ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ರಮೇಶ್‌

By Govindaraj SFirst Published Dec 5, 2022, 8:05 PM IST
Highlights

ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಹಾಗೂ ಮತದಾರರು ಮತದಾನದಿಂದ ವಂಚಿತರಾಗದಂತೆ ಮತದಾರರ ಪಟ್ಟಿಸಿದ್ಧತೆ ಮಾಡಬೇಕಾಗಿದ್ದು, ಈ ಸಂಬಂಧ ರಾಜಕೀಯ ಪಕ್ಷಗಳು ಶೇ. 100ರಷ್ಟು ಶುದ್ಧ ಮತದಾರರ ಪಟ್ಟಿಸಿದ್ಧತೆಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದರು. 

ಚಾಮರಾಜನಗರ (ಡಿ.05): ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಹಾಗೂ ಮತದಾರರು ಮತದಾನದಿಂದ ವಂಚಿತರಾಗದಂತೆ ಮತದಾರರ ಪಟ್ಟಿಸಿದ್ಧತೆ ಮಾಡಬೇಕಾಗಿದ್ದು, ಈ ಸಂಬಂಧ ರಾಜಕೀಯ ಪಕ್ಷಗಳು ಶೇ. 100ರಷ್ಟು ಶುದ್ಧ ಮತದಾರರ ಪಟ್ಟಿಸಿದ್ಧತೆಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ಚುನಾವಣಾ ಆಯೋಗದ ಮಹತ್ತರವಾದ ಮತದಾರರ ಪಟ್ಟಿಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸುವಲ್ಲಿ ಮತದಾರರ ಪಟ್ಟಿವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ರಾಜಕೀಯ ಪಕ್ಷಗಳು ಮತಗಟ್ಟೆಮಟ್ಟದ ಏಜೆಂಟರನ್ನು ನೇಮಕ ಮಾಡಿ, ಪರಿಷ್ಕರಣಾ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳ ಪುನರ್‌ ವಿಂಗಡಿಸಿ ವರದಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8 ಮತಗಟ್ಟೆಗಳನ್ನು ವಿಲೀನಗೊಳಿಸಿ ಶಿಥಿಲ, ದುರಸ್ತಿಗೊಳಪಟ್ಟಿರುವ 11 ಮತಗಟ್ಟೆಗಳ ಕಟ್ಟಡ ಸ್ಥಳಾಂತರಿಸಲಾಗಿದೆ. 

Chamarajanagar: ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ನೆರವಾಗಿ: ಸಚಿವ ಸೋಮಣ್ಣ

ಮೂಲಮತಗಟ್ಟೆತಲುಪಿ ಮತ ಚಲಾಯಿಸಲು 3 ಕಿ.ಮೀ. ಗಿಂತ ಹೆಚ್ಚು ದೂರ ಕ್ರಮಿಸಿ ಮತ ಚಲಾಯಿಸುತ್ತಿರುವ ಕಾಡಂಚಿನ ಗ್ರಾಮಗಳಲ್ಲಿ ಒಟ್ಟು 10 ಮತಗಟ್ಟೆಗಳನ್ನು ಹೊಸದಾಗಿ ತೆರಯಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 982 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಅರ್ಜಿ ಸ್ವೀಕೃತವಾಗಿರುವ ಬಗ್ಗೆ ಮಾಹಿತಿ ಪ್ರಚುರಪಡಿಸಲಾಗಿದ್ದು, ಈ ಬಗ್ಗೆ ಆಕ್ಷೇಪಣೆ ಏನಾದರೂ ಇದ್ದಲ್ಲಿ ತಿಳಿಸುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಕೋರಿದರು.

ಮತದಾರರ ಪಟ್ಟಿಪರಿಷ್ಕರಣೆ ಸಂಬಂಧ ಯಾವುದೇ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಿಲ್ಲ. ಕಾಡಂಚಿನ, ಗುಡ್ಡಗಾಡು ಪ್ರದೇಶ, ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಾಸವಾಗಿರುವ 18 ರಿಂದ 19ರ ವಯೋಮಾನದ ಯುವ ಮತದಾರರು ಮತ್ತು ಈವರೆವಿಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳದಿರುವವರ ಮಾಹಿತಿ ನೀಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಯವರು ರಾಜಕೀಯ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆದಿರುವ ಟೋಲ್‌ಫ್ರೀ ನಂಬರ್‌ 1950ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. 

Chamarajanagar: ಬಿಜೆಪಿ ಭದ್ರಕೋಟೆ ಸೃಷ್ಟಿಗೆ ಕೈ ಜೋಡಿಸಿ: ಸಚಿವ ಸೋಮಣ್ಣ

ಈ ಬಗ್ಗೆ ಮತದಾರರ ನೋಂದಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ತಾಲೂಕು ತಹಶೀಲ್ದಾರ್‌ ಕಚೇರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಚುನಾವಣಾ ತಹಶೀಲ್ದಾರ್‌ ಜಯಪ್ರಕಾಶ್‌, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ. ಚಿಕ್ಕಮಹದೇವ, ಎಂ. ಮಹೇಶ್‌, ಬ್ಯಾಡಮೂಡ್ಲು ಬಸವಣ್ಣ, ಸಯ್ಯದ್‌ ಅಕ್ರಂ, ಎಲ್ಲಾ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಇದ್ದರು.

click me!