Bengaluru Rain : 20 ವರ್ಷಗಳ ವೈಜ್ಞಾನಿಕ ಎಚ್‌ಐವಿ, ಕೊರೋನಾ ಸೇರಿ ವಿವಿಧ ವೈರಸ್‌ ಸಂಗ್ರಹ ನೀರುಪಾಲು

By Kannadaprabha NewsFirst Published Nov 24, 2021, 6:59 AM IST
Highlights
  • ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಶತಮಾನದ ಮಳೆ
  • ಜವಾಹರಲಾಲ್‌ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಭಾರಿ ಅವಾಂತರ
  •  ಎಚ್‌ಐವಿ, ಕೊರೋನಾ ಸೇರಿ ವಿವಿಧ ವೈರಸ್‌ ಮಾದರಿ ಇಟ್ಟಿದ್ದ ಯಂತ್ರಗಳು ಆಫ್‌
  •  ಸಂಶೋಧನೆ ಉಪಕರಣಕ್ಕೂ ಹಾನಿ - ದೇಶದ ವಿಜ್ಞಾನ ಲೋಕಕ್ಕೆ ಭರಿಸಲಾಗದ ನಷ್ಟ

 ಬೆಂಗಳೂರು (ನ.24):  ಬೆಂಗಳೂರಿನಲ್ಲಿ (Bengaluru) ಭಾನುವಾರ ರಾತ್ರಿ ಸುರಿದ ಶತಮಾನದ ಮಳೆಯಿಂದ ಜವಾಹರಲಾಲ್‌ ನೆಹರು (Javahar lal Nehru) ಅಡ್ವಾನ್ಸ್‌ ಸೈಂಟಿಫಿಕ್‌ ರಿಸರ್ಚ್ ಸೆಂಟರ್‌ಗೆ (Jawaharlal Nehru Scientific Research Centre  ) (ಜೆಎನ್‌ಸಿಎಎಸ್‌ಆರ್‌) ನೀರು ನುಗ್ಗಿ ದಶಕಗಳಿಂದ ‘ವೈರಾಣು ಜಗತ್ತಿನ’ ಮೇಲೆ ನಡೆಸಲಾಗುತ್ತಿದ್ದ ಸಂಶೋಧನೆಗಳು, ಸಂಗ್ರಹಿಸಿದ್ದ ಮಾದರಿಗಳು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲಾ ನೀರು (water) ಪಾಲಾಗಿವೆ.  ಈ ಕೇಂದ್ರದ ವಿಜ್ಞಾನಿಗಳು ಹಾಗೂ ಸಂಶೋಧನಾರ್ಥಿಗಳು ಹೇಳುತ್ತಿರುವ ಪ್ರಕಾರ, ಎಚ್‌ಐವಿ ವೈರಸ್‌, ಮೂಲ ಕೊರೋನಾ ವೈರಾಣು ಹಾಗೂ ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಾಣು ಸೇರಿದಂತೆ ಕಾಲ ಕಾಲಕ್ಕೆ ರೂಪಾಂತರ ಪಡೆದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿವಿಧ ವೈರಾಣುಗಳ ಮಾದರಿ ಹಾಗೂ ಅವುಗಳ ಅನುವಂಶಿಕ ಮಾದರಿ ಸಂಗ್ರಹಿಸಿ ಅವುಗಳ ರೂಪಾಂತರ ಹೇಗಾಗುತ್ತದೆ, ಹೇಗೆ ಹರಡುತ್ತದೆ ಎಂಬ ಬಗ್ಗೆ ಕಳೆದ 20 ವರ್ಷಗಳಿಂದ ಸಂಶೋಧನೆ ನಡೆಸಲಾಗುತ್ತಿತ್ತು.

ನ್ಯಾನೋ ಟೆಕ್ನಾಲಜಿ, ಬಯೋಟೆಕ್ನಾಲಜಿ (Technology), ನ್ಯೂರೋ ಸೈನ್ಸ್‌ ತಂತ್ರಜ್ಞಾನಗಳನ್ನು ಬಳಸಿ ಈ ಸಂಶೋಧನೆಗಳನ್ನು ನಡೆಸಲಾಗುತ್ತಿತ್ತು. ವೈರಾಣು ಮಾದರಿಗಳನ್ನು ಮೈನಸ್‌ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ವಿಶೇಷ ಉಪಕರಣಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ, ಮಳೆ ನೀರು ಆವರಿಸಿದ್ದರಿಂದ ವೈರಾಣುಗಳಿದ್ದ (Virus) ವಿಶೇಷ ಉಪಕರಣಗಳು ಸ್ವಿಚ್‌ಆಫ್‌ ಆಗಿವೆ. ಇದರಿಂದ ಬಹುತೇಕ ಮಾದರಿಗಳೆಲ್ಲಾ ನಾಶವಾಗಿರುವ ಆತಂಕವಿದೆ. ಆದರೆ, ಇದರ ಖಚಿತ ಮಾಹಿತಿ ಮತ್ತೆ ಈ ಉಪಕರಣಗಳನ್ನು ಸ್ವಿಚ್‌ ಆನ್‌ ಮಾಡಿ ಪರಿಶೀಲಿಸಿದ ನಂತರವೇ ಗೊತ್ತಾಗುತ್ತದೆ.

