Chamarajanagar: ಮಡಹಳ್ಳಿ ದುರಂತ ಬಳಿಕವೂ ಷರತ್ತಿನಂತೆ ಗಣಿಗಾರಿಕೆ ನಡೆಯುತ್ತಿಲ್ಲ!

By Govindaraj SFirst Published Dec 29, 2022, 9:26 PM IST
Highlights

ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತಗೊಂಡು ಮೂವರು ಕಾರ್ಮಿಕರು ಬಲಿಯಾದ ಬಳಿಕ ಜಿಲ್ಲಾಡಳಿತ ಗಣಿಗಾರಿಕೆ ಕೆಲ ತಿಂಗಳ ಕಾಲ ನಿಷೇಧ ಹೇರಿತ್ತು. ಆದರೆ ಜಿಲ್ಲಾಡಳಿತ ನಿರ್ಬಂಧಕ್ಕೆ ಒಳಪಟ್ಟು ಮತ್ತೆ ಗಣಿಗಾರಿಕೆ ಜಿಲ್ಲೆಯಲ್ಲಿ ಆರಂಭಗೊಂಡಿತ್ತು. 
 

ಗುಂಡ್ಲುಪೇಟೆ (ಡಿ.29): ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತಗೊಂಡು ಮೂವರು ಕಾರ್ಮಿಕರು ಬಲಿಯಾದ ಬಳಿಕ ಜಿಲ್ಲಾಡಳಿತ ಗಣಿಗಾರಿಕೆ ಕೆಲ ತಿಂಗಳ ಕಾಲ ನಿಷೇಧ ಹೇರಿತ್ತು. ಆದರೆ ಜಿಲ್ಲಾಡಳಿತ ನಿರ್ಬಂಧಕ್ಕೆ ಒಳಪಟ್ಟು ಮತ್ತೆ ಗಣಿಗಾರಿಕೆ ಜಿಲ್ಲೆಯಲ್ಲಿ ಆರಂಭಗೊಂಡಿತ್ತು. ಚಾಮರಾಜನಗರ ತಾಲೂಕಿನ ಬಿಸಲವಾಡಿ ಬಳಿ ಸೋಮವಾರ ಬಳಿ ಕ್ವಾರಿಯೊಂದರಲ್ಲಿ ಕಲ್ಲು ಉರುಳಿ ಬಿದ್ದು ಮೂವರು ಕಾರ್ಮಿಕರು ಬಲಿಯಾಗಿದ್ದಾರೆ. ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತಗೊಂಡ ಬಳಿಕ ಗಣಿಗಾರಿಕೆ ಹಲವು ನಿರ್ಬಂಧ ಹೇರಿ ಎರಡು ತಿಂಗಳೊಳಗೆ ಜಿಲ್ಲಾಡಳಿತ ಹಾಕಿದ ಕಂಡಿಷನ್‌ಗೆ ಕ್ವಾರಿ ಮಾಲೀಕರು ಒಪ್ಪಿಗೆ ಪತ್ರ ನೀಡಿ ಗಣಿಗಾರಿಕೆ ಆರಂಭಿಸಿದರು. ಆದರೆ ಜಿಲ್ಲಾಡಳಿತಕ್ಕೆ ಕ್ವಾರಿ ಮಾಲೀಕರು ನೀಡಿದ ಒಪ್ಪಿಗೆ ಪತ್ರದಂತೆ ನಡೆದುಕೊಂಡಿಲ್ಲ.

3 ಕಾಸಿನ ಬೆಲೆ ಇಲ್ಲ: ಚಾಮರಾಜನಗರ ಜಿಲ್ಲಾಡಳಿತಕ್ಕೆ ಜಿಲ್ಲೆಯ ಬಹುತೇಕ ಕ್ವಾರಿ ಮಾಲೀಕರು ಮೂರು ಕಾಸಿನ ಬೆಲೆ ಕೊಟ್ಟಿಲ್ಲ, ಕ್ವಾರಿ ಮಾಲೀಕರ ಆಮಿಷಕ್ಕೆ ಜಿಲ್ಲಾಡಳಿತ ಬಲಿಯಾದ ಕಾರಣ ಮತ್ತೆ ಬಿಸಲವಾಡಿ ಕ್ವಾರಿಯ ದುರಂತ ನಡೆಯಲು ಪ್ರಮುಖ ಕಾರಣವಾಗಿದೆ. ಕ್ವಾರಿ ಮಾಲೀಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಪ್ಪಿಗೆ ಪತ್ರದಂತೆ ಒಂದೇ ಒಂದು ಷರತ್ತು ತಾಲೂಕಿನ ಕ್ವಾರಿ ಮಾಲೀಕರು ಈಡೇರಿಸಿಲ್ಲ, ಜಿಲ್ಲಾಡಳಿತ ನೀಡಿದ ಷರತ್ತು ಉಲ್ಲಂಘಿಸುತ್ತಿರುವ ಕ್ವಾರಿ ಮಾಲೀಕರ ಮೇಲೇಕೆ ಇಲ್ಲಿಯ ತನಕ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿಲ್ಲ ಎಂಬುದು ಅನುಮಾನಕ್ಕೆ ಎಡೆ ಮಾಡಿದೆ.

ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತನ್ನಿ: ಶಾಸಕ ನರೇಂದ್ರ

ಹಿಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಗಣಿಗಾರಿಕೆಯಲ್ಲಿ ಅಕ್ರಮ ನಡೆಸಿದವರ ಮೇಲೆ ಕ್ರಮಕ್ಕೆ ಮುಂದಾಗಿದ್ದರು. ಆದರೆ ಕೆಲವರ ಒತ್ತಡದಿಂದ ಕ್ರಮಕ್ಕೆ ಮುಂದಾಗದೆ ಕೈ ಚೆಲ್ಲಿದರು ಎಂದು ಹೇಳಲಾಗುತ್ತಿದೆ. ಹಾಲಿ ಜಿಲ್ಲಾಧಿಕಾರಿ ಡಿ.ಪಿ. ರಮೇಶ್‌ ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಗಣಿಗಾರಿಕೆಯ ಅಕ್ರಮಗಳ ಬಗ್ಗೆ ಆಳ, ಅಗಲ ತಿಳಿದಿರುವ ಕಾರಣ ಅಕ್ರಮ ಗಣಿಗಾರಿಕೆ ಜೊತೆಗೆ ಜಿಲ್ಲಾಡಳಿತದ ಷರತ್ತು ಉಲ್ಲಂಘಿಸುತ್ತಿರುವ ಕ್ವಾರಿ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುವರೋ ಕಾದು ನೋಡಬೇಕಿದೆ.

ಹೇಳೋರು ಇಲ್ಲ: ತಾಲೂಕಿನಲ್ಲಿ ಕೇಳೋರು ಹೇಳೋರು ಯಾರೂ ಇಲ್ಲ ಎಂದು ಕೆಲ ಕ್ವಾರಿ ಮಾಲೀಕರು ತಮಗಿಷ್ಟಬಂದಂತೆ ಕ್ವಾರಿ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡುತ್ತಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಗಣಿಗಾರಿಕೆ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಅಕ್ರಮ ಗಣಿಗಾರಿಗೆ ಸಚಿವ,ಶಾಸಕರೇ ಬ್ರೇಕ್‌ ಹಾಕಲಿ: ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಮೂರು ಜನ ಬಲಿಯಾದ ಬೆನ್ನಲ್ಲೇ ಚಾಮರಾಜನಗರ ತಾಲೂಕಿನ ಬಿಸಲವಾಡಿಯಲ್ಲಿ ಕ್ವಾರಿ ದುರಂತದಲ್ಲಿ ಮೂರು ಬಲಿಯಾಗಿದ್ದಾರೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಕ್ರಮ ಗಣಿಗಾರಿಕೆ ಬ್ರೇಕ್‌ ಹಾಕುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ ಪ್ರಮುಖ ಆರೋಪಿಯನ್ನು ಗುಂಡ್ಲುಪೇಟೆ ಪೊಲೀಸರು 9 ತಿಂಗಳಾದರೂ ಬಂಧಿಸಲು ಆಗಿಲ್ಲ ಎಂದರೆ ಆರೋಪಿಗೆ ರಾಜಕಾರಣಿಗಳ ಬೆಂಬಲ ಇರಬೇಕು ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.

Chamarajanagar: ಜಿಲ್ಲೆಗೆ ವಿಶೇಷ ಪ್ಯಾಕೇಜ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಶಾಸಕ ಪುಟ್ಟರಂಗಶೆಟ್ಟಿ

ತಾಲೂಕಿನಲ್ಲಿ ಲೀಸ್‌ ನೆಪದಲ್ಲಿ ಹಲವು ರಾಜಕಾರಣಿಗಳ ಹಿಂಬಾಲಕರು ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಪರ್ಮಿಟ್‌ ಇಲ್ಲದೇ ರಾಜರೋಷವಾಗಿ ಹೆದ್ದಾರಿಗಳಲ್ಲಿ ಕ್ರಷರ್‌ಗಳಿಗೆ ಕಲ್ಲು ಸಾಗಾಣಿಕೆ ಆಗುತ್ತಿದ್ದರೂ ಜಿಲ್ಲಾಡಳಿತ ಜಾಣ ಮೌನ ವಹಿಸಿದೆ. ತಾಲೂಕಿನಲ್ಲಿ ಅಭಿವೃದ್ಧಿ ನೆಪದಲ್ಲಿ ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿದೆ. ಕ್ವಾರಿಗಾಗಿ ನೂರಾರು ಎಕರೆ ಭೂಮಿ ತಾಲೂಕಿನ ಬೇಗೂರು, ಗುಂಡ್ಲುಪೇಟೆ ಸುತ್ತಮುತ್ತ ಖರೀದಿಯಾಗಿವೆ. ಅಲ್ಲದೆ ಕ್ವಾರಿ ಲೀಸ್‌ಗೆ ಹಲವು ನಿಯಮಗಳನ್ನು ಉಲ್ಲಂಘಿಸಿ ಅನುಮತಿ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತುಸು ಬಿಡುವು ಮಾಡಿಕೊಂಡು ಅಕ್ರಮ ಗಣಿಗಾರಿಕೆ ತಡೆಯುವ ಜೊತೆಗೆ ಹೆಚ್ಚು ಲೀಸ್‌ ನೀಡುವ ಬಗ್ಗೆಯೂ ಜಿಲ್ಲಾಡಳಿತ ಚಿಂತಿಸಲಿ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಎಂ.ಸುರೇಶ್‌ ಸಲಹೆ ನೀಡಿದ್ದಾರೆ.

click me!