ISIS ಭೀತಿ: ಮುರ್ಡೇಶ್ವರಕ್ಕೆ ಪ್ರವಾಸಿಗರ ಸಂಖ್ಯೆ ಕುಸಿತ

By Kannadaprabha NewsFirst Published Nov 29, 2021, 11:00 AM IST
Highlights

*  ವಾರಾಂತ್ಯ ಪ್ರವಾಸಿಗರ ಸಂಖ್ಯೆ 3500ದಷ್ಟುಇಳಿಕೆ
*  ಪ್ರವಾಸಿ ತಾಣದ ಮೇಲೆ ‘ಐಸಿಸ್‌ ಫೋಟೋ ಬಾಂಬ್‌’ ಕರಿನೆರಳು
*  ಪೊಲೀಸ್‌ ತಪಾಸಣೆ ತೀವ್ರ
 

ವಸಂತಕುಮಾರ್‌ ಕತಗಾಲ

ಕಾರವಾರ(ನ.29):  ಕೋವಿಡ್‌ ಆತಂಕದಿಂದ ಕಂಗೆಟ್ಟಿದ್ದ ಪ್ರವಾಸೋದ್ಯಮ(Tourism) ಮತ್ತೆ ಕಳೆಗಟ್ಟಲು ಶುರುವಾಯಿತು ಎನ್ನುವಾಗಲೇ ‘ಐಸಿಸ್‌ ಫೋಟೋ ಬಾಂಬ್‌’ ಕರಿನೆರಳು ಮುರ್ಡೇಶ್ವರದ ಪ್ರವಾಸಿ ತಾಣಗಳ ಮೇಲೆ ಬಿದ್ದಿದೆ. ಮುರ್ಡೇಶ್ವರದ ಶಿವನ ಪ್ರತಿಮೆ ವಿರೂಪಗೊಳಿಸಿ, ಐಸಿಸ್‌ ಧ್ವಜ ಅಳವಡಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಓಡಾಡಿದ ಬಳಿಕ ಮುರ್ಡೇಶ್ವರಕ್ಕೆ(Murdeshwar) ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.

ಕೊರೋನಾ(Coronavirus) 2ನೇ ಅಲೆ ಮುಗಿದ ನಂತರ ವೀಕೆಂಡ್‌ಗಳಲ್ಲಿ ಮುರ್ಡೇಶ್ವರ ಪ್ರವಾಸಿಗರಿಂದ(Tourist0 ತುಂಬಿ ತುಳುಕುತ್ತಿತ್ತು. ಜಲಸಾಹಸ ಕ್ರೀಡೆಗಳಲ್ಲಿ ತೊಡಗುವವರು, ಬೀಚ್‌ಗಳಲ್ಲಿ ವಿಹರಿಸುವವರು, ಸ್ಕೂಬಾ ಡೈವಿಂಗ್‌ ಮಾಡುವವರು, ದೇವಾಲಯಗಳಲ್ಲಿ(Temples) ಪೂಜೆ ಸಲ್ಲಿಸುವವರು ಹೀಗೆ ಪ್ರವಾಸಿಗರು, ಭಕ್ತರು(Devotees) ನಾಡಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದರು. ಕೆಲವೊಮ್ಮೆ ಪಾರ್ಕಿಂಗ್‌ಗೂ ಸ್ಥಳಾವಕಾಶದ ಕೊರತೆ ಉಂಟಾಗುತ್ತಿತ್ತು. ಎಲ್ಲ ಹೋಟೆಲ್‌, ರೆಸಾರ್ಟ್‌, ಕಾಟೇಜುಗಳು ಭರ್ತಿಯಾಗುತ್ತಿದ್ದವು. ಅಷ್ಟರಮಟ್ಟಿಗೆ ಪ್ರವಾಸೋದ್ಯಮ ಚಿಗುರಿದ್ದರಿಂದ ಪ್ರವಾಸೋದ್ಯಮವನ್ನೇ ನಂಬಿದವರು ಖುಷಿಗೊಂಡಿದ್ದರು. ಆದರೆ, ಈಚೆಗೆ ಐಸಿಸ್‌ನ(ISIS) ಮುಖವಾಣಿ ‘ದಿ ವಾಯ್ಸ್‌ ಆಫ್‌ ಹಿಂದ್‌’(The Voice of Hind) ಪತ್ರಿಕೆಯಲ್ಲಿ ಮುರ್ಡೇಶ್ವರದ ಬೃಹತ್‌ ಶಿವನ ಪ್ರತಿಮೆಯನ್ನು(Statue of Lord Shiva) ವಿರೂಪಗೊಳಿಸಿ ಶಿವನ ತಲೆಯ ಭಾಗದಲ್ಲಿ ಐಸಿಸ್‌ ಧ್ವಜ ಅಳವಡಿಸಿದ ಚಿತ್ರ ಪ್ರಕಟ ಆಗುತ್ತಿದ್ದಂತೆ ಎಲ್ಲೆಡೆ ಭಯ, ಆತಂಕ ಶುರುವಾಗಿದೆ. ಇದರಿಂದಾಗಿ ಮುರ್ಡೇಶ್ವರಕ್ಕೆ ಬಿಗಿ ಪೊಲೀಸ್‌(Police) ಭದ್ರತೆ(Security)ಹೆಚ್ಚಿಸಲಾಗಿದೆ. 

