Yellow Alert In Delhi: ದಿಲ್ಲಿಯಲ್ಲಿ ಕರ್ನಾಟಕಕ್ಕಿಂತ ಕಠಿಣ ನಿರ್ಬಂಧ; ಶಾಲೆ, ಸಿನಿಮಾ ಬಂದ್‌

By Kannadaprabha NewsFirst Published Dec 29, 2021, 7:15 AM IST
Highlights
  • ದಿಲ್ಲಿಯಲ್ಲಿ(Delhi) ಕರ್ನಾಟಕಕ್ಕಿಂತ ಕಠಿಣ ನಿರ್ಬಂಧ; ಶಾಲೆ, ಸಿನಿಮಾ ಬಂದ್‌
  • Yellow Alert: ಅಂಗಡಿ, ಮಾಲ್‌ಗಳು ಸಮ-ಬೆಸ ದಿನ ಓಪನ್‌
  • ಬಸ್ಸು, ಟ್ಯಾಕ್ಸಿಗಳಲ್ಲಿ ಶೇ.50 ಪ್ರಯಾಣಿಕರ ಮಿತಿ

ನವದೆಹಲು(ಡಿ.29): ದಿಲ್ಲಿಯಲ್ಲಿ(Delhi) ನಿತ್ಯ 300ಕ್ಕೂ ಹೆಚ್ಚು ಪ್ರಕರಣಗಳು (ಶೇ.0.5ಕ್ಕಿಂತ ಅಧಿಕ ಪಾಸಿಟಿವಿಟಿ) ವರದಿಯಾಗುತ್ತಿರುವ ಕಾರಣ, ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಬಹುತೇಕ ಕರ್ನಾಟಕದಷ್ಟೇ(Karnataka) ಕೇಸು ದಾಖಲಾಗುತ್ತಿದ್ದರೂ, ದೆಹಲಿಯಲ್ಲಿ ಕರ್ನಾಟಕಕ್ಕಿಂತ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಲೆ-ಕಾಲೇಜು, ಸಿನಿಮಾ ಮಂದಿರಗಳು, ಈಜುಕೊಳ, ಮನರಂಜನಾ ಪಾರ್ಕ್, ಕ್ರೀಡಾಂಗಣ ಹಾಗೂ ಜಿಮ್‌ಗಳನ್ನು ಸಂಪೂರ್ಣ ಬಂದ್‌ ಮಾಡಲು ಸೂಚಿಸಲಾಗಿದೆ. ದೇವಸ್ಥಾನಗಳಲ್ಲಿ ಪೂಜೆ ಮಾಡಲು ಅರ್ಚಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರನ್ನು ನಿರ್ಬಂಧಿಸಲಾಗಿದೆ.

ಮಾಲ್‌ಗಳು, ಅಗತ್ಯ ವಸ್ತುಗಳನ್ನು ಮಾರಾಟ ಮಾಡದ ಅಂಗಡಿ-ಮುಂಗಟ್ಟುಗಳಿಗೆ ಸಮ-ಬೆಸ ದಿನ ತೆರೆಯಲು ಮಾತ್ರ ಅನುಮತಿಸಲಾಗಿದೆ. ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಇವು ತೆರೆಯಲು ಅನುಮತಿಸಲಾಗಿದೆ. ಮದುವೆಗಳು ಹಾಗೂ ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ. ಇತರ ಸಾಮಾಜಿಕ, ರಾಜಕೀಯ, ಧಾರ್ಮಿಕ, ಹಬ್ಬದ ಸಮಾರಂಭಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಬಸ್ಸು ಹಾಗೂ ದಿಲ್ಲಿ ಮೆಟ್ರೋಗೆ ಶೇ.50ರಷ್ಟುಪ್ರಯಾಣಿಕರ ಮಿತಿ ವಿಧಿಸಲಾಗಿದೆ. ಆಟೋ ರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದಾಗಿದೆ.

Night Curfew in Bengaluru: ನಿಯಮ ಮೀರುವವರ ವಿರುದ್ಧ ಹದ್ದಿನಗಣ್ಣು: ಗೌರವ್‌ ಗುಪ್ತಾ!

