ಹೈಬ್ರಿಡ್‌ ಮತ್ತು ವರ್ಕ್‌ ಫ್ರಂ ಹೋಂ ವ್ಯವಸ್ಥೆ ಭವಿಷ್ಯದ ಅಗತ್ಯ: ಪ್ರಧಾನಿ ಮೋದಿ

By Sharath SharmaFirst Published Aug 26, 2022, 11:55 AM IST
Highlights

Narendra Modi on work from home: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬದಲಾಗುತ್ತಿರುವ ಉದ್ಯೋಗ ಪರಿಸರದಲ್ಲಿ ಫ್ಲೆಕ್ಸಿಬಲ್‌ ಆದ ಟೈಮಿಂಗ್‌ ಮತ್ತು ವರ್ಕ್‌ ಫ್ರಂ ಹೋಂ ಭವಿಷ್ಯದ ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ನವದೆಹಲಿ: ದೇಶದ ಶ್ರಮಿಕ ವರ್ಗದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ವರ್ಕ್‌ ಫ್ರಂ ಹೋಮ್‌, ಹೈಬ್ರಿಡ್‌ ಉದ್ಯೋಗ ವ್ಯವಸ್ಥೆ ಮತ್ತು ಬದಲಿಸಿಕೊಳ್ಳಬಹುದಾದ ಕೆಲಸದ ಸಮಯ ಭವಿಷ್ಯಕ್ಕೆ ಅತ್ಯಗತ್ಯವಾದುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. "ದೇಶ ಆರ್ಥಿಕವಾಗಿ ಮುಂದುವರೆದ ರಾಷ್ಟ್ರವಾಗಲು, ದೇಶದ ಕನಸು ನನಸಾಗಲು ದಿನನಿತ್ಯ ಶ್ರಮಿಸುತ್ತಿರುವ ಉದ್ಯೋಗಿ ವರ್ಗದ ದೊಡ್ಡ ಶ್ರಮಾದಾನವಿದೆ. ಕೋಟ್ಯಂತರ ಜನ ನಿರ್ಧಿಷ್ಟ ಮತ್ತು ಅನಿರ್ದಿಷ್ಟ ಸೆಕ್ಟರ್‌ಗಳಲ್ಲಿ ಕೆಲಸ ಮಾಡುವುದರಿಂದಲೇ ದೇಶದ ಅಡಿಪಾಯ ಗಟ್ಟಿಯಾಗಿದೆ," ಎಂದು ಎಲ್ಲಾ ರಾಜ್ಯಗಳ ಕಾರ್ಮಿಕ ಇಲಾಖೆ ಸಚಿವರ ಜತೆ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್‌ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಸೇರಿದಂತೆ ಸರ್ಕಾರ ಶ್ರಮಿಕ ವರ್ಗಕ್ಕಾಗಿ ಮಾಡಿರುವ ಯೋಜನೆಗಳ ಬಗ್ಗೆಯೂ ಪ್ರಧಾನಿ ಮೋದಿ ನೆನಪಿಸಿಕೊಂಡರು. ಈ ಯೋಜನೆಗಳು ಹೇಗೆ ಶ್ರಮಿಕ ವರ್ಗದ ಸುರಕ್ಷತೆಗೆ ಒತ್ತು ನೀಡುತ್ತವೆ ಎಂಬ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ಉದ್ಯೋಗಿಗಳ ಶ್ರಮ ಮತ್ತು ಅವರ ಕೊಡುಗೆಗಳನ್ನು ಈ ಯೋಜನೆಗಳು ಬಿಂಬಿಸುತ್ತವೆ ಎಂದವರು ಹೇಳಿದರು. 

"ವರದಿಗಳ ಪ್ರಕಾರ ತುರ್ತು ಸಾಲ ಭದ್ರತೆ ಯೋಜನೆ ಕನಿಷ್ಠ 1.5 ಕೋಟಿ ಉದ್ಯೋಗವನ್ನು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಕ್ಷಿಸಿದೆ. ನಮ್ಮ ದೇಶ ಉದ್ಯೋಗಿಗಳ ಉದ್ಯೋಗ ಭದ್ರತೆಯ ಕಡೆಗೆ ಲಾಕ್‌ಡೌನ್‌ ವೇಳೆ ಒತ್ತು ನೀಡಿತ್ತು. ಮತ್ತು ದೇಶದ ಎಲ್ಲಾ ಉದ್ಯೋಗಿಗಳೂ ಸಾಂಕ್ರಾಮಿಕ ಸಮಯದಿಂದ ಮತ್ತೆ ದೇಶವನ್ನು ಆರ್ಥಿಕವಾಗಿ ಮೇಲೆತ್ತಲು ಶ್ರಮಿಸಿದ್ದಾರೆ," ಎಂದು ಮೋದಿ ಹೇಳಿದರು. 

