Garlic Price Decline : ಬೆಳ್ಳುಳ್ಳಿ ದರ ದಿಢೀರ್‌ ಕುಸಿತ, ಭಾರೀ ಕುಸಿತಕ್ಕೆ ರೈತರ ಆಕ್ರೋಶ

By Kannadaprabha NewsFirst Published Nov 29, 2021, 12:25 PM IST
Highlights
  • ಬೆಳ್ಳುಳ್ಳಿ ದರ ದಿಢೀರ್‌ ಕುಸಿತ, ಭಾರೀ ಕುಸಿತಕ್ಕೆ ರೈತರ ಆಕ್ರೋಶ
  • ಕಳೆದ ವಾರ ಕ್ವಿಂಟಲ್‌ಗೆ 5 ಸಾವಿರವಿದ್ದ ದರ ನಿನ್ನೆ  2500ಕ್ಕೆ ಕುಸಿತ
  • ವರ್ತಕರ ಜತೆ ಮಾತುಕತೆ ಬಳಿಕ  3500ಕ್ಕೆ ಖರೀದಿ

 ರಾಣಿಬೆನ್ನೂರು (ನ.29):  ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ (APMC Market) ಭಾನುವಾರ ಏಕಾಏಕಿ ಬೆಳ್ಳುಳ್ಳಿ (garlic) ದರ ಕುಸಿತವಾಗಿದ್ದು, ಬೆಳಗಾರರು (Farmers) ಕಂಗಾಲಾಗಿದ್ದಾರೆ. ಕಳೆದ ವಾರ ಬೆಳ್ಳುಳ್ಳಿ ಪ್ರತಿ ಕ್ವಿಂಟಲ್‌ಗೆ 5 ಸಾವಿರದಿಂದ  ರು. 6  ಸಾವಿರ  ವರೆಗೆ ಮಾರಾಟವಾಗಿತ್ತು. ಆದರೆ ಇಂದು ವರ್ತಕರು ಅದನ್ನು 1 ಕ್ವಿಂಟಲ್‌ಗೆ  ರು.  2 ಸಾವಿರದಿಂದ  2500 ರು.  ವರೆಗೆ ಖರೀದಿಸಲು ಮುಂದಾಗಿದ್ದರು. ಇದರಿಂದ ಕಂಗಾಲಾದ ರೈತರು ಎಪಿಎಂಸಿ (APMC) ಅಧಿಕಾರಿ ಹಾಗೂ ವ್ಯಾಪಾರಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಳೆ ಪಿ.ಬಿ. ರಸ್ತೆ ಬಂದ್‌ ಮಾಡಿ ಪ್ರತಿಭಟನೆ (Protest) ನಡೆಸಲು ಮುಂದಾದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪರಮೇಶ ನಾಯ್ಕ್ ವರ್ತಕರೊಂದಿಗೆ ಮಾತನಾಡಿ, ಗುಣಮಟ್ಟದ ಬೆಳ್ಳುಳ್ಳಿಯನ್ನು ಪ್ರತಿ ಕ್ವಿಂಟಲ್‌ಗೆ 3500 ರು.ಗೆ ಖರೀದಿಸಲು ತಿಳಿಸಿದರು. ನಂತರ ರೈತರು ಬೆಳ್ಳುಳ್ಳಿ ಮಾರಾಟ ಮಾಡಿದರು.

ದರ ಇಳಿಕೆಗೆ ಕಾರಣ

ಕಳೆದ ವಾರದಲ್ಲಿ ಸುರಿದ ನಿರಂತರ ಮಳೆಯಿಂದಾಗಿ (heavy Rain) ರೈತರು (farmer) ಬೆಳ್ಳುಳ್ಳಿಯನ್ನು ಒಣಗಿಸಲು ಆಗುತ್ತಿಲ್ಲ. ಇಟ್ಟು ಕೊಳ್ಳಲು ಜಾಗವಿಲ್ಲದ ಕಾರಣ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇಂದು ಮಾರುಕಟ್ಟೆಗೆ 600 ಕ್ವಿಂಟಲ್‌ ಆವಕವಾಗಿದೆ. ಬೆಳ್ಳುಳ್ಳಿ ಕೊಂಚ ಮಟ್ಟಿಗೆ ಹಸಿ ಇರುವ ಕಾರಣ ವರ್ತಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬೆಲೆಯಲ್ಲೂ ಗಣನೀಯ ಇಳಿಕೆ ಮಾಡಿದ್ದಾರೆ.

ಬೆಳ್ಳುಳ್ಳಿ ಬೆಲೆ ಕಳೆದ ವಾರ ಪ್ರತಿ ಕ್ವಿಂಟಲ್‌ಗೆ  6 ಸಾವಿರವರೆಗೆ ಇತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ (market) ಏಕಾಏಕಿ ದರ ಕುಸಿತವಾಗಿದೆ. ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರ ನಡುವಿನ ಒಪ್ಪಂದದಿಂದ ರೈತರನ್ನು ಬಲಿಪಶು ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ (Govt) ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕು. ಪ್ರತಿ ಕ್ವಿಂಟಲ್‌ ಬೆಳ್ಳುಳ್ಳಿಗೆ ಕನಿಷ್ಠ ರು.  10 ಸಾವಿರ ದೊರೆಯುವಂತೆ ಮಾಡಬೇಕು.

