Ballari floods: ಪ್ರವಾಹದ ಸಂಕಷ್ಟಕ್ಕೆ ಬಡವರ ಬದುಕು ಬೀದಿಪಾಲು

By Kannadaprabha NewsFirst Published Sep 24, 2022, 12:29 PM IST
Highlights
  • ವಾಹದ ಸಂಕಷ್ಟಕ್ಕೆ ಬಡವರ ಬದುಕು ಬೀದಿಪಾಲು
  • ಅತಿವೃಷ್ಟಿಯ ಪ್ರವಾಹದಿಂದ ಕೃಷಿ ವಲಯಕ್ಕಾದ ನಷ್ಟ.3.63 ಕೋಟಿ
  • ನಾಲ್ವರು ಸಾವು- 15 ಮನೆಗಳು, 35 ಗುಡಿಸಲುಗಳು ನೆಲಸಮ
  • ಜಿಲ್ಲಾಡಳಿತ ಸಮೀಕ್ಷೆ ಅವೈಜ್ಞಾನಿಕ ಎಂದ ರೈತ ಸಂಘ

ಬಳ್ಳಾರಿ (ಸೆ.24) : ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯ ಪ್ರವಾಹದಿಂದಾಗಿ ಬೆಳೆದು ನಿಂತಿದ್ದ ಕೋಟ್ಯಂತರ ಮೌಲ್ಯದ ಬೆಳೆ ನಷ್ಟವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಜನ-ಜಾನುವಾರುಗಳ ಜೀವ ಹಾನಿಯಾಗಿದ್ದು ಅನೇಕರು ಸೂರು ಕಳೆದುಕೊಂಡು ನಿರಾಶ್ರೀತರಾಗಿದ್ದಾರೆ.

BALLARI; ವಿಮ್ಸ್ ನಿರ್ದೇಶಕರ ವಿರುದ್ಧ ಷಡ್ಯಂತ್ರದ ಆರೋಪ, ಕಾಂಗ್ರೆಸ್ ಪ್ರತಿಭಟನೆ

ಜಿಲ್ಲಾಡಳಿತದ ಅಧಿಕೃತ ಮಾಹಿತಿ ಪ್ರಕಾರ ಜಿಲ್ಲೆಯ ಐದು ತಾಲೂಕುಗಳ ಪೈಕಿ 309.36 ಹೆಕ್ಟೇರ್‌ ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಹಾನಿಯಾಗಿದ್ದು, ಇದರ ಪ್ರಮಾಣ .3.63 ಕೋಟಿ ಎಂದು ಅಂದಾಜಿಸಲಾಗಿದೆ.ಬತ್ತ, ಮೆಕ್ಕೆಜೋಳ, ಜೋಳ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ತೋಟಗಾರಿಕೆ ಬೆಳೆಗಳ ಪೈಕಿ 30 ಹೆಕ್ಟೇರ್‌ನಷ್ಟುಬೆಳೆಗಳು ಮಳೆ ನೀರಿಗೆ ಹಾನಿಗೊಂಡಿವೆ. ಅತಿವೃಷ್ಟಿಯ ಪ್ರವಾಹಕ್ಕೆ ಸಿಲುಕಿ ಕಂಪ್ಲಿ ತಾಲೂಕಿನಲ್ಲಿ 124 ಹೆಕ್ಟೇರ್‌, ಸಿರುಗುಪ್ಪ 70.97, ಬಳ್ಳಾರಿ 56.59 ಹಾಗೂ ಸಂಡೂರು ತಾಲೂಕಿನಲ್ಲಿ 26.88 ಹೆಕ್ಟೇರ್‌ನಷ್ಟುಹಾನಿಯಾಗಿದೆ. ಸಂಡೂರು ತಾಲೂಕಿನಲ್ಲಿ ತೋಟಗಾರಿಕೆ ಬೆಳೆಯು 22.96 ಹೆಕ್ಟೇರ್‌ನಷ್ಟುಹಾನಿಯಾಗಿದೆ. ಆದರೆ, ಜಿಲ್ಲಾಡಳಿತ ನಷ್ಟದ ಲೆಕ್ಕಾಚಾರ ಅತ್ಯಂತ ಅವೈಜ್ಞಾನಿಕ ಎಂದು ಆಪಾದಿಸಿರುವ ರೈತ ಸಂಘಟನೆಗಳು, ರೈತರ ಬೆಳೆಗಳ ನಷ್ಟದ ಪ್ರಮಾಣದಷ್ಟೂಪರಿಹಾರ ನೀಡಬೇಕು ಎಂದು ಆಗ್ರಹಿಸಿವೆ.

