Ballari News :ಹರಾಳು ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಪರದಾಟ

By Kannadaprabha NewsFirst Published Sep 24, 2022, 1:12 PM IST
Highlights

ಕೊಟ್ಟೂರು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗಗಳಿಲ್ಲದೇ ಹಲವು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿ ಸಲ್ಲಿಸಿದ್ದರೂ ಕ್ಯಾರೆ ಎನ್ನದ ಕಾರಣ ಚಪ್ಪರದಹಳ್ಳಿ ಗ್ರಾಮಸ್ಥರು ಹಣವನ್ನು ಸಂಗ್ರಹಿಸಿ ಖಾಸಗಿ ವ್ಯಕ್ತಿಯೊಬ್ಬರಿಂದ ಜಮೀನು ಪಡೆದು ಗ್ರಾಮಕ್ಕೆ ಕಾಯಂ ಸ್ಮಶಾಸನದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಜಿ.ಸೋಮಶೇಖರ

 ಕೊಟ್ಟೂರು (ಸೆ.24) : ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗಗಳಿಲ್ಲದೇ ಹಲವು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿ ಸಲ್ಲಿಸಿದ್ದರೂ ಕ್ಯಾರೆ ಎನ್ನದ ಕಾರಣ ಚಪ್ಪರದಹಳ್ಳಿ ಗ್ರಾಮಸ್ಥರು ಹಣವನ್ನು ಸಂಗ್ರಹಿಸಿ ಖಾಸಗಿ ವ್ಯಕ್ತಿಯೊಬ್ಬರಿಂದ ಜಮೀನು ಪಡೆದು ಗ್ರಾಮಕ್ಕೆ ಕಾಯಂ ಸ್ಮಶಾಸನದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚಪ್ಪರದಹಳ್ಳಿ ಗ್ರಾಮಸ್ಥರು ಸ್ಮಶಾನ ಮಾಡಿಕೊಂಡ ನಂತರ ಸರ್ಕಾರದಿಂದ ಮಂಜೂರಾದ ಹಣವನ್ನು ಬಹು ತಿಂಗಳ ನಂತರ ಗ್ರಾಮಸ್ಥರಿಗೆ ಪಾವತಿಸಿದ ಉದಾಹರಣೆ ಸಹ ಇದ್ದು, ಇದೇ ರೀತಿ ಉಳಿದ ಗ್ರಾಮದವರು ಸಹ ತಾವೇ ಮುಂದೆ ನಿಂತು ಸ್ಮಶಾನಕ್ಕೆಂದು ಜಮೀನು ಕೊಂಡುಕೊಳ್ಳುವ ಕಾಯಕಕ್ಕೆ ಮುಂದಾಗಿದ್ದಾರೆ.

ಸ್ಮಶಾನ ಜಾಗ ಇಲ್ಲದ್ದಕ್ಕೆ ಗ್ರಾಮ ಪಂಚಾಯತಿ ಎದುರೇ ಶವ ಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!

ತಾಲೂಕಿನ ಹರಾಳು ಗ್ರಾಮಕ್ಕೆ ಸ್ಮಶಾನ ಭೂಮಿ ಒದಗಿಸಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಅವರ ಅಂತ್ಯ ಸಂಸ್ಕಾರ ಮಾಡಲು ತೊಂದರೆ ಅನುಭವಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಹರಾಳು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟವೇಳೆ ತುಂಬಿ ಹರಿದ ಹಳ್ಳವನ್ನು ದಾಟಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಹರಾಳು ಗ್ರಾಮ ತಾಲೂಕು ಪಂಚಾಯಿತಿ ಕ್ಷೇತ್ರದ ಕೇಂದ್ರವಾಗಿದ್ದು, ಸುಮಾರು 600ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮದವರು ಸಹ ತಾಲೂಕಾಡಳಿತಕ್ಕೆ ಸ್ಮಶಾನ ಭೂಮಿಗೆ ಒತ್ತಾಯಿಸಿ ಸಾಕಷ್ಟುಭಾರಿ ಮನವಿ ಪತ್ರ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮಸ್ಥರು ವ್ಯಕ್ತಿಯೊಬ್ಬನ ಶವ ಹೊತ್ತು ಹಳ್ಳ ದಾಟಿ ಅಂತ್ಯಸಂಸ್ಕಾರ ಮಾಡಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚರಗೊಂಡ ತಾಲೂಕಾಡಳಿತ ಗ್ರಾಮ ಲೆಕ್ಕಾಧಿಕಾರಿ ಹರಾಳಿಗೆ ಭೇಟಿ ನೀಡಿ ಸ್ಮಶಾನಕ್ಕೆ ಬೇಕಾದ ಜಾಗ ಹುಡುಕುವ ಪ್ರಯತ್ನ ಕೈಗೊಂಡಿದ್ದಾರೆ.

Tamil Nadu: ವ್ಹೀಲ್‌ಚೇರ್‌ನಲ್ಲಿ ಅಮ್ಮನ ಮೃತದೇಹ ತೆಗೆದುಕೊಂಡು ಹೋದ 60 ವರ್ಷದ ವ್ಯಕ್ತಿ

ಹರಾಳು ಗ್ರಾಮದಲ್ಲಿ ಭೂಮಿ ಇದ್ದವರು ತಮ್ಮ ಜಮೀನಿನಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರು ಬಡ ಮತ್ತು ಮಧ್ಯಮ ವರ್ಗದವರು ಹಳ್ಳವನ್ನು ದಾಟಿ ಶವ ಸಂಸ್ಕಾರ ಮಾಡುತ್ತಾರೆ.ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನಕ್ಕೆ ಭೂಮಿಯನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿ ಹರಾಳು ಗ್ರಾಮಸ್ಥರ ಸಮಸ್ಯೆ ನಿವಾರಿಸಬೇಕಿದೆ.

ಎಸ್‌.ಗುರುಮೂರ್ತಿ ತಾಪಂ ಮಾಜಿ ಅಧ್ಯಕ್ಷ ಹರಾಳು

ಹರಾಳು ಗ್ರಾಮಸ್ಥರ ಬೇಡಿಕೆಯಂತೆ ಸ್ಮಶಾನಕ್ಕೆ ಸೂಕ್ತ ಜಾಗ ಹುಡುಕುವ ಕಾರ್ಯವನ್ನು ಗ್ರಾಮಲೆಕ್ಕಾಧಿಕಾರಿ ಕೈಗೊಂಡಿದ್ದು, ಸ್ಮಶಾನದ ಭೂಮಿ ಸಿಕ್ಕ ಕೂಡಲೇ ಸರ್ವೆ ಮಾಡಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಮಶಾನ ಅಭಿವೃದ್ಧಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು.

ಎಂ.ಕುಮಾರಸ್ವಾಮಿ, ತಹಸೀಲ್ದಾರ್‌ ಕೊಟ್ಟೂರು

click me!