ISIS Target Hindu Idol: ಮುರುಡೇಶ್ವರದ ಶಿವನ ಮೇಲೆ ಐಸಿಸ್‌ ಕಣ್ಣು? ಖಾಕಿ ಬಿಗಿ ಬಂದೋಬಸ್ತ್

ದೇವಾಲಯಕ್ಕೆ ಬರುವ ಪ್ರತಿಯೊಬ್ಬರ ಬ್ಯಾಗ್‌, ಲಗೇಜ್‌ಗಳನ್ನು ತಡಕಾಡಿ ಪೊಲೀಸರು ಒಳಬಿಡುತ್ತಿದ್ದಾರೆ. ಬಿಗಿ ತಪಾಸಣೆ ಹಾಗೂ ಆತಂಕದಿಂದಾಗಿ ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರು ತಮ್ಮ ಮುರ್ಡೇಶ್ವರ ಪ್ರವಾಸವನ್ನೇ ಮೊಟಕುಗೊಳಿಸುತ್ತಿದ್ದಾರೆ. ಹಿಂದೆ ಮುರ್ಡೇಶ್ವರಕ್ಕೆ ವಾರಾಂತ್ಯದಲ್ಲಿ 8-10 ಸಾವಿರ ಪ್ರವಾಸಿಗರು ಬರುತ್ತಿದ್ದರು. ಆದರೆ, ಇದೀಗ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.30-35ರಷ್ಟು ಇಳಿಮುಖವಾಗಿದೆ. ಆದರಲ್ಲೂ ಹೋಟೆಲ್‌ಗಳಲ್ಲಿ ವಾಸ್ತವ್ಯ ಮಾಡಿ, ಜಲಸಾಹಸ ಕ್ರೀಡೆ, ಸ್ಕೂಬಾ ಡೈವಿಂಗ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮತ್ತೂ ಕಡಿಮೆಯಾಗಿದೆ. ಇಲ್ಲಿಗೆ ಪ್ರವಾಸಕ್ಕೆಂದು ಬಂದವರಲ್ಲೂ ಶಿವನ ಪ್ರತಿಮೆ, ಬಿಗಿ ಭದ್ರತೆ, ಐಸಿಸ್‌ ಕುರಿತಾದ ಮಾತುಗಳೇ ಕೇಳಿಬರುತ್ತಿವೆ.