ಸೂರು ಕಳೆದುಕೊಂಡ 50 ಕುಟುಂಬಗಳು:

ಮಳೆ ನೀರಿನ ಪ್ರವಾಹದಿಂದ ಜಿಲ್ಲೆಯ 15 ಮನೆಗಳು ಹಾಗೂ 35 ಗುಡಿಸಲುಗಳು ನೆಲಸಮಗೊಂಡಿದ್ದು, ನೂರಾರು ಜನರು ಮನೆಯಿಲ್ಲದೆ ನಿರಾಶ್ರಿತಗೊಂಡಿದ್ದಾರೆ. 238 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಆತಂಕದಲ್ಲಿಯೇ ದಿನ ದೂಡುವಂತಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಇಬ್ಬರು ಹಾಗೂ ಕಂಪ್ಲಿ ಮತ್ತು ಸಂಡೂರು ತಾಲೂಕಿನಲ್ಲಿ ಕ್ರಮವಾಗಿ ಒಬ್ಬರು ಸಾವಿಗೀಡಾಗಿದ್ದಾರೆ. .2.90 ಕೋಟಿ ಮೌಲ್ಯದ 12 ಸೇತುವೆಗಳು ಹಾನಿಯಾಗಿದೆ. 877 ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು 67 ಟ್ರಾನ್ಸ್‌ಫಾಮ್‌ರ್‍ಗಳಿಗೆ ಹಾನಿಯಾಗಿದೆ. ಇದರ ನಷ್ಟದ ಪ್ರಮಾಣ .1.76 ಕೋಟಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ ನೆರೆ ಪ್ರವಾಹಕ್ಕೆ ಎತ್ತು, ಎಮ್ಮೆ ಹಾಗೂ ಮೂರು ಕುರಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ನಷ್ಟಪರಿಹಾರವಾಗಿ ಪ್ರತಿ ಹೆಕ್ಟೇರ್‌ಗೆ .13,500 ಸಂತ್ರಸ್ತರಿಗೆ ವಿತರಿಸಲಾಗಿದೆ. ಈಗಾಗಲೇ ಭಾಗಶಃ ರೈತರಿಗೆ ನೆರೆ ಪರಿಹಾರ ಹಣ ಪಾವತಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದ್ದು, ಹಾನಿಗೊಂಡ ಮನೆಗಳಿಗೆ ಈಗಾಗಲೇ ಪರಿಹಾರ ನೀಡವ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನೂರಾರು ಎಕರೆ ಬೆಳೆನಷ್ಟದ ಲೆಕ್ಕ ಎಲ್ಲಿ ?

