ದೇಶದ ಎಲ್ಲ ಭಾಗಗಳಿಗೂ RSS ಕಾರ್ಯಚಟುವಟಿಕೆ ವಿಸ್ತಾರ: ದತ್ತಾತ್ರೇಯ ಹೊಸಬಾಳೆ

By Kannadaprabha NewsFirst Published Oct 31, 2021, 7:31 AM IST
Highlights

*  ಸ್ವ-ಇಚ್ಛೆಯ ಮತಾಂತರಕ್ಕೆ ಅಭ್ಯಂತರವಿಲ್ಲ, ಆಮಿಷ-ಒತ್ತಡದ ಮತಾಂತರ ಸರಿಯಲ್ಲ
*  ಮತಾಂತರ ನಿಷೇಧ ಕಾಯ್ದೆ ಶೀಘ್ರ ಜಾರಿಯಾಗಲಿ
*  ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು
 

ಧಾರವಾಡ(ಅ.31): ಮುಂದಿನ ಮೂರು ವರ್ಷಗಳ ವರೆಗೆ ಆರ್‌ಎಸ್‌ಎಸ್‌(RSS) ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯಾಗಿದೆ. ತನ್ನ ಚಟುವಟಿಕೆಗಳನ್ನು ದೇಶದ ಎಲ್ಲ ಭಾಗಗಳಿಗೆ ವಿಸ್ತರಿಸಿ ಇನ್ನೂ ಹೆಚ್ಚು ಜನರನ್ನು ಸಂಪರ್ಕಿಸಿ ಸಂಘದ ಕಾರ್ಯಚಟುವಟಿಕೆಯಲ್ಲಿ ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ(Dattatreya Hosabale) ಹೇಳಿದರು.

ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಆರ್‌ಎಸ್‌ಎಸ್‌ ಶಾಖೆಗಳು ಕೋವಿಡ್‌(Covid19) ಸಂದರ್ಭದಲ್ಲಿ ಸ್ಥಗಿತಗೊಂಡಿದ್ದರೂ ಸೇವಾ ಕಾರ್ಯ ಸ್ಥಗಿತಗೊಂಡಿರಲಿಲ್ಲ. ಇದೀಗ ಇನ್ನಷ್ಟುಹೆಚ್ಚು ಶಾಖೆಗಳನ್ನು ದೇಶದಲ್ಲಿ ತೆರೆಯಲಾಗುತ್ತಿದ್ದು ಜೊತೆಗೆ ಸಂಘ ಪರಿವಾರದ ಇತರ ಘಟಕಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಿವೆ. ಕೋವಿಡ್‌ ಸಂದರ್ಭದಲ್ಲಿ ಸಂಘದ ಇತರ ಚಟುವಟಿಕೆಗಳು ಕಡಿಮೆಯಾಗಿದ್ದರೂ ಲಕ್ಷಾಂತರ ಸ್ವಯಂ ಸೇವಕರು ಕೋವಿಡ್‌ ಬಗ್ಗೆ ಜನಜಾಗೃತಿ ಮೂಡಿಸಿ ಸೋಂಕಿತರ ಚಿಕಿತ್ಸೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ಸಂಭಾವ್ಯ 3ನೇ ಅಲೆ ಬಂದರೂ ನಿಯಂತ್ರಿಸಲು ತಂಡಗಳು ಸಿದ್ಧವಾಗಿವೆ ಎಂದರು.

ಬಾಂಗ್ಲಾದಲ್ಲಿ ಹಿಂಸಾಸಾರ ಪೂರ್ವ ಯೋಜಿತ: RSS

ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಸ್ವಯಂ ಸೇವಕರು ಪರಿಹಾರ ಕಾರ್ಯ ಕೈಗೊಂಡಾಗ ಸಂಘದ ಸದಸ್ಯರಲ್ಲದ ಅನೇಕರು ಸ್ವಯಂ ಸೇವಕರ ಜೊತೆಗೆ ಕೈಜೋಡಿಸಿ ನೆರವಾಗಿದ್ದಾರೆ. ಅಂತವರನ್ನು ಸಂಘದ ಸಕ್ರೀಯ ಸದಸ್ಯರನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದರು.

