ಅಡುಗೆ ಸಹಾಯಕರಿಗೆ ಮೂರು ತಿಂಗಳಿಂದ ವೇತನ ಇಲ್ಲ; ಕೇಳಿದ್ದಕ್ಕೆ ಕೆಲಸದಿಂದ ಕಿತ್ತಾಕುವ ಬೆದರಿಕೆ!

By Ravi JanekalFirst Published Sep 24, 2022, 1:29 PM IST
Highlights
  •  ಸಮಾಜ ಕಲ್ಯಾಣ ಇಲಾಖೆಯ ಹೊರ ಗುತ್ತಿಗೆ ನೌಕರರ ಬೃಹತ್ ಪ್ರತಿಭಟನೆ 
  •  ವೇತನ ಕೇಳಿದ್ರೆ ಕೆಲಸದಿಂದ ಕಿತ್ತಾಕೋ ಬೆದರಿಕೆ ....
  •  ಅಡುಗೆ ಸಹಾಯಕರ ಮೂರು ತಿಂಗಳ ಸಂಬಳ ನೀಡದ ಕುರಿತು ಆಕ್ರೋಶ 

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಸೆ.24) : ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 150 ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಹಾಯಕರಿಗೆ ಮೂರು ತಿಂಗಳ ಸಂಬಳ ನೀಡದಿರುವುದರ ಕುರಿತು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೀವನ ನಡೆಸುವುದು ಕಷ್ಟಕರವಾಗಿದೆ. ಈ ಕುರಿತು ವಿಚಾರಿಸಿದರೆ ತಾಲೂಕು ಸಮಾಜ ಕಲ್ಯಾಣ ಇಲಾಖೆ(Department of Social Welfare)ಯ ಅಧಿಕಾರಿ ಶ್ರೀಮತಿ ಎಂ.ಬಿ. ಸಣ್ಣೇರಿ(M.B.Sanneri) ಹಾಗೂ ಹಲವು ಹಾಸ್ಟೆಲ್ ವಾರ್ಡನ್(Hostel warden) ಗಳು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.

ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ ಟೀಚರ್: ಪ್ರಶ್ನೆ ಮಾಡಿದ್ದಕ್ಕೆ ಅಡುಗೆ ಸಹಾಯಕಿಗೆ ಕಿರುಕುಳ!

ಈ ಹಿಂದೆ ಕೂಡ ಹಲವು ಬಾರಿ ಪ್ರತಿಭಟನೆ(Protest) ನಡೆಸಿದಾಗ ಕೇವಲ ನಾಮಕಾವಾಸ್ತೆ ಎಂಬಂತೆ ಒಂದು ತಿಂಗಳ ಸಂಬಳ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ ಎಂದು ದೂರಿದರು. ಕಳೆದ ಹಲವು ವರ್ಷದಿಂದ ಪ್ರತಿ ತಿಂಗಳು ಸಂಬಳ ನೀಡದೆ  ಅನ್ಯಾಯ ಎಸಗುತ್ತಿದ್ದರೂ ಅಡುಗೆ ಸಹಾಯಕರ ಹೊರಗುತ್ತಿಗೆ ಪಡೆದಿರುವ ಭಾರತ್ ಎಕ್ಸಸರ್ವಿಸ್ ಮ್ಯಾನ್  ಏಜೆನ್ಸಿ(Bharat Exservice man agency ವಿರುದ್ಧ ಸೂಕ್ತವಾದ ಕ್ರಮ ಕೈಗೊಂಡು ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾದ ಅಧಿಕಾರಿ ವರ್ಗದವರು ಇದಕ್ಕೆ ತಮಗೆ ಸಂಬಂಧವಿಲ್ಲದಂತೆ ವರ್ತಿಸುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಶ್ರೀನಿವಾಸ ಕೋಟಾ ಪೂಜಾರಿ(Kota Shrinivas poojari) ಹಾಗೂ ಆಯುಕ್ತರಾದ ಪಿ.ಮಣಿವಣ್ಣನ್(P.Manivannan) ಅವರಿಗೆ  ಕೂಡ ದೂರು ನೀಡಲಾಗಿದೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಇಚ್ಛಾಶಕ್ತಿ ತೋರದ ಪರಿಣಾಮ ಇಂದು ಮತ್ತೆ ನಾವು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಒಂದು ಸಾವಿರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶೀಘ್ರ ಹಾಸ್ಟೆಲ್‌: ಕೋಟ ಶ್ರೀನಿವಾಸ ಪೂಜಾರಿ

ಈಗಲಾದರೂ ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸಿ ನಮಗೆ ಮೂರು ತಿಂಗಳ ಸಂಬಳ ಬಿಡುಗಡೆ ಗೊಳಿಸಿ, ಭಾರತ್ ಎಕ್ಸ್ ಸರ್ವಿಸ ಮ್ಯಾನ್  ಎಜೆನ್ಸಿ ಹಾಗೂ ತಪ್ಪಿತಸ್ಥ ಅಧಿಕಾರಿ ವರ್ಗದವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ(Basavaraj koravar) ಆಗ್ರಹಿಸಿದರು ‌ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದುಎಚ್ಚರಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ,  ಸೇರಿದಂತೆ ನೂರಾರು ಅಡುಗೆ ಸಹಾಯಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

click me!