Viral Disease| ಬೆಂಗ್ಳೂರಲ್ಲಿ ಥಂಡಿ ಜತೆಗೆ ಹೆಚ್ಚಾಗ್ತಿದೆ ಶೀತ, ಜ್ವರ..!

By Kannadaprabha NewsFirst Published Nov 15, 2021, 6:11 AM IST
Highlights

*  ನಿರಂತರ ಮಳೆ, ಶೀತಗಾಳಿಯಿಂದ ಚಳಿಯ ವಾತಾವರಣ
*   ಜ್ವರ, ಕೆಮ್ಮು, ಉಸಿರಾಟದ ತೊಂದರೆ ಹೆಚ್ಚಳ
*  ಔಷಧಕ್ಕಾಗಿ ಹೊರ ರೋಗಿಗಳ ವಿಭಾಗಕ್ಕೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು
 

ಬೆಂಗಳೂರು(ನ.15):  ನಗರದಲ್ಲಿ (Bengaluru)ಕಳೆದ ಐದಾರು ದಿನಗಳಿಂದ ಚಳಿಯ ವಾತಾವರಣ ಇರುವುದರಿಂದ ವೈರಲ್‌ ಕಾಯಿಲೆಗಳಿಂದ ((Viral Disease)ಬಳಲುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಚಳಿ ಮತ್ತು ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಅಸ್ತಮಾ, ಉಬ್ಬಸ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಜನರಲ್ಲಿ ಜ್ವರ(Fever), ಕೆಮ್ಮು, ಕಫ, ಶೀತ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಹುತೇಕ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ ಔಷಧಿಗಾಗಿ(Medicine) ಭೇಟಿ ನೀಡುತ್ತಿರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಆರೋಗ್ಯಾಧಿಕಾರಿ ಡಾ.ಗುಳೂರು ಶ್ರೀನಿವಾಸ್‌ ತಿಳಿಸಿದ್ದಾರೆ.

ಕೊರೋನಾತಂಕ: ಮಕ್ಕಳಲ್ಲಿ ಹೆಚ್ಚಿದ ವೈರಲ್‌ ಕಾಯಿಲೆ..!

ಈ ವಾತಾವರಣದಲ್ಲಿ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೊರ ಬಂದಾಗ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ, ಕೈ ಶುದ್ಧತೆ ಕಾಪಾಡಿಕೊಳ್ಳಬೇಕು. ಹೊರಗಿನ ಕರಿದ ಪದಾರ್ಥಗಳ ಸೇವನೆ ಸಲ್ಲದು. ಬಿಸಿಯಾಗಿರುವ ಆಹಾರವನ್ನು ಮಾತ್ರ ಸೇವಿಸಬೇಕು. ತಣ್ಣನೆಯ ಆಹಾರ(Food) ಸೇವಿಸಬಾರದು ಎಂದು ಅವರು ಹೇಳುತ್ತಾರೆ.

ಸ್ವಯಂ ವೈದ್ಯರಾಗಬೇಡಿ:

ಕೋವಿಡ್‌(Covid1) ಇನ್ನೂ ಇರುವ ಹಿನ್ನೆಲೆಯಲ್ಲಿ ಮತ್ತು ವೈರಲ್‌ ಕಾಯಿಲೆಗಳ ಆರಂಭದ ಲಕ್ಷಣಗಳು ಮತ್ತು ಕೋವಿಡ್‌ನ ಗುಣಲಕ್ಷಣಗಳಲ್ಲಿ ಸಾಮ್ಯತೆ ಹೊಂದಿರುವ ಕಾರಣ ಜನರು ಸ್ವಯಂ ವೈದ್ಯರಾಗದೇ ಆಸ್ಪತ್ರೆಗಳಿಗೆ ತೆರಳಿ ವೈದ್ಯರು ಸೂಚಿಸಿದ ಔಷಧಿ ಪಡೆದುಕೊಳ್ಳುವುದು ಒಳ್ಳೆಯದು ಎಂದು ಅವರು ಸಲಹೆ ನೀಡುತ್ತಾರೆ.

ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ. ಸಿ. ನಾಗರಾಜ್‌ ಅವರ ಪ್ರಕಾರ, ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿರುವ ಹವೆ ಈ ಬಾರಿ ನವೆಂಬರ್‌ನಲ್ಲಿ ಬಂದಿದೆ. ದೀಪಾವಳಿಯ ವಾಯು ಮಾಲಿನ್ಯದ ಬಳಿಕ ನಮ್ಮಲ್ಲಿ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು ಸಾಮಾನ್ಯ. ಆದರೆ ಈ ಬಾರಿ ದೀಪಾವಳಿಯ ಬಳಿಕವೂ ಮಳೆ, ಚಳಿ ಮತ್ತು ಮಂಜು ಹೆಚ್ಚಿರುವುದು ಶ್ವಾಸಕೋಶ ಸಂಬಂಧಿ ಸಮಸ್ಯೆಗಳ ರೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡುವುದು ನಿಶ್ಚಿತ ಎಂದು ಹೇಳುತ್ತಾರೆ.