ಹನುಮಂತಪ್ಪ ಕಬ್ಬೇರ, ಬೆಳ್ಳುಳ್ಳಿ ಮಾರಾಟಕ್ಕೆ ಬಂದಿದ್ದ ರೈತ

ಸಾಮಾನ್ಯ ದಿನದಲ್ಲಿ ಮಾರುಕಟ್ಟೆಗೆ 200 ಕ್ವಿಂಟಲ್‌ನಷ್ಟು ಬೆಳ್ಳುಳ್ಳಿ ಬರುತ್ತದೆ. ಆದರೆ ಇಂದು 600 ಕ್ವಿಂಟಲ್‌ ನಷ್ಟು ಬೆಳ್ಳುಳ್ಳಿ ಬಂದಿದ್ದರಿಂದ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಬಗ್ಗೆ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ತಿಳಿ ಹೇಳಿ,  3500 ರು.  ಗೆ ಖರೀದಿ ಮಾಡಿಸಲಾಗಿದೆ. ಬೀಜದ ಬೆಳ್ಳುಳ್ಳಿ . 4500 ಮಾರಾಟವಾಗಿದೆ.

ಪರಮೇಶ ನಾಯ್ಕ್ ಸಹಾಯಕ ಕಾರ್ಯದರ್ಶಿ ಎಪಿಎಂಸಿ, ರಾಣಿಬೆನ್ನೂರು

ಟೊಮೆಟೊ ಬೆಲೆ ಕುಸಿತ  : 

ಮಹಾರಾಷ್ಟ್ರದಿಂದ (Maharashtra) ಟೊಮೆಟೋ (tomato) ನಗರಕ್ಕೆ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಶತಕ ದಾಟಿದ್ದ ಟೊಮೆಟೋ ಬೆಲೆ (Price) ಇದೀಗ ದಿಢೀರ್‌ ಇಳಿಕೆ ಕಂಡಿದೆ. ಕಳೆದ ವಾರ ಕೇಜಿಗೆ .110ರಿಂದ .125ರವರೆಗೂ ಇದ್ದ ಬೆಲೆ ಭಾನುವಾರ 40 ರು. ಕ್ಕೆ ತಲುಪಿದೆ.  ಇತ್ತೀಚೆಗೆ ನಿರಂತರ ಮಳೆಯಿಂದಾಗಿ (Heavy Rain) ಬೆಳೆ ನಷ್ಟಉಂಟಾಗುವುದರ ಜೊತೆಗೆ ರೋಗ ಬಾಧೆಯೂ ಕಾಡಿದ್ದರಿಂದ ಮಾರುಕಟ್ಟೆಗೆ (market) ಸರಬರಾಜಾಗುತ್ತಿದ್ದ ತರಕಾರಿ (vegetable) ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿ ಬೆಲೆಯಲ್ಲಿ ಬಹಳಷ್ಟು ಹೆಚ್ಚಾಗಿತ್ತು. ಆದರೆ ಮೂರ್ನಾಲ್ಕು ದಿನದಿಂದ ಮಳೆ ಬಾರದೇ ಇರುವುದರಿಂದ ಬೆಳೆಯು ಬಂದಿದೆ. ಜೊತೆಗೆ ಮಹಾರಾಷ್ಟ್ರದಿಂದ ಸಹ ಟೊಮೆಟೋ ಪೂರೈಕೆ ಆಗುತ್ತಿರುವುದರಿಂದ ಬೆಲೆ ಸ್ವಲ್ಪ ಇಳಿಕೆಯಾಗಿದೆ.

ಭಾನುವಾರ ಹಾಪ್‌ ಕಾಮ್ಸ್‌ನಲ್ಲಿ (Hopcoms) ಕೇಜಿ ನಾಟಿ ಟೊಮೆಟೋ 70 ರು. ಕ್ಕೆ ಮಾರಾಟವಾಗಿದೆ. ಆದರೆ ಮಾರುಕಟ್ಟೆಗಳಲ್ಲಿ 40ರಿಂದ 60 ರು.ವರೆಗೂ ಮಾರಾಟವಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ .80ರಿಂದ .90 ರು. ಇದ್ದದ್ದು, ಶನಿವಾರ ಮತ್ತಷ್ಟು ಕುಸಿತ ಕಂಡಿತ್ತು. ಇದೀಗ 40ರಿಂದ 60 ರು. ಕ್ಕೆ ಬಂದಿದೆ.

ಕಲಾಸಿ ಪಾಳ್ಯ ಮಾರುಕಟ್ಟೆಯಲ್ಲಿ ಚಿಲ್ಲರೆ ದರದಲ್ಲಿ ಪ್ರತಿ ಕೇಜಿ ಆಲೂಗಡ್ಡೆ .30, ಕ್ಯಾರೆಟ್‌ .50ರಿಂದ 55, ಬೀನ್ಸ್‌ 50, ಬೆಂಡೆಕಾಯಿ 45ರಿಂದ 50, ಹಿರೇಕಾಯಿ 40ರಿಂದ 45ಕ್ಕೆ ಮಾರಾಟವಾಗಿದ್ದು, ಸ್ವಲ್ಪ ಇಳಿಕೆಯಷ್ಟೇ ಕಂಡುಬಂದಿದೆ.

click me!