ಮುಂಬರುವ ವರ್ಷಗಳಲ್ಲಿ ಸಂಘವು ಜನರಲ್ಲಿ ಅದರಲ್ಲೂ ಯುವ ಜನಾಂಗದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿ ಇತಿಹಾಸದಲ್ಲಿ ದಾಖಲಾಗದೇ ಹೋಗಿರುವ ಅನೇಕ ವೀರರ ಬಗ್ಗೆ ಮಾಹಿತಿ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಅಂಡಮಾನ ಜೈಲಿನಲ್ಲಿ ಕಾಳಾಪಾನಿ ಶಿಕ್ಷೆಗೆ ಒಳಗಾದ ಅನೇಕರ ಬಗ್ಗೆ ಇತಿಹಾಸದಲ್ಲಿ ದಾಖಲೆ ಇಲ್ಲ. ಅಂತವರ ಬಗ್ಗೆ ಈಗಿನ ಪೀಳಿಗೆ ತಿಳಿದುಕೊಳ್ಳುವುದು ಅವಶ್ಯವಿದ್ದು ಆ ಮಾಹಿತಿ ನೀಡುವ ಕಾರ್ಯ ಸಂಘವು ಮಾಡಲಿದೆ ಎಂದ ಹೊಸಬಾಳೆ ಅವರು, ಭಾರತೀಯ ಸ್ವಾತಂತ್ರ್ಯ(Freedom) ಸಂಗ್ರಾಮ ಜಗತ್ತಿನಲ್ಲಿಯೇ ವಿಶಿಷ್ಟವಾದುದು. ಭಾಷೆ, ಪ್ರಾಂತ, ಜಾತಿ ಇತ್ಯಾದಿಗಳನ್ನು ಮೀರಿ ಇಡೀ ದೇಶದ ಜನ ಏಕೋಭಾವದಿಂದ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. ದೀರ್ಘಕಾಲ ನಡೆದ ಸ್ವಾತಂತ್ರ್ಯ ಹೋರಾಟ(Freedom Struggle) ಕೇವಲ ಬ್ರಿಟಿಷರ(British)ವಿರುದ್ಧ ಅಲ್ಲ, ಅದು ಭಾರತೀಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೋರಾಟವೂ ಆಗಿತ್ತು. ಈ ಎಲ್ಲ ಅಂಶಗಳನ್ನು ಈಗಿನ ಪೀಳಿಗೆಗೆ ತಿಳಿಸುವುದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಳ್ಳಲಿದೆ. ದೆಹಲಿಯ ಚಾಂದನಿಚೌಕ್‌ನಲ್ಲಿ ಧರ್ಮ(Religion) ರಕ್ಷಣೆಗಾಗಿ ಬಲಿದಾನ ನೀಡಿದ ಗುರುತೇಜಬಹುದ್ಧೂರ ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆಸುವುದಾಗಿ ಸಂಘ ನಿರ್ಧರಿಸಿದೆ ಎಂದು ತಿಳಿಸಿದರು.

ಒತ್ತಾಯದ ಮತಾಂತರ ಒಪ್ಪಲ್ಲ: ಆರೆಸ್ಸೆಸ್‌

ಮತೀಯ ಅಲ್ಪಸಂಖ್ಯಾತರು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಆರೆಸ್ಸೆಸ್‌ ಅಖಿಲ ಭಾರತೀಯ ಸಹ ಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದರು.

ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಮೂರು ದಿನಗಳ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಕಾರ್ಯಕಾರಿ ಮಂಡಳದ ಸಭೆಯ ಕಲಾಪಗಳ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವ-ಇಚ್ಛೆಯಿಂದ ಯಾರಾದರೂ ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಯಾವುದೇ ಅಭ್ಯಂತರವಿಲ್ಲ. ಆದರೆ, ಆಮಿಷಗಳನ್ನು ಒಡ್ಡಿ ಒತ್ತಾಯಪೂರ್ವಕವಾಗಿ ಮತಾಂತರಗೊಳಿಸುವುದನ್ನು ಸಂಘ ಸಹಿಸಲ್ಲ. ಇದು ಹಿಂದೂಗಳ ಸಂಖ್ಯೆ ಕಡಿಮೆ ಮಾಡಿ ಇತರ ಧರ್ಮೀಯರ ಸಂಖ್ಯಾಬಲ ಹೆಚ್ಚಿಸುವ ಅನೈತಿಕ ಕ್ರಮ ಎಂದು ವಿಶ್ಲೇಷಿಸಿದರು.

ಕರ್ನಾಟಕದಲ್ಲಿ ಮತಾಂತರ ನಿಷೇಧಿಸಿ:

ಮತಾಂತರ ನಿಷೇಧ ಕಾಯ್ದೆಗೆ ಅಲ್ಪಸಂಖ್ಯಾತರು ಏಕೆ ವಿರೋಧ ಮಾಡುತ್ತಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ. ಈಗಾಗಲೇ ಹತ್ತು ರಾಜ್ಯಗಳು ಈ ಕಾಯ್ದೆಯನ್ನು ಪಾಸು ಮಾಡಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಕಾಯ್ದೆ ಪಾಸಾಗಿದೆ. ಕರ್ನಾಟಕದಲ್ಲಿ ಈ ಕಾಯ್ದೆ ಸಹ ಬೇಗ ಪಾಸಾಗಲಿ. ಅಗತ್ಯಬಿದ್ದರೆ ತಿದ್ದುಪಡಿ ಮಾಡಬಹುದು. ಆದರೆ, ಕಾಯ್ದೆ ಬರುವ ಮೊದಲೇ ವಿರೋಧ ಮಾಡುವುÜು ಸರಿಯಲ್ಲ ಎಂಬುದು ಸಂಘದ ನಿಲುವು ಎಂದರು.