ಶೀತಕ್ಕೆ ಮದ್ದು ಕೊಡಿ: ಒಬ್ಬಳೇ ಆಸ್ಪತ್ರೆಗೆ ಬಂದ 3 ವರ್ಷದ ಬಾಲೆ..!

ಚಳಿಯ ಹವೆ ಇದ್ದಾಗ ಶ್ವಾಸಕೋಶ(Lungs) ಮತ್ತು ಹೃದಯ ಸಂಬಂಧಿ ಸಮಸ್ಯೆಗಳು(Heart Problems) ಹೆಚ್ಚಾಗಿ ವರದಿಯಾಗುತ್ತದೆ. ಖಿನ್ನತೆಯ ಪ್ರಕರಣ ಹೆಚ್ಚಾಗುತ್ತದೆ. ಆದ್ದರಿಂದ ಅಸ್ತಮಾ, ಉಬ್ಬಸದ ರೋಗಿಗಳು ಸಾಕಷ್ಟುಜಾಗೃತೆ ವಹಿಸಬೇಕು. ಸದಾ ಬೆಚ್ಚಗಿನ ಉಡುಗೆ ಧರಿಸುವುದು, ಮನೆಯಲ್ಲಿ ಬೆಚ್ಚಗಿನ ವಾತಾವರಣದಲ್ಲೇ ಇರುವುದಕ್ಕೆ ಆದ್ಯತೆ ನೀಡಬೇಕು. ಕಿವಿಯನ್ನು ಮುಚ್ಚುವ ಮೂಲಕ ದೇಹವನ್ನು ಬೆಚ್ಚಗಿಡಬಹುದು ಎಂದು ಅವರು ಸಲಹೆ ನೀಡುತ್ತಾರೆ.

ಚಿಕುನ್‌ ಗುನ್ಯಾ ಮತ್ತು ಡೆಂಘೀ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದೆ. ಆದರೆ ಸೊಳ್ಳೆಯಿಂದ ಬರುವ ಈ ಕಾಯಿಲೆಗಳು ಮಳೆ ನಿಂತ ಬಳಿಕ ಹೆಚ್ಚಾಗುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ, ಕೆಲಸ ಮಾಡುವ ಪರಿಸರದಲ್ಲಿ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ  ಡಾ. ಸಿ. ನಾಗರಾಜ್‌ ತಿಳಿಸಿದ್ದಾರೆ.  

ಈ ಬಾರಿ ಉತ್ತರ ಭಾರತದಲ್ಲಿ ಭಾರೀ ಚಳಿ: 3 ಡಿ.ಸೆಗಿಳಿಯಲಿದೆ ಉಷ್ಣಾಂಶ!

ನವದೆಹಲಿ: ಅಕಾಲಿಕ ಮಳೆ ಮತ್ತು ತಡವಾಗಿ ಮುಂಗಾರು ನಿರ್ಗಮನದ ಪರಿಣಾಮ ಈ ಬಾರಿ ಉತ್ತರ ಭಾರತದ ಹಲವು ರಾಜ್ಯಗಳು ವಿಪರೀತ ಚಳಿಗೆ ತುತ್ತಾಗಲಿವೆ. ಪೆಸಿಫಿಕ್‌ ಸಾಗರದಲ್ಲಿನ(Pacific Ocean) ಲಾ ನಿನಾ(La Nina) ಬೆಳವಣಿಗೆಯು ಉತ್ತರ ಗೋಳಾರ್ಧದಲ್ಲಿ ವಿಪರೀತ ಚಳಿಗೆ ಕಾರಣವಾಗಲಿದೆ.

ಉಷ್ಣಾಂಶ ಮೈನಸ್‌ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ. ಇದರಿಂದ ಜನವರಿ ಮತ್ತು ಫೆಬ್ರವರಿಯಲ್ಲಿ ಉತ್ತರ ಪ್ರದೇಶ(Uttar Pradesh), ಪಂಜಾಬ್‌(Punjab), ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ತೀವ್ರ ಚಳಿಯು ಮೈ ಕೊರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಲಾ ನಿನಾ(La Nina) ಪರಿಣಾಮ ಭಾರತದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಈಗಾಗಲೇ ನಿರ್ಗಮಿಸಬೇಕಿದ್ದ ಮುಂಗಾರು ಮಾರುತಗಳು ಇನ್ನೂ ಮಳೆಯನ್ನು ಸುರಿಸುತ್ತಿವೆ. ಅಲ್ಲದೆ ದೇಶದಲ್ಲಿ ಉದ್ಭವಿಸಲಿರುವ ಚಳಿಗೆ ಲಾ ನಿನಾ ಅಷ್ಟೇ ಅಲ್ಲದೆ ಹವಾಮಾನ ವೈಪರಿತ್ಯವೂ ಕಾರಣವಾಗಿರಬಹುದು.
 

click me!