Latest Videos

ಅಲ್ಲದೆ, ಈ ಮಹಾ ಮಳೆಯಿಂದ ಸಂಶೋಧನೆಗೆ ಬಳಸುತ್ತಿದ್ದ ಲಕ್ಷಾಂತರ ರು. ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲವೂ ಹಾಳಾಗಿವೆ. ಇದರಿಂದ ದಶಕಗಳಿಂದ ನಡೆಸಿದ್ದ ನಮ್ಮ ಪರಿಶ್ರಮವೆಲ್ಲಾ ವ್ಯರ್ಥವಾದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಯಾವನ್ನೂ ಮರಳಿ ತರಲಾಗದು:  ‘ಕನ್ನಡಪ್ರಭ’ ದೊಂದಿಗೆ ಮಾತನಾಡಿದ ಜೆಎನ್‌ಸಿಎಎಸ್‌ಆರ್‌ ಆಡಳಿತ ವಿಭಾಗದ ಹಿರಿಯ ಸಲಹೆಗಾರ ಎ.ಎನ್‌.ಜಯಚಂದ್ರ ಅವರು, ‘ಮಳೆಯ ಅನಾಹುತಕ್ಕೆ ಯಾರನ್ನೂ ದೂರುವಂತಿಲ್ಲ. ಪ್ರಕೃತಿ ವಿಕೋಪಕ್ಕೆ (Natural Desaster) ಯಾರನ್ನು ಹೊಣೆ ಮಾಡಲಾಗದು. ಆದರೆ, ಈ ಅನಾಹುತದಿಂದ ದಶಕಗಳಿಂದ ನಡೆಯುತ್ತಿದ್ದ ಬೆಲೆ ಕಟ್ಟಲಾಗದಷ್ಟುಸಂಶೋಧನೆಗಳು ಹಾಗೂ ಅವುಗಳಿಗೆ ಬಳಸುತ್ತಿದ್ದ ಭಾರೀ ಮೊತ್ತದ ಸೂಕ್ಷ್ಮ ಉಪಕರಣಗಳೆಲ್ಲಾ ಹಾಳಾಗಿವೆ. ಕಳೆದ ಎರಡು ದಿನಗಳಿಂದ ಕೇಂದ್ರದಲ್ಲಿ ಏನಾಗಿದೆ ಎಂಬುದನ್ನು ಪರಿಶೀಲಿಸಲೂ ಸಾಧ್ಯವಾಗಿಲ್ಲ. ಎಲ್ಲಾ ಸಂಶೋಧನಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಹತ್ತಾರು ವರ್ಷಗಳಿಂದ ನಮ್ಮ ಸಂಸ್ಥೆಯ 110ಕ್ಕೂ ಹೆಚ್ಚು ವಿಜ್ಞಾನಿಗಳು (Scientist), ಸಂಶೋಧನಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಸಂಶೋಧನೆಗಳು ವ್ಯರ್ಥವಾಗಿದ್ದು ಬಹಳ ನೋವಿನ ಸಂಗತಿ. ಅದ್ಯಾವುದನ್ನೂ ಮರಳಿ ತರಲಾಗುವುದಿಲ್ಲ’ ಎಂದು ಬೇಸರಿಸಿದರು.

ವಿದ್ಯಾರ್ಥಿಗಳ ಅಳಲು:  ಮಾಧ್ಯಮವರೊಂದಿಗೆ ಮಾತನಾಡಿದ ಇಲ್ಲಿನ ಸಂಶೋಧನಾ ಕೇಂದ್ರದ ಅರುಣ್‌ ಮತ್ತಿತರ ವಿದ್ಯಾರ್ಥಿಗಳು (Students), ‘ನಾವು ಎಚ್‌ಐವಿ (HIV) ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಅದೇ ರೀತಿ ಕೊರೋನಾ ವೈರಾಣು ಲ್ಯಾಬ್‌ನಲ್ಲೂ ಸಂಶೋಧನೆಯಲ್ಲಿ ತೊಡಗಿದ್ದೇವೆ. ಎಚ್‌ಐವಿ, ಕೊರೋನಾ ಮತ್ತಿತರ ವೈರಾಣುಗಳು ಹೇಗೆ ರೂಪಾಂತರಗೊಳ್ಳುತ್ತವೆ, ಹೇಗೆ ಹರಡುತ್ತವೆ ಎಂಬ ಬಗ್ಗೆ ಬಹಳ ಕಷ್ಟಪಟ್ಟು ಈ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದ್ದೆವು. ನಮ್ಮ ಲ್ಯಾಬ್‌ಗಳಿಗೆ ಮಳೆ ನೀರು ನುಗ್ಗಿ ಎಲ್ಲವೂ ಕೈ ತಪ್ಪಿಹೋಗಿದೆ. ವಿದ್ಯುತ್‌ ಸಂಪರ್ಕ ಇಲ್ಲದೆ ಎಲ್ಲ ಉಪಕರಣಗಳು ಆಫ್‌ ಆಗಿವೆ. ಇದರಿಂದ ಅವುಗಳಲ್ಲಿ ನಾವು ಇಟ್ಟಿದ್ದ ಸ್ಯಾಂಪಲ್ಸ್‌(ಮಾದರಿ)ಗಳೆಲ್ಲವೂ ಹಾಳಾಗಿವೆ. ಅವುಗಳನ್ನು ರಿಕವರಿ ಮಾಡಲು ಸಾಧ್ಯವಿಲ್ಲ’ ಎಂದು ಗದ್ಗದಿತರಾದರು.

ಸಂಶೋಧನೆಗೆ ತೊಂದರೆ ಆಗದು

ಮಳೆ ನೀರು ನುಗ್ಗಿರುವ ಜವಾಹರ ಲಾಲ್‌ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.

- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
 
ಸಿಎಂಗೆ ಪ್ರಧಾನಿ, ಶಾ ಫೋನ್‌

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾದ ಹಾನಿ ಕುರಿತು ಮಾಹಿತಿ ಪಡೆದಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ ನೆರವು ಹಾಗೂ ಸಹಕಾರದ ಭರವಸೆಯನ್ನು ಇಬ್ಬರೂ ನಾಯಕರು ನೀಡಿದ್ದಾರೆ.

click me!