ಪ್ರವಾಹದಿಂದ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ ನಷ್ಟಕ್ಕೀಡಾಗಿದೆ. ಆದರೆ, ಜಿಲ್ಲಾಡಳಿತ ಬರೀ 309 ಹೆಕ್ಟೇರ್‌ ಎಂದು ತೋರಿಸುತ್ತಿರುವುದು ಹಾಸ್ಯಾಸ್ಯದ. ಎಚ್‌ಎಲ್‌ಸಿ ಕಾಲುವೆ ನೀರನ್ನೇ ಆಶ್ರಯಿಸಿ 2 ಲಕ್ಷ ಎಕರೆ ಭೂಮಿ ಇದೆ. 50 ಎಕರೆ ಬತ್ತ ಬೆಳೆದರೂ ಇನ್ನು 1.5 ಲಕ್ಷ ಎಕರೆ ಒಣ ಬೇಸಾಯವಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮೆಣಸಿನಕಾಯಿಯನ್ನು ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಅಪಾರ ಪ್ರಮಾಣದ ಮೆಣಸಿನಕಾಯಿ ಬೆಳೆ ಹಾಳಾಗಿದೆ. ಪ್ರವಾಹದಿಂದ ಬೆಳೆಹಾನಿಯಾದ ಬಳಿಕ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಮರು ಬಿತ್ತನೆ ಮಾಡಲಾಗಿದೆ. ಇದ್ಯಾವುದನ್ನು ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಸರ್ಕಾರ ಕಡಿಮೆ ನಷ್ಟದ ಪ್ರಮಾಣ ತೋರಿಸಲು ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂಬುದು ರೈತ ಸಂಘಟನೆಗಳ ಆರೋಪ.

Ballari News: 4 ವರ್ಷ ಕಳೆದರೂ ಆರಂಭವಾಗದ ತಾಲೂಕು ಮಟ್ಟದ ಕಚೇರಿಗಳು

ನೂರಾರು ಎಕರೆ ಕೃಷಿ ಭೂಮಿ ಕಂಪ್ಲಿ ತಾಲೂಕಿನಲ್ಲಿಯೇ ಹಾಳಾಗಿದೆ. ಕೋಳೂರು, ಗೆಣಿಕೆಹಾಳ್‌ ಹಳ್ಳಗಳು ಭರ್ತಿಯಾಗಿ ಹಳ್ಳದಂಡೆಯ ಬಹುತೇಕ ಕೃಷಿ ಉತ್ಪನ್ನಗಳು ನೀರು ಪಾಲಾಗಿವೆ. ವೇದಾವತಿ ನದಿ ಹರಿದು ಹಗರಿದಂಡೆಯ ಕೃಷಿ ಹಾಗೂ ತೋಟಗಾರಿಕೆಯ ಬೆಳೆಗಳು ನಷ್ಟಕ್ಕೀಡಾಗಿವೆ. ಇಷ್ಟಾಗಿಯೂ ಅಧಿಕಾರಿಗಳು ನಷ್ಟದ ಪ್ರಮಾಣವನ್ನು 309 ಹೆಕ್ಟೇರ್‌ ಎಂದು ತೋರಿಸಿರುವುದು ಎಷ್ಟುಸರಿ ? ಇದು ಯಾರನ್ನು ತೃಪ್ತಿ ಪಡಿಸಲು ಮಾಡಿರುವ ಸಮೀಕ್ಷೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ನಷ್ಟಕ್ಕೀಡಾದ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ನಡೆದಿದೆ. ಕೃಷಿ ಉತ್ಪನ್ನಗಳ ನಷ್ಟಕ್ಕೆ ಪರಿಹಾರ ನೀಡುವ ಕಾರ್ಯ ಮುಂದುವರಿದಿದೆ. ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲಾಗುತ್ತಿದೆ.

-ಪವನಕುಮಾರ ಮಾಲಪಾಟಿ, ಜಿಲ್ಲಾಧಿಕಾರಿ, ಬಳ್ಳಾರಿ.

ಜಿಲ್ಲಾಡಳಿತ ಲೆಕ್ಕ ಹಾಕಿರುವ ನೆರೆ ಪ್ರವಾಹದ ನಷ್ಟದ ಅಂದಾಜು ಅತ್ಯಂತ ಅವೈಜ್ಞಾನಿಕ. ಸಾವಿರಾರ ಎಕರೆ ಪ್ರದೇಶದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಆದರೆ,ಅಧಿಕಾರಿಗಳು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ.

ಪುರುಷೋತ್ತಮಗೌಡ, ಅಧ್ಯಕ್ಷ, ತುಂಗಭದ್ರಾ ರೈತ ಸಂಘ, ಬಳ್ಳಾರಿ.

click me!