ಮುರ್ಡೇಶ್ವರಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದ್ದರೆ, ಕಾರವಾರ ಬೀಚ್‌(Karwar Beach), ಗೋಕರ್ಣ ಹಾಗೂ ಉತ್ತರ ಕನ್ನಡ(Uttara Kannada) ಜಿಲ್ಲೆಯ ಇತರೆ ಧಾರ್ಮಿಕ, ಪ್ರಾಕೃತಿಕ ಪ್ರವಾಸಿ ತಾಣಗಳಲ್ಲಿ ಮಾತ್ರ ಪ್ರವಾಸಿಗರ ಸಂಖ್ಯೆ ಮಾತ್ರ ಹೆಚ್ಚಾಗಿದೆ.

Delhi Policeರಿಂದ ಏನೂ ಮಾಡೋಕಾಗಲ್ಲ: ಗೌತಮ್‌ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ ಇ-ಮೇಲ್!‌

ಪ್ರವಾಸಿಗರೇ ಆತಂಕ ಬೇಡ

ಮುರ್ಡೇಶ್ವರದಲ್ಲಿ ಪ್ರವಾಸಿಗರು, ಭಕ್ತರು ವೀಕೆಂಡ್‌ನಲ್ಲಿ(Weekend) ತುಂಬಿ ತುಳುಕುತ್ತಿದ್ದರು. ಆದರೆ, ಶಿವನ ಪ್ರತಿಮೆ ವಿರೂಪದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ(Social Media) ಓಡಾಡಿದ ನಂತರ ಉಂಟಾದ ಆತಂಕದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕಡಿಮೆಯಾಗಿದೆ. ಮುರ್ಡೇಶ್ವರದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದು, ಪ್ರವಾಸಿಗರು ಆತಂಕಪಡುವ ಅಗತ್ಯವಿಲ್ಲ ಅಂತ ಮುರ್ಡೇಶ್ವರದ ನೇತ್ರಾಣಿ ಸ್ಕೂಬಾ ಡೈವಿಂಗ್‌ನ ಸಿಇಒ ಗಣೇಶ ಹರಿಕಂತ್ರ ತಿಳಿಸಿದ್ದಾರೆ.  

ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್‌ ಧ್ವಜ ಹೋಲುವ ಧ್ವಜವನ್ನು ಅಳವಡಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂಥದ್ದೊಂದು ಶಂಕೆ ಮೂಡುವಂತೆ ಮಾಡಿದೆ. ಐಸಿಸ್‌ ಮುಖವಾಣಿ ‘ದಿ ವಾಯ್ಸ್ ಆಫ್‌ ಹಿಂದ್‌’ನಲ್ಲಿ ಈ ಫೋಟೋ ಪ್ರಕಟವಾಗಿದೆ ಎನ್ನಲಾಗಿದ್ದು, 'ಸುಳ್ಳು ದೇವರನ್ನು ನಿವಾರಿಸುವ ಸಮಯ ಬಂದಿದೆ' ಎಂದು ಬರೆಯಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಮುರ್ಡೇಶ್ವರ ಶಿವನಮೂರ್ತಿ ಬಳಿ ಸದ್ಯ ಡಿಆರ್‌ ತುಕಡಿ, ಪೊಲೀಸ್‌ ಸಿಬ್ಬಂದಿ, ಎಎಸೈ, ಪಿಎಸೈಗಳನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಹೆಚ್ಚಿನ ನಿಗಾ ಇಡಲಾಗಿದೆ. ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಸಿ ಚಲನವಲನ ಗಮನಿಸಲಾಗುತ್ತಿದೆ. ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ಬಂದೋಬಸ್‌್ತಗೆ ಬಳಸಿಕೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ ಮತ್ತು ತಾಲೂಕು ಆಡಳಿತ ಮುರ್ಡೇಶ್ವರದಲ್ಲಿ ಸುರಕ್ಷತೆ ಮತ್ತು ಶಿವನಮೂರ್ತಿಯ ಭದ್ರತೆಗೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆ ಮಾಡಿದೆ.
 

click me!