ಮೋದಿಯನ್ನ ಇಳಿಸೋವರೆಗೆ ನಾನು ಸಾಯೊಲ್ಲ: ಪ್ರಧಾನಿ ವಿರುದ್ಧ ಖರ್ಗೆ ಗುಡುಗು!

By Kannadaprabha NewsFirst Published Sep 30, 2024, 5:48 AM IST
Highlights

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೂ ನಾನು ಸಾಯುವುದಿಲ್ಲ. ಅಲ್ಲಿಯವರೆಗೂ ನಾನು ಬದುಕಿರುತ್ತೇನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. 

ಪಿಟಿಐ ಕಠುವಾ (ಜಮ್ಮು-ಕಾಶ್ಮೀರ): ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೂ ನಾನು ಸಾಯುವುದಿಲ್ಲ. ಅಲ್ಲಿಯವರೆಗೂ ನಾನು ಬದುಕಿರುತ್ತೇನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. 

ಭಾನುವಾರ ಇಲ್ಲಿ ಚುನಾವಣಾ ರ್‍ಯಾಲಿ ವೇಳೆ ಖರ್ಗೆ ರಕ್ತದೊತ್ತಡ ಕಡಿಮೆ ಆಗಿ ವೇದಿಕೆ ಮೇಲೇ ದಿಢೀರ್‌ ಅಸ್ವಸ್ಥರಾದರು. ಆದರೂ ಸಾವರಿಸಿಕೊಂಡು ನಿಂತೇ ಮಾತನಾಡಿ ಮೋದಿಗೆ ಈ ಮೇಲಿನಂತೆ ಸವಾಲು ಹಾಕಿದ್ದಾರೆ.

Latest Videos

ಕುಮಾರಸ್ವಾಮಿ ವಿರುದ್ಧ 'ಹಂದಿ' ಪದ ಬಳಕೆ; ಎಡಿಜಿಪಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾರ್ನ್!

ಕಾಶ್ಮೀರದ 3ನೇ ಹಂತದ ಚುನಾವಣೆಗೆ ನಿಮಿತ್ತ ಕಠುವಾ ಜಿಲ್ಲೆಯ ಜಸ್ರೋಟಾ ಎಂಬಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡುವಾಗ ಖರ್ಗೆ ಅವರಿಗೆ ತಲೆ ಸುತ್ತಿದ ಅನುಭವವಾಯಿತು ಹಾಗೂ ಏಕಾಏಕಿ ಉಸಿರಾಟದಲ್ಲಿ ಏರಿಳಿತ ಆದಂತೆ ಕಂಡುಬಂತು. ಕೂಡಲೇ ಅಕ್ಕಪಕ್ಕದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು 82 ವರ್ಷದ ನಾಯಕನ ಸಹಾಯಕ್ಕೆ ಧಾವಿಸಿದರು.

ಒಂದು ಗುಟುಕು ನೀರು ಕುಡಿದ ನಂತರ, ಖರ್ಗೆ ಅವರು ಕೆಲಹೊತ್ತು ಅಲ್ಲೇ ವಿಶ್ರಮಿಸಿದರು. ನಂತರ ಕಾರ್ಯಕರ್ತರ ಸಹಾಯದಿಂದ ತಮ್ಮ ಭಾಷಣಕ್ಕೆ ಮರಳಿ, ‘ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ನಾವು ಹೋರಾಡುತ್ತೇವೆ. ಈಗ ನನಗೆ ಈಗ 83 ವರ್ಷ. ನಾನು ಇಷ್ಟು ಬೇಗ ಸಾಯುವುದಿಲ್ಲ. ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೂ ನಾನು ಸಾಯುವುದಿಲ್ಲ. ಅಲ್ಲಿಯವರೆಗೂ ನಾನು ಬದುಕಿರುತ್ತೇನೆ’ ಎಂದು ಹೇಳಿದರು. ಬಳಿಕ ವೈದ್ಯರ ತಪಾಸಣೆಗೆ ಒಳಗಾಗಿ ಮುಂದಿನ ರ್‍ಯಾಲಿಗಳಲ್ಲಿ ಭಾಗವಹಿಸದೇ ದಿಲ್ಲಿಗೆ ಮರಳಿದರು.

ಆರೋಗ್ಯ ವಿಚಾರಿಸಿ ಹೃದಯ ವೈಶಾಲ್ಯತೆ ಮೆರೆದ ಮೋದಿ:

ಭಾಷಣ ಮಾಡುವಾಗ ಅಸ್ವಸ್ಥರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಮೋದಿಯನ್ನು ಇಳಿಸೋವರೆಗೂ ನಾನು ಸಾಯಲ್ಲ ಎಂದು ಅವರು ಹೇಳಿದ್ದರೂ, ಅದರ ಬೆನ್ನಲ್ಲೇ ಮೋದಿ ಕರೆ ಮಾಡಿ 'ಬೇಗ ಗುಣ ಮುಖರಾಗಿ' ಎಂದು ಹಾರೈಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಬಿಜೆಪಿ ಟಾರ್ಗೆಟ್ ಸಿದ್ದು ಅಲ್ಲ, ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ

ತಂದೆ ಸ್ವಸ್ಥ- ಪ್ರಿಯಾಂಕ್‌:

ತಂದೆಯ ದೇಹಸ್ಥಿತಿ ಬಗ್ಗೆ ಟ್ವೀಟ್‌ ಮಾಡಿರುವ ಕರ್ನಾಟಕದ ಸಚಿವ ಹಾಗೂ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ, ‘ಸಮಾವೇಶದ ವೇಳೆ ಖರ್ಗೆ ಅವರು ಸ್ವಲ್ಪ ಅಸ್ವಸ್ಥರಾಗಿದ್ದರು. ಅವರ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿದೆ ಮತ್ತು ಸ್ವಲ್ಪ ಕಡಿಮೆ ರಕ್ತದೊತ್ತಡ ಇದೆ ಎಂದು ಹೇಳಿದ್ದಾರೆ. ಅದನ್ನು ಹೊರತುಪಡಿಸಿ, ಅವರು ಕ್ಷೇಮವಾಗಿದ್ದಾರೆ. ಅವರ ಸಂಕಲ್ಪ, ಜನರ ಶುಭ ಹಾರೈಕೆಗಳು ಅವನನ್ನು ಬಲವಾಗಿ ಇಡುತ್ತವೆ’ ಎಂದಿದ್ದಾರೆ.

ಕಳೆದ ವಾರ ಕೂಡ ಅಸ್ವಸ್ಥರಾದ ಕಾರಣ ಹರ್ಯಾಣ ಚುನಾವಣೆ ಪ್ರಚಾರಕ್ಕೆ ಖರ್ಗೆ ಹೋಗಿರಲಿಲ್ಲ.

click me!