
ತಮಿಳುನಾಡಿನಲ್ಲಿ ರಾಜಕೀಯ ಹಾಗೂ ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳು ಸಿನಿಮಾಗಳಲ್ಲಿ ಇದ್ದವರೇ ಮುಂದೆ ರಾಜಕೀಯ ನಾಯಕರಾಗುವುದು ಸಿಎಂ ಆಗಿ ರಾಜ್ಯವನ್ನಾಳುವುದು ಇಲ್ಲಿ ಹೊಸದೇನಲ್ಲ. ಏಕೆಂದರೆ ಇಲ್ಲಿನ ಜನ ಸಿನಿಮಾ ನಟರನ್ನು ದೇವರಂತೆ ಪೂಜೆ ಮಾಡುತ್ತಾರೆ, ಆರಾಧನೆ ಮಾಡುತ್ತಾರೆ.ಇದೇ ಕಾರಣಕ್ಕೆ ಸಿನಿಮಾಗೆ ಬಂದವರೇ ಮುಂದೆ ರಾಜ್ಯವನ್ನು ಆಳುತ್ತಾರೆ. ಇದಕ್ಕೆ ತಮಿಳುನಾಡಿನ ಮಾಜಿ ಹಾಗೂ ದಿವಂಗತ ಸಿಎಂಗಳಾದ ಎಂಜಿಆರ್, ಜಯಲಲಿತಾ ಮುಂತಾದವರೆ ಸಾಕ್ಷಿ. ಆದರೆ ಈ ಸಿನಿಮಾ ನಟರ ಮೇಲಿನ ಹುಚ್ಚು ಅಭಿಮಾನವೇ ಅಲ್ಲಿ 39 ಜನರ ಬಲಿಗೆ ಕಾರಣವಾಗಿದೆ. ತಮಿಳಿನ ಮತ್ತೊಬ್ಬ ನಟ ವಿಜಯ್ ಕೂಡ ಎಂಜಿಆರ್, ಜಯಲಲಿತಾ ಅವರದೇ ಹಾದಿಯಲ್ಲಿ ಸಾಗಲು ಹೋಗಿ ಆರಂಭದಲ್ಲೇ ಎಡವಿ ಬಿದ್ದಿದ್ದು, 39 ಜನರ ದುರಂತ ಸಾವಿಗೆ ಕಾರಣರಾಗಿದ್ದಾರೆ. ತಮ್ಮ ಟಿವಿಕೆ ಪಕ್ಷದ ಬೃಹತ್ ಸಮಾವೇಶದಲ್ಲೇ ನಾಯಕನೋರ್ವ ಹೇಗಿರಬಾರದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಈ ದುರಂತ ನಡೆದ ಕೂಡಲೇ ಅಲ್ಲಿಂದ ಹೊರಟು ಹೋದ ವಿಜಯ್ ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಡಿದವರಿಗಾಗಿ ನನ್ನ ಹೃದಯ ಬಿರಿಯುತ್ತಿದೆ ಎಂಬ ಶೋಕ ಸಂದೇಶ ಕಳುಹಿಸಿದ್ದಾರೆ.
ಆದರೆ ಅಲ್ಲಿ ಮೃತರಾದವರದ್ದು ಒಬ್ಬೊಬ್ಬರದ್ದು ಒಂದೊಂದು ನೋವಿನ ಕತೆಯಾಗಿದೆ. ಒಬ್ಬರು 22 ವರ್ಷದ ತಾಯಿಯೊಬ್ಬಳು ಈ ದುರಂತದಲ್ಲಿ ಮೃತರಾದ 29 ಜನರಲ್ಲಿ ಒಬ್ಬರು ತನ್ನ 2 ವರ್ಷದ ಕಂದನನ್ನು ಮನೆಯಲ್ಲಿ ಬಿಟ್ಟು ವಿಜಯ್ ನೋಡುವುದಕ್ಕೆ ಬಂದ ಈಕೆ ಬಾರದ ಲೋಕ ಸೇರಿದ್ದಾಳೆ. ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ತಾಯಿಯೊಬ್ಬಳು ಈ ಸಮಾವೇಶಕ್ಕೆ ಬಂದಿದ್ದಾಳೆ ಎಂದರೆ ಅವರ ಅಭಿಮಾನ ಎಂಥಾ ಹುಚ್ಚು ಇರಬಹುದು ಎಂದು ನೀವೇ ಯೋಚನೆ ಮಾಡಿ. 