
ಪಾಟ್ನಾ(ಏ.11) ಲೋಕಸಭಾ ಚನಾವಣಾ ಕಣ ರಂಗೇರುತ್ತಿದೆ. ನಾಯಕರ ವಿವಾದಾತ್ಮಕ ಹೇಳಿಕೆ, ದ್ವೇಷಪೂರಿತ ಭಾಷಣಗಳು ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ಇದೀಗ ಲಾಲು ಪ್ರಸಾದ್ ಯಾದವ್ ಪುತ್ರಿ, ಪಾಟಲೀಪುರ ಕ್ಷೇತ್ರದ ಆರ್ಜೆಡಿ ಪಕ್ಷದ ಅಭ್ಯರ್ಥಿ ಮಿಸಾ ಭಾರ್ತಿ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಜನರು ಅಧಿಕಾರ ನೀಡಿದರೆ ನರೇಂದ್ರ ಮೋದಿಯನ್ನು ಜೈಲಿಗಟ್ಟುತ್ತೇವೆ ಎಂದಿದ್ದಾರೆ. ಮಿಸ್ಸಾ ಭಾರ್ತಿ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ತಕ್ಕ ತಿರುಗೇಟು ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು. ಇದು ಮುಸ್ಲಿಮ್ ಲೀಗ್ ಪ್ರಣಾಳಿಕೆಯಂತಿದೆ ಎಂದು ಜರೆದಿದ್ದರು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಿಸ್ಸಾ ಭಾರ್ತಿ, 30 ಲಕ್ಷ ಉದ್ಯೋಗ ಸೃಷ್ಟಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದೇವೆ. ಇದು ಒಲೆಕೆ ರಾಜಕಾರಣವೇ? ಮೋದಿ ಬಿಹಾರಕ್ಕೆ ಆಗಮಿಸಿ ಪ್ರತಿ ಭಾರಿ ನಮ್ಮ ಕುಟುಂಬದ ಮೇಲೆ ವಾಗ್ದಾಳಿ ನಡೆಸುತ್ತಾರೆ. ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ಈ ಬಾರಿ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ ನೀಡಿದರೆ ಮೊದಲು ಮೋದಿಯನ್ನು ಜೈಲಿಗಟ್ಟುತ್ತೇವೆ. ಇದರ ಜೊತಗೆ ಬಿಜೆಪಿಯ ಕೆಲ ನಾಯಕರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮಿಸಾ ಭಾರ್ತಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಗೆಲ್ಲಲು ಇಂಡಿಯಾ ಒಕ್ಕೂಟ ಹಾಗೂ ಅದರ ಪಕ್ಷದ ನಾಯಕರು ಅತ್ಯಂತ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಅಧಿಕಾರಕ್ಕೆ ಬಂದರೆ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇವೆ, ಉಗ್ರರನ್ನು ಹೆಡೆಮುರಿ ಕಟ್ಟುತ್ತೇವೆ ಅನ್ನೋ ಹೇಳಿಕೆ ನೀಡಿದ್ದರೆ ನಾವು ಕೂಡ ಮೆಚ್ಚುಗೆ ವ್ಯಕ್ತಪಡಿಸಬುಹುದು. ಆದರೆ ಮೋದಿಯನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮಿಸ್ಸಾ ಭಾರ್ತಿ ಹೇಳುತ್ತಿದ್ದಾರೆ. ಇವರೆಲ್ಲರಿಗೂ ಇದೀಗ ಮೋದಿಯನ್ನು ಜೈಲಿಗೆ ಕಳುಹಿಸಬೇಕು, ಅಧಿಕಾರ ಹಿಡಿಯಬೇಕು ಅಷ್ಟೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಹೇಳಿದ್ದಾರೆ.
ಈ ದೇಶದ ಜನ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೀರೋ ಇಲ್ಲವೋ ಎಂದು ಉತ್ತರ ಬಯಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ ನಾಯಕರೇ ಇದೀಗ ಇಂಡಿಯಾ ಒಕ್ಕೂಟದಲ್ಲಿ ಅಧಿಕಾರಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ಇವರಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಬಿಜೆಪಿ ತಿರುಗೇಟು ನೀಡಿದೆ.
ನಮ್ಮ ಅಭಿವೃದ್ಧಿ ಅಲೆಯಲ್ಲಿ ಓಲೈಕೆ ರಾಜಕಾರಣ ಮಾಯ: ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