ಮೋದಿ-ಪೋಪ್‌ ಭೇಟಿಗೆ ಸ್ವಾಗತ:

ಪ್ರಧಾನಿ ಮೋದಿ ವ್ಯಾಟಿಕನ್‌ದಲ್ಲಿ ಕ್ರೈಸ್ತರ ಪರಮೋಚ್ಚ ಧಾರ್ಮಿಕ ನಾಯಕ ಪೋಪ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆಯೂ ಪ್ರತಿಕಿಯಿಸಿದ ಅವರು, ಒಂದು ದೇಶದ ಪ್ರಧಾನಿ ಬೇರೆ ರಾಷ್ಟ್ರ-ಧರ್ಮಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚೆ ನಡೆಸಿದರೆ ದೇಶದ ಗೌರವ ಮತ್ತಷ್ಟುಹೆಚ್ಚುತ್ತದೆ. ನಾವು ಆರೆಸ್ಸೆಸ್‌ನವರು ಕೂಡ ಬೇರೆ ಧರ್ಮದವರನ್ನು ಭೇಟಿಯಾಗುತ್ತೇವೆ, ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಏಕರೂಪದ ಜನಸಂಖ್ಯಾ ನೀತಿ:

ಜನಸಂಖ್ಯಾ ನಿಯಂತ್ರಣ ನೀತಿ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಜನಸಂಖ್ಯಾ ನೀತಿ ಇರುತ್ತದೆ. ದೇಶದ ಭೌಗೋಳಿಕ ವಿಸ್ತಾರ, ನೈಸರ್ಗಿಕ ಸಂಪನ್ಮೂಲಗಳನ್ನು ಆಧರಿಸಿ ಜನಸಂಖ್ಯೆ ಇರಬೇಕಾಗುತ್ತದೆ. ಜನಸಂಖ್ಯಾ ನೀತಿ ಇಡೀ ದೇಶಕ್ಕೆ ಎಲ್ಲ ಸಮುದಾಯಗಳಿಗೆ ಅನ್ವಯವಾಗುವಂತೆ ಏಕರೂಪವಾಗಿರಬೇಕು. ಇದು ಸಂಘದ ನಿಲುವು. ಈ ಹಿಂದೆಯೇ ಈ ಕುರಿತು ಗೊತ್ತುವಳಿ ಸ್ವೀಕರಿಸಿದ್ದು ಸಂಘದ ಸರಸಂಘ ಚಾಲಕ ಮೋಹನ್‌ ಭಾಗವತ್‌ ಅವರೂ ಇದನ್ನೇ ಪುನರುಚ್ಚರಿಸಿದ್ದಾರೆ. ಹಾಗೆಯೇ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಸರ್ಕಾರ ಈಗಾಗಲೇ ಹೇಳಿದೆ. ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಅದು ಸಂಹಿತೆಯನ್ನು ಜಾರಿಗೆ ತರಬಹುದು. ಈ ಬಗ್ಗೆ ಏನು ಮಾಡುತ್ತಾರೆಯೋ ಕಾದು ನೋಡೋಣ ಎಂದರು.

ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು: 

ಜನರ ಭಾವನೆಗಳಿಗೆ ಧಕ್ಕೆಯಾದರೆ ಅವರಿಂದ ಪ್ರತಿಕ್ರಿಯೆ ಬರುವುದು ಸಹಜ. ಆದರೆ, ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ನೈತಿಕ ಪೊಲೀಸ್‌ಗಿರಿ ಕುರಿತು ಮುಖ್ಯಮಂತ್ರಿಗಳು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಹೇಳಿದ್ದು ಯಾವ ಆಧಾರದಲ್ಲಿ ಎಂಬುದು ತಮಗೆ ಗೊತ್ತಿಲ್ಲ ಎಂದರು.

ದೀಪಾವಳಿಗೆ ಮಾತ್ರ ಪಟಾಕಿ ನಿಷೇಧ ಏಕೆ?

ಪರಿಸರ ಮಾಲಿನ್ಯದ ಹೆಸರಿನಲ್ಲಿ ಪಟಾಕಿ ಸಿಡಿಸುವುದು ಬೇಡ ಎನ್ನುತ್ತಾರೆ. ಆದರೆ, ಈ ಪ್ರಶ್ನೆ ಕೇವಲ ದೀಪಾವಳಿ ಸಂದರ್ಭದಲ್ಲಿ ಮಾತ್ರ ಏಕೆ ಬರುತ್ತದೆ? ಪರಿಸರ ರಕ್ಷಿಸಲು ಪಟಾಕಿ ನಿಷೇಧಿಸುವುದಾದರೆ ಈ ಬಗ್ಗೆ ಸುದೀರ್ಘ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ಕೊನೇ ಕ್ಷಣದಲ್ಲಿ ನಿಷೇಧಿಸುವುದು ಅನೇಕರ ಜೀವನೋಪಾಯಕ್ಕೆ ಪೆಟ್ಟು ನೀಡುತ್ತದೆ ಎಂದು ಆರ್‌ಎಸ್‌ಎಸ್‌ ಸಹ ಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. 
 

click me!