
ವಿಜಯಪುರ: ದೇಶದ ಯಾವುದೇ ಭಾಗದ ಜಮೀನಲ್ಲಿಯೂ ಎ-1 ಕೃಷಿ ಪದ್ಧತಿ (ಸಮಗ್ರ) ಅಳವಡಿಸಿಕೊಂಡರೆ ಕಬ್ಬು ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ಸಾಂಗ್ಲಿ ಮೂಲದ ಕಬ್ಬು ಕೃಷಿ ಸಾಧಕ ಡಾ.ಸಂಜೀವ ಮಾನೆ ಹೇಳಿದರು.ಸಮೀಪದ ಖಾನಾಪೂರ (ಅಯ್ಯನಗುಡಿ) ಗ್ರಾಮದಲ್ಲಿ ಅಯ್ಯನಗುಡಿ ಉತ್ಸವದ ನಿಮಿತ್ತ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಪೃಥ್ವಿರಾಜ ನಾಡಗೌಡ ನೇತೃತ್ವದಲ್ಲಿ ನಡೆದ ಗಂಗಾಧರೇಶ್ವರ ಕೃಷಿ ವಿಜ್ಞಾನ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಭಾಗದ ರೈತರು ಕೇವಲ ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಪದ್ಧತಿಯಿಂದ ಕಬ್ಬಿನಲ್ಲಿ ಹೆಚ್ಚಿನ ಇಳುವರಿ ಸಾಧ್ಯವಿಲ್ಲ. ಸಾವಯವ ಗೊಬ್ಬರ ಹಾಗೂ ಜಮೀನಲ್ಲೇ ತಯಾರಿಸಿದ ಗೊಬ್ಬರ ಬಳಸಿ ಪ್ರತಿ ಎಕರೆಗೆ 160 ರಿಂದ 170 ಟನ್ವರೆಗೆ ಕಬ್ಬು ಬೆಳೆಯಬಹುದು ಎಂದು ತಿಳಿಸಿದರು.
ಎ-1 ಕೃಷಿ ಪದ್ಧತಿಯಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಸಾಧ್ಯ. ವಿಜ್ಞಾನಿಗಳು ನೀಡುವ ಸಲಹೆಗಳನ್ನು ಅನುಸರಿಸುವುದು ಅತ್ಯಂತ ಮುಖ್ಯ. ಕಳೆದ 25 ವರ್ಷಗಳಿಂದ ನಾನು ಪ್ರತಿ ಎಕರೆಗೆ 100 ಟನ್ ಕಬ್ಬು ಬೆಳೆಯುತ್ತಿದ್ದೇನೆ. ಸಾವಯವ ಕೃಷಿ ಮುಂದುವರಿಸಿಕೊಂಡು 2007ರಲ್ಲಿ 125 ಟನ್, 2010ರಲ್ಲಿ 150 ಟನ್ ಹಾಗೂ ಸದ್ಯ 200 ಟನ್ವರೆಗೆ ಇಳುವರಿ ಪಡೆಯುತ್ತಿದ್ದೇನೆ ಎಂದರು.
ಹವಾಮಾನ ಬದಲಾವಣೆ, ಮಣ್ಣಿನ ತೇವಾಂಶ, ರಸಗೊಬ್ಬರ- ಕೀಟನಾಶಕ ಬಳಕೆ ಕುರಿತು ಎ-1 ಕೃಷಿ ಸಂಪೂರ್ಣ ಮಾಹಿತಿ ನೀಡುತ್ತದೆ. ಕಬ್ಬು ಬೆಳೆಗೆ ಯಾವ ಗೊಬ್ಬರ ಬೇಕು, ಎಷ್ಟು ಸಾವಯವ ಗೊಬ್ಬರ ಬಳಸುಬೇಕು, ವಾತಾವರಣ, ಗಾಳಿಯ ವೇಗ, ಸೂರ್ಯನ ಬೆಳಕು, ನೀರಿನ ಅವಶ್ಯಕತೆ, ಕಬ್ಬು ನಾಟಿ ವಿಧಾನ ಹಾಗೂ ಅಂತರ ಎಷ್ಟು ಇರಬೇಕು ಎಂಬ ಎಲ್ಲ ಮಾಹಿತಿಗಾಗಿ ರೈತರು ನಮ್ಮನ್ನು ಸಂಪರ್ಕಿಸಬಹುದು ಎಂದರು.
ಇಂಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಿವಶಂಕರಮೂರ್ತಿ ಮಾತನಾಡಿ, ನಮ್ಮ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿರುವ ರೈತರಿಗೆ ಉತ್ತಮ ತಾಂತ್ರಿಕ ಮಾಹಿತಿ ನೀಡಲಾಗುತ್ತದೆ. ನಾವು ನೀಡುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಪ್ರತಿ ಎಕರೆಗೆ 200 ಟನ್ವರೆಗೆ ಕಬ್ಬು ಇಳುವರಿ ಸಾಧ್ಯವಾಗಿದ್ದು, ಇದು ರೈತರ ಬದುಕನ್ನೇ ಬದಲಾಯಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ: Bagalkote: ಪ್ರತಿ ಕ್ವಿಂಟಲ್ಗೆ 5875 ರೂ.ನಂತೆ ಕಡಲೆಕಾಳು ಖರೀದಿ ಆರಂಭ: ಷರತ್ತು ಅನ್ವಯ
ಪ್ರಗತಿಪರ ರೈತ ಪೃಥ್ವಿರಾಜ ನಾಡಗೌಡ ಮಾತನಾಡಿ, ನಮ್ಮ ಭಾಗದ ರೈತರು ಪ್ರತಿ ಎಕರೆಗೆ 60-70 ಟನ್ ಬಂದರೆ ಸಾಕು ಎಂದು ತೃಪ್ತಿಪಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಜಮೀನು ವಿಷ ಪೂರಕವಾಗುತ್ತಿದೆ. ನಾವು ಕುಟುಂಬ ಯೋಜನೆ ರೂಪಿಸುವಂತೆ ಕಬ್ಬು ಇಳುವರಿಗೂ ಸೂಕ್ತ ಯೋಜನೆ ಅಗತ್ಯವಿದೆ ಎಂದರು. ಬಾಲಾಜಿ ಸಕ್ಕರೆ ಕಾರ್ಖಾನೆಯ ಡಿಜಿಎಂ ಗಿರೀಶ ಪಾಟೀಲ, ನಿರ್ದೇಶಕ ರಾಹುಲ ಪಾಟೀಲ ಇದ್ದರು. ಯಮನಪ್ಪ ಜಗ್ಲರ್ ಹಾಗೂ ಎಲ್.ಎಂ.ಜೋಗಿ ನಿರೂಪಿಸಿದರು.
ಇದನ್ನೂ ಓದಿ: ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್