
ಮುಂಬೈ (ಏ.28) ಪೆಹಲ್ಗಾಂ ಭಯೋತ್ಪಾದಕ ದಾಳಿಯಾಗಿ ಇತ್ತೀಚೆಗೆ ಒಂದು ವರ್ಷ ಸಂದಿದೆ. ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ. ಆದರೆ ಭಾರತೀಯರ ನೋವು ಮಾಸಿಲ್ಲ. ಇದೀಗ ಪೆಹಲ್ಗಾಂ ಘಟನೆ ನೆನಪಿಸುವ ರೀತಿಯಲ್ಲೇ ಮುಂಬೈನಲ್ಲಿ ದಾಳಿಯಾಗಿದೆ. ಅಮೆರಿಕದಿಂದ ಮರಳಿದ 31ರ ಹರೆಯದ ಝೈಬ್ ಝುಬೇರ್ ಅನ್ಸಾರಿ ಮುಂಬೈಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಮೇಲೆ ದಾಳಿ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ಗಳಿಗೆ ಕಲ್ಮಾ ಪಠಿಸಲು ಸೂಚಿಸಿದ್ದಾನೆ. ಆತನ ಮಾತನ್ನು ನಿರ್ಲಕ್ಷಿಸಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿಗಳ ಮೇಲೆ ಚಾಕು ಮೂಲಕ ದಾಳಿ ನಡೆಸಿದ್ದಾನೆ.
ಮುಂಬೈನ ವೋಕಾರ್ಡ್ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ರಾಜ್ಕುಮಾರ್ ಮಿಶ್ರಾ ಹಾಗೂ ಸುಬ್ರತೋ ಸೆನ್ ಇಬ್ಬರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕಡ್ಡಟ ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ವಸ್ತುಗಳು, ಸಲಕರಣೆಗಳಿರುವ ಕಾರಣ ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಲಾಗಿತ್ತು. ಈ ಸ್ಥಳಕ್ಕೆ ಆಗಮಿಸಿದ ಝೈಬ್ ಝುಬೇರ್ ಅನ್ಸಾರಿ, ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳಿಗೆ ಕಲ್ಮಾ ಪಠಿಸಲು ಹೇಳಿದ್ದಾನೆ. ಕಲ್ಮಾ ತಮಗೆ ಗೊತ್ತಿಲ್ಲ, ನೀನು ಇಲ್ಲಿಂದ ಹೊರಡು ಎಂದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಸೂಚಿಸಿದ್ದಾರೆ.
ಹೊರಟಂತೆ ನಟಿಸಿದ ಝೈಬ್ ಝುಬೇರ್ ಅನ್ಸಾರಿ ತನ್ನಲ್ಲಿದ್ದ ಹರಿತವಾದ ಚಾಕು ತೆಗೆದು ಇಬ್ಬರ ಮೇಲೂ ದಾಳಿ ಮಾಡಿದ್ದಾನೆ. ಕೂಗಿಕೊಂಡರೂ ಯಾರೂ ಪಕ್ಕದಲ್ಲಿ ಇರಲಿಲ್ಲ. ಹೀಗಾಗಿ ದಾಳಿಯಾಗಿರುವುದು ಯಾರಿಗೂ ಗೊತ್ತಾಗಲೇ ಇಲ್ಲ. ಕೂಗಾಟ, ಚೀರಾಟ ಹೆಚ್ಚಾದಾಗ ಝುಬೇರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡು ಇಬ್ಬರು ಸ್ಥಳದಲ್ಲೆ ಕಸಿದು ಬಿದ್ದಿದ್ದಾರೆ. ಇದೇ ದಾರಿಯಲ್ಲಿ ಬಂದ ಸ್ಥಳೀಯರು ಇಬ್ಬರು ನೆಲದ ಮೇಲೆ ಬಿದ್ದಿರುವುದು ನೋಡಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೆಲ ಗಂಟೆಗಳಲ್ಲಿ ಆರೋಪಿ ಝುಬೈರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಕಾಶ್ಮೀರದ ಪೆಹಲ್ಗಾಂಗೆ ಪ್ರವಾಸದಲ್ಲಿದ್ದ ಅಮಾಯಕ ಭಾರತೀಯರ ಮೇಲೆ ಭಯೋತ್ಪಾದಕ ದಾಳಿಯಾಗಿತ್ತು. ಉಗ್ರರು ಪೆಹಲ್ಗಾಂನಲ್ಲಿ ನರಮೇಧ ನಡೆಸಿದ್ದರು. ಈ ದಾಳಿಯಲ್ಲಿ 26 ಪ್ರಯಾಣಿಕರು ಹತ್ಯೆಯಾಗಿದ್ದರು. ಉಗ್ರರು ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ್ದರು. ಹುಡುಕಿ ಹುಡುಕಿ ಹಿಂದೂಗಳ ಮೇಲೆ ದಾಳಿ ಮಾಡಲಾಗಿತ್ತು. ತಾನು ಮುಸ್ಲಿಂ ಎಂದರೆ ಕಲ್ಮಾ ಪಠಿಸುವಂತೆ ಸೂಚಿಸಿದ್ದರು. ಈ ವೇಳೆ ಕಲ್ಮಾ ಪಠಿಸದಿದ್ದವರ ಮೇಲೂ ದಾಳಿಯಾಗಿತ್ತು. ಇದೀಗ ಝುಬೇರ್ ಇದೇ ಕಲ್ಮಾ ಪಠಿಸಲು ಸೂಚಿಸಿ ಚಾಕು ಮೂಲಕ ದಾಳಿ ಮಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