* ನಿತ್ಯ ರಾಜಧಾನಿಗೆ 2 ಸಾವಿರ ಟನ್ ಟೊಮೆಟೋ ಬೇಡಿಕೆ
* ಕೇವಲ 500 ಟನ್ ಮಾತ್ರ ಪೂರೈಕೆ
* ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ
ಬೆಂಗಳೂರು(ಮೇ.25): ಮಳೆ ಇತ್ಯಾದಿ ಕಾರಣದಿಂದ ಟೊಮೆಟೋ ಇಳುವರಿ ಕಡಿಮೆಯಾದ ಕಾರಣ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ 100 ದಾಟಿದೆ. ಇದರ ಜೊತೆಗೆ ಅನೇಕ ತರಕಾರಿ ಬೆಲೆಗಳು ಸಹ ಏರಿಕೆಯಾಗಿದೆ.
ಪ್ರತಿ ದಿನ ಬೆಂಗಳೂರು ನಗರಕ್ಕೆ ಸುಮಾರು 2000 ಟನ್ಗೂ ಅಧಿಕ ಪ್ರಮಾಣದ ಟೊಮೆಟೋ ಬೇಡಿಕೆಯಿದ್ದು, ಕೇವಲ 500 ಟನ್ ಮಾತ್ರ ಪೂರೈಕೆಯಾಗುತ್ತಿರುವುದರಿಂದ ಬೆಲೆ ಗಗನಕ್ಕೇರಿದೆ. ಬೆಂಗಳೂರು ನಗರದ ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಗೂ ಹೆಚ್ಚು ಕಾಲದಿಂದ ಮಳೆಯಾಗುತ್ತಿದೆ. ಇದರಿಂದ ಈ ಭಾಗದಲ್ಲಿನ ಎಲ್ಲ ತರಕಾರಿ ಬೆಲೆ ಸಂಪೂರ್ಣ ನೆಲೆ ಕಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
Karnataka Rains Effect: 100 ರ ಗಡಿಗೆ ತಲುಪಿದ ಟೊಮೆಟೋ ಬೆಲೆ..!
ಬೆಂಗಳೂರು ನಗರಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಅತಿ ಹೆಚ್ಚು ಟೊಮೆಟೋ ಬರುತ್ತಿತ್ತು. ಆದರೆ, ಕಳೆದ ಹದಿನೈದು ದಿನಗಳಿಂದ ಟೊಮೆಟೋ ನಗರಕ್ಕೆ ಬರುತ್ತಿಲ್ಲ. ಇದರಿಂದ ಸಗಟು ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ .100 ರಿಂದ .110 ರವರೆಗೂ ವ್ಯಾಪಾರವಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳ ಬಳಿ .120ಗೆ ಮಾರಾಟವಾಗುತ್ತಿದ್ದು, ಆನ್ಲೈನ್ನಲ್ಲಿ .130 ಗೆ ಮಾರಾಟವಾಗುತ್ತಿದೆ.
ಸದ್ಯ ಮಹಾರಾಷ್ಟ್ರ ನಾಸಿಕ್ನಿಂದ ಬೆಂಗಳೂರಿಗೆ ಟೊಮೆಟೋ ತರಿಸಿಕೊಳ್ಳಲಾಗುತ್ತಿತ್ತು. ಪ್ರತಿ ದಿನ 10ಕ್ಕೂ ಹೆಚ್ಚು ಲಾರಿಗಳು ಬರುತ್ತಿದ್ದವು. ಇದೀಗ ಟೆಂಪೋಗಳಲ್ಲಿ ತರಿಸಿಕೊಳ್ಳಲಾಗುತ್ತಿದೆ ಎಂದು ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬೀನ್ಸ್ ಪೂರೈಕೆ ಪ್ರಮಾಣ ಕುಸಿದಿದ್ದು ಸಗಟು ವ್ಯಾಪಾರದಲ್ಲಿ ಪ್ರತಿ ಕೆ.ಜಿ.ಗೆ .100ಗೆ ಮಾರಾಟವಾಗುತ್ತಿದ್ದು, ಚಿಲ್ಲರೆ ವ್ಯಾಪಾರದಲ್ಲಿ .125 ಗಳವರೆಗೆ ಮಾರಾಟವಾಗುತ್ತಿದೆ ಎಂದು ಅವರು ವಿವರಿಸಿದರು.
ಈರುಳ್ಳಿ ಬೆಲೆ ಕುಸಿತ
ಪ್ರಸಕ್ತ ವರ್ಷದಲ್ಲಿ ಈರುಳ್ಳಿ ಉತ್ತಮ ಫಸಲು ಕಂಡಿದ್ದು, ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವುದರಿಂದ ಬೆಲೆ ಕುಸಿದಿದೆ. ಪ್ರತಿ ಕೆ.ಜಿ ಈರುಳ್ಳಿಗೆ .15 ರಿಂದ .16ಗೆ ಮಾರಾಟವಾಗುತ್ತಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಈರುಳ್ಳಿ ಬೆಳೆ ಬಿತ್ತನೆ ಕಾರ್ಯ ನಡೆದು, ಮಾಚ್ರ್ ತಿಂಗಳ ಅಂತ್ಯಕ್ಕೆ ಕಟಾವು ಆಗಲಿದ್ದು, ಉತ್ತಮ ಬೆಲೆಗಾಗಿ ಕಾಯುತ್ತಿರುತ್ತಾರೆ. ಆದರೆ, ಪ್ರಸಕ್ತ ವರ್ಷ ಹೆಚ್ಚು ಉತ್ಪಾದನೆಯಾಗಿರುವುದರಿಂದ ಬೆಲೆ ಕುಸಿದಿದೆ ಎಂದು ಚಿಕ್ಕಬಳ್ಳಾಪುರದ ರೈತ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಹಾಪ್ಕಾಮ್ಸ್ನಲ್ಲಿ ತರಕಾರಿ ದರ
ಬೀನ್ಸ್ .110
ನುಗ್ಗೆಕಾಯಿ .128
ಟೊಮೆಟೋ .115
ಹಾಗಲಕಾಯಿ .54
ಕ್ಯಾರೆಟ್ .52
ಕೊತ್ತೊಂಬರಿ .99
ಕೊತ್ತಂಬರಿ ನಾಟಿ .158
ಮೆಂತ್ಯ ಸೊಪ್ಪು .164
ಪಾಲಕ್ ಸೊಪ್ಪು .87
ಸಬ್ಬಕ್ಕಿ ಸೊಪ್ಪು .194
ಈರುಳ್ಳಿ .26