಳ್ಳಿ (ಡಿ.19): ಮೈ ಮುರಿದು ದುಡಿಮೆ ಮಾಡಿ ಬದುಕುವ ಶ್ರಮಜೀವಿ ಮುಸ್ಲಿಂ ಸಮುದಾಯದ ಬಂಧುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸಬೇಕು. ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಬಂಧಿತರಾಗಿರುವ ಕೇವಲ ಮೂವರು ಆರೋಪಿಗಳಿಂದಾಗಿ ಇಡೀ ತಾಲೂಕಿಗೆ ಕಳಂಕ ಬರುವಂತಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಯೂನಿಟಿ ಸಭಾಂಗಣದಲ್ಲಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಒಕ್ಕೂಟದ ವಾರ್ಷಿಕ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ, ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಅವರು ಮಾತನಾಡಿದರು.

ಈ ಮೊದಲು ಅವಿದ್ಯಾವಂತರಲ್ಲಿ ಧಾರ್ಮಿಕ ಭಾವನೆ ಆಧಾರದಲ್ಲಿ ಒಂದಿಷ್ಟು ಭಯ ಇತ್ತು. ಇಂದು ಶಿಕ್ಷಣದಲ್ಲಿ ಸಾಕಷ್ಟುಬೆಳವಣಿಗೆಯಾಗಿದ್ದು, ವಿದ್ಯಾವಂತರಿಂದಲೇ ಹೆಚ್ಚೆಚ್ಚು ಅಪರಾಧಗಳು ನಡೆಯುತ್ತಿರುವುದು ಆತಂಕದ ಸಂಗತಿಯಾಗಿದೆ. ಗಲ್ಲುಶಿಕ್ಷೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಕಲಿತವರಾಗಿದ್ದಾರೆ ಎಂದರು. ಅವಕಾಶವಾದಿ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿ ಸಮಾಜಬಾಹಿರ ಚಟುವಟಿಕೆಗಳಲ್ಲಿ ತೊಡಗುವವರನ್ನು ಬದಲಿಸುವ ಕಾರ್ಯ ಸಮಾಜದ ಚಿಂತಕರಿಂದ ಆಗಬೇಕಿದೆ. ಈ ರೀತಿಯ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ಹಾದಿ ತಪ್ಪುವ ಯುವಕರನ್ನು ಆಯಾ ಸಮುದಾಯಗಳ ಮುಖಂಡರೇ ಸರಿದಾರಿಗೆ ತರುವ ಪ್ರಯತ್ನವನ್ನು ಮಾಡುವ ಬದ್ಧತೆಯನ್ನು ತೋರಬೇಕಿದೆ. 

ಭಯೋತ್ಪಾದಕರನ್ನು ಬೆಂಬಲಿಸಿದರೆ ಕಾಂಗ್ರೆಸ್‌ ಬ್ಯಾನ್‌: ಕೆ.ಎಸ್‌.ಈಶ್ವರಪ್ಪ

ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳನ್ನು ಶಿಕ್ಷಣದ ಮೂಲಕ ಮನಃಪರಿವರ್ತನೆ ಮಾಡುವ ಪ್ರಯತ್ನವೂ ನಡೆಯುತ್ತಿದೆ ಎಂದರು. ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌. ಅರುಣ್‌ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯದಿಂದ ನಿಷ್ಕಳಂಕ ಮನಸ್ಸಿನ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಆರಂಭದಿಂದಲೇ ಆಗಬೇಕು. ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲಾ. ಮೊಬೈಲ್‌ ಬಳಕೆ ಸೇರಿದಂತೆ ಅವರ ಪ್ರತಿಯೊಂದು ಚಟುವಟಿಕೆಯ ಮೇಲೂ ನಿಗಾ ವಹಿಸುವ ಅಗತ್ಯವಿದೆ. ಎಂದರು.

ರಾಜ್ಯ ವಕ್ಫ್ ಬೋರ್ಡ್‌ ಅಧ್ಯಕ್ಷ ಮೌಲಾನಾ ಶಾಹಿ ಸಅದಿ ಮಾತನಾಡಿ, ಇಸ್ಲಾಂ ಸರ್ವರ ಹಿತವನ್ನು ಬಯಸುವ ಧರ್ಮವಾಗಿದೆ. ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಚಟುವಟಿಕೆಯಾಗಿದೆ. ಶಿಕ್ಷಣದ ಕೊರತೆಯಿಂದ ಧರ್ಮ ಪಾಲನೆಯನ್ನು ಮರೆತು ನಡೆಯುತ್ತಿರುವವರಿಂದಾಗಿ ಮುಸ್ಲಿಂ ಸಮುದಾಯದ ಬಗ್ಗೆ ಸಮಾಜದಲ್ಲಿ ಅಪಾರ್ಥ ಕಲ್ಪಿಸುವ ನುಡಿಗಳು ಕೇಳುವಂತಾಗಿದೆ. ನಮ್ಮ ಸಮುದಾಯದಲ್ಲಿ ಶೇ.43 ಅನಕ್ಷರಸ್ಥರಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಶೇ.57, ಉನ್ನತ ಶಿಕ್ಷಣದಲ್ಲಿ ಕೇವಲ ಶೇ.6 ಮಾತ್ರ ಇದ್ದಾರೆ. 80 ಲಕ್ಷ ಜನಸಂಖ್ಯೆ ಇರುವ ಸಮುದಾಯಕ್ಕೆ ರಾಜ್ಯದಲ್ಲಿ ರಾಜಕೀಯ ಸಬಲೀಕರಣದ ಅಗತ್ಯವಿದೆ ಎಂದರು.

Shivamogga: ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಚರ್ಮಗಂಟು ರೋಗ ಉಲ್ಬಣ

ಸಂಯುಕ್ತ ಮುಸ್ಲಿಂ ಒಕ್ಕೂಟದ ಅದ್ಯಕ್ಷ ಸುಲೇಮಾನ್‌ ಸಾಹೇಬ್‌, ಗೌರವಾದ್ಯಕ್ಷ ಇಬ್ರಾಹಿಂ ಷರೀಫ್‌, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅದ್ಯಕ್ಷ ಆರ್‌.ಎಂ.ಮಂಜುನಾಥಗೌಡ, ಪಪಂ ಅದ್ಯಕ್ಷೆ ಸುಶೀಲಾ ಶೆಟ್ಟಿ, ಸದಸ್ಯ ರಹಮತ್‌ ಉಲ್ಲಾ ಅಸಾದಿ, ದಸ್ತಗೀರ್‌ ಖುರೇಶಿ, ಡಿ.ಎಸ್‌.ಅಬ್ದುಲ್‌ ರಹಮಾನ್‌ ಮುಂತಾದವರು ಇದ್ದರು.

click me!