
ನವದೆಹಲಿ(ಫೆ.07): ವಾಹನ ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ)ಗಳಿಗೆ ಸೇರಿದ ಕಠಿಣ ಪಥದಲ್ಲಿ ವಾಹನ ಓಡಿಸಬೇಕು ಎಂಬ ನಿಯಮವನ್ನು ಶೀಘ್ರದಲ್ಲೇ ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿರ್ದಿಷ್ಟತರಬೇತಿ ಕೇಂದ್ರಗಳಲ್ಲಿ ನುರಿತ ತರಬೇತಿ ಪಡೆದ ನಾಗರಿಕರಿಗೆ ಆರ್ಟಿಒಗಳು ನಡೆಸುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ನೀಡಲು ಹೊರಟಿದೆ. ಈ ಸಂಬಂಧ ಕರಡು ಅಧಿಸೂಚನೆಯೊಂದನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿದೆ.
ರಸ್ತೆ ಸಾರಿಗೆ ಸಚಿವಾಲಯವು 2025ರೊಳಗೆ ಅಪಘಾತಗಳ ಸಂಖ್ಯೆಯನ್ನು ಅರ್ಧದಷ್ಟುಕಡಿಮೆ ಮಾಡಲು ಮುಂದಾಗಿದೆ. ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ರಸ್ತೆ ಅಪಘಾತ ತಗ್ಗಿಸುವುದು ಹಂತಹಂತದ ಪ್ರಕ್ರಿಯೆಯಲ್ಲ. ತಕ್ಷಣವೇ ಇದನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಹೇಳಿದ್ದರು. ಸ್ವೀಡನ್ನಲ್ಲಿ ಅಪಘಾತಗಳ ಬಗ್ಗೆ ಶೂನ್ಯ ಸಹಿಷ್ಣುತೆ ಇದೆ ಎಂದೂ ಉದಾಹರಣೆ ನೀಡಿದ್ದರು.
ಯೋಜನೆಯ ಉದ್ದೇಶವೇನು?
ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರದಿಂದ ಮಾನ್ಯತೆ ನೀಡುವುದು. ಇಂತಹ ಕೇಂದ್ರಗಳಲ್ಲಿ ತರಬೇತಿ ಪಡೆಯುವ ನಾಗರಿಕರಿಗೆ ಆರ್ಟಿಒ ಅಧಿಕಾರಿಗಳು ನಡೆಸುವ ಪರೀಕ್ಷೆಯಿಂದ ವಿನಾಯಿತಿ ನೀಡುವುದಾಗಿದೆ. ಇದರಿಂದ ವಿಶೇಷ ತರಬೇತಿ ಪಡೆದ ಚಾಲಕರು ಸೃಷ್ಟಿಯಾಗುತ್ತಾರೆ. ತನ್ಮೂಲಕ ರಸ್ತೆ ಅಪಘಾತಗಳು ತನ್ನಿಂತಾನೆ ತಗ್ಗುತ್ತವೆ ಎಂಬುದು ಸರ್ಕಾರದ ಆಶಯ.
ಯಾರಿಗೆ ಅವಕಾಶ?
ಹಾಲಿ ವಾಹನ ಚಾಲನೆ ಕಲಿಸಿಕೊಡಲು ದೇಶಾದ್ಯಂತ ಡ್ರೈವಿಂಗ್ ಸ್ಕೂಲ್ಗಳು ಇವೆ. ಅಂತಹ ಕೇಂದ್ರಗಳ ಮೂಲಸೌಕರ್ಯ ಪರಿಶೀಲಿಸಿ ಅಥವಾ ಹೊಸ ಕೇಂದ್ರಗಳಿಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡಲಿದೆ. ಮಾನ್ಯತೆ ಪಡೆದ ಕೇಂದ್ರಗಳಲ್ಲಿ ವಾಹನ ಚಾಲನೆ ಕಲಿಯುವ ನಾಗರಿಕರಿಗೆ ಆರ್ಟಿಒ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಮಿಕ್ಕಂತೆ, ಮಾನ್ಯತೆ ಪಡೆಯದ ಕೇಂದ್ರಗಳಲ್ಲಿ ವಾಹನ ಚಾಲನೆ ಕಲಿಯುವವರಿಗೆ ಪರೀಕ್ಷೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ತರಬೇತಿ ಕೇಂದ್ರ ಹೀಗಿರಬೇಕು
ವಾಹನ ಚಾಲನೆ ಕಲಿಕಾ ಕೇಂದ್ರ ಎಂಬುದು ಕೌಶಲ್ಯಾಭಿವೃದ್ಧಿ ಸೌಲಭ್ಯ. ಅಲ್ಲಿ ಭೂಮಿ, ಕಟ್ಟಡ, ಚಾಲನಾ ಪರೀಕ್ಷಾ ಪಥ, ವಾಹನ, ಸಿಮ್ಯುಲೇಟರ್, ವರ್ಕ್ಶಾಪ್ ಮತ್ತಿತರೆ ಮೂಲಸೌಕರ್ಯಗಳು ಇರಬೇಕಾಗುತ್ತದೆ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಜ.29ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಇದೀಗ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