Bengaluru Accident: ಹುಟ್ಟುಹಬ್ಬದ ದಿನದಂದೇ ಅಪಘಾತ: ಯುವತಿ ಬಲಿ

By Kannadaprabha NewsFirst Published Jan 22, 2022, 7:55 AM IST
Highlights

*   ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
*  ವಿದ್ಯಾರಣ್ಯಪುರದ ತಿಂಡ್ಲು ನಿವಾಸಿ ಮಹಶ್ರೀ ಮೃತ ದುರ್ದೈವಿ
*  ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

ಬೆಂಗಳೂರು(ಜ.22): ಹುಟ್ಟುಹಬ್ಬದ(Birthday) ದಿನವೇ ಬೈಕ್‌ಗೆ ಗೂಡ್ಸ್‌ ವಾಹನ ಡಿಕ್ಕಿಯಾಗಿ(Collision) ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ(Death) ಮನಕಲಕುವ ಘಟನೆಯೊಂದು ಶುಕ್ರವಾರ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರಣ್ಯಪುರದ ತಿಂಡ್ಲು ನಿವಾಸಿ ಮಹಶ್ರೀ(19) ಮೃತ ದುರ್ದೈವಿ. ನಗರದ ರಿಂಗ್‌ ರಸ್ತೆಯಲ್ಲಿ ಬಿಇಎಲ್‌ ಕಡೆಯಿಂದ ನಾಗವಾರದ ಕಡೆಗೆ ಸ್ನೇಹಿತ ನರಸಿಂಗ ಪೆರುಮಾಳ್‌ ಎಂಬಾತನ ಜತೆಗೆ ಬೈಕ್‌ನಲ್ಲಿ ಹೋಗುತ್ತಿದ್ದಳು. ಮಾರ್ಗದ ಭದ್ರಪ್ಪ ಲೇಔಟ್‌ ಮೇಲ್ಸೇತುವೆ ಮೇಲೆ ಬೆಳಗ್ಗೆ 10.30ರ ಸುಮಾರಿಗೆ ಹಿಂದಿನಿಂದ ಬಂದ ಗೂಡ್ಸ್‌ ವಾಹನವೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್‌ ಚಲಾಯಿಸುತ್ತಿದ್ದ ನರಸಿಂಗ ಪೆರುಮಾಳ್‌ ಹಾಗೂ ಹಿಂಬದಿ ಕುಳಿತ್ತಿದ್ದ ಮಹಶ್ರೀ ಬೈಕ್‌ ಸಹಿತ ನೆಲಕ್ಕೆ ಬಿದ್ದಿದ್ದಾರೆ. 

Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

ಗೂಡ್ಸ್‌ ವಾಹನದ ಹಿಂಬದಿ ಚಕ್ರ ಯುವತಿಯ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬೈಕ್‌ ಸವಾರ ನರಸಿಂಗ ಪೆರಮಾಳ್‌ಗೆ ತರಚಿದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಿಯಾಗಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ತಿಂಡ್ಲು ನಿವಾಸಿಯಾದ ಮಹಶ್ರೀ ನಗರದ ಖಾಸಗಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಟೆಕ್ಸ್‌ಟೈಲ್‌ ಅಂಗಡಿಯಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದಳು. ಶುಕ್ರವಾರ ಮಹಶ್ರೀ ಹುಟ್ಟುಹಬ್ಬವಿತ್ತು. ಹೀಗಾಗಿ ಸ್ನೇಹಿತ ನರಸಿಂಗ ಪೆರುಮಾಳ್‌ ಜತೆಗೆ ಬೈಕ್‌ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಮಹಶ್ರೀ ನಾಗವಾರದ ಕಡೆಗೆ ಹೋಗುವಾಗ ಈ ದುರ್ಘಟನೆ ಜರುಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತದೇಹವನ್ನು(Deadbody) ಮರಣೋತ್ತರ(Postmortem) ಪರೀಕ್ಷೆ ನಡೆಸಿ ವರಾಸುದಾರರಿಗೆ ಒಪ್ಪಿಸಲಾಗಿದೆ. ಘಟನೆ ಬಳಿಕ ಗೂಡ್ಸ್‌ ವಾಹನ ಚಾಲಕ ವಾಹನ ಬಿಟ್ಟು ಪರಿಯಾಗಿದ್ದಾನೆ. ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಲಾರಿ-ಬಸ್‌ ಡಿಕ್ಕಿ, ಇಬ್ಬರಿಗೆ ಗಾಯ

