ಬೇರೆ ಹುಡುಗಿ ಜೊತೆ ಗಂಡನ ಮದುವೆ, ಮನನೊಂದು ಮಹಿಳೆ ಆತ್ಮಹತ್ಯೆ: ನ್ಯಾಯಕ್ಕಾಗಿ ಕುಟುಂಬಸ್ಥರ ಹೋರಾಟ

By Girish GoudarFirst Published Feb 25, 2024, 8:04 PM IST
Highlights

ತಿಪ್ಪೇಸ್ವಾಮಿಯು ಇತ್ತೀಚೆಗೆ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾನೆಂಬ ವಿಚಾರ ತಿಳಿದ‌ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಹೆತ್ತವರ‌ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಫೆ.25):  ಬದುಕಿ ಬಾಳಬೇಕಿದ್ದ ಹರೆಯದ ಯುವತಿ ತಾನು ಪ್ರೀತಿಸಿ ಮದುವೆ ಆಗಿದ್ದ ಪ್ರಿಯಕರ ಬೇರೊಂದು ಹುಡುಗಿ ಜೊತೆ ಮದುವೆ ಆಗಿದ್ದನ್ನು ಸಹಿಸಿಕೊಳ್ಳದೆ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ವರದಿ ಇಲ್ಲಿದೆ....,

ಹೀಗೆ ಎಸ್ಪಿ ಕಚೇರಿ ಬಳಿ ಕಣ್ಣೀರು ಹಾಕುತ್ತಾ ಧರಣಿ‌ ನಡೆಸ್ತಿರುವ ಪೋಷಕರು ಹಾಗೂ ಗ್ರಾಮಸ್ಥರು. ಮೊದಲು ಮೃತಳ‌ ಅಂತ್ಯಸಂಸ್ಕಾರ ನಡೆಸಿ ಎಂದು ಮನವೊಲಿಸುತ್ತಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ‌ ಎಸ್ಪಿ ಕಚೇರಿ‌ ಬಳಿ. ಹೌದು, ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದ ದುರ್ಗಮ್ಮನ ಮಗಳಾದ ವಿಶಾಲಾಕ್ಷಿ  ಜಿಟಿಟಿಸಿ ತರಬೇತಿ ಪಡೆದು, ಉದ್ಯೋಗ ಗಿಟ್ಟಿಸುವ ಕನಸು ಕಂಡಿದ್ದಳು. ಆದ್ರೆ‌ ಆಕೆಯ‌ ಸೌಂದರ್ಯ‌ಕ್ಕೆ ಮಾರು ಹೋಗಿದ್ದ ಅದೇ ಗ್ರಾಮದಲ್ಲಿ ಇವರ ಮನೆಯ ಮುಂಭಾಗದಲ್ಲೇ ವಾಸವಾಗಿದ್ದ ನಾಯಕ ಸಮುದಾಯದ ತಿಪ್ಪೇಸ್ವಾಮಿ‌ ಎಂಬ ಆಸಾಮಿ ವಿಶಾಲಾಕ್ಷಿಯನ್ನು ಪ್ರೀತಿಸಿದ್ದು, ಎಲ್ಲರ ವಿರೋಧದ ನಡುವೆ ಕಳೆದ ವರ್ಷವಷ್ಟೇ ಅಂತರ್ಜಾತಿ ವಿವಾಹವಾಗಿದ್ದನು. ಆದ್ರೆ ದಲಿತ‌ ಸಮುದಾಯದ ವಿಶಾಲಾಕ್ಷಿಯೊಂದಿಗೆ ತಿಪ್ಪೇಸ್ವಾಮಿ ವಿವಾಹವಾಗಿದ್ದನ್ನು, ಅವರ ಕುಟುಂಬಸ್ಥರಿಂದ ತೀವ್ರ ವಿರೋಧ‌ ವ್ಯಕ್ತವಾದ ಪರಿಣಾಮ ಅವರ ಒತ್ತಡಕ್ಕೆ ಮಣಿದ‌ ತಿಪ್ಪೇಸ್ವಾಮಿ ಪೋಷಕರ ಒತ್ತಾಯಕ್ಕೆ ಪತ್ನಿಯ ತಾಳಿ ತೆಗೆಸಿ ಇಬ್ಬರು ದೂರಾಗಿದ್ದರು. 