ರೆಸ್ಟೋರೆಂಟ್‌-ಹೋಟೆಲ್‌ಗಳು ಕೂಡ ಶೇ.50ರಷ್ಟುಜನರಿಗೆ ಮಾತ್ರ (ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ) ಅವಕಾಶ ನೀಡಬೇಕು. ಬಾರ್‌ಗಳು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಮಾತ್ರ ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು. ಖಾಸಗಿ ಕಚೇರಿಗಳಿಗೆ ಹಾಗೂ ದಿಲ್ಲಿ ಸರ್ಕಾರದ ಕೆಲವು ಕಚೇರಿಗಳಿಗೆ ಶೇ.50ರಷ್ಟುಸಿಬ್ಬಂದಿಯ ಮಿತಿ ವಿಧಿಸಲಾಗಿದೆ. ಪಾರ್ಕ್-ಉದ್ಯಾನಗಳು ತರೆದಿರಲಿವೆ. ಕಟಿಂಗ್‌ ಶಾಪ್‌ ತೆರೆಯಲು ಅನುಮತಿ ಇದೆ. ರಾತ್ರಿ ಕಫä್ರ್ಯವನ್ನು 11 ಗಂಟೆಯಿಂದ 5 ಗಂಟೆ ಬದಲು 10 ಗಂಟೆಯಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ.

ಮಂಗಳವಾರ ರಾಜಧಾನಿಯಲ್ಲಿ 496 ಹೊಸ ಕೇಸು ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆಯು ಜೂ.4ರ ಬಳಿಕದ ಗರಿಷ್ಠವಾಗಿದೆ. ಪಾಸಿಟಿವಿಟಿ ದರ ಶೇ.0.89ರಷ್ಟುದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಾಗೂ 2ನೇ ಅಲೆ ಎದ್ದಾಗ ಹಾಕಲಾಗಿದ್ದ ಅನೇಕ ನಿರ್ಬಂಧಗಳನ್ನು ಮರು ಜಾರಿ ಮಾಡಲಾಗಿದೆ.

ಯೆಲ್ಲೋ ಅಲರ್ಟ್‌ ಎಂದರೇನು?

ಕೋವಿಡ್‌ ಪಾಸಿಟಿವಿಟಿ ದರ ಸತತ 2 ದಿನ ಕಾಲ ಶೇ.0.5 ದಾಟಿದರೆ ಅಥವಾ ಒಂದು ವಾರದಲ್ಲಿ 1500 ಕೋವಿಡ್‌ ಪ್ರಕರಣ ದಾಖಲಾದರೆ ‘ಯೆಲ್ಲೋ ಅಲರ್ಟ್‌’ ಸಾರಲಾಗುತ್ತದೆ. ಪಾಸಿಟಿವಿಟಿ ದರ ಶೇ.1 ದಾಟಿದರೆ ಅಥವಾ ವಾರದಲ್ಲಿ 3500 ಕೇಸು ವರದಿ ಆದರೆ ‘ಏಂಬರ್‌ ಅಲರ್ಟ್‌’ (ಹಳದಿಮಿಶ್ರಿತ ಕಿತ್ತಳೆ) ಘೋಷಿಸಲಾಗುತ್ತದೆ. ಪಾಸಿಟಿವಿಟಿ ದರ ಶೇ.2 ಮೀರಿದರೆ ಹಾಗೂ ವಾರದಲ್ಲಿ 9 ಸಾವಿರ ಪ್ರಕರಣ ದಾಖಲಾದೆ ‘ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಕೊರೋನಾ (Coronavirus) ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಮಂಗಳವಾರ  356 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30,05,232ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 38,318ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್‌ ಬುಲೆಟಿನ್ ಹೊರಡಿಸಿದೆ. ಇದುವರೆಗೆ ರಾಜ್ಯದಲ್ಲಿ 30,05,23 ಸೋಂಕಿತರ ಪೈಕಿ 2959429 ಜನ ಗುಣಮುಖರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ 7456 ಸಕ್ರಿಯ ಪ್ರಕರಗಳಿವೆ. ಇನ್ನು ಬೆಂಗಳೂರಿನಲ್ಲಿ (Benglauur) ಮಂಗಳವಾರ 269 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,61,997ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ.

click me!