Chitradurga: ಪ್ರೀತಿಸಿ ಮದುವೆಯಾದ ಗಂಡ, ಮತ್ತೊಬ್ಬಳ ಮದುವೆಯಾದ; ಪ್ರೀತಿಸಿದವಳು ನೇಣಿಗೆ ಶರಣಾದ್ಲು!

By Sathish Kumar KHFirst Published Feb 25, 2024, 1:46 PM IST
Highlights

ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಯಾದ ಗಂಡ, ಮನೆಯರವ ಒತ್ತಡಕ್ಕೆ ಮಣಿದು ಮತ್ತೊಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾಳೆ.

ಚಿತ್ರದುರ್ಗ (ಫೆ.25): ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬೆನ್ನುಬಿದ್ದು ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಮಾಡಿಕೊಂಡಿದ್ದಾನೆ. ಇನ್ನು ಮದುವೆಯಾದವನೊಂದಿಗೆ ಸುಖ ಸಂಸಾರ ಮಾಡಿಕೊಂಡು ಹೋಗೋಣವೆಂದರೆ, ಈಗ ಪುನಃ ಗಂಡ ಮನೆಯವರು ನೋಡಿದ ಮತ್ತೊಬ್ಬ ಹುಡುಗಿಯನ್ನು ಮದೆಯಾಗಿದ್ದಾನೆ. ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾಳೆ.

ಹೌದು, ಓದುವ ಸಮಯದಲ್ಲಿ ಪ್ರೀತಿ, ಪ್ರೇಮ ಅಂತೆಲ್ಲಾ ಹೋದರೆ ಯಶಸ್ಸು ಸಿಗುವುದಕ್ಕಿಂತ ಜೀವನದಲ್ಲಿ ಕಷ್ಟ ಅನುಭವಿಸುವುದೇ ಹೆಚ್ಚು. ಆದರೆ, ಇನ್ನು ಕಷ್ಟ-ನಷ್ಟ ಏನಾದರೂ ಸರಿ ಪ್ರೀತಿಸಿದ ಮೇಲೆ ಮದುವೆ ಮಾಡಿಕೊಂಡು ಜೀವನ ಮಾಡುವವರು ಸಾಕಷ್ಟಿದ್ದಾರೆ. ಅದೇ ರೀತಿ ಕರ್ನಾಟಕ ಸರ್ಕಾರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ (ಜಿಟಿಟಿಸಿ) ಓದುತ್ತಿದ್ದ ವಿಶಾಲಾಕ್ಷಿಯನ್ನು ತಿಪ್ಪೇಸ್ವಾಮಿ ಬೆನ್ನುಬಿದ್ದು ಪ್ರೀತಿಸಿದ್ದಾನೆ. ಬಳಿಕ ಪ್ರೀತಿ ಮಾಡುವುದಾದರೆ ಮದುವೆ ಮಾಡಿಕೊಳ್ಳಬೇಕು ಎಂದು ಹುಡುಗಿ ಷರತ್ತು ಹಾಕಿದ್ದಾಳೆ. ಹುಡುಗಿ ಮೇಲಿದ್ದ ಪ್ರೀತಿಗೆ ಹುಡುಗ ತಿಪ್ಪೇಸ್ವಾಮಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಮಾಡಿಕೊಂಡಿದ್ದಾನೆ.

Family death: ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು, ತಾನೂ ನೇಣಿಗೆ ಶರಣಾದ ತಾಯಿ

ಇಬ್ಬರೂ ಮದುವೆ ಮಾಡಿಕೊಂಡ ನಂತರ ಕೆಲವು ದಿನಗಳ ಸಂಸಾರ ಮಾಡಿದ ತಿಪ್ಪೇಸ್ವಾಮಿ ಮನೆಯವರ ಮಾತು ಕೇಳಿಕೊಂಡು ಆಕೆಯನ್ನು ದೂರ ಮಾಡಿದ್ದಾನೆ. ಆಗ ವಿಶಾಲಾಕ್ಷಿ (21) ತವರು ಮನೆ ಸೇರಿಕೊಂಡಿದ್ದಾಳೆ. ಒಂದಲ್ಲಾ ಒಂದು ದಿನ ತನ್ನ ಪ್ರೇಮಿ ತಿಪ್ಪೇಸ್ವಾಮಿ ಪುನಃ ತನ್ನೊಂದಿಗೆ ಜೀವನ ಮಾಡುತ್ತಾನೆ ಎಂದು ತಿಳಿದಿದ್ದಳು. ಆದರೆ, ಈತ ಮನೆಯವರು ತೋರಿಸಿದ ಇನ್ನೊಂದು ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ತೀವ್ರ ಮನನೊಂದ ಯುವತಿ ಆಕೆಯ ತವರು ಮನೆಯಲ್ಲಿ ಯಾರೂ ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. 

ಶಿವಮೊಗ್ಗ ವರದಕ್ಷಿಣೆ ಕಿರುಕುಳ: ಗಂಡನ ಮನೆಯವರಿಂದ ತಾಯಿ-ಮಗುವಿಗೆ ವಿಷ ಪ್ರಾಶನ

ಈ ಘಟನೆ ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲಿಯೇ ಮೃತ ಯುವತಿ ಪೋಷಕರು ಯುವಕ ಹಾಗೂ ಅವರ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ, ತಮ್ಮ ಮಗಳನ್ನು ಮದುವೆಯಾಗಿ ಮೋಸ ಮಾಡಿದ್ದಾನೆಂದು ಆರೋಪಿಸಿ ತುರುವನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತಂತೆ ಪೊಲೀಸರು ಯುವಕ ಹಾಗೂ ಅವರ ಮನೆಯವರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ.

click me!