22 ವರ್ಷದ ತಾಯಿ ಬೃಂದಾ ತಮ್ಮ 2 ವರ್ಷದ ಕಂದನನ್ನು ಬಿಟ್ಟು ವಿಜಯ್ ಸಮಾವೇಶಕ್ಕೆ ಬಂದವಳು ಮತ್ತೆ ಜೀವಂತವಾಗಿ ಮನೆಗೆ ಮರಳಿಲ್ಲ. ಈ ಬಗ್ಗೆ ಶೋಕತಪ್ತರಾದ ಆಕೆಯ ಕುಟುಂಬದವರು ಎಷ್ಟೇ ಮೊತ್ತದ ಪರಿಹಾರ ಸಿಕ್ಕರು ಆಕೆಯನ್ನು ವಾಪಸ್ ಕರೆತರಲಾಗದು ಎಂದು ಕಣ್ಣೀರಾಕಿದ್ದಾರೆ. ಬೃಂದಾಳ ಅನಾಥ ಮಗುವಿನ ಹೃದಯವಿದ್ರಾವಕ ಚಿತ್ರಣವು ರಾಜಕೀಯ ಸಮಾವೇಶಗಳಲ್ಲಿ ಜನಸಂದಣಿ ನಿಯಂತ್ರಣ ಸಮರ್ಪಕವಾಗಿ ಮಾಡದೇ ಹೋದರೆ ಎಂಥಹಾ ಅನಾಹುತವಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಹಾಗೆಯೇ ಈ ದುರಂತದಲ್ಲಿ ಮೃತರಾದವರಲ್ಲಿ 2ವರ್ಷದ ಕಂದನೂ ಸೇರಿದ್ದಾನೆ. ಹೌದು ದೊಡ್ಡ ದೊಡ್ಡ ಸಮಾವೇಶಗಳಿಗೆ ಇಷ್ಟೊಂದು ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎಂದರೆ ಅವರೆಷ್ಟು ಹುಚ್ಚರಿರಬೇಕು ನೋಡಿ, ಸಿನಿಮಾಗೆ ಜಾತ್ರೆಗೆ, ನಾಟಕಕ್ಕೆ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಕ್ಕಳ ಕರೆದೊಯ್ಯುತ್ತಾರೆ. ಆದರೆ ರಾಜಕೀಯ ಸಮಾವೇಶಕ್ಕೆ..? ಹೌದು ಪೋಷಕರ ಅಭಿಮಾನದ ಹುಚ್ಚಿಗೆ ಪುಟ್ಟ ಕಂದನೂ ಬಲಿಯಾಗಿದ್ದಾನೆ. ಈ ಸಮಾವೇಶದಲ್ಲಿ ಬಲಿಯಾದವರಲ್ಲಿ 8 ಜನ ಮಕ್ಕಳೇ ಆಗಿದ್ದರೆ 16 ಜನ ಮಹಿಳೆಯರಾಗಿದ್ದಾರೆ. ತನ್ನ ಉಸಿರು ನಿಂತ ಕಂದನ ಹಿಡಿದುಕೊಂಡು ತಂದೆ ಅಲ್ಲಿ ಒಂದೆಡೆ ರೋದಿಸುತ್ತಿದ್ದಾರೆ. ಮತ್ತೊಂದೆಡೆ ಮೃತ ಮಗನ ಕಳುಹಿಸಿಕೊಡಲು ಒಪ್ಪದ ತಾಯಿ ರೋದಿಸುತ್ತಿರುವ ದೃಶ್ಯ ಮನಕಲುಕುವಂತಿತ್ತು. ಈ ಘಟನೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಎಷ್ಟು ನಿರ್ಲಕ್ಷಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪ್ರಚಾರ ಸಭೆ ನಡೆದಿತ್ತು.
ಇದನ್ನೂ ಓದಿ: ಡ್ರಗ್ಸ್ ಚಟಕ್ಕೆ ಬಲಿಯಾಗಿ ಬೀದಿಗಳಲ್ಲೇ ಜೋಂಬಿಗಳಂತೆ ತೂಕಾಡಿಸುವ ಮಾದಕ ವ್ಯಸನಿಗಳು
ಇದನ್ನೂ ಓದಿ: ಡ್ರಾಪ್ ನೀಡಿದ ಬಳಿಕವೂ ಅಣ್ಣನಂತೆ ಯುವತಿ ಸುರಕ್ಷತೆ ಕಾಯ್ದ ರಾಪಿಡೋ ಚಾಲಕ: ವೀಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