ಕೋಟಿ ಕೋಟಿ ಕೊಟ್ರೂ ಬಾರ್ ಲೈಸೆನ್ಸ್ ಸಿಗೊಲ್ಲ, ಅಂಥದ್ರಲ್ಲಿ ದಿನಸಿ ಅಂಗಡೀಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೇಳ್ತಾನೆ!

ಆಗ ದಾರಿ ಕಾಣದ ವಿಶಾಲಾಕ್ಷಿಯು ಕೂನಬೇವು ಗ್ರಾಮದಲ್ಲಿನ ತನ್ನ ತವರು ಮನೆ ಸೇರಿದ್ದು, ಮರಳಿ ಜಿಟಿಟಿಸಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಆದ್ರೆ ಈ ತಿಪ್ಪೇಸ್ವಾಮಿಯು ಇತ್ತೀಚೆಗೆ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾನೆಂಬ ವಿಚಾರ ತಿಳಿದ‌ ವಿಶಾಲಾಕ್ಷಿ(21) ಇಂದು(ಭಾನುವಾರ) ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಹೆತ್ತವರ‌ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಹೆತ್ತವರನ್ನು ಬಿಟ್ಟು, ತನ್ನ ಪ್ರೀತಿಸಿದವನ ಜಾತಿ ಯಾವುದಾದರೇನು ಪ್ರೀತಿ ಮುಖ್ಯ ಅಂತ ನಂಬಿ‌ಹೋಗಿದ್ದ ವಿಶಾಲಾಕ್ಷಿ ದಿಕ್ಕು ತೋಚದೇ ಆತ್ಮಹತ್ಯೆಗೀಡಾಗಿದ್ದಾಳೆ. ಹೀಗಾಗಿ ಆಕೆಯ ಕುಟುಂಬಸ್ಥರು ಹಾಗೂ ಸಂಬಂಧಿಗಳು ಮೃತ ದೇಹದ ಅಂತ್ಯ ಸಂಸ್ಕಾರ‌ ನಡೆಸದೇ ಚಿತ್ರದುರ್ಗ ಎಸ್ಪಿ ಕಚೇರಿ ಬಳಿ, ಧರಣಿ ನಡೆಸುತ್ತಿದ್ದಾರೆ. ವಿಶಾಲಾಕ್ಷಿ ಸಾವಿಗೆ ಕಾರಣವಾದ ತಿಪ್ಪೇಸ್ವಾಮಿಯನ್ನು ಬಂಧಿಸುವಂತೆ ಆಗ್ರಹಿಸಿ‌ ಪ್ರತಿಭಟಿಸುತ್ತಿದ್ದಾರೆ. ಈ ವೇಳೆ ಮೃತಳ ಅಂತ್ಯಸಂಸ್ಕಾರ‌ ನಡೆಸುವಂತೆ ಸಂಬಂಧಿರಲ್ಲಿ ಪೊಲೀಸರು‌ ಮನವೊಲಿಸಲು‌ ಯತ್ನಿಸಿದ್ದು, ನ್ಯಾಯಕ್ಕಾಗಿ ಹೋರಾಟ ಮುಂದುವರೆದಿದೆ.

ಒಟ್ಟಾರೆ ಪ್ರೀತಿಸಿ ಕೈಹಿಡಿದ ಪತ್ನಿಗೆ ತಿಪ್ಪೇಸ್ವಾಮಿ ಕೈಕೊಟ್ಟು ಮತ್ತೊಂದು ವಿವಾಹವಾಗಿದ್ದಾನೆ. ಹೀಗಾಗಿ ಮನನೊಂದ‌ ದಲಿತ ಯುವತಿ ನೇಣಿಗೀಡಾಗಿದ್ದಾಳೆ. ಈ ವಿಷಯ ತಿಳಿದ‌ ತಿಪ್ಪೇಸ್ವಾಮಿ ಎಸ್ಕೇಪ್ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿ‌ ಸೂಕ್ತ‌‌ ತನಿಖೆ‌ ನಡೆಸಬೇಕು. ಮೃತರ ಕುಟುಂಬಕ್ಕೆ‌ ನ್ಯಾಯ ಒದಗಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. 

click me!