ದೇಶ ಇಂದು ಶರವೇಗದ ಆರ್ಥಿಕತೆಯನ್ನು ಹೊಂದಿದೆ. ಅದು ಸಾಧ್ಯವಾಗಿರುವುದು ದೇಶದ ಶ್ರಮಿಕ ವರ್ಗದಿಂದ ಎಂದು ಮೋದಿ ಹೇಳಿದರು. ಸಾಮಾಜಿಕ ಭದ್ರತೆಯತ್ತ ಶ್ರಮಿಕ ವರ್ಗವನ್ನು ಕರೆತರಲು ಇ-ಶ್ರಮ್‌ ಪೋರ್ಟಲ್‌ ಕಾರ್ಯನಿರ್ವಹಿಸುತ್ತದೆ. ಒಂದೇ ವರ್ಷದ ಅವಧಿಯಲ್ಲಿ 28 ಕೋಟಿ ಉದ್ಯೋಗಿಗಳು ದೇಶದ 400ಕ್ಕೂ ಹೆಚ್ಚು ವಿವಿಧ ಭಾಗಗಳಿಂದ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಮನೆಕೆಲಸದವರು ಇದರಿಂದ ಅತಿಹೆಚ್ಚು ಪ್ರಯೋಜನ ಪಡೆದವರು ಎಂದು ಮೋದಿ ಹೇಳಿದರು. 

ಇದನ್ನೂ ಓದಿ: ಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ಖಚಿತ: ವಿವಿಧ ಕಾಮಗಾರಿಗೆ ಶಂಕು

ಉದ್ಯಮ ಕ್ರಾಂತಿಯ ಅಗತ್ಯತೆಯ ಬಗ್ಗೆ ಮಾತನಾಡಿದ ಮೋದಿ ಅವರು, ಬದಲಾಗುತ್ತಿರುವ ಸಮಯಕ್ಕೆ ತಕ್ಕಂತೆ ನಮ್ಮ ಉದ್ಯೋಗ ಶೈಲಿಯನ್ನು ಉದ್ಯಮವನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಜಾಗತಿಕ ನಾಯಕನಾಗಿ ಭಾರತ ಹೊರಹೊಮ್ಮಬೇಕು. ಬೇಕಾದ ಅಗತ್ಯ ಬದಲಾವಣೆಗಳನ್ನು ಕ್ಷಿಪ್ರವಾಗಿ ಅಳವಡಿಸಿಕೊಂಡು ಮುನ್ನುಗ್ಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ದೇಶದ ಕಾರ್ಮಿಕ ಇಲಾಖೆ 2047ರ ಅಮೃತ ಕಾಲಕ್ಕೆ ಪಟ್ಟಿಯನ್ನು ಸಿದ್ಧ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ದೇಶದ ಒಟ್ಟಾರೆ ಶ್ರಮಿಕ ವರ್ಗದ ಅಮೃತ ಕಾಲದ ಕುರಿತಾದ ರೂಪುರೇಷೆ ಸಿದ್ಧವಾಗುತ್ತಿದೆ ಎಂದರು. 

ಇದನ್ನೂ ಓದಿ: ಮೇಡ್‌ ಇನ್ ಇಂಡಿಯಾ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಸೆ.2ಕ್ಕೆ ಸೇನೆಗೆ ಸೇರ್ಪಡೆ!

ಆಗಸ್ಟ್‌ 15ರ ಕೆಂಪು ಕೋಟೆ ಭಾಷಣವನ್ನು ಮೆಲುಕು ಹಾಕಿದ ನರೇಂದ್ರ ಮೋದಿ, ಮಹಿಳಾ ಸಬಲೀಕರಣ ಮತ್ತು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಗ್ಗೆ ಮಾತನಾಡಿದರು. ದೇಶದ ಪ್ರಗತಿಯಲ್ಲಿ ಮಹಿಳಾ ಉದ್ಯೋಗಿಗಳ ಪಾತ್ರ ದೊಡ್ಡದು. ಇತ್ತೀಚೆಗೆ ಬೆಳೆಯುತ್ತಿರುವ ಹೊಸ ಸೆಕ್ಟರ್‌ಗಳಲ್ಲಿ ಮಹಿಳೆಯರ ಶಕ್ತಿಯನ್ನು ಬಳಸಿ ಹೇಗೆ ಯಶಸ್ಸು ಕಾಣಬಹುದು ಎಂಬ ಬಗ್ಗೆ ಚರ್ಚಿಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಮಹಿಳಾ ಶಕ್ತಿಯ ಸದ್ಬಳಕೆಯಿಂದ ಕಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿ ಹುಟ್ಟುಹಾಕಬಹುದು ಎಂದು ಪ್ರಧಾನಿ ಮೋದಿ ನಂಬಿದ್ದಾರೆ.  

click me!