ಅಂಕೋಲಾ(Ankola):  ಲಾರಿ ಹಾಗೂ ಖಾಸಗಿ ಪ್ರಯಾಣಿಕರ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್‌ ಚಾಲಕ ಹಾಗೂ ಕ್ಲೀನರ್‌ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅಡ್ಲೂರಿನ ಬಳಿ ಗುರುವಾರ ಬೆಳಗಿನ ಜಾವ ನಡೆದಿದೆ.

ಅಂಕೋಲಾದಿಂದ ಯಲ್ಲಾಪುರ ಕಡೆ ಸಾಗುತ್ತಿದ್ದ ಲಾರಿ ಹಾಗೂ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಬಸ್‌ ನಡುವೆ ಅಪಘಾತ(Accident) ಸಂಭವಿಸಿದೆ. ಬಸ್‌ ಚಾಲಕ ಪುಟ್ಟರಾಜು ಎನ್‌.ಡಿ. ದೊಡ್ಡಈರಯ್ಯ (23) ಹಾಗೂ ಬಸ್‌ ಕ್ಲೀನರ್‌ ಬಸವರಾಜ ಯಮನಪ್ಪ ಬೆಳ್ಳಂಕಿ (23) ಅವರಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರದ(Karwar) ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಲಾರಿ ಚಾಲಕ ಮಂಜುನಾಥ ಅದಾನಪ್ಪ ಜಾಕ್ರಿ ವಿರುದ್ಧ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

Haveri Road Accident: ರಟ್ಟಿಹಳ್ಳಿ ಬಳಿ ಭೀಕರ ಅಪಘಾತ: 4 ಮಂದಿ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಸಾವು

ಅಂಕೋಲಾ: ತಾಲೂಕಿನ ಹುಲಿದೇವರವಾಡದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ. 12ರಂದು ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆ ಮೂವರು ಮೃತಪಟ್ಟಂತಾಗಿದೆ.

ಈ ಅಪಘಾತದಲ್ಲಿ ಕಾರಿನಲ್ಲಿದ್ದ ಕೇರಳದ ಪಾವುರಿನ ಅಬುಬಕರ ಅಲಿಯಾಸ್‌ ಅನ್ಸಾರ್‌ ಅಬ್ದುಲ್‌ ರೆಹೆಮಾನ್‌ (32) ಸ್ಥಳದಲ್ಲಿಯೇ ಮೃತಪಟ್ಟದ್ದರು. ಆನಂತರ ತೀವ್ರವಾಗಿ ಗಾಯಗೊಂಡಿದ್ದ ಕೇರಳದ ಕಾಸರಗೋಡದವರಾದ ಮಹಮ್ಮದ್‌ ಇಸಾಖ ಅಬ್ದುಲ್‌ ಖಾದರ (24) ಮಹಮ್ಮದ ಶರೀಫ್‌ (42) ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಜ. 16ರಂದು ಮಹಮ್ಮದ ಶರೀಫ್‌ ಮೃತಪಟ್ಟಿದ್ದರು. ಜ. 20ರಂದು ವರ್ಕಾಡಿ ಪಂಚಾಯಿತಿಯ ಪಾವೂರು ನಿವಾಸಿ ಮೊಹಮ್ಮದ್‌ ಇಸಾಕ್‌ ಶಾನು ಮೃತಪಟ್ಟಿದ್ದಾರೆ.

ಮೃತ ಇಸಾಕ್‌ ಶಾನು ಸಿಪಿಎಂ ಮುಖಂಡ ಕುಂಞಮೋನು ಬೋಳಿಯಾರ್‌ ಅವರ ಪುತ್ರ. ಉಪ್ಪಳದಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದಾರೆ. ಅವಿವಾಹಿತರಾಗಿರುವ ಅವರಿಗೆ ತಂದೆ, ತಾಯಿ, ನಾಲ್ವರು ಸಹೋದರಿಯರು ಇದ್ದಾರೆ.
 

click me!