Tumakuru: ಶಿವಕುಮಾರ ಶ್ರೀಗಳಿಗೆ ಭಾರತರತ್ನಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ

By Kannadaprabha NewsFirst Published Jan 22, 2022, 7:08 AM IST
Highlights

*  ಶಿವಕುಮಾರಶ್ರೀಗಳ ಪುಣ್ಯಸ್ಮರಣೆ ಸರಳ ಆಚರಣೆ
*  ಲಿಂಗೈಕ್ಯಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಸಿದ್ಧಲಿಂಗಶ್ರೀ
*  ವಿವಿಧ ಮಠಾಧೀಶರು, ಸಚಿವರು, ಶಾಸಕರು ಭಾಗಿ
 

ತುಮಕೂರು(ಜ.22):  ಡಾ. ಶಿವಕುಮಾರ್‌ ಸ್ವಾಮೀಜಿಯವರಿಗೆ(Dr Shivakumara Swamiji) ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’(Bharat Ratna) ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಅವರು ಶುಕ್ರವಾರ ದಾಸೋಹ ದಿನಾಚರಣೆಯ(Dashoha Day) ಅಂಗವಾಗಿ ಸಿದ್ಧಗಂಗಾ ಕ್ಷೇತ್ರಕ್ಕೆ(Siddaganga Matha ) ಭೇಟಿ ನೀಡಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ವಿಚಾರ ಹೇಳಿದರು. ದಾಸೋಹ ಪರಂಪರೆಗೆ ನಾಂದಿ ಹಾಡಿದ ಶ್ರೀಗಳ ಹೆಜ್ಜೆ ಗುರುತಿನಲ್ಲಿ ನಡೆಯುವ ಸಂಕಲ್ಪದಿಂದ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ತಿವಿಧ ದಾಸೋಹವಾದ ಅನ್ನ, ಅಕ್ಷರ, ಸೂರು ಒದಗಿಸುವ ಧ್ಯೇಯ ಸರ್ಕಾರ ಹೊಂದಿದೆ. ದಾಸೋಹ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ತಿಳಿಸಿದರು.

Death Anniversary: ವಿಶ್ವಕ್ಕೇ ದಾಸೋಹ ಪರಂಪರೆ ಸಾರಿದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

ಅನ್ನ ದಾಸೋಹಕ್ಕಾಗಿ ಸರ್ಕಾರ 4 ಕೆ.ಜಿ. ನೀಡಲಾಗುತ್ತಿದ್ದ ಅಕ್ಕಿಯನ್ನು 5 ಕೆ.ಜಿ.ಗೆ ಹೆಚ್ಚಿಸಿದೆ. ಜಿಲ್ಲೆಗಳ ಆಹಾರ ಪದ್ಧತಿಗನುಗುಣವಾಗಿ ರಾಗಿ, ಜೋಳ, ಇತ್ಯಾದಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ದಾಸೋಹ ನಡೆಸುವ ಮಠಮಾನ್ಯ ಸಂಸ್ಥೆಗಳಿಗೆ ಪಡಿತರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ರೈತ ವಿದ್ಯಾನಿಧಿ ಯೋಜನೆಯಡಿ ಮಕ್ಕಳಿಗೆ ಅಕ್ಷರ ದಾಸೋಹ ನೀಡುವ ಸೌಲಭ್ಯದೊಂದಿಗೆ ಜ.20ರಂದು ಕಾರ್ಮಿಕರ ಮಕ್ಕಳಿಗೆ ವಿದ್ಯೆ ಒದಗಿಸುವ 150 ಕೋಟಿ ರು.ಗಳಿಗಿಂತ ಹೆಚ್ಚು ವಿದ್ಯಾರ್ಥಿ ವೇತನವನ್ನು ನೇರವಾಗಿ ಪಾವತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆಶ್ರಯ ದಾಸೋಹದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ(Central Government) ವಸತಿ ಯೋಜನೆಯಡಿ 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಮಕ್ಕಳಿಗೆ ಪಾಯಸ ಬಡಿಸಿ ದಾಸೋಹಕ್ಕೆ ಸಿಎಂ ಚಾಲನೆ

ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯಸ್ಮರಣೆ ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸರಳವಾಗಿ ನೆರವೇರಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ದಾಸೋಹ ಮನೆಗೆ ತೆರಳಿ ಶ್ರೀಮಠದ ವಿದ್ಯಾರ್ಥಿಗಳಿಗೆ ಪಾಯಸ ಬಡಿಸುವ ಮೂಲಕ ದಾಸೋಹ ದಿನಾಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಇದಕ್ಕೂ ಮೊದಲು ಸಿದ್ಧಲಿಂಗ ಸ್ವಾಮೀಜಿ(Siddhalinga Swamiji) ನೇತೃತ್ವದಲ್ಲಿ ಬೆಳಗ್ಗೆಯೇ ಶಿವೈಕ್ಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಹಲವು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರಿಗೆಲ್ಲಾ ಪುಳಿಯೋಗರೆ, ಬೂಂದಿ, ಪಾಯಸ, ಅನ್ನ, ಸಾಂಬಾರು, ಮಜ್ಜಿಗೆ ಪ್ರಸಾದ ವಿತರಿಸಲಾಯಿತು.

40% Commission ದಾಖಲೆ ಬಿಡುಗಡೆ ಮಾಡಿದ್ರೆ ಸರ್ಕಾರ ಪತನ, ಹೊಸ ಬಾಂಬ್ ಸಿಡಿಸಿದ ಗುತ್ತಿಗೆದಾರರ ಸಂಘ

ಪೊಲೀಸರಿಗೆ ಸಿಎಂ ತರಾಟೆ: 

ಮಠದ ಆವರಣಕ್ಕೆ ಸಿಎಂ ಬಂದಿಳಿಯುತ್ತಿದ್ದಂತೆಯೇ ಸುಮಾರು 300ಕ್ಕೂ ಹೆಚ್ಚು ಜನ ಸೇರಿದ್ದನ್ನು ಕಂಡು ಕರ್ತವ್ಯದಲ್ಲಿದ್ದ ಪೊಲೀಸರನ್ನು(Police) ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಅಂತರ ಕಾಪಾಡದ ಭಕ್ತರನ್ನು ನೋಡಿ ಐಜಿಪಿ ಚಂದ್ರಶೇಖರ್‌ ಮತ್ತು ಡಿವೈಎಸ್‌ಪಿ ಶ್ರೀನಿವಾಸ್‌ ಅವರನ್ನು ಕರೆದು ಈ ರೀತಿ ಜನರನ್ನು ಸೇರಿಸಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.ತಕ್ಷಣ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರನ್ನು ಕರೆದ ಮುಖ್ಯಮಂತ್ರಿಗಳು, ಜನ ಸೇರಿಸಬಾರದು ಎಂದು ಸೂಚನೆ ನೀಡಿದ್ದೆವು. ಆದರೆ, ಈ ರೀತಿ ಜನ ಸೇರಿಸಿದ್ದೀರಾ ಏಕೆ ಎಂದು ಪ್ರಶ್ನಿಸಿದರು.

ಸಚಿವರಾದ ಮಾಧುಸ್ವಾಮಿ, ಬಿ.ಸಿ. ನಾಗೇಶ್‌, ಸಂಸದ ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್‌, ಗೌರಿಶಂಕರ್‌, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿ ಹಲವಾರು ಗಣ್ಯರು ಭೇಟಿ ನೀಡಿ ಗದ್ದುಗೆಗೆ ನಮಸ್ಕರಿಸಿ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದರು.
 

click me!