40 ರೂ. ಪೆಟ್ರೋಲ್‌ ಬಗ್ಗೆ ಕೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಮ್‌ದೇವ್‌ ಗರಂ

By Anusha KbFirst Published Apr 1, 2022, 2:49 AM IST
Highlights
  • ಹಣದುಬ್ಬರ ಕಡಿಮೆಯಾಗಲು ದೇಶದ ಜನ ಶ್ರಮಿಸಬೇಕು
  • ಇಂಧನ ದರ ಏರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಬಾಬಾ ಪ್ರತಿಕ್ರಿಯೆ
  • ಪತ್ರಕರ್ತನ ಮೇಲೆ ಹರಿಹಾಯ್ದ ಬಾಬಾ
     

ನವದೆಹಲಿ: ಪತ್ರಕರ್ತರೊಬ್ಬರು, ಇಂಧನ ದರದ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಸಿಡಿಮಿಡಿಗೊಂಡ ಯೋಗ ಗುರು ಬಾಬಾ ರಾಮ್‌ದೇವ್‌(Baba Ramdev), ಈ ರೀತಿ ಮಾತನಾಡಬೇಡಿ ಅದು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಈ ಹಿಂದೆ ಹರ್ಯಾಣದಲ್ಲಿ (Haryana) ಬಿಜೆಪಿ ಪರ ಮಾತನಾಡಿದ್ದ ರಾಮ್‌ದೇವ್‌, 40 ರೂ.ಗೆ ಪೆಟ್ರೋಲ್‌ ಮತ್ತು 300 ರೂ.ಗೆ ಸಿಲಿಂಡರ್‌ ಕೊಡುವ ಸರ್ಕಾರವನ್ನು ಆಯ್ಕೆ ಮಾಡಬೇಕೆಂದು ಹೇಳಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದಕ್ಕೆ ಹೌದು ನಾನು ಹೇಳಿದ್ದೆ ಅದಕ್ಕೆ ನೀವು ಏನು ಮಾಡುತ್ತೀರಿ ? ಇಂತಹ ಪ್ರಶ್ನೆಗಳನ್ನು ಕೇಳಬೇಡಿ ಉತ್ತರಿಸುವುದಕ್ಕೆ ನಾನು ನಿಮ್ಮ ಗುತ್ತಿಗೆದಾರನಲ್ಲ, ಇಂತಹ ಪ್ರಶ್ನೆ ಕೇಳಬೇಡಿ ಸುಮ್ಮನಿರಿ ಅದು ಒಳ್ಳೆಯದಲ್ಲ , ಸಭ್ಯ ತಂದೆ ತಾಯಿಯ ಮಗನಾಗಿರಬೇಕೆಂದು ಅವರು ಪತ್ರಕರ್ತರ ಮೇಲೆ ಹರಿಹಾಯ್ದಿದ್ದಾರೆ.

ಹೆಚ್ಚುತ್ತಿರುವ ಪೆಟ್ರೋಲ್ (petrol) ಮತ್ತು ಡೀಸೆಲ್ (diesel) ಬೆಲೆಗಳಿಂದಾಗಿ ದೇಶದ ಜನರು ಈಗ ಪ್ರತಿದಿನ ಬೆಲೆ ಏರಿಕೆ ಬಿಸಿಯಲ್ಲಿ ಬೇಯುತ್ತಿದ್ದಾರೆ. ಅಲ್ಲದೇ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏತನ್ಮಧ್ಯೆ, ಏರುತ್ತಿರುವ ಹಣದುಬ್ಬರವನ್ನು ಎದುರಿಸಲು ಜನರಿಗೆ ಸಲಹೆ ನೀಡಿದ ಯೋಗ ಗುರು ಸ್ವಾಮಿ ರಾಮ್‌ದೇವ್, ಜನರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು, ಅದಕ್ಕಾಗಿ ಅವರು ಶ್ರಮಿಸಬೇಕು ಎಂದು ಹೇಳಿದ್ದಾರೆ. ಹರಿಯಾಣದ ಕರ್ನಾಲ್‌ನಲ್ಲಿ (Karnal) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದ ಒಂದು ವಾರದಲ್ಲಿ ನಿರಂತರವಾಗಿ ಇಂಧನ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಸ್ವಾಮಿ ರಾಮ್‌ದೇವ್ ಅವರನ್ನು ಕೇಳಿದಾಗ, ಈ ಹಣದುಬ್ಬರವನ್ನು (inflation) ಎದುರಿಸಲು ಸಾಮಾನ್ಯ ಜನರು ಶ್ರಮಿಸಬೇಕಾಗುತ್ತದೆ ಎಂದು ಹೇಳಿದರು.

ಮಹಿ​ಳೆ​, ಮಕ್ಕಳಿಗಾಗಿ ರಾಮ್‌ ದೇವ್‌ ವಿಶೇಷ ಯೋಗ

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕರ್ನಾಲ್‌ಗೆ ಆಗಮಿಸಿದ್ದ ಯೋಗ ಗುರು ಬಾಬಾ ರಾಮ್‌ದೇವ್, ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದ ಕುರಿತು ಮಾತನಾಡುವಾಗ ನಾಯಕರನ್ನು ಗುರಿಯಾಗಿಸಿಕೊಂಡು ಇದು ಕ್ಷುಲ್ಲಕ ರಾಜಕಾರಣದ ಪರಿಣಾಮ ಎಂದು ಹೇಳಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಪರ ನಿಂತ ಅವರು, ಸರ್ಕಾರ ಮತ್ತು ದೇಶವನ್ನು ನಡೆಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಹರ್ಯಾಣ ಸರ್ಕಾರವನ್ನು ಹೊಗಳಿದ ಅವರು ಯೋಗದ ಬದಲು ಆ ರಾಜ್ಯದ ಸಿಎಂ ಮನೋಹರ್ ಲಾಲ್ (Manohar Lal) ಅವರ ಮೇಲೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿದರು.

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಮಾತನಾಡಿದ ಯೋಗ ಗುರು ರಾಮ್‌ದೇವ್, 'ಈಗ ಅವರು ಸರ್ಕಾರವನ್ನು ನಡೆಸಲು ತೆರಿಗೆ ತೆಗೆದುಕೊಳ್ಳಬೇಕಾಗಿದೆ. ಹಣದುಬ್ಬರ ಇದ್ದರೆ, ಸ್ವಲ್ಪ ಆದಾಯವನ್ನು ಹೆಚ್ಚಿಸಬೇಕಾಗುತ್ತದೆ. ಹೆಚ್ಚು ಶ್ರಮಪಡಬೇಕಾಗುತ್ತದೆ. ಸನ್ಯಾಸಿಯಾಗಿರುವ ನಾನು 18-18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಇತರ ಜನರು ಸಹ ಕೆಲಸ ಮಾಡಿದರೆ, ಅವರು ಗಳಿಸುತ್ತಾರೆ ಮತ್ತು ಹಣದುಬ್ಬರವನ್ನು ಸಹಿಸಿಕೊಳಗ್ಳುತ್ತಾರೆ. ದೇಶ ಪ್ರಗತಿಯಾಗಲಿದೆ.

ಕೊರೋನಾಕ್ಕೆ ಪತಂಜಲಿ ಔಷಧಿ; ಬಾಬಾ ರಾಮ್‌ ದೇವ್ ಶಾಕಿಂಗ್ ಸ್ಪಷ್ಟನೆ!

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಸ್ವಾಮಿ ರಾಮ್‌ದೇವ್ ಅವರು ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ವಿಧ್ವಂಸಕ ಕೃತ್ಯಗಳನ್ನು ಹೇಳಿದ್ದಾರೆ. ಅವರನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ. ಅದರ ಕೆಲವು ಭಾಗಗಳನ್ನು ನೋಡಿದ್ದೇನೆ. ಕ್ಷುಲ್ಲಕ ರಾಜಕೀಯಕ್ಕಾಗಿ ಭಾರತವನ್ನು ಪ್ರತ್ಯೇಕಿಸಿದ್ದಾರೆ ಎಂದಿದ್ದಾರೆ. ಇನ್ನು ಯೋಗಕ್ಕೆ ಸಂಬಂಧಿಸಿದಂತೆ ರಾಮದೇವ್ ಅವರು ನಮ್ಮ ಇಡೀ ಜೀವನ ಯೋಗ ಮತ್ತು ಯೋಗಕ್ಕಾಗಿ ಎಂದು ಹೇಳಿದರು